'ಕಬ್ಜ' ತೆಲುಗು ಬಿಡುಗಡೆ ಹಕ್ಕು ಬಾಚಿಕೊಂಡ ಸ್ಟಾರ್ ನಟ, ಥ್ಯಾಂಕ್ಸ್ ಹೇಳಿದ ಚಂದ್ರು
ಉಪೇಂದ್ರ ನಟನೆಯ 'ಕಬ್ಜ' ಸಿನಿಮಾದ ಹವಾ ಈಗಾಗಲೇ ಆರಂಭವಾಗಿದೆ. 'ಕೆಜಿಎಫ್'ನಿಂದ ಸ್ಪೂರ್ತಿ ಪಡೆದು ನಿರ್ದೇಶಕ ಆರ್.ಚಂದ್ರು 'ಕಬ್ಜ' ಸಿನಿಮಾ ನಿರ್ದೇಶಿಸಿದ್ದು, 'ಕೆಜಿಎಫ್' ಮಾದರಿಯಲ್ಲಿಯೇ ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ.
ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ಘೋಷಿಸಲಾಗಿದ್ದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ಆಯಾ ರಾಜ್ಯಗಳಲ್ಲಿ ಶಕ್ತಿ ವಿತರಕರಿಗೆ ಸಿನಿಮಾದ ಬಿಡುಗಡೆ ಹಕ್ಕು ಮಾರಾಟ, ಆ ಕುರಿತ ಚರ್ಚೆಗಳೆಲ್ಲವೂ ಜೋರಾಗಿ ನಡೆಯುತ್ತಿದೆ.
ಇಗಾಗಲೇ ಸಿನಿಮಾದ ಹಿಂದಿ ವಿತರಣೆ ಹಕ್ಕು ಮಾರಾಟವಾಗಿದ್ದು, ಇದೀಗ ಸಿನಿಮಾದ ತೆಲುಗು ವಿತರಣೆ ಹಕ್ಕು ಸಹ ಮಾರಾಟಗೊಂಡಿದೆ. ತೆಲುಗಿನ ಜನಪ್ರಿಯ ನಾಯಕ ನಟರೊಬ್ಬರು 'ಕಬ್ಜ' ಸಿನಿಮಾದ ವಿತರಣೆ ಹಕ್ಕನ್ನು ಖರೀದಿಸಿದ್ದಾರೆ.

ಆಂಧ್ರ-ತೆಲಂಗಾಣದಲ್ಲಿ ವಿತರಣೆ ಯಾರದ್ದು?
ತೆಲುಗಿನ ಜನಪ್ರಿಯ ನಟ ನಿತಿನ್, 'ಕಬ್ಜ' ಸಿನಿಮಾದ ತೆಲುಗು ಆವೃತ್ತಿಯ ವಿತರಣೆ ಹಕ್ಕು ಖರೀದಿಸಿದ್ದು, ಸಿನಿಮಾವನ್ನು ಆಂಧ್ರ ಹಾಗೂ ತೆಲಂಗಾಣಗಳಲ್ಲಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ನಿತಿನ್, ''ಉಪೇಂದ್ರ ಹಾಗೂ ಸುದೀಪ್ ಅವರುಗಳನ್ನು ನಿಮ್ಮ ಮುಂದೆ ತರಲು ನನಗೆ ಸಂತೋಷವಾಗುತ್ತಿದೆ. 'ಕಬ್ಜ' ಸಿನಿಮಾವನ್ನು ತೆಲುಗು ಭಾಷೆಯಲ್ಲಿ ರುಚಿರಾ ಎಂಟಟೈರ್ನ್ಮೆಂಟ್ ಹಾಗೂ ಸಿನಿಮಾಸ್ ಮೂಲಕ ವಿತರಣೆ ಮಾಡಲಾಗುತ್ತಿದೆ. ಇದೇ ಮಾರ್ಚ್ 17 ರಂದು ದೊಡ್ಡ ತೆರೆಯ ಮೇಲೆ ಅದ್ಭುತ ಎಂಟರ್ಟೈನ್ಮೆಂಟ್ ಗೆ ತಯಾರಾಗಿ ಎಂದಿದ್ದಾರೆ.

ಧನ್ಯವಾದ ಅರ್ಪಿಸಿದ ಆರ್ ಚಂದ್ರು
ತಮ್ಮ ಸಿನಿಮಾವನ್ನು ವಿತರಣೆ ಮಾಡುತ್ತಿರುವ ನಟ ನಿತಿನ್ಗೆ ಟ್ವೀಟ್ ಧನ್ಯವಾದ ಹೇಳಿರುವ 'ಕಬ್ಜ' ಸಿನಿಮಾದ ನಿರ್ದೇಶಕ ಆರ್ ಚಂದ್ರು, ''ನನ್ನ ಕನಸಿನ ಪ್ರಾಜೆಕ್ಟ್ ಆಗಿರುವ 'ಕಬ್ಜ' ಸಿನಿಮಾವನ್ನು ಸಿನಿಮಾ ಪ್ರೇಮಿಸುವ ತೆಲುಗು ಪ್ರೇಕ್ಷಕರ ಮುಂದೆ ತರಲು ರುಚಿರಾ ಎಂಟರ್ಟೈನ್ಮೆಂಟ್ ಹಾಗೂ ಸಿನಿಮಾಸ್ ಜೊತೆ ಕೈಜೋಡಿಸಿರುವುದು ನನಗೆ ಅದಮ್ಯ ಸಂತೋಷ ತಂದಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಸದಾ ಋಣಿಯಾಗಿರುತ್ತೇನೆ, ಬಹಳ ಧನ್ಯವಾದಗಳು ನಿತಿನ್'' ಎಂದಿದ್ದಾರೆ.

ತೆಲುಗಿನ ಜನಪ್ರಿಯ ನಟ ನಿತಿನ್
ನಿತಿನ್ ತೆಲುಗಿನ ಜನಪ್ರಿಯ ನಟರಲ್ಲೊಬ್ಬರು, ಸೂಪರ್ ಹಿಟ್ ಸಿನಿಮಾ 'ಜಯಂ' ಮೂಲಕ ಚಿತ್ರರಂಗ ಪ್ರವೇಶಿಸಿದ ನಿತಿನ್, ಎರಡು ದಶಕ್ಕೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿ ನಾಯಕ ನಟನಾಗಿ ಹಲವು ಸಿನಿಮಾಗಳನ್ನು ನೀಡಿದ್ದಾರೆ. ಸಿನಿಮಾ ನಿರ್ಮಾಪಕರೂ ಆಗಿರುವ ನಿತಿನ್ ಕೆಲವು ಸಿನಿಮಾಗಳಿಗೆ ಬಂಡವಾಳವನ್ನೂ ಹೂಡಿದ್ದಾರೆ. ನಿತಿನ್ ಅವರ ತಂದೆಯವರೂ ಸಹ ವಿತರಕರಾಗಿದ್ದವರೇ. ಕೆಲವು ಚಿತ್ರಮಂದಿರಗಳನ್ನು ಸಹ ನಿತಿನ್ ಹೊಂದಿದ್ದಾರೆ. ನಿತಿನ್ ಅವರು, 'ಕಬ್ಜ' ಸಿನಿಮಾಕ್ಕೆ ಬೆಂಬಲ ಸೂಚಿಸಿರುವುದು ಸಿನಿಮಾಕ್ಕೆ ಧನಾತ್ಮಕವಾಗಿ ಪರಿಣಮಿಸಲಿದೆ.

ಮಾರ್ಚ್ 17 ರಂದು ಸಿನಿಮಾ ಬಿಡುಗಡೆ
ಇನ್ನು 'ಕಬ್ಜ' ಸಿನಿಮಾದಲ್ಲಿ ಉಪೇಂದ್ರ ಜೊತೆ ಅತಿಥಿ ಪಾತ್ರದಲ್ಲಿ ಸುದೀಪ್ ಸಹ ನಟಿಸಿದ್ದಾರೆ. ಸಿನಿಮಾವು ರೌಡಿಸಂ ಕತೆಯನ್ನು ಹೊಂದಿದ್ದು, ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವು 1970-80 ರ ದಶಕದಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು, ಭಾರಿ ಬಜೆಟ್ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಸಿನಿಮಾದಲ್ಲಿ ಶ್ರಿಯಾ ಶರನ್ ನಾಯಕಿಯಾಗಿ ನಟಿಸಿದ್ದು, ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿ ಗಮನ ಸೆಳೆದಿದೆ. ಸಿನಿಮಾವು ಮಾರ್ಚ್ 17 ರಂದು ತೆರೆಗೆ ಬರಲಿದೆ.


Click it and Unblock the Notifications











