ತೆಲುಗು ನಟ ಉದಯ ಕಿರಣ್ ಆತ್ಮಹತ್ಯೆ
ನುವ್ವು ನೇನು ಖ್ಯಾತಿಯ ಜನಪ್ರಿಯ ತೆಲುಗು ನಟ ಉದಯ್ ಕಿರಣ್ ಅವರು ಹೈದರಾಬಾದಿನ ಶ್ರೀನಗರ ಕಾಲೋನಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
ಪುಂಜಗುಟ್ಟದಲ್ಲಿರುವ ಫ್ಲಾಟ್ ನಲ್ಲಿ ನೆಲೆಸಿದ್ದ ಉದಯ್ ಕಿರಣ್(33) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಉದಯ್ ಅವರ ಪತ್ನಿ ವಿಶಿತಾ ಹಾಗೂ ನೆರೆ ಮನೆಯವರು ಜ್ಯುಬಿಲಿ ಹಿಲ್ಸ್ ನಲ್ಲಿರುವ ಅಪೋಲೊ ಆಸ್ಪತ್ರೆಗೆ ಕರೆದೊಯ್ದು ಉದಯ್ ಅವರನ್ನು ಉಳಿಸಿಕೊಳ್ಳಲು ನಡೆಸಿದ ಯತ್ನ ವಿಫಲವಾಗಿದೆ.
ಕೌಟುಂಬಿಕ ಕಲಹವೇ ಉದಯ ಕಿರಣ್ ಸಾವಿಗೆ ಕಾರಣ ಎಂದು ಪ್ರಾಥಮಿಕ ಮಾಹಿತಿಗಳು ಬಂದಿವೆ. ಘಟನೆ ನಡೆದಾಗ ಮನೆಯಲ್ಲಿ ಉದಯ್ ಒಬ್ಬರೇ ಇದ್ದರು ಅವರ ಪತ್ನಿ ವಿಶಿತಾ ಖಾಸಗಿ ಕೆಲಸ ನಿಮಿತ್ತ ಮಣಿಕೊಂಡಕ್ಕೆ ತೆರಳಿದ್ದರು. ಕಿರಣ್ ಫೋನ್ ಕರೆ ಸ್ವೀಕರಿಸದಿದ್ದಾಗ ಗಾಬರಿಕೊಂಡು ತಕ್ಷಣವೇ ಮನೆಗೆ ಬಂದು ನೋಡಿದರೆ ಉದಯ್ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.
1980ರ ಜನವರಿ 26ರಂದು ಜನಿಸಿದ್ದ ಉದಯ್ ಕಿರಣ್ ಅವರು ಚಿತ್ರಂ, ನುವ್ವು ನೇನು, ಮನಸಂತಾ ನುವ್ವೆ, ನೀ ಸ್ನೇಹಂ ಮುಂತಾದ ಯಶಸ್ವಿ ಚಿತ್ರದ ನಾಯಕರಾಗಿದ್ದರು. ಜೈ ಶ್ರೀರಾಮ್ ಅವರ ಕಟ್ಟ ಕಡೆಯ ಚಿತ್ರವಾಗಿದೆ. 2012ರ ಅಕ್ಟೋಬರ್ ನಲ್ಲಿ ವಿಶಿತಾ ಎಂಬುವವರನ್ನು ಉದಯ್ ಕಿರಣ್ ಮದುವೆಯಾಗಿದ್ದರು. ಮದುವೆ ನಂತರ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಉದಯ್ ಕಿರಣ್ ಅಕಾಲಿಕ ಸಾವಿಗೆ ಟಾಲಿವುಡ್ ದಿಗ್ಭ್ರಮೆ ವ್ಯಕ್ತಪಡಿಸಿದೆ.

2003ರಲ್ಲಿ ಕೇಂದ್ರ ಸಚಿವ ಚಿರಂಜೀವಿ ಅವರ ಪುತ್ರಿ ಜತೆ ಉದಯ್ ಕಿರಣ್ ಅವರ ಮದುವೆ ನಿಶ್ಚಿತಾರ್ಥ ನೆರವೇರಿತ್ತು. ಆದರೆ, ಮದುವೆ ಮುರಿದು ಬಿದ್ದಿತ್ತು. ಉದಯ್ ಆನಂತರ ಹಲವು ಚಿತ್ರಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಒಡ್ಡಿ ಸೋತಿದ್ದರು.
ಉದಯ್ ಗೆ ನುವ್ವು ನೇನು ಚಿತ್ರದ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿ ಲಭಿಸಿತ್ತು. ಚಿತ್ರಂ, ನುವ್ವು ನೇನು ಹಾಗೂ ಮನಸಂತಾ ನುವ್ವೆ ಯಶಸ್ಸಿನ ಹ್ಯಾಟ್ರಿಕ್ ಸಾಧಿಸಿದ್ದ ಉದಯ್ ಅವರು ಮತ್ತೊಮ್ಮೆ ಹ್ಯಾಟ್ರಿಕ್ ಬಾರಿಸುತ್ತೇನೆ ಎಂದು ಆಪ್ತರಲ್ಲಿ ಇತ್ತೀಚೆಗೆ ಹೇಳಿಕೊಂಡಿದ್ದರು ಎಂದು ಉದಯ್ ಗೆ ಆಪ್ತರಾಗಿದ್ದ ಸಂಗೀತ ನಿರ್ದೇಶಕ ಆರ್ ಪಿ ಪಟ್ನಾಯಕ್ ಸ್ಮರಿಸಿಕೊಂಡಿದ್ದಾರೆ.


Click it and Unblock the Notifications











