'ಅರುಂಧತಿ' ನಿರ್ದೇಶಕ ಕೋಡಿ ರಾಮಕೃಷ್ಣ ನಿಧನ
ಅರುಂಧತಿ, ದೇವಿ ಪುತ್ರುಡು, ಕನ್ನಡದ ನಾಗರಹಾವು ಸೇರಿದಂತೆ ನೂರು ಚಿತ್ರಗಳನ್ನ ನಿರ್ದೇಶನ ಮಾಡಿದ್ದ ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ನಿಧನರಾಗಿದ್ದಾರೆ.
ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ನಿರ್ದೇಶಕ ಕೋಡಿ ರಾಮಕೃಷ್ಣ ಕಳೆದ ಕೆಲದಿನಗಳಿಂದ ಹೈದ್ರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಕೋಡಿರಾಮಕೃಷ್ಣ ಅವರು ಜುಲೈ 23 ರಂದು ಪಶ್ಚಿಮ ಗೋದಾವರಿಯಲ್ಲಿ ಜನಿಸಿದ್ದರು. 1982ರಲ್ಲಿ 'ಇಂಟುಲೋ ರಾಮಯ್ಯ ವಿದೀಲೋ ಕೃಷ್ಣಯ್ಯ' ಚಿತ್ರದ ಮೂಲಕ ನಿರ್ದೇಶಕರಾಗಿ ಜರ್ನಿ ಆರಂಭಿಸಿದ ಇವರು, ಸುಮಾರು 30 ವರ್ಷಗಳ ಕಾಲ ಚಿತ್ರರಂಗದಲ್ಲಿ ತೊಡಗಿಸಿಕೊಂಡು, ನೂರಕ್ಕೂ ಅಧಿಕ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ನೂರು ಸಿನಿಮಾಗಳನ್ನ ನಿರ್ದೇಶನ ಮಾಡಿರುವ ಭಾರತೀಯ ಕೆಲವೇ ಕೆಲವು ನಿರ್ದೇಶಕರಲ್ಲಿ ಕೋಡಿ ರಾಮಕೃಷ್ಣ ಕೂಡ ಒಬ್ಬರು.

ಕೋಡಿರಾಮಕೃಷ್ಣ ಅವರು ನಿರ್ದೇಶಕರಾಗಿ ಮಾತ್ರವಲ್ಲದೇ, ಚಿತ್ರಕತೆ ಬರಹಗಾರರಾಗಿ ಮತ್ತು ನಟರಾಗಿಯೂ ಅಭಿನಯಿಸಿದ್ದಾರೆ. ಲೆಜೆಂಡ್ ನಿರ್ದೇಶಕನ ಚಿತ್ರರಂಗದ ಸೇವೆಗೆ 2012ರಲ್ಲಿ ರಘುಪತಿ ವೆಂಕಯ್ಯ ಪ್ರಶಸ್ತಿ ಕೂಡ ಲಭಿಸಿದೆ.
ಕೋಡಿ ರಾಮಕೃಷ್ಣ ಅವರ ಕೊನೆಯ ಸಿನಿಮಾ ಕನ್ನಡದಲ್ಲಿ ಎನ್ನುವುದು ವಿಶೇಷ. ರಮ್ಯಾ ಮತ್ತು ದಿಗಂತ್ ಅಭಿನಯಿಸಿ, ದಿವಂಗತ ನಟ ಡಾ ವಿಷ್ಣುವರ್ಧನ್ ಅವರ 201ನೇ ಸಿನಿಮಾ ಎಂದೇ ಖ್ಯಾತಿ ಗಳಿಸಿಕೊಂಡ 'ನಾಗರಹಾವು' ಚಿತ್ರವನ್ನ ನಿರ್ದೇಶನ ಮಾಡಿದ್ದು ಇವರೇ. 2016ರಲ್ಲಿ ಬಿಡುಗಡೆಯಾಗಿದ್ದ ನಾಗರಹಾವು ಚಿತ್ರವೇ ಕೊನೆಯ ಸಿನಿಮಾ.
90ರ ದಶಕದ ಸ್ಟಾರ್ ನಿರ್ದೇಶಕರಲ್ಲಿ ಕೋಡಿ ರಾಮಕೃಷ್ಣ ಪ್ರಮುಖರು. ಅಮ್ಮವರು, ದೇವಿ ಪುತ್ರುಡು, ಅಂಜಿ, ಗೂಢಚಾರಿ ನಂ 1, ಮುದ್ದುಲ ಕೃಷ್ಣಯ್ಯ, ಮುರಳಿ ಕೃಷ್ಣುಡು, ಸ್ಟೇಷನ್ ಮಾಸ್ಟರ್ ಅಂತಹ ಸೂಪರ್ ಹಿಟ್ ಸಿನಿಮಾಗಳು ಇವರ ಖಾತೆಯಲ್ಲಿದೆ.


Click it and Unblock the Notifications











