ಡಾ ರಾಜ್ ಜೊತೆಗಿನ ನೆನಪನ್ನ ಬಿಚ್ಚಿಟ್ಟ ತೆಲುಗು ನಿರ್ದೇಶಕ
Recommended Video

ಡಾ ರಾಜ್ ಕುಮಾರ್ ಅಂದ್ರೆ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗ ಸೇರಿದಂತೆ ಭಾರತೀಯ ಸಿನಿಲೋಕವೇ ಗೌರವ ನೀಡುತ್ತೆ. ಕರ್ನಾಟಕಕ್ಕೆ ಬಂದರೇ ಅಣ್ಣಾವ್ರನ್ನ ನೆನೆಯದೇ ಯಾರೂ ಹೋಗಲ್ಲ.
ಈಗ ತೆಲುಗು ಸೂಪರ್ ಸ್ಟಾರ್ ನಿರ್ದೇಶಕ ಸುಕುಮಾರ್ ಅವರು ಡಾ ರಾಜ್ ಬಗ್ಗೆ ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗಷ್ಟೆ 'ಲಕ್ಷ್ಮಿತನಯ' ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುಕುಮಾರ್, ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.
ನಂತರ ರಾಜ್ ಅವರನ್ನ ಭೇಟಿ ಮಾಡಿದ್ದ ಸಂಗತಿಯೊಂದನ್ನ ಹಂಚಿಕೊಂಡರು. ಸುಕುಮಾರ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ 'ಆರ್ಯ' ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿದ್ದ ಸಮಯದಲ್ಲಿ, ಸ್ವತಃ ರಾಜ್ ಕುಮಾರ್ ಅವರೇ ಸುಕುಮಾರ್ ಅವರನ್ನ ಮನೆಗೆ ಕರೆದಿದ್ದರಂತೆ.

''ಆರ್ಯ ಸಿನಿಮಾ ನೋಡಿದ ನಂತರ ರಾಜ್ ಕುಮಾರ್ ಅವರು ನನ್ನನ್ನು ಬೆಂಗಳೂರಿಗೆ ಕರೆದು ಆರ್ಶೀವಾದ ಮಾಡಿದ್ದರು. ಸ್ವತಃ ಅವರೇ ನನ್ನ ಕಾರಿನವರೆಗೂ ಬಂದು ನನ್ನನ್ನು ಕಳುಹಿಸಿಕೊಟ್ಟಿದ್ದರು. ಈಗಲೂ ಅದು ನೆನಪಾಗುತ್ತೆ'' ಎಂದು ಬಂಗಾರದ ಮನುಷ್ಯನ ಬಗ್ಗೆ ಕೊಂಡಾಡಿದ್ದಾರೆ.
ಇನ್ನು ಕನ್ನಡದಲ್ಲಿ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ ಸುಕುಮಾರ್ ''ಅವಕಾಶ ಸಿಕ್ಕರೇ ಖಂಡಿತವಾಗಿ ಕನ್ನಡದಲ್ಲಿ ಸಿನಿಮಾ ಮಾಡ್ತೀನಿ. ನನ್ನ ಜೀವನದ ಒಂದು ಕನ್ನಡ ಸಿನಿಮಾ ಮಾಡೇ ಮಾಡ್ತೀನಿ. ಅದು ನನಗೂ ಆಸೆ ಇದೆ'' ಎಂದು ಹೇಳಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಅಭಿನಯಿಸಿದ್ದ 'ಆರ್ಯ' ಚಿತ್ರದ ಮೂಲಕ ಡೈರೆಕ್ಷನ್ ಆರಂಭಿಸಿದ್ದ ಸುಕುಮಾರ್, 'ಆರ್ಯ 2', '100% ಲವ್', 'ನೇನೊಕ್ಕಡೆ', 'ಕುಮಾರಿ 21 ಎಫ್', 'ನಾನ್ನಕೂ ಪ್ರೇಮತೋ' ಹಾಗೂ 'ರಂಗಸ್ಥಳಂ' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ.

'ಲಕ್ಷ್ಮಿತನಯ' ಚಿತ್ರದ ಬಗ್ಗೆ
ಮದುವೆಯ ಮಮತೆಯ ಕರೆಯೋಲೆ ಚಿತ್ರದ ನಂತರ ಸೂರಜ್ ಗೌಡ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ ಲಕ್ಷ್ಮಿತನಯ. ವೆಂಕಟೇಶ್ ಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಸೂರಜ್ ಜೊತೆಯಲ್ಲಿ ಅಚ್ಯುತ್ ರಾವ್, ಸಿತಾರಾ, ಸಾಧುಕೋಕಿಲ, ಚಿಕ್ಕಣ್ಣ, ಕೆ. ಆರ್. ಪೇಟೆ ಶಿವರಾಜ್ ಹಾಗೂ ಧರ್ಮಣ್ಣ ಮತ್ತಿತರರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಮುಹೂರ್ತವಾಗಿದ್ದು, ಸುಕುಮಾರ್ ಚಿತ್ರಕ್ಕೆ ಚಾಲನೆ ನೀಡಿದ್ದರು.


Click it and Unblock the Notifications











