ಹಿರಿಯ ಕಲಾವಿದರಿಗೆ ಅವಕಾಶವೇ ಕೊಡುತ್ತಿಲ್ಲ: ಟೆನ್ನಿಸ್ ಕೃಷ್ಣ ಬೇಸರ
''ತಮಿಳು, ತೆಲುಗು ಭಾಷೆಗಳಲ್ಲಿ ಒಬ್ಬ ನಟನಿಗೆ ಸಾಯುವವರೆಗೆ ಅವಕಾಶಗಳನ್ನು ನೀಡುತ್ತಾರೆ. ಆದರೆ, ಕನ್ನಡದಲ್ಲಿ ಮಾತ್ರ ಹೀಗೆ ಇಲ್ಲ. ಏಕೆ ಈ ರೀತಿ ಮಾಡುತ್ತಿದ್ದಾರೆ?.'' ಎಂದು ಬೇಸರದಲ್ಲಿ ಟೆನ್ನಿಸ್ ಕೃಷ್ಣ ಮಾತನಾಡಿದ್ದಾರೆ.
'ರಾಜಲಕ್ಷ್ಮಿ' ಎಂಬ ಸಿನಿಮಾದಲ್ಲಿ ನಟ ಟೆನ್ನಿಸ್ ಕೃಷ್ಣ ನಟಿಸುತ್ತಿದ್ದಾರೆ. ಇಂದು (ಸೋಮವಾರ) ಈ ಸಿನಿಮಾದ ಪ್ರೆಸ್ ಮೀಟ್ ನಡೆದಿದೆ. ಟೆನ್ನಿಸ್ ಕೃಷ್ಣ, ಹೊನ್ನಾವಳ್ಳಿ ಕೃಷ್ಣ ಸೇರಿದಂತೆ ಕೆಲವು ಹಿರಿಯ ಕಲಾವಿದರಿಗೆ ಈ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ. ಬಹಳ ದಿನಗಳಿಂದ ತೆರೆಯಿಂದ ದೂರವಾಗಿದ್ದ ಕಲಾವಿದರು, ಮತ್ತೆ ಈ ಸಿನಿಮಾದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಿನಿಮಾದ ಪ್ರೆಸ್ ಮೀಟ್ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಟೆನ್ನಿಸ್ ಕೃಷ್ಣ ಇಂದಿನ ಚಿತ್ರರಂಗದಲ್ಲಿ ಹಿರಿಯ ಕಲಾವಿದರಿಗೆ ಅವಕಾಶ ನೀಡುತ್ತಿಲ್ಲ ಎಂದು ಸದ್ಯದ ಚಿತ್ರರಂಗದ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳ ಪ್ರಶ್ನೆಗೆ ಏನು ಉತ್ತರ ಹೇಳಬೇಕು?
''ಎಲ್ಲೇ ಹೋದರು ಅಭಿಮಾನಿಗಳು ಈಗ ಯಾವ ಸಿನಿಮಾ ಮಾಡುತ್ತಿದ್ದೀರಿ, ಸಿನಿಮಾಗಳಲ್ಲಿ ಯಾಕೆ ನಟಿಸುತ್ತಿಲ್ಲ, ನೀವು ಇನ್ನೂ ಸಿನಿಮಾ ಮಾಡಬೇಕು ಎಂಬ ಮಾತುಗಳನ್ನು ಹೇಳುತ್ತಾರಂತೆ. ಈ ರೀತಿ ಅಭಿಮಾನಿಗಳು ಪ್ರಶ್ನೆ ಮಾಡಿದಾಗ ನಾವೇನು ಪ್ರತಿಕ್ರಿಯಿಸಬೇಕು'' ಎಂದು ಟೆನ್ನಿಸ್ ಕೃಷ್ಣ ಹೇಳಿ ಹಿರಿಯ ಕಲಾವಿದರ ಪರ ಧ್ವನಿ ಎತ್ತಿದ್ದಾರೆ.

ತಮಿಳು, ತೆಲುಗು ಭಾಷೆಗಳಲ್ಲಿ ಹೀಗಿಲ್ಲ
''ತೆಲುಗು, ತಮಿಳು ಭಾಷೆಗಳಲ್ಲಿ ಒಬ್ಬ ಕಲಾವಿದ ಸಾಯುವವರೆಗೆ ಅವಕಾಶ ನೀಡುತ್ತಾರೆ. ಬ್ರಹ್ಮಾನಂದಂ ರಿಗೆ ಅನಾರೋಗ್ಯ ಇದ್ದರೂ, ಅವರ ಕಾಲ್ ಶೀಟ್ ಗಾಗಿ ಕಾಯುತ್ತಾರೆ. ಆದರೆ, ನಮ್ಮಲ್ಲಿ ಹಾಗಿಲ್ಲ. ಹಿರಿಯ ಕಲಾವಿದರಿಗೆ ಅವಕಾಶ ನೀಡುವುದಿಲ್ಲ. ಸಿನಿಮಾ ಇಲ್ಲದಿದ್ದರೆ, ನಾವು ಬೇರೆ ಬೇರೆ ಕಾರ್ಯಕ್ರಮಗಳನ್ನು ಮಾಡಿಕೊಂಡಿದ್ದೇವೆ. ಆದರೆ, ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಬೇಕು.'' ಎನ್ನುವುದು ಟೆನ್ನಿಸ್ ಮಾತು.

ನನಗೆ ಅಂತ್ತಾಲ್ಲ, ಎಲ್ಲರಿಗೂ ಅವಕಾಶ ನೀಡಿ
''ನನಗೆ ಸಿನಿಮಾ ಅವಕಾಶ ನೀಡಿ ಎಂದು ನಾನು ಕೇಳುತ್ತಿಲ್ಲ. ಒಂದು ಸಿನಿಮಾಗೆ ನನ್ನನ್ನು ಹಾಕಿಕೊಳ್ಳಿ, ಮತ್ತೊಂದು ಸಿನಿಮಾಗೆ ಬ್ಯಾಂಕ್ ಜನಾರ್ಧನ್ ಹಾಕಿಕೊಳ್ಳಿ, ಇನ್ನೊಂದು ಸಿನಿಮಾಗೆ ಹೊನ್ನಾವಳ್ಳಿ ಕೃಷ್ಣರನ್ನು, ಬಿರಾದರ್ ರನ್ನು ಹಾಕಿಕೊಳ್ಳಿ. ಚಿತ್ರರಂಗದಲ್ಲಿ ಹಿರಿಯ ಕಲಾವಿದರೂ ಇರಬೇಕು ಎನ್ನುವುದು ನನ್ನ ಮಾತು. ಅವರು ಕೂಡ ಬೆಳೆಯಬೇಕು. ಅಲ್ಲವೇ'' ಎಂದರು ಟೆನ್ನಿಸ್ ಕೃಷ್ಣ.

ಕಿರಿಯರ ಜೊತೆಗೆ ಹಿರಿಯರೂ ಇರಲಿ
''ಕಿರಿಯ ನಟರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಿರಿಯರ ಜೊತೆಗೆ ಹಿರಿಯರಿಗೂ ಅವಕಾಶ ನೀಡಿ. ನಮಗೆ ಪಾತ್ರ ಮಾಡಬೇಕು ಅಂತ ಈಗಲೂ ಇಷ್ಟ ಇದೆ. ಕೆಲಸ ಕೊಟ್ಟರೆ ಬಂದು ಕೆಲಸ ಮಾಡುತ್ತೇವೆ.'' ಎಂದು ಟೆನ್ನಿಸ್ ಕೃಷ್ಣ ಹೇಳಿದ್ದಾರೆ. 2012 ರಿಂದ ಟೆನ್ನಿಸ್ ಕೃಷ್ಣ ಸಿನಿಮಾದಲ್ಲಿ ನಟಿಸುವುದು ಕಡಿಮೆ ಆಗಿದೆ. 'ಉಪ್ಪಿ 2', 'ಜಾನ್ ಜಾನಿ ಜಾನಾರ್ಧನ್' ಬಳಿಕ ಯಾವುದೇ ದೊಡ್ಡ ಸಿನಿಮಾ ಅವರಿಗೆ ಸಿಕ್ಕಿಲ್ಲ.

Rap ಹಾಡಿನಲ್ಲಿ ಟೆನ್ನಿಸ್ ಕೃಷ್ಣ
ಕನ್ನಡದ Rapper ಅಲೋಕ್ ಹೊಸ ಹಾಡಿನಲ್ಲಿ ಟೆನ್ನಿಸ್ ಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ. 'ಮಾರಮ್ಮನ್ ಡಿಸ್ಕೋ' ಆಲ್ಬಂ ಹಾಡಿನಲ್ಲಿ ಟೆನ್ನಿಸ್ ಕೃಷ್ಣ ನಟಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಟೆನ್ನಿಸ್ ಕೃಷ್ಣ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡು ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಹಾಡಿನ ಮೂಲಕ ಅವರನ್ನು ರೀ ಲಾಂಚ್ ಮಾಡಲಾಗುತ್ತಿದೆ.


Click it and Unblock the Notifications











