‘ಗಲಾಟೆ ಮದುವೆ’ ಟೆನ್ನಿಸ್ ಕೃಷ್ಣರ 150ನೇ ಚಿತ್ರ
ಕನ್ನಡ ಚಿತ್ರರಂಗಕ್ಕೆ ಹಾಸ್ಯ ನಟರು ನೀಡಿರುವ ಕೊಡುಗೆ ಅಪಾರ. ಹಾಸ್ಯ ಚಕ್ರವರ್ತಿ ನರಸಿಂಹರಾಜು, ಕಲಾತ್ಮಕ ನಟ ಬಾಲಕೃಷ್ಣ, ಶರಪಂಜರ ಶಿವರಾಂ, ಪ್ರಚಂಡಕುಳ್ಳ ದ್ವಾರಕೀಶ್, ಕೆಮಿಡಿಯನ್ ಗುಗ್ಗು, ಕೀರಲು ಕಂಠದ ರತ್ನಾಕರ್, ಬೆಂಗಳೂರು ನಾಗೇಶ್, ಪುಷ್ಪಕ ವಿಮಾನದ ಮನ್ದೀಪ್ ರೈ, ನಾರದವಿಜಯ ಹಾಗೂ ಗಣೇಶ ಸೀರೀಸ್ನ ಅನಂತ್ನಾಗ್, ಹೊನ್ನವಳ್ಳಿ ಕೃಷ್ಣ, ಗೋಡೆ ಲಕ್ಷ್ಮೀನಾರಾಯಣ, ಎಂ.ಎಸ್. ಸತ್ಯು, ದಿನೇಶ್, ಎಂ.ಎಸ್. ಉಮೇಶ್, ಮುಸೂರಿ ಕೃಷ್ಣಮೂರ್ತಿ ಇವರೆಲ್ಲರು ಕನ್ನಡ ಚಿತ್ರರಸಿಕರನ್ನು ನಗಿಸಿ, ತಾವೂ ನಕ್ಕರು.
ಈ ಸಾಲಿನಲ್ಲಿ ಇತ್ತೀಚಿನ ಸೇರ್ಪಡೆ ಟೆನ್ನಿಸ್ ಕೃಷ್ಣ. ಟೆನಿಸ್ ಕೃಷ್ಣ ನಿನ್ನೆ ಮೊನ್ನೆ ಚಿತ್ರರಂಗಕ್ಕೆ ಬಂದರೆಂದು ನಿಮಗೆ ಅನಿಸಿದರೆ ತಪ್ಪು. ಅವರು ಈಗಾಗಲೇ 150 ಚಿತ್ರಗಳಲ್ಲಿ ನಟಿಸಿದ್ದಾರೆ. ಟೀವಿ ಧಾರಾವಾಹಿಯಾಂದರಲ್ಲಿ ಹನುಮಂತಣ್ಣ ಅಲ್ಲ ಕಣಣ್ಣೋ... ಆಂಜನೇಯ ಎನ್ನುತ್ತಾ ತಮ್ಮ ಹಾಸ್ಯದ ಛಾಪು ಮೂಡಿಸಿದ ಟೆನಿಸ್ ಕೃಷ್ಣ ಮಾಡುವ ಹಾಸ್ಯದ ಬಗ್ಗೆ ಕೆಲವರ ಅಪಸ್ವರವೂ ಇದೆ.
ಹಿಂದೆ ನರಸಿಂಹರಾಜು, ಬಾಲಕೃಷ್ಣ ಅವರು ತಮ್ಮ ಅಭಿನಯ ಹಾಸ್ಯದಿಂದ ನಗಿಸುತ್ತಿದ್ದರು. ಈಗ ಟೆನಿಸ್ ಕೃಷ್ಣ, ಕುಣಿಗಲ್ ನಾಗಭೂಷಣ್, ದೊಡ್ಡಣ್ಣ , ಬ್ಯಾಂಕ್ ಜನಾರ್ದನ್, ಉಮಾಶ್ರೀ, ಡಿಂಗ್ರಿ ನಾಗರಾಜ್ ಹಾಗೂ ನವರಸ ನಾಯಕ ಜಗ್ಗೇಶ್ ದ್ವಂದ್ವಾರ್ಥದ ಅಸಹ್ಯ ಮಾತುಗಳನ್ನೇ ಹಾಸ್ಯ ಎಂದು ಅಪಹಾಸ್ಯ ಮಾಡುತ್ತಿದ್ದಾರೆ ಎನ್ನುವವರೂ ಇದ್ದಾರೆ.
ಒಂದು ರೀತಿಯಲ್ಲಿ ಇದು ಅಕ್ಷರಶಃ ನಿಜ. ಸಾಂಸಾರಿಕ ಚಿತ್ರ ಎಂದು ಹಣೆಪಟ್ಟಿ ಕಟ್ಟಿಕೊಂಡ ಚಿತ್ರಗಳಲ್ಲೂ ಇಂಥ ಕೀಳು ಸಂಭಾಷಣೆ ಇದೆ. ಇದು ಕೆಲವರಿಗೆ ಮೆಚ್ಚುಗೆಯಾದರೂ ಹಲವರಿಗೆ ಮುಜುಗರ ನೀಡುತ್ತದೆ. ಮಕ್ಕಳು ಮರಿಯಾಂದಿಗೆ ಚಿತ್ರ ಮಂದಿರಕ್ಕೆ ಹೋದವರಂತೂ ಇದೇನು ಗ್ರಹಚಾರನಪ್ಪ ಅಂತಾರೆ.
ವಿಷಯ ಎಲ್ಲೋ ಸಾಗಿತಲ್ಲ.. ಅಂದ ಹಾಗೆ ಎ.ಆರ್. ಫಿಲಂಸ್ ಲಾಂಛನದಲ್ಲಿ ಎಂ.ಎಚ್. ಅನಂತಕುಮಾರ್ ನಿರ್ಮಿಸುತ್ತಿರುವ ಹಾಸ್ಯಮಯ 'ಗಲಾಟೆ ಮದುವೆ" ಮೂಲಕ ಟೆನಿಸ್ ಕೃಷ್ಣ ತಮ್ಮ 150ನೇ ಚಿತ್ರವನ್ನು ಪೂರೈಸುತ್ತಿದ್ದಾರೆ.
ಹಲವು ಚಿತ್ರಗಳಲ್ಲಿ ಟೆನಿಸ್ ಜೋಡಿಯಾಗಿ ನಟಿಸಿರುವ ರೇಖಾದಾಸ್ ಈ ಚಿತ್ರದಲ್ಲೂ ಇದ್ದಾರೆ. ಇವರೊಂದಿಗೆ ಕನ್ನಡ ಚಿತ್ರ ರಸಿಕರನ್ನು ನಗಿಸಲು ಸಿಹಿಕಹಿ ಚಂದ್ರು, ಶಂಕರ್ರಾವ್, ಅರವಿಂದ್, ಕುಣಿಗಲ್ ನಾಗಭೂಷಣ್, ಡಿಂಗ್ರಿ ನಾಗರಾಜ್, ವಿಜಯಸಾರತಿ, ಬ್ಯಾಂಕ್ ಜನಾರ್ದನ್, ಬಿರಾದಾರ್ ಸಹ ಇದ್ದಾರೆ. ಮೊನ್ನೆ ಈ ಚಿತ್ರಕ್ಕಾಗಿ ಹುಲಿವಾಡಿ ಗ್ರಾಮದ ದೊಡ್ಡ ಬೀರೇಶ್ವರ ದೇವಸ್ಥಾನದಲ್ಲಿ ಮದುವೆಯ ದೃಶ್ಯದ ಚಿತ್ರೀಕರಣ ನಡೆಯಿತು.
ಶಶಿಕುಮಾರ್ -ದೀಪ್ತಿ ಅವರ ವಿಹಾಸ ಗದ್ದಲ, ಗಟ್ಟಿ ಮೇಳ ಇಲ್ಲದೆ ನೆರವೇರಿತು. ಕತ್ತರಿಗುಪ್ಪೆ ಮನೆಯಾಂದರಲ್ಲಿ ಹಾಸ್ಯ ಸನ್ನಿವೇಶಗಳ ಚಿತ್ರೀಕರಣವೂ ನಡೆಯಿತು. ಗಲಾಟೆ ಮದುವೆಗೆ ನಗರದಲ್ಲಿ ಭರದ ಚಿತ್ರೀಕರಣ ಸಾಗಿದೆ.


Click it and Unblock the Notifications