ಕಾಟೇರ ಚಿತ್ರಕ್ಕೆ 100 ದಿನ ; ಕೇಕ್ ಕಟ್ ಮಾಡಿ ಕೇಕೆ ಹಾಕಿದ ತರುಣ್ ಸುಧೀರ್ ಮತ್ತು ತಂಡ..!
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವೊಂದು ಐವತ್ತು.. ನೂರು ದಿನ ಅಲ್ಲ ಬದಲಿಗೆ 25 ವಾರ 50 ವಾರದ ಪ್ರದರ್ಶನವನ್ನ ಕಾಣುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಅಂಗೈಯಲ್ಲಿಯೇ ಇವತ್ತು ಮನರಂಜನೆ ಇದೆ. ಸಾಲದಕ್ಕೆ ಪೈರಸಿ ಬೇರೆ.
ಇಂತಹ ಕಾಲದಲ್ಲಿ.. ಚಿತ್ರವೊಂದು ಮೂರು ವಾರ ಚಿತ್ರಮಂದಿರದಲ್ಲಿ ಉಳಿಯುವುದು ಕಷ್ಟ ಎಂಬ ವಾತಾವರಣ ಇದೆ. ಇನ್ನೂ ಹೊಸಬರ ಕಥೆ ಕೇಳುವುದಕ್ಕೂ.. ಹೇಳುವುದಕ್ಕೂ ಇದು ಸಮಯ ಅಲ್ಲ. ಸಂದರ್ಭ.. ಸನ್ನಿವೇಶ ಹೀಗಿರುವಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ನೂರು ದಿನಗಳನ್ನ ಪೂರೈಸಿದೆ.

ಓಟಿಟಿಯಲ್ಲಿ ಅಷ್ಟೇ ಅಲ್ಲದೇ ಕಿರುತೆರೆಯಲ್ಲಿಯೂ ಪ್ರದರ್ಶನ ಕಂಡು ಜನಮೆಚ್ಚುಗೆಗೆ ಪಾತ್ರವಾಗಿದೆ. ಇವೆರಡು ಕಡೆ ದಾಖಲೆಯ ಬಾವುಟವನ್ನೂ ನೆಟ್ಟಿದೆ. ಸಂಭ್ರಮ ಪಡಲು ಇದಕ್ಕಿಂತ ಕಾರಣ ಬೇಕಾ..? ಹೀಗಾಗಿಯೇ ಕಾಟೇರದ ಕ್ಯಾಪ್ಟನ್ ತರುಣ್ ಸುಧೀರ್ ತಮ್ಮ ಚಿತ್ರತಂಡ ಎಂಬ ಕುಟುಂಬದ ಜೊತೆ ಕೇಕ್ ಕಟ್ ಮಾಡಿದ್ದಾರೆ. ಸಂಭ್ರಮಿಸಿದ್ದಾರೆ.
ತರುಣ್ ಸುಧೀರ್ ಜೊತೆ ಕಾಟೇರದ ಕ್ಯಾಮರಾ ಕಣ್ಣು ಸುಧಾಕರ್ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇನ್ನೂ.. ಚಾಲೆಂಜಿಂಗ್ ಸ್ಟಾರ್ ದರ್ಶನ್, ಇತ್ತೀಚೆಗಷ್ಟೇ ಕೈ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಹೇಳಿದ್ದಾರೆ. ಈ ಕಾರಣಕ್ಕೆ ದರ್ಶನ್ ಈ ಸಂಭ್ರಮ..ಸಡಗರದಲ್ಲಿ.. ಭಾಗಿಯಾಗಿರಲಿಲ್ಲ.

ಉಳಿದಂತೆ ಅಯೋಗ್ಯ ಮಹೇಶ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಹಾಗೂ ದರ್ಶನ್ ಅವರಿಗೆ ಮಿಸ್ಟರ್ ಐರಾವತ ಚಿತ್ರ ನಿರ್ದೇಶಿಸಿದ್ದ, ಧ್ರುವಾ ಸರ್ಜಾ ಅವರಿಗೆ ಮಾರ್ಟಿನ್ ಚಿತ್ರವನ್ನ ಸದ್ಯ ನಿರ್ದೇಶಿಸಿರುವ ಎ.ಪಿ.ಅರ್ಜುನ್ ಕಾಟೇರ ಚಿತ್ರದ ನೂರು ದಿನಗಳ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದು ವಿಶೇಷ.
ಅಂದ್ಹಾಗೇ ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಬಂದ ಕಾಟೇರ ಹತ್ತು ಹಲವು ದಾಖಲೆಗಳ ಸರದಾರ ಎಂಬ ಪಟ್ಟವನ್ನ ಅಲಂಕರಿಸಿರುವ ಸಿನಿಮಾ. ಗಾಂಧಿನಗರ ಹಾಗೂ ಅಭಿಮಾನಿಗಳ ಲೆಕ್ಕಾಚಾರದ ಪ್ರಕಾರ ಈ ಚಿತ್ರದ ಗಳಿಕೆ ಕಡಿಮೆ ಅಂದರೂ ಇನ್ನೂರು ಕೋಟಿಯಾಗಿದೆ.

ಇನ್ನೂ.. ಮೊನ್ನೆಯಷ್ಟೇ ನೂರು ದಿನದ ಸಂಭ್ರಮದ ನೆಪದಲ್ಲಿ, ಕಿರುತೆರೆಯಲ್ಲಿ ಪ್ರಸಾರವಾದ ಕುಲುಮೆ ಕಾಟೇರನ ಕರಾಳ ಚರಿತ್ರೆಯನ್ನ ಲೆಕ್ಕ ಇಲ್ಲದಷ್ಟು ಜನ ಕಣ್ತುಂಬಿಕೊಂಡಿದ್ದಾರೆ ಅನ್ನುವ ಮಾತು ಇದೆ. ಕಿರುತೆರೆಯ ಟಿಆರ್ಪಿ ರೇಸ್ನಲ್ಲಿ ಕಾಟೇರ ಹೊಸ ದಾಖಲೆ ಬರೆದಿದೆ ಅನ್ನುವ ಸುದ್ದಿಯೂ ಇದೆ. ಹರಿದಾಡ್ತಿರುವ ಈ ಸುದ್ದಿಗೆ ವಾಹಿನಿ ಕಡೆಯಿಂದನೇ ಅಧಿಕೃತ ಮುದ್ರೆ ಬೀಳಬೇಕಷ್ಟೇ
ಒಟ್ನಲ್ಲಿ ಭೂಮಾಲೀಕರ ದರ್ಪ, ದೌರ್ಜನ್ಯಗಳ ನಡುವೆ ಬದುಕುವ ರೈತಾಪಿ ವರ್ಗದ ಬವಣೆಯನ್ನೊತ್ತು ಬಂದ ಕಾಟೇರ, ಗ್ರಾಮೀಣ ಹಿನ್ನೆಲೆಯ ಅಪ್ಪಟ ದೇಸೀ ಸಿನಿಮಾ. ಇಂತಹ ದೇಸಿ ಸಿನಿಮಾ ಬೆಳ್ಳಿತೆರೆಯಲ್ಲಿ ಕೋಟ್ಯಂತರ ಜನಗಳ ಹೃದಯ ಗೆಲ್ಲುವುದರ ಜೊತೆಯಲ್ಲಿ, ಕಿರುತೆರೆ ಹಾಗೂ ಓಟಿಟಿ ವೇದಿಕೆಯಲ್ಲಿಯೂ ಪವಾಡ ಮಾಡುತ್ತಿದೆ. ನೂರು ದಿನಗಳ ಸಂಭ್ರಮಾಚರಣೆಯನ್ನ ಮಾಡುವುದರ ಮೂಲಕ ತರುಣ್ ಸುಧೀರ್ ಹಾಗೂ ತಂಡ ಗತಕಾಲದ ಆ ವೈಭವದ ದಿನಗಳನ್ನೂ ಸಿನಿಪ್ರಿಯರಿಗೆ ಈ ಮೂಲಕ ನೆನಪಿಸಿದೆ. ಏನೇ ಇರಲಿ.. ಇಂಥಹದ್ದೊಂದು ಸಾಧನೆಯನ್ನ ಮಾಡಿರುವ ಕಾಟೇರಗೆ ಮತ್ತೊಮ್ಮೆ-ಮಗದೊಮ್ಮೆ ನೀವು ಒಮ್ಮೆ ಶುಭಾಶಯಗಳನ್ನ ಹೇಳಿ ಬಿಡಿ.


Click it and Unblock the Notifications











