'ಕಾಟೇರ' ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಾ? ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಿಷ್ಟು
ದರ್ಶನ್ ನಟನೆಯ 'ಕಾಟೇರ' ಸಿನಿಮಾ ರಿಲೀಸ್ಗೆ ರೆಡಿಯಾಗ್ತಿದೆ. ಡಿಸೆಂಬರ್ 29ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಹೇಳಿ ಚಿತ್ರತಂಡ ಶಾಕ್ ಕೊಟ್ಟಿದೆ. ಇನ್ನು ಚಿತ್ರದ ಒಂದೊಂದೆ ಹಾಡು ಹೊರಬರಲಿದೆ. 'ಶ್ಯಾನೆ ಪಸಂದಗಾವವ್ನೆ' ಸಾಂಗ್ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ.
ಭಾರೀ ನಿರೀಕ್ಷೆ ನಿರೀಕ್ಷೆ ಮೂಡಿಸಿರುವ 'ಕಾಟೇರ' ಚಿತ್ರವನ್ನು ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ನಟಿಸಿದ್ದಾರೆ. ರಾಕ್ಲೈನ್ ವೆಂಕಟೇಶ್ ಸಿನಿಮಾ ನಿರ್ಮಿಸಿದ್ದಾರೆ. ಸದ್ಯ ಸಣ್ಣ ಟೀಸರ್ ಝಲಕ್ನಿಂದ ಸಿನಿಮಾ ಇನ್ನಿಲ್ಲದ ಸದ್ದು ಮಾಡ್ತಿದೆ.

ತರುಣ್ ಸುಧೀರ್ ಕತೆ, ಚಿತ್ರಕತೆ ಬರೆದು 'ಕಾಟೇರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಒಂದೊಳ್ಳೆ ಕಲಾವಿದರು ಹಾಗೂ ತಂತ್ರಜ್ಞರ ತಂಡ ಕಟ್ಟಿಕೊಂಡು 'ಕಾಟೇರ' ಚಿತ್ರವನ್ನು ತಿದ್ದಿ ತೀಡಿದ್ದಾರೆ. ಸಣ್ಣ ಸಣ್ಣ ಝಲಕ್ಗಳಿಂದಲೇ ಈ ಹಳ್ಳಿ ಸೊಗಡಿನ ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಕುಮಾರ್ ಗೋವಿಂದ್, ಶ್ರುತಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ವಿ. ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ, ಸುಧಾಕರ್ ರಾಜ್ ಛಾಯಾಗ್ರಹಣ 'ಕಾಟೇರ' ಚಿತ್ರಕ್ಕಿದೆ. ಚಿತ್ರದಲ್ಲಿ 70ರ ದಶಕದ ಕತೆಯನ್ನು ಹೇಳಲಾಗುತ್ತಿದೆ. 'ಉಳುವವನೆ ಭೂಮಿಯ ಒಡೆಯ' ಕಾಯ್ದೆಯ ಸುತ್ತಾ ಈ ಸಿನಿಮಾ ಕತೆ ಸಾಗಲಿದೆ. ಚಿತ್ರದಲ್ಲಿ ಲುಂಗಿ ಉಟ್ಟು ದರ್ಶನ ಹಳ್ಳಿ ಹೈದನ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್ನಲ್ಲಿ ದರ್ಶನ್ ಬೀಡಿ ಸೇದು ಸ್ಟೈಲ್ ವೈರಲ್ ಆಗ್ತಿದೆ.
ಸ್ಟಾರ್ ನಟರ ಸಿನಿಮಾಗಳು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿವೆ. ಆದರೆ ನಟ ದರ್ಶನ್ಗೆ ಪ್ಯಾನ್ ಇಂಡಿಯಾ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ. ಈ ಬಗ್ಗೆ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿದ್ದಾರೆ. 'ಕ್ರಾಂತಿ' ಚಿತ್ರ 5 ಭಾಷೆಗೆ ಡಬ್ ಆಗಿದ್ದರೂ ಪ್ಯಾನ್ ಇಂಡಿಯಾ ಪ್ರಮೋಷನ್ ರಿಲೀಸ್, ಮಾಡಲಿಲ್ಲ. 'ಕಾಟೇರ' ಸಿನಿಮಾ ಕನ್ನಡದಲ್ಲಿ ಮಾತ್ರ ಬರುತ್ತಾ? ಬೇರೆ ಭಾಷೆಗಳಲ್ಲೂ ತೆರೆಗೆ ಬರುತ್ತಾ? ಎನ್ನುವ ಪ್ರಶ್ನೆಗೆ ಇದೀಗ ನಿರ್ದೇಶಕರು ಉತ್ತರಿಸಿದ್ದಾರೆ.
"ಸದ್ಯಕ್ಕೆ ಕನ್ನಡದಲ್ಲಿ ಮಾತ್ರ 'ಕಾಟೇರ' ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಿದ್ದೀವಿ. ಆದರೆ ಎಲ್ಲಾ ಕಡೆ ಬಹಳ ಗ್ರ್ಯಾಂಡ್ ಆಗಿ ಸಿನಿಮಾ ರಿಲೀಸ್ ಆಗಲಿದೆ. ಪ್ರಮೋಷನ್ ದೊಡ್ಡಮಟ್ಟದಲ್ಲಿರುತ್ತದೆ. ಪ್ರೀ ರಿಲೀಸ್ ಈವೆಂಟ್ ಮಾಡಬೇಕೆಂದುಕೊಂಡಿದ್ದೇವೆ. ಎಲ್ಲಾ ದೊಡ್ಡಮಟ್ಟದಲ್ಲಿರುತ್ತದೆ. ಆದರೆ ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ಸಿನಿಮಾ ರಿಲೀಸ್ ಆಗಲಿದೆ. ಮುಂದಿನ ದಿನಗಳಲ್ಲಿ 'ಕಾಂತಾರ' ಮೊದಲು ಕನ್ನಡದಲ್ಲಿ ಬಂದು ಬಳಿಕ ಎಲ್ಲಾ ಭಾಷೆಗಳಲ್ಲಿ ಬಂದಂತೆ ನಮ್ಮ ಸಿನಿಮಾ ರಿಲೀಸ್ ಪ್ಲ್ಯಾನ್ ಸಹ ಇಟ್ಟುಕೊಂಡಿದ್ದೇವೆ" ಎಂದು ತರುಣ್ ಹೇಳಿದ್ದಾರೆ.
'ಕ್ರಾಂತಿ' ಸಿನಿಮಾ ಬಿಡುಗಡೆಗೂ ಮುನ್ನ ದರ್ಶನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. "ನಾವು ನಮ್ಮ ಸಿನಿಮಾ ಡಬ್ ಮಾಡಿ ಕೊಡ್ತೀವಿ. ಆದರೆ ನಾವು ಅಲ್ಲಿ ಹೋಗಿ ಕಾಕಾ ಹೊಡೆಯೋದಿಲ್ಲ, ಇದು ನಮ್ಮ ಟೆರಿಟರಿ. ಯಾರು ಏನೇ ಹೇಳಿದ್ರು 'ಮೇರಾ ಕುತ್ತಾ ಮೇರಾ ಗಲಿ ಶೇರ್ ಹೈ' ಅನ್ನೋ ಗಾದೆ ಇದೆ. ಅಂದರೆ ನಮ್ಮ ಬೀದಿಗೆ ನಮ್ಮ ನಾಯಿನೇ ಅಂತ. ಇದು ನನ್ನ ಟೆರಿಟರಿ. ನಾನು ಇಲ್ಲಿಗೆ ಸಿನಿಮಾ ಮಾಡುತ್ತೀನಿ. ಹೊರಗಡೆಯವರಿಗೆ ಡಬ್ ಮಾಡಿ ಕೊಡ್ತಿನಿ. ಅವರು ತಗೊಂಡು ಹೋಗಿ ಹಾಕಿದ್ರು ಖುಷಿ ಹಾಕದೇ ಇದ್ದರೂ ಖುಷಿ."
'ಕುರುಕ್ಷೇತ್ರ', 'ರಾಬರ್ಟ್' ನಾವು ಮಾಡಿ ನೋಡಿದ್ವಿ. ಅವರಿಗೂ ಅವರ ಟೆರಿಟರಿ ಇದೆ. ಸುಮ್ಮನೆ ಊಹಾಪೋಹ ನಾವು ನೋಡಿದ್ದೀವಿ. ನಾವು ಇಲ್ಲಿಗೆ ಮಾತ್ರ ಲಾಯಕ್ಕು ಇಲ್ಲೇ ಇರ್ತೀವಿ" ಎಂದಿದ್ದರು.


Click it and Unblock the Notifications











