'ಕಾಟೇರ' ರಿಲೀಸ್ ಯಾವಾಗ? ಶೂಟಿಂಗ್ ಎಲ್ಲಿಗೆ ಬಂತು? ವೈರಲ್ ಫೋಟೊ ಬಗ್ಗೆ ತರುಣ್ ಮಾಹಿತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಸೂಪರ್ ಹಿಟ್ 'ರಾಬರ್ಟ್' ಕಾಂಬಿನೇಷನ್ನಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. ಸಣ್ಣ ಸಣ್ಣ ಶೆಡ್ಯೂಲ್ಗಳಲ್ಲಿ ಚಿತ್ರೀಕರಣ ನಡೀತಿದೆ. ರಾಕ್ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 'ಕ್ರಾಂತಿ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಹಾಗಾಗಿ 'ಕಾಟೇರ'ನತ್ತ ಅಭಿಮಾನಿಗಳ ಚಿತ್ತ ನೆಟ್ಟಿದೆ.
ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಸೆಟ್ಟೇರಿತ್ತು. ನಂತರ ರಾಕ್ಲೈನ್ ಸ್ಟುಡಿಯೋದಲ್ಲಿ ಮೊದಲ ಶೆಡ್ಯೂಲ್ ಆರಂಭಿಸಲಾಗಿತ್ತು. ಅಲ್ಲಿಂದ ಮುಂದೆ ಕನಕಪುರ, ಹೈದರಾಬಾದ್, ತುಂಬನೇರಳೆ ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ರವಿಶಂಕರ್ ಗುರೂಜಿ ಆಶ್ರಮದ ಬಳಿ ಒಂದು ಹಳ್ಳಿಯ ಸೆಟ್ ಹಾಕಲಾಗಿದೆ. ಕಳೆದ ವಾರ ಕೂಡ ಇದೇ ಸೆಟ್ನಲ್ಲಿ ಚಿತ್ರೀಕರಣ ನಡೆಸಲಾಗಿತ್ತು.

ಇದೆಲ್ಲದರ ನಡುವೆ ಸಿನಿಮಾ ರಿಲೀಸ್ ಯಾವಾಗ? ಎನ್ನುವ ಬಗ್ಗೆ ಚರ್ಚೆ ನಡೀತಿದೆ. ಡಿಸೆಂಬರ್ನಲ್ಲಿ 'ಕಾಟೇರ'ನ ಆರ್ಭಟ ಶುರುವಾಗುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ದರ್ಶನ್ ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡುವುದಾಗಿ ಈ ಹಿಂದೆ ಹೇಳಿದ್ದರು. 'ಕ್ರಾಂತಿ' ಸಿನಿಮಾ ರಿಲೀಸ್ ತಡವಾಗಿತ್ತು. ಕಳೆದ ವರ್ಷ ಬರಬೇಕಿದ್ದ ಸಿನಿಮಾ ಈ ವರ್ಷ ಬಂದಿತ್ತು. ಇದೀಗ ಇದೇ ವರ್ಷದ ಕೊನೆಗೆ 'ಕಾಟೇರ' ಬರ್ತಾನೆ ಎನ್ನುವ ಲೆಕ್ಕಾಚಾರ ನಡೀತಿದೆ.
ತರುಣ್ ಸುಧೀರ್ ಹೇಳಿದ್ದೇನು?
'ಕಾಟೇರ' ಸಿನಿಮಾ ರಿಲೀಸ್ ಡೇಟ್ ಬಗ್ಗೆ ಚಿತ್ರತಂಡ ಈವರೆಗೆ ಅಧಿಕೃತ ಮಾಹಿತಿ ನೀಡಿಲ್ಲ. ಸದ್ಯ ಡಿಸೆಂಬರ್ನಲ್ಲಿ ಸಿನಿಮಾ ರಿಲೀಸ್ ಆಗುತ್ತದೆ ಎನ್ನುವ ಸೋಶಿಯಲ್ ಮೀಡಿಯಾ ಚರ್ಚೆ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. "ಸದ್ಯಕ್ಕೆ ಸಿನಿಮಾ ರಿಲೀಸ್ ಡೇಟ್ ಬಗ್ಗೆ ನಾವು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ದರ್ಶನ್ ಸರ್ ಹಾಗೂ ರಾಕ್ಲೈನ್ ವೆಂಕಟೇಶ್ ಸರ್ ಸೇರಿ ತೀರ್ಮಾನಿಸುತ್ತಾರೆ. ಸಿನಿಮಾ ಚಿತ್ರೀಕರಣ ಮಾತ್ರ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ" ಎಂದಿದ್ದಾರೆ.

ವೈರಲ್ ಫೋಟೊ ಹಳೆಯದ್ದು
ಇನ್ನು ಕಳೆದ ವಾರ ಬೆಂಗಳೂರಿನಲ್ಲಿ 'ಕಾಟೇರ' ಚಿತ್ರದ ಚಿತ್ರೀಕರಣ ನಡೆದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ದರ್ಶನ್ ಹಸಿರು ಬಾವುಟ ಹಿಡಿದು ಹಿಂದೆ ತಿರುಗಿ ನಿಂತಿರುವ ಫೋಟೊವೊಂದು ವೈರಲ್ ಆಗಿತ್ತು. "ಅದು ಬೆಂಗಳೂರು ಚಿತ್ರೀಕರಣದ ಫೋಟೊ ಅಲ್ಲ. ಜನವರಿಯಲ್ಲಿ ಮೈಸೂರಿನ ಬಳಿ ನಡೆದ ಶೂಟಿಂಗ್ ಸನ್ನಿವೇಶ ಅದು. ಈಗ ಆ ಫೋಟೊ ಲೀಕ್ ಆಗಿದೆ ಅಷ್ಟೆ. ಕಳೆದ ವಾರ ನಾವು ಕನಕಪುರ ರಸ್ತೆ ಬಳಿ ಹಾಕಿರುವ ಹಳ್ಳಿ ಸೆಟ್ನಲ್ಲಿ ಚಿತ್ರೀಕರಣ ನಡೆಸಿದ್ವಿ" ಎಂದು ತರುಣ್ ಮಾಹಿತಿ ನೀಡಿದ್ದಾರೆ.
70ರ ದಶಕದ ಕಥೆ
'ಕಾಟೇರ' ಚಿತ್ರದದಲ್ಲಿ 70ರ ದಶಕದ ಕಥೆಯನ್ನು ಹೇಳಲಾಗುತ್ತಿದೆ. 'ಉಳುವವನೇ ಭೂಮಿಯ ಒಡೆಯ' ಕಾಯ್ದೆಯ ಪರಿಣಾಮವಾಗಿ ಹಳ್ಳಿಗಳಲ್ಲಿ ಏನೆಲ್ಲಾ ನಡೆಯಿತು ಎನ್ನುವುದನ್ನು ಹೇಳಲಾಗುತ್ತಿದೆ. ನಿರ್ದೇಶಕ ಜಡೇಶ್ ಹಂಪಿ ಜೊತೆ ಸೇರಿ ತರುಣ್ ಸುಧೀರ್ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ಗೆಳೆಯ ದರ್ಶನ್ನನ್ನು ಹೊಸ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ತರುಣ್ ಸುಧೀರ್.
ಘಟಾನುಘಟಿಗಳ ತಂಡ
ದರ್ಶನ್ ಜೋಡಿಯಾಗಿ ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಟಿಸುತ್ತಿದ್ದಾರೆ. ಇನ್ನು ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಕುಮಾರ್ ಗೋವಿಂದ್, ತೆಲುಗು ನಟ ಜಗಪತಿ ಬಾಬು ತಾರಾಗಣದಲ್ಲಿದ್ದಾರೆ. ಇನ್ನು ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಒಟ್ನಲ್ಲಿ 'ಕಾಟೇರ' ಸಿನಿಮಾ ಮೇಕಿಂಗ್ ಹಂತದಲ್ಲೇ ಭಾರೀ ಸದ್ದು ಮಾಡ್ತಿದೆ.


Click it and Unblock the Notifications











