ಮತ್ತೆ ಒಂದಾದ 'ರಾಬರ್ಟ್' ಟೀಂ: ಲಕ್ಷ್ಮಿ ಆಶೀರ್ವಾದದೊಂದಿಗೆ ಸ್ಕ್ರಿಪ್ಟ್ ಕೆಲಸ ಪ್ರಾರಂಭ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.
Recommended Video
ದರ್ಶನ್ ರಾಬರ್ಟ್ ಸಿನಿಮಾದ ನಂತರ ಮದಕರಿನಾಯಕ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ ಚಿತ್ರೀಕರಣ ಸಹ ಸದ್ಯ ಸ್ಥಗಿತವಾಗಿದೆ. ಈ ನಡುವೆ ದರ್ಶನ್ ಹೊಸ ಸಿನಿಮಾ ಸೆಟ್ಟೇರಿದೆ. ವಿಶೇಷ ಅಂದರೆ ಈ ಸಿನಿಮಾದಲ್ಲಿ ರಾಬರ್ಟ್ ಟೀಂ ಮತ್ತೆ ಒಂದಾಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ದರ್ಶನ್ ಹೊಸ ಸಿನಿಮಾದ ಸ್ಕ್ರಿಪ್ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಪೂಜೆಯ ಫೋಟೋವನ್ನು ನಿರ್ದೇಶಕ ತರುಣ್ ಸುಧೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ..

ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆ
ವರಮಹಾಲಕ್ಷ್ಮಿ ಹಬ್ಬದ ದಿನ ದರ್ಶನ್ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಈ ಮೂಲಕ ರಾಬರ್ಟ್ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಇಬ್ಬರು ಎರಡನೇ ಬಾರಿಗೆ ಒಂದಾಗಿದ್ದಾರೆ. ಮೊದಲ ಸಿನಿಮಾದ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿ ರಿಲೀಸ್ ಗೆ ಎದುರು ನೋಡುತ್ತಿರುವ ತಂಡ ಇದೀಗ ಮುಂದಿನ ಸಿನಿಮಾದ ಸ್ಕ್ರಿಪ್ಟ್ ಕೆಲಸವನ್ನು ಪ್ರಾರಂಭಿಸಲು ಸ್ಕ್ರಿಪ್ಟ್ ಪೂಜೆ ಮಾಡಿದ್ದಾರೆ.

'ಪ್ರೊಡಕ್ಷನ್ ನಂ 04' ಸಿನಿಮಾ
ಲಕ್ಷ್ಮಿಯ ಆಶೀರ್ವಾದದ ಜೊತೆ ತರುಣ್ ಮತ್ತು ಉಮಾಪತಿ ಇಬ್ಬರು ಹೊಸ ಸಿನಿಮಾ ಪ್ರಾರಂಭಿಸಿದ್ದಾರೆ. ಚಿತ್ರಕ್ಕೆ ಪ್ರೊಡಕ್ಷನ್ ನಂ 4 ಎಂದು ಹೆಸರಿಡಲಾಗಿದೆ. ಈ ಬಗ್ಗೆ ತರುಣ್ ಸುಧೀರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. " ವರಮಹಾಲಕ್ಷ್ಮಿ ಆಶೀರ್ವಾದದೊಂದಿಗೆ ಮುಂದಿನ ಸಿನಿಮಾದ ಸ್ಕ್ರಿಪ್ಟ್ ಕೆಲಸ ಪ್ರಾರಂಭವಾಗಿದ್ದೇನೆ. ಡಿ ಬಾಸ್ ಜೊತೆ ಮುಂದಿನ ಸಿನಿಮಾ. ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಇರಲಿ" ಎಂದು ಕೇಳಿಕೊಂಡಿದ್ದಾರೆ.

ಸಿಂಧೂರ ಲಕ್ಷ್ಮಣ ಆಗ್ತಾರಾ ದರ್ಶನ್?
ನಟ ದರ್ಶನ್ ಸ್ವತಂತ್ರ ಹೋರಾಟಗಾರ ಸಿಂಧೂರ ಲಕ್ಷ್ಮಣನಾಗಿ ತೆರೆಮೇಲೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಂಧೂರ ಲಕ್ಷ್ಮಣನ ಪಾತ್ರ ಮಾಡಬೇಕು ಎನ್ನುವುದು ದರ್ಶನ್ ಅವರ ದೊಡ್ಡ ಕನಸಂತೆ. ಅವರ ಆಸೆಯನ್ನು ನಿರ್ದೇಶಕ ತರುಣ್ ಸುಧೀರ್ ಬಳಿ ಹೇಳಿಕೊಂಡಿದ್ದರಂತೆ. ದರ್ಶನ್ ಕನಸಿನ ಸಿನಿಮಾಗೆ ತರುಣ್ ಕೂಡ ಜೈ ಎಂದು, ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿತ್ತು. ಆದರೀಗ ಇದು ಅಧಿಕೃತವಾಗಿದೆ. ಆದರೆ ಯಾವ ಸಿನಿಮಾ ಎನ್ನುವುದು ಬಹಿರಂಗ ಪಡಿಸಿಲ್ಲ.

ಯಾರು ಸಿಂಧೂರ ಲಕ್ಷ್ಮಣ?
ಶೌರ್ಯ ಮತ್ತು ಸಾಹಸಕ್ಕೆ ಹೆಸರುವಾಸಿಯಾಗಿದ್ದ ವೀರ ಸೇನಾನಿ ಸಿಂಧೂರ ಲಕ್ಷ್ಮಣನ ಬಗ್ಗೆ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದವರಿಗೆ ಚನ್ನಾಗಿ ಗೊತ್ತಿರುತ್ತೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗ ಸಿಂದೂರಿನಲ್ಲಿ ಜನಿಸಿದ ಸ್ವಾತಂತ್ರ ಹೋರಾಟಗಾರ ಲಕ್ಷ್ಮಣನ. ತನ್ನದೇ ಆದ ಒಂದು ತಂಡ ಕಟ್ಟಿಕೊಂಡು ಬ್ರಿಟಿಷ್ ಕಚೇರಿಗಳನ್ನು ಲೂಟಿ ಮಾಡಿ ಅದನ್ನು ಬಡವರಿಗೆ ಹಂಚುತ್ತಿದ್ದ. 1920ರಲ್ಲಿ ಅಸಹಕಾರ ಚಳುವಳಿ ಪ್ರಾರಂಭವಾದಾಗ ಲಕ್ಷ್ಮಣ ತನ್ನದೆ ಆದ ರೀತಿಯಲ್ಲಿ ಸ್ವತಂತ್ರ ಹೋರಾಟದಲ್ಲಿ ತೊಡಗಿಕೊಂಡಿದ್ದನಂತೆ. ಆದರೆ ಬ್ರಿಟಿಷರು ಹೊಂಚು ಹಾಕಿ ರಾತ್ರಿ ಊಟ ಮಾಡುವಾಗ ಮೋಸದಿಂದ ಲಕ್ಷ್ಮಣನನ್ನು ಕೊಂದರು.

ಅಧಿಕೃತವಾಗಿ ಬಹಿರಂಗ ಪಡಿಸದ ಸಿನಿಮಾತಂಡ
ಕೇವಲ 24 ನೇ ವಯಸ್ಸಿನಲ್ಲಿ ಮಡಿದ ಈ ಸ್ವಾತಂತ್ರ ಹೋರಾಟಗಾರನ ಕುರಿತು ಹಲವಾರು ನಾಟಕ ಮತ್ತು ಜಾನಪದ ಸಾಹಿತ್ಯಗಳು ಮೂಡಿ ಬಂದಿವೆ. ದರ್ಶನ್ ಸಿಂಧೂರ ಲಕ್ಷ್ಮಣನಾಗಿ ಬಣ್ಣಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ತರುಣ್ ಆಗಲಿ ಅಥವ ಉಮಾಪತಿಯಾಗಲಿ ಈ ಬಗ್ಗೆ ಬಹಿರಂಗಪಡಿಸಿಲ್ಲ. ರಾಬರ್ಟ್ ಟೀಂ ಮತ್ತೆ ಒಂದಾಗುತ್ತಿದೆ ಅಂದ್ಮೇಲೆ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.


Click it and Unblock the Notifications











