ದರ್ಶನ್ ಜೈಲಿಂದ ಆಚೆ ಬರಲು ಇನ್ನೆಷ್ಟು ದಿನ ಬೇಕು, ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದೇನು...?
ಮಾಡಬಾರದ್ದನ್ನೆಲ್ಲ ಮಾಡಿರುವ ತಪ್ಪಿಂದ ಇವತ್ತು ದರ್ಶನ್, ಪರಪ್ಪನ ಅಗ್ರಹಾರದಲ್ಲಿದ್ದಾರೆ. ಎರಡು ತಿಂಗಳಿಂದ ವನವಾಸ ಅಲ್ಲ ಬದಲಿಗೆ ಸೆರೆವಾಸ ಅನುಭವಿಸುತ್ತಿದ್ದಾರೆ.
ಇನ್ನೂ.. ದರ್ಶನ್ ಅವರ ನಿಜವಾದ ಅಭಿಮಾನಿಗಳು ತಮ್ಮ ಆರಾಧ್ಯ ನಟ ಮತ್ತು ಅವರ ಗ್ಯಾಂಗ್ ಮಾಡಿದ ಕೃತ್ಯವನ್ನು ಕಂಡು ಮರುಕ ಪಟ್ಟಿದ್ದಾರೆ. ʻಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿದ್ದ ಒಬ್ಬ ನಟ ಹೀಗೆ ದೃಷ್ಕೃತ್ಯದ ಪಾಲುದಾರನಾಗಿ ಜೈಲು ಸೇರಿದರಲ್ಲಾʼ ಅಂಥಾ ಈ ಕ್ಷಣಕ್ಕೂ ಕೊರಗುತ್ತಿದ್ದಾರೆ. ದರ್ಶನ್ ಆದಷ್ಟು ಬೇಗ ಜೈಲಿನಿಂದ ಆಚೆ ಬರಲಿ ಎಂಬ ಪ್ರಾರ್ಥನೆಯನ್ನೂ ಮಾಡುತ್ತಿದ್ದಾರೆ. ಕಂಬಿ ಹಿಂದೆ ತೆರಳಿ ಎರಡು ತಿಂಗಳಾದರೂ ಕರಿಯ ಯಾಕೆ ಬಿಡುಗಡೆಯಾಗುತ್ತಿಲ್ಲ ಎಂದು ಒದ್ದಾಡುತ್ತಿದ್ಧಾರೆ.

ಇದೆಲ್ಲದರ ನಡುವೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ ಸಂಪೂರ್ಣ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ. ತನಿಖೆ ಈಗ ಯಾವ ಹಂತದಲ್ಲಿದೆ ಎನ್ನುವುದರ ಕುರಿತು ಸ್ಪಷ್ಟವಾದ ಚಿತ್ರಣ ಕೊಟ್ಟಿದ್ದಾರೆ.
ಹೌದು, ದರ್ಶನ್ ಮತ್ತು ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾತನಾಡಿರುವ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್, ಇನ್ನೇನು ನಾವು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕೊನೆಯ ಹಂತ ತಲುಪಿದ್ದೇವೆ ಎಂದಿದ್ದಾರೆ. ಅನೇಕ ಮೌಖಿಕ ಸಾಕ್ಷ್ಯಗಳು, ಸಾಂದರ್ಭಿಕ ಸಾಕ್ಷ್ಯಗಳು ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಈಗಾಗಲೇ ತನಿಖಾ ತಂಡ ಸಂಗ್ರಹಿಸಿದ್ದು, ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ಸೇರಿ ಹೈದ್ರಾಬಾದ್ನ ಪ್ರಯೋಗಾಲಯಕ್ಕೆ ಕೂಡ ಕೆಲ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳುಹಿಸಿ ವರದಿ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ

ಇನ್ನೂ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ಕಳಿಸಲಾಗಿದ್ದ ವರದಿಗಳು ನಮ್ಮ ಕೈ ಸೇರಿವೆ ಎಂದಿರುವ ನಗರ ಪೊಲೀಸ್ ಆಯುಕ್ತ ದಯಾನಂದ್, ಇನ್ನೂ ಕೆಲ ವರದಿ ನಮಗೆ ತಲುಪಬೇಕಿದೆ ಎಂದಿದ್ದಾರೆ. ಆ ಎಲ್ಲ ವರದಿ ನಮ್ಮ ಕೈ ಸೇರಿದ ನಂತರ ತನಿಖೆಯನ್ನು ಮುಂದುವರೆಸಿದ ನಂತರ ಸ್ಪಷ್ಟೀಕರಣದ ಅವಶ್ಯಕತೆ ಬಿದ್ದರೆ ಆ ಸ್ಪಷ್ಟೀಕರಣ ಕೇಳಿ ಆ ನಂತರ ನಾವು ತನಿಖೆಯ ಅಂತಿಮ ವರದಿಯನ್ನು ಸಲ್ಲಿಕೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ
ಮುಂದುವರೆದು ಇಲ್ಲಿಯವರೆಗೆ ಸಂಗ್ರಹಿಸಲಾದ ಸಾಕ್ಷ್ಯಗಳ ಸಂಖ್ಯೆ ನಮ್ಮ ಬಳಿ ಇಲ್ಲ ಎಂದಿರುವ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್, ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಶೇಕಡಾ 70 % ವರದಿ ಬಂದಿವೆ ಎಂದಿದ್ದಾರೆ. ಹೈದ್ರಾಬಾದ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಮೊಬೈಲ್ಗಳ ವರದಿಗಳಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಹೀಗೆ ಎಲ್ಲ ವರದಿಗಳು ಕೈ ಸೇರಿದ ನಂತರ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ ಬೆಂಗಳೂರು ಪೊಲೀಸ್ ಕಮೀಷನರ್ ಬಿ ದಯಾನಂದ್. ಅಂದ್ಹಾಗೇ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದ ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 28ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.


Click it and Unblock the Notifications











