ಕನ್ನಡ ಚಿತ್ರರಂಗದ ಸಮಸ್ಯೆ ಹತ್ತಾರು ; ಹೊಸಬರ ಕಷ್ಟ ಇಲ್ಲಿ ಕೇಳೋರು ಯಾರು...?
ಕನ್ನಡ ಚಿತ್ರರಂಗದಲ್ಲಿರುವುದು ಬೆರಳಣಿಕೆಯ ಸೂಪರ್ ಸ್ಟಾರ್ಗಳು ಮಾತ್ರ. ತಮ್ಮ ನಾಮಬಲದಿಂದ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆತರುವ ಸಾಮರ್ಥ್ಯ ಇರುವುದು ಇವರ ಬಳಿಯೇ.
ಸೂಪರ್ ಸ್ಟಾರ್ಗಳನ್ನ ಹೊರತು ಪಡಿಸಿದರೆ ಎರಡನೇ ದರ್ಜೆಯ ನಾಯಕರಿಂದ ಈ ಪವಾಡ ನಡೆಯುತ್ತೆ. ಆದರೆ ಕಟುವಾಸ್ತವ ಎಂದರೆ ಇವರನ್ನ ಮೊದಲ ಕೆಲವು ದಿನ ಪ್ರೇಕ್ಷಕರು ನಂಬುವುದಿಲ್ಲ. ಆ ನಂಬಿಕೆ ಬರುವುದು ಚಿತ್ರದ ಕಥೆಯಲ್ಲಿ ಧಮ್ ಇದ್ದಾಗ ಮಾತ್ರ. ಆ ನಂಬಿಕೆ ಬರುವವರೆಗೆ ಆ ಚಿತ್ರವನ್ನ ಚಿತ್ರಮಂದಿರದಲ್ಲಿ ಉಳಿಸಿಕೊಂಡರೆ ಮುಂದೆ ಕನ್ನಡ ಕಲಾ ರಸಿಕರೇ ಆ ಚಿತ್ರವನ್ನ ಕೈ ಹಿಡಿದು ಕರೆದೊಯ್ಯುತ್ತಾರೆ. ಉಳಿದಂತೆ ಕನ್ನಡ ಚಿತ್ರರಂಗದ ಅಳಿವು-ಉಳಿವು ಇರುವುದು ಹೊಸಬರ ಕೈಯಲ್ಲಿಯೇ.

ಆದರೆ.. ಈ ಜವಾಬ್ಧಾರಿಯನ್ನ ನಿರ್ವಹಿಸುವುದು ಸುಲಭ ಅಲ್ಲ. ಯಾಕೆಂದರೆ ಇದು 5G ಯುಗ. ಈ ಯುಗದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಬೇರೆ ಬೇರೆ ಭಾಷೆಯ ಅದ್ಭುತವನ್ನ ನಮ್ಮ ಭಾಷೆಯಲ್ಲಿ ಕಣ್ತುಂಬಿಕೊಳ್ಳುವ ಸೌಲಭ್ಯ ಇದೆ. ಇನ್ನೂ ಪ್ರೇಕ್ಷಕರ ಅಭಿರುಚಿ ಕೂಡ ಬದಲಾಗಿದೆ. ಈ ಕಾರಣಕ್ಕೆ ಮೈಯೆಲ್ಲಾ ಕಣ್ಣಾಗಿಸಿಕೊಂಡು ಚಿತ್ರವನ್ನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೈದು ಫೈಟು.. ನಾಲ್ಕೈದು ಡ್ಯೂಯೆಟ್ಟು ಎಂದು ಪುರಾತನ ಕಾಲದ ಸಿದ್ಧ ಸೂತ್ರಕ್ಕೆ ಜೋತು ಬೀಳದೇ ಹೊಸತನದ ಅನ್ವೇಷಣೆಯನ್ನ ಮಾಡಬೇಕಿದೆ. ಚಿತ್ರರಂಗದಲ್ಲಿ ಉಳಿಯಬೇಕು, ಬೆಳೆಯಬೇಕು ಎಂದರೆ ಅದು ಅನಿವಾರ್ಯ ಕೂಡ.
ಆದರೆ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ಬಹುತೇಕ ಹೊಸಬರು ಈ ಪರೀಕ್ಷೆಯಲ್ಲಿ ಎಡವುತ್ತಿದ್ದಾರೆ. ಕೇವಲ ಬೆರಳಣಿಕೆಯಷ್ಟು ಹೊಸಬರು ಮಾತ್ರ ಅಸಾಧ್ಯವನ್ನ ಸಾಧ್ಯವನ್ನಾಗಿಸುವ ಶಪಥ ಮಾಡಿದ್ದಾರೆ. ಆ ದಿಸೆಯಲ್ಲಿ ಕೆಲಸವನ್ನೂ ಮಾಡ್ತಿದ್ದಾರೆ. ಇದಕ್ಕೆ ಪೂರಕವಾಗಿ ಈ ವರ್ಷ ಕೆಲ ಪ್ರಯತ್ನ-ಪ್ರಯೋಗಗಳಾಗಿವೆ. ಇವರ ಈ ಪ್ರಯತ್ನ ಮತ್ತು ಪ್ರಯೋಗಕ್ಕೆ ನಿರೀಕ್ಷಿತ ಬೆಂಬಲ ಸಿಗದೇ ಇರಬಹುದು. ಆದರೆ.. ಭರವಸೆಯನ್ನ ಮೂಡಿಸುವಲ್ಲಿ ಇವರು ಯಶಸ್ವಿಯಾಗಿರುವುದು ಸತ್ಯ. ಉಳಿದಂತೆ ಈ ನಾಲ್ಕು ತಿಂಗಳಿನಲ್ಲಿ ಬಹುತೇಕರು ಬಂದು ಹೋಗಿದ್ದು ಗೊತ್ತಾಗಲೇ ಇಲ್ಲ.

ಇನ್ನೂ ಕಥೆ-ಚಿತ್ರಕಥೆಯ ಆಚೆ ಹೊಸಬರ ಎದುರು ಪ್ರಚಾರದ ಸವಾಲು ಕೂಡ ಇದೆ. ಈ ಸವಾಲನ್ನ ಎದುರಿಸುವ ಧೈರ್ಯ ಚಿತ್ರರಂಗಕ್ಕೆ ಹೊಸದಾಗಿ ಪ್ರವೇಶಿಸಿರುವ ಅನೇಕನಿರ್ಮಾಪಕರಲ್ಲಿ ಇಲ್ಲ. ಅದಕ್ಕೆ ಹತ್ತಾರು ಕಾರಣ ಇರಬಹುದು. ಉಳಿದಂತೆ.. ಕನ್ನಡ ಚಿತ್ರರಂಗಕ್ಕೆ ಬೆಂಬಲ ಬೆಲೆ ಸಿಕ್ತಿಲ್ಲ. ಹೊಸ ಮುಖಗಳಿಗೆ ಮನರಂಜನಾ ವಾಹಿನಿಗಳು ಮಣೆ ಹಾಕ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ವರ್ಷ ತೆರೆಗೆ ಬಂದ 220 ಸಿನಿಮಾಗಳಲ್ಲಿ ಬೆರಳಣಿಕೆಯ ಸಿನಿಮಾಗಳ ಸ್ಯಾಟ್ ಲೈಟ್ ಹಕ್ಕು ಮಾತ್ರ ಮಾರಾಟವಾಗಿವೆ. ಉಳಿದಂತೆ ಬಹುತೇಕ ನಿರ್ಮಾಪಕರು ಇನ್ನೂ ಆಕಾಶ ನೋಡ್ತಿದ್ದಾರೆ.
ಇನ್ನೂ ನಿಮಗೆ ಗೊತ್ತು.. ಇದು ಪ್ಯಾನ್ ಇಂಡಿಯಾ ಕಾಲ. ಆದರೆ ಈ ಕಾಲದ ಮಹಿಮೆಯಿಂದ ಕಾಸು ಮಾಡಿಕೊಂಡ ಮತ್ತು ಮಾಡಿಕೊಳ್ಳುತ್ತಿರುವವರು ಕೂಡ ಬೆರಳಣಿಕೆಯಷ್ಟೇ ಜನ ಮಾತ್ರ. ಉಳಿದಂತೆ ತೆರೆಗೆ ಬರುವ ಬಹುತೇಕ ಹೊಸಬರ ಸಿನಿಮಾಗಳ ಡಬ್ಬಿಂಗ್ ಹಕ್ಕುಗಳನ್ನ ಕೂಡ ಕೇಳುವವರು ಇಲ್ಲಿ ಯಾರು ಇಲ್ಲ. ಇನ್ನೂ ಆಡಿಯೋ ರೈಟ್ಸ್ ಕಥೆ ಆ ದೇವರಿಗೆ ಪ್ರೀತಿ.
ಅಂದ್ಹಾಗೇ "ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು'' ಎಂಬ ಮಾತು ಅಕ್ಕ-ಪಕ್ಕದ ರಾಜ್ಯದಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಈ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಯಾಕೆಂದರೆ ನಮ್ಮಲ್ಲಿರುವ ಸೂಪರ್ ಸ್ಟಾರ್ಗಳಿಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹುಚ್ಚು ಹಿಡಿದಿದೆ ಹೊರತು, ಹೊಸ ಉತ್ಸಾಹಿ ಯುವ ನಿರ್ದೇಶಕ ನಿರ್ಮಾಪಕರ ಜೊತೆ ಸೇರಿ ಕೆಲಸ ಮಾಡುವ ಕಿಚ್ಚು ಯಾರಲ್ಲಿಯೂ ಕಾಣ್ತಿಲ್ಲ. ಇದಕ್ಕೆ ಸೂಪರ್ ಸ್ಟಾರ್ಗಳೆಲ್ಲ ತಮ್ಮ ಮುಂದೆ ಸದ್ಯಕ್ಕೆ ಹರವಿಕೊಂಡಿರುವ ಚಿತ್ರಗಳೇ ಸಾಕ್ಷಿ.
ಇದೆಲ್ಲದರ ನಡುವೆ ಪರಭಾಷೆ ಸಿನಿಮಾಗಳ ಹಾವಳಿ ಇದ್ದೇ ಇರುತ್ತೆ. ಚಿತ್ರಮಂದಿರದ ಸಮಸ್ಯೆ ಕಾಡ್ತಾನೇ ಇರುತ್ತೆ. ಹೀಗೆ ಇಂತಹ ಇನ್ನೂ ಹಲವಾರು ಸವಾಲುಗಳ ಹೊಸಬರ ಮುಂದೆ ಇವೆ. ಈ ಸವಾಲುಗಳನ್ನೆಲ್ಲ ಕನ್ನಡ ಚಿತ್ರರಂಗ ಹೇಗೆ ಎದುರಿಸುತ್ತೆ ಅನ್ನುವುದನ್ನ ಕಾದು ನೋಡಬೇಕಿದೆ.


Click it and Unblock the Notifications











