ಹೂ ತರ ಇದ್ಲು, ಹೂಕೋಸು ಆಗೋದ್ಲು ; ಲವ್ ಮಾಕ್ಟೇಲ್ನಲ್ಲಿ ಬಾಡಿ ಶೇಮಿಂಗ್ ಆರೋಪ -ಗೀತಾ ಭಟ್ಗೆ ಕೃಷ್ಣ-ಮಿಲನಾ ತಿರುಗೇಟು
ಬಣ್ಣದ ಪ್ರಪಂಚದಲ್ಲಿ ಅನೇಕ ನಾಯಕಿಯರು ಸಹಜ ಸೌಂದರ್ಯಕ್ಕೆ ಸರಳ ಸಾಧನೆಗಳ ಮೊರೆ ಹೋಗುತ್ತಾರೆ. ಆದರೂ ಕೂಡ ಕೆಲವೊಮ್ಮೆ ಜೀವನ ಶೈಲಿ, ಆಹಾರ ಕ್ರಮದಲ್ಲಾಗುವ ವ್ಯತ್ಯಾಸ, ಕಾಲ ಕಾಲಕ್ಕೆ ದೇಹದಲ್ಲಿ ಆಗುವ ಹಾರ್ಮೋನ್ಗಳ ಏರುಪೇರಿಂದ ದೇಹದ ಸೌಂದರ್ಯದಲ್ಲಿ ವ್ಯತ್ಯಾಸ ಕಾಣಿಸುತ್ತೆ. ಇದನ್ನರಿಯದ ಅನೇಕರು ಸುಖಾ ಸುಮ್ಮನೆ ಸೆಲೆಬ್ರೀಟಿಗಳಿಗೆ ಪ್ರಶ್ನೆಗಳನ್ನು ಮಾಡುತ್ತಾರೆ. ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯವನ್ನು ಟೀಕಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ.
ಇನ್ನು ಕೆಲವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರಾ ಎಂಬ ಪ್ರಶ್ನೆಯನ್ನು ಕೂಡ ಮಾಡುತ್ತಾರೆ. ಮತ್ತೂ ಕೆಲ ಒಮ್ಮೆ ವಿರಳಾತಿ ವಿರಳ ಸಂದರ್ಭದಲ್ಲಿ ಜಾಗೃತಿ ಮೂಡಿಸಬೇಕಾದ ಚಿತ್ರರಂಗದವರೇ ಮಹಿಳೆಯ ದೇಹಾಕೃತಿಯನ್ನು ಟೀಕಿಸುತ್ತಾರೆ.

ಈ ಸಾಲಿನಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕೂಡ ಇದ್ದಾರೆ ಎಂಬ ಆರೋಪವನ್ನು ಕಳೆದ ವರ್ಷಾಂತ್ಯದಲ್ಲಿ ಬ್ರಹ್ಮಗಂಟು ಧಾರಾವಾಹಿಯ ಖ್ಯಾತಿಯ ಗೀತಾ ಭಾರತಿ ಭಟ್ ಮಾಡಿದ್ದರು. ''ಲವ್ ಮಾಕ್ಟೇಲ್'' ಚಿತ್ರವನ್ನು ನಾನು ಮಾಡಲೇಬಾರದಿತ್ತು ಎಂಬರ್ಥದಲ್ಲಿ ಪಶ್ಚಾತಾಪದ ಮಾತುಗಳನ್ನಾಡಿ ಭಾವುಕರಾಗಿದ್ದರು.
ಈ ಕುರಿತು ''ರಾಜೇಶ್ ಗೌಡ'' ಅವರಿಗೆ ನೀಡಿದ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದ ಗೀತಾ ಭಾರತಿ ಭಟ್ ಅದು ''ಲವ್ ಮಾಕ್ಟೇಲ್'' ಎನ್ನುವ ಸಿನಿಮಾ. ಆ ಸಿನಿಮಾ ಮಾಡಿದಾಗ ನನಗೆ ವ್ಯೆಯಕ್ತಿಕವಾಗಿ ಬಾಡಿ ಶೇಮಿಂಗ್ ಅನುಭವ ಆಯ್ತು ಎಂದು ಹೇಳಿದ್ದರು.
ಆ ಚಿತ್ರದಲ್ಲಿ ನಾನೊಂದು ಪಾತ್ರ ಮಾಡಿದ್ದೆ, ಒಂದು ದೃಶ್ಯದಲ್ಲಿ ಒಂದು ಡೈಲಾಗ್ ಬರುತ್ತೆ. ''ಹೂವು ತರ ಇದ್ದಳು ಹೂಕೋಸು ತರ ಆಗೋದಳು'' ಎನ್ನುವ ಡೈಲಾಗ್ ಅದು ಎಂದು ಹೇಳಿದ್ದ ಗೀತಾ ಭಟ್ ಆ ಕ್ಷಣದಲ್ಲಿ ನನಗೆ ಮುಖಕ್ಕೆ ಹೊಡೆದಂತೆ ಬಾಡಿ ಶೇಮಿಂಗ್ ಮಾಡಿದಂತಾಯ್ತು ಎಂದು ತಮ್ಮ ಮನದ ನೋವನ್ನು ಹಂಚಿಕೊಂಡಿದ್ದರು. ಬಾಡಿ ಶೇಮಿಂಗ್ ಮಾಡಲು ನಾನ್ಯಾಕೆ ಅನುಮತಿ ನೀಡಿದೆ, ಆ ಪಾತ್ರ ಮಾಡುವ ಅವಶ್ಯಕತೆಯಾದರೂ ನನಗೇನು ಇತ್ತು ಎನ್ನುವ ಪ್ರಶ್ನೆ ನನಗೆ ಈಗಲೂ ಕಾಡುತ್ತೆ ಎಂದು ಬಿಕ್ಕಿದ್ದರು.
ಗೀತಾ ಭಾರತಿ ಭಟ್ ಅವರಾಡಿದ ಈ ಮಾತುಗಳಿಗೆ ಈಗ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಪ್ರತ್ಯುತ್ತರವನ್ನು ನೀಡಿದ್ದಾರೆ. ಬಾಡಿ ಶೇಮಿಂಗ್ ಸುತ್ತ ಮುತ್ತ ಸಾಗಿದ ಧಾರಾವಾಹಿಯನ್ನು ಮಾಡಿದಾಗ ತಮ್ಮ ದೇಹಾಕೃತಿಯನ್ನು ಹಂಗಿಸಲಾಗುತ್ತಿದೆ ಎಂಬ ಭಾವನೆ ಅವರಿಗೆ ಬರಲಿಲ್ವಾ ಎಂದು ಪ್ರಶ್ನೆಯನ್ನು ಕೇಳಿದ್ದಾರೆ.

ಈ ಕುರಿತು ''ಫಸ್ಟ್ ಡೇ ಫಸ್ಟ್ ಶೋ'' ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, ಉದ್ದೇಶಪೂರ್ವಕವಾಗಿ ನಾವು ಯಾವ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಮೊದಲನೆಯದ್ದಾಗಿ ನಮಗೆ ಅವರು ಯಾರು ಎನ್ನುವುದೇ ಗೊತ್ತಿರಲಿಲ್ಲ ಎಂದು ಹೇಳಿರುವ ಕ್ರಿಸ್ಮಿ ಜೋಡಿ ಆ ಪಾತ್ರಕ್ಕೆ ನಾವು ಆಡಿಷನ್ ಮಾಡಿ ಅವರನ್ನು ಆಯ್ಕೆ ಮಾಡಿದ್ದೇವು ಎಂದು ಹೇಳಿದ್ದಾರೆ. ವಿಷಯವನ್ನು ಅಥವಾ ಡೈಲಾಗ್ನ ಮುಚ್ಚಿಟ್ಟು ಆ ಪಾತ್ರವನ್ನು ಅವರಿಂದ ಮಾಡಿಸುವ ಅವಶ್ಯಕತೆ ನಮಗೆ ಇರಲಿಲ್ಲ ಎಂದು ಹೇಳಿರುವ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಬೇಕಾದಷ್ಟು ಜನ ಆರ್ಟಿಸ್ಟ್ಗಳು ಅವಕಾಶಗಳಿಗೋಸ್ಕರ ಕಾದು ಕುಳಿತಿರ್ತಾರೆ, ನಮ್ಮ ಅವಶ್ಯಕತೆಯನ್ನು ನಾವು ಹೇಳಿಯೇ ಮುಂದುವರೆದಿದ್ದು ಎಂದು ಹೇಳಿದ್ದಾರೆ.
ಮುಂದುವರೆದು ಅವರು ಮೊದಲು ಧಾರಾವಾಹಿ ಮಾಡ್ತಿದ್ದರು. ಆ ಧಾರಾವಾಹಿಯ ಕಥೆ ದೇಹದ ತೂಕದ ಸುತ್ತಾನೇ ತಾನೇ ಇದ್ದಿದ್ದು ಎಂದು ಪ್ರಶ್ನೆ ಮಾಡಿರುವ ಡಾರ್ಲಿಂಗ್ ಕೃಷ್ಣ ಆ ಧಾರಾವಾಹಿಯಲ್ಲಿ ಆಗದ ಬಾಡಿ ಶೇಮಿಂಗ್ ನಮ್ಮ ಸಿನಿಮಾದ ಒಂದು ಡೈಲಾಗ್ದಿಂದ ಆಯ್ತಾ ಎಂದು ಕೇಳಿದ್ದಾರೆ.
ನಾವು ಬಾಡಿ ಶೇಮಿಂಗ್ ಮಾಡ್ಬೇಕು ಅಂತ ಮಾಡಿದ್ದಲ್ಲ. ನಾವು ಡೈಲಾಗ್ ಬರೆದಾಗ, ಅವನು ಸ್ಕೂಲ್ನಲ್ಲಿ ಅವಳನ್ನ ರೋಸ್ ಅಂತಿರ್ತಾನೆ. ಹುಡುಗಿ ನಂತರ ಬದಲಾದಾಗ ಬರುವ ಹಾಸ್ಯದ ಭಾಗವದು ಎಂದು ಹೇಳಿರುವ ಡಾರ್ಲಿಂಗ್ ಕೃಷ್ಣ ಅದನ್ನ ನಾನು ರೈಮಿಂಗ್ ಆಗಿ ಬರೆದಿದ್ದು ಅಷ್ಟೇ ಎಂದು ಹೇಳಿದ್ದಾರೆ.

ಸಿನಿಮಾ ಮಾಡ್ಬೇಕಾದ್ರೆ ಅವರಿಗೆ ಪಾತ್ರದ ಬಗ್ಗೆ ಗೊತ್ತಲ್ವಾ? ಇವಾಗ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಕೂಡ ಹೇಳಿರುವ ''ಲವ್ ಮಾಕ್ಟೇಲ್''ನ ಆದಿ ಮತ್ತು ನಿಧಿ ಅವರು ಫುಲ್ ಸೀನ್ ಮಾಡಿ ಹೋಗಿದ್ದಾರೆ. ನಾವು ಕಲಾವಿದರಿಗೆ ಹೇಳದೇ ಅವರು ಸೀನ್ ಮಾಡೋಕೆ ಸಾಧ್ಯನಾ? ಎಂದು ಪ್ರಶ್ನೆ ಮಾಡಿದ್ದಾರೆ. ಆ ಸನ್ನಿವೇಶ ಆದ ನಂತರ ಅವರಿಗೆ ಫೀಲ್ ಆಗಿರಬಹುದು, ಅವರು ಹೇಳಿರಬಹುದು, ಆದರೆ ಆ ರೀತಿ ಹೇಳೋದು ತಪ್ಪು. ಇಲ್ಲಾ ಅಂದರೆ ನೀವು ಆ ರೀತಿ ಪಾತ್ರಗಳನ್ನ ಒಪ್ಪಿಕೊಂಡು ಮಾಡಬಾರದು ಎಂದು ಕೂಡ ಹೇಳಿದ್ದಾರೆ. ಕೇವಲ ಸಿನಿಮಾದ ದೃಷ್ಟಿಯಿಂದ ಆ ಪಾತ್ರಗಳನ್ನು ನೋಡಬೇಕೇ ಹೊರತು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಂಬರ್ಥದಲ್ಲಿ ಇಬ್ಬರು ಮಾತನಾಡಿದ್ದಾರೆ. ಈ ಮೂಲಕ ಗೀತಾ ಭಟ್ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ.


Click it and Unblock the Notifications











