ದರ್ಶನ್ ಅಣ್ಣನಿಗೆ ಜನವರಿಯಲ್ಲಿ ಜಾಮೀನು ಸಿಗುತ್ತೆ- ಝೈದ್ ಖಾನ್ ಭವಿಷ್ಯ
ಹಾವೇರಿ : ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ದರ್ಶನ್ ಅವರದ್ದು. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡ ಚಿತ್ರರಂಗದ ಹಲವಾರು ತಾರೆಯರ ಚಿತ್ರಗಳಿಗೆ ಈ ಹಿಂದೆ ಬೆನ್ನೆಲುಬಾಗಿದ್ದರು. ತಮ್ಮ ಚಿತ್ರಕ್ಕೂ ಕೊಡದ ಮಹತ್ವವನ್ನು ಬೇರೆಯವರ ಚಿತ್ರಕ್ಕೆ ನೀಡಿ ಆ ಚಿತ್ರದ ಪ್ರಚಾರವನ್ನು ಕಾಯಾ ವಾಚಾ ಮನಸಿಂದ ಮಾಡಿದ್ದರು.
ಆದರೆ, ದುರ್ದೈವ ಇದೇ ಸಮಯದಲ್ಲಿ ಅಪವಿತ್ರ ಸಂಬಂಧಕ್ಕೆ ದರ್ಶನ್ ಹಾತೊರೆದರು. ಸಹವಾಸ ದೋಷದಿಂದ ತಮ್ಮ ಇಮೇಜ್ನ ತಾವೇ ಡ್ಯಾಮೇಜ್ ಮಾಡಿಕೊಂಡರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡರು. ಒಂದು ವರ್ಷದ ಹಿಂದೆಯೂ ಸೆರೆವಾಸ ಅನುಭವಿಸಿದರು. ಈಗಲೂ ಮತ್ತೆ ಜೈಲು ಪಾಲಾದರು.

ಇನ್ನು ಕಳೆದ ವರ್ಷ ದರ್ಶನ್ ಜೈಲು ಪಾಲಾದಾಗ ದರ್ಶನ್ ಅವರ ನಿಜವಾದ ಅಭಿಮಾನಿಗಳು ಮಮ್ಮಲ ಮರುಗಿದ್ದರು. ಈ ಕ್ಷಣಕ್ಕೂ ಮರುಗುತ್ತಿದ್ದಾರೆ. ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಬೇಕಿದ್ದ ನಮ್ಮ ಹೀರೋ ಹೀಗೆ ದುಷ್ಕೃತ್ಯದ ಪಾಲುದಾರರಾಗಿ ಜೈಲು ಸೇರಿದರಲ್ಲ ಅಂಥಾ ಅಕ್ಷರಶಃ ಕೊರಗುತ್ತಿದ್ದಾರೆ.
ಆದರೆ ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದ ಹಲವರು, ಅದರಲ್ಲಿಯೂ ಒಂದು ಕಾಲದಲ್ಲಿ ದರ್ಶನ್ ಅವರ ಸಹಾಯ ಪಡೆದವರು ಮೌನಕ್ಕೆ ಶರಣಾಗಿದ್ದಾರೆ. ಮೌನಕ್ಕೆ ಶರಣಾಗಿದ್ದಾರೆ ಎನ್ನುವುದಕ್ಕಿಂತ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಯಾರ ಪರ ವಹಿಸಬೇಕು, ಯಾರ ವಿರುದ್ಧ ಮಾತನಾಡಬೇಕು ಎನ್ನುವುದು ಗೊತ್ತಾಗದೇ ಗೊಂದಲಕ್ಕೀಡಾಗಿದ್ದಾರೆ. ಮಾಧ್ಯಮದವರು ಎಲ್ಲಿ ಈ ಕುರಿತು ಪ್ರಶ್ನೆ ಕೇಳುತ್ತಾರೆ ಎನ್ನುವ ಭಯದಲ್ಲಿ ಹಲವರು ಕ್ಯಾಮರಾಗಳನ್ನು ಅವಾಯ್ಡ್ ಮಾಡುತ್ತಾ ಓಡಾಡುತ್ತಿದ್ದಾರೆ.
ಹೀಗಿರುವಾಗ ಇದೀಗ ದರ್ಶನ್ ಕುರಿತು ಒಂದ್ಕಾಲದಲ್ಲಿ ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಝೈದ್ ಖಾನ್ ಮಾತನಾಡಿದ್ದಾರೆ. ದರ್ಶನ್ ಬಿಡುಗಡೆಯ ಕುರಿತು ಭವಿಷ್ಯವನ್ನು ಕೂಡ ಹೇಳಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಸದ್ಯ ದರ್ಶನ್ ಅನುಪಸ್ಥಿತಿಯಲ್ಲಿ ಅವರ ''ಡೆವಿಲ್'' ಚಿತ್ರ ಬಿಡುಗಡೆಯಾಗಿದೆ. ರಾಜ್ಯದೆಲ್ಲೆಡೆ ಯಶಸ್ವಿ ಪ್ರದರ್ಶನ ಕೂಡ ಕಾಣ್ತಿದೆ. ಆದರೆ. ಡೆವಿಲ್ ಹಿಂದೆಯೇ ಝೈದ್ ಖಾನ್ ಅಭಿನಯದ ''ಕಲ್ಟ್'' ಚಿತ್ರ ಬಿಡುಗಡೆಯಾಗುತ್ತಿರುವ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಹೀಗಾಗಿ ಜನವರಿಯಲ್ಲಿ ತಮ್ಮ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ ಎಂದು ಎಲ್ಲರಿಗೆ ಮನವರಿಕೆ ಮಾಡಿಕೊಡಲು ಝೈದ್ ಖಾನ್ ತಮ್ಮ ತಂಡದ ಜೊತೆ ಸದ್ಯ ಪ್ರಚಾರವನ್ನು ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಹಾವೇರಿಯಲ್ಲಿ ದರ್ಶನ್ ಬಿಡುಗಡೆಯ ಕುರಿತು ಝೈದ್ ಖಾನ್ ಮಾತನಾಡಿದ್ದಾರೆ.

ಈ ಕುರಿತು ಹಾವೇರಿಯಲ್ಲಿ ಮಾತನಾಡಿರುವ ಝೈದ್ ಖಾನ್,ನೋವಲ್ಲಿದ್ದರೂ ಕೂಡ ಗೆಲ್ಲುವುದು ಹೇಗೆ..? ಅಭಿಮಾನಿಗಳ ಮನತಣಿಸುವುದು ಹೇಗೆ..? ಎನ್ನುವುದನ್ನು ನಾನು ದರ್ಶನ್ ಅವರಿಂದ ಕಲಿತೆ ಎಂದು ಹೇಳಿದ್ದಾರೆ. ದರ್ಶನ್ ಹೆಸರೊಂದಿದ್ದರೆ ಸಾಕು ಸಿನಿಮಾ ಗೆದ್ದೇ ಗೆಲ್ಲುತ್ತೆ ಎನ್ನುವುದನ್ನು ಕೂಡ ನಾನು ''ಡೆವಿಲ್'' ನೋಡಿ ಕಲಿತುಕೊಂಡೆ ಎಂದು ಹೇಳಿದ್ದಾರೆ. ''ಡೆವಿಲ್'' ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಮೆಚ್ಚಿಕೊಂಡಿದ್ದಾರೆ.
ಇದೇ ವೇಳೆ ದರ್ಶನ್ ಬಿಡುಗಡೆಯ ಕುರಿತು ಕೂಡ ಮಾತನಾಡಿರುವ ಝೈದ್ ಖಾನ್, ಜನವರಿಯಲ್ಲಿ ದರ್ಶನ್ ಅಣ್ಣಗೆ ಜಾಮೀನು ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಭವಿಷ್ಯ ನುಡಿದಿದ್ದಾರೆ. ಒಂದು ವೇಳೆ ಜನವರಿ 23ರ ಒಳಗಡೆ ಜಾಮೀನು ಸಿಗದೇ ಇದ್ದರೆ ನಾನೇ ಜೈಲಿಗೆ ಹೋಗಿ ಅಣ್ಣನ ಆಶೀರ್ವಾದ ಪಡೆದುಕೊಂಡು ಬರುತ್ತೇನೆ ಎಂದು ಹೇಳಿಳಿದ್ದಾರೆ. ಸಿಕ್ಕೆ ಸಿಗುತ್ತದೆ. ಜನವರಿ 23ರೊಳಗೆ ಜಾಮೀನು ಸಿಗದಿದ್ದರೆ, ಜೈಲಿಗೆ ಹೋಗಿ ದರ್ಶನ ಅಣ್ಣನ ಆಶೀರ್ವಾದ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ. ಅಂದ್ಹಾಗೇ ಝೈದ್ ಖಾನ್ ಅಭಿನಯದ ''ಕಲ್ಟ್'' ಜನವರಿ 23ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾಗಲಿದೆ.


Click it and Unblock the Notifications











