ಪುನೀತ್ ರಾಜಕುಮಾರ್ ಮುದ್ದಾಡಿದ್ದ ಆನೆಗೆ ಪುನೀತ್ ಹೆಸರು ನಾಮಕರಣ
ಶಿವಮೊಗ್ಗದ ಸಕ್ರೆಬೈಲು ಬಿಡಾರದ ಮರಿ ಆನೆಯೊಂದಕ್ಕೆ ನಟ ಪುನೀತ್ ರಾಜಕುಮಾರ್ ಅವರ ಹೆಸರು ಇಡಲಾಗಿದೆ. ಇಂದು(ನವೆಂಬರ್ 10) ವೀನಿಂಗ್ ಪ್ರಕ್ರಿಯೆ ವೇಳೆ ಮರಿ ಆನೆಗೆ ಪುನೀತ್ ಹೆಸರು ನಾಮಕರಣ ಮಾಡಲಾಗಿದೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆಯ ನೆನಪಲ್ಲೇ ಆನೆ ಮರಿಗೆ ಪುನೀತ್ ಎಂದು ಹೆಸರಿಟ್ಟಿದ್ದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಯಿ ಆನೆ ನೇತ್ರಾವತಿ ಮತ್ತು ಅದರ ಮರಿ ಪುನೀತ್ ಇವತ್ತಿನಿಂದ ದೂರ ದೂರ ಉಳಿಯಬೇಕಿದೆ. ಈವರೆಗೂ ತಾಯಿ ಹಾಲು ಕುಡಿಯಲು ಮರಿ ಆನೆಗೆ ಅವಕಾಶವಿತ್ತು. ಆದರೆ, ಇನ್ಮುಂದೆ ಮರಿ ಆನೆ ಪುನೀತ್, ಸ್ವತಂತ್ರವಾಗಿ ಬದುಕಬೇಕಿದೆ. ಹಾಗಾಗಿ ತಾಯಿ ಮತ್ತು ಮರಿಯನ್ನು ಬೇರ್ಪಡಿಸಲಾಗಿದೆ.
ನಟ ಪುನೀತ್ ಹೆಸರು ಇಟ್ಟಿದ್ದೇಕೆ?
'ಡಾಕ್ಯೂಮೆಂಟರಿ ಒಂದರ ಚಿತ್ರೀಕರಣಕ್ಕಾಗಿ ನಟ ಪುನೀತ್ ರಾಜಕುಮಾರ್ ಅವರು ಸಕ್ರೆಬೈಲು ಬಿಡಾರಕ್ಕೆ ಭೇಟಿ ನೀಡಿದ್ದರು. ಆಗ ನೇತ್ರಾವತಿಯ ಮರಿ ಜೊತೆಗೆ ನಟ ಪುನೀತ್ ಕೆಲವು ಹೊತ್ತು ಕಾಲ ಕಳೆದಿದ್ದರು. ಅದನ್ನು ಮೈದಡವಿದ್ದರು, ಮುದ್ದಾಡಿದ್ದರು. ಹಾಗಾಗಿ ಅವರ ಹೆಸರನ್ನೇ ಮರಿ ಆನೆಗೆ ಇಡಲಾಗಿದೆ. ಪುನೀತ್ ರಾಜಕುಮಾರ್ ಸಕ್ರೆಬೈಲು ಬಿಡಾರಕ್ಕೆ ಬಂದು ಹೋದ ಮೇಲೆ ಎಲ್ಲರೂ ಅದನ್ನು ಅಪ್ಪು ಎಂದು ಕರೆಯುತ್ತಿದ್ದರು. ಹಾಗಾಗಿ ಮರಿ ಆನೆಗೆ ಪುನೀತ್ ಎಂದೇ ನಾಮಕರಣ ಮಾಡಲಾಗುತ್ತಿದೆ.' ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಎಫ್ಒ ಐ.ಎಂ.ನಾಗರಾಜ್ ತಿಳಿಸಿದ್ದಾರೆ.

ಕಾಡಿಗೆ ತಾಯಿ, ಬಿಡಾರದಲ್ಲಿ ಮರಿ ಬಂಧಿ
ತಾಯಿ ನೇತ್ರಾವತಿಯನ್ನು ಕಾಡಿನಲ್ಲಿ ಬಿಡಲಾಗುತ್ತದೆ. ಸಕ್ರೆಬೈಲು ಅರಣ್ಯ ವ್ಯಾಪ್ತಿಯಲ್ಲಿ ತಾಯಿ ಆನೆಯನ್ನು ಕಟ್ಟಿ ಬಿಡಲಾಗುತ್ತದೆ. ಅದರ ಜೊತೆಗೆ ಬಿಡಾರದ ಕೆಲವು ಆನೆಗಳು ಇರಲಿವೆ. ಮರಿ ಆನೆಯು ತಾಯಿಯ ಆಸರೆ ಇಲ್ಲದೆ ಸ್ವತಂತ್ರವಾಗಿ ಬದುಕುವಂತಾದಾಗ ಮರಿ ಆನೆಗೆ ಬಿಡುಗಡೆ ಭಾಗ್ಯ ಸಿಗಲಿದೆ.
ಇನ್ನು ಮರಿ ಆನೆ ಪುನೀತ್ನನ್ನು ಬಿಡಾರದಲ್ಲೇ ಇರಿಸಿಕೊಳ್ಳಲಾಗುತ್ತದೆ. ಈವರೆಗೂ ತಾಯಿ ಹಾಲು ಕುಡಿಯುವುದರ ಜೊತೆಗೆ ಪುನೀತ್ಗೆ ಬಿಡಾರದ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ಕೊಡಲಾಗುತಿತ್ತು. ವೀನಿಂಗ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆ ಮರಿ ಆನೆಯನ್ನು ಸಕ್ರೆಬೈಲು ಬಿಡಾರದಲ್ಲಿ ಕಟ್ಟಿ ಹಾಕಲಾಗುತ್ತದೆ. ಯಾವುದೇ ಕಾರಣಕ್ಕೂ ಮರಿ ಆನೆ ತಪ್ಪಿಸಿಕೊಂಡು ತಾಯಿಯ ಬಳಿಗೆ ಹೋಗದಂತೆ ತಡೆಯಲು ಹೀಗೆ ಮಾಡಲಾಗುತ್ತದೆ. ಬಿಡಾರದಲ್ಲಿ ಪುನೀತ್ ಆನೆಗೆ ಹಾಲು ಕೊಡುವುದಿಲ್ಲ. ಬದಲಾಗಿ ಉಳಿದ ಆನೆಗಳಿಗೆ ಕೊಡುವ ಆಹಾರವನ್ನೇ ನೀಡಲಾಗುತ್ತದೆ.
ಅಲ್ಲದೆ ಪುನೀತ್ ಆನೆಗೆ ಮಾವುತರೊಬ್ಬರನ್ನು ನಿಯೋಜಸಲಾಗುತ್ತದೆ. ಅವರು ಹೇಳಿದಂತೆ ಪುನೀತ್ ಆನೆ ಕೇಳಬೇಕು. ಭವಿಷ್ಯದಲ್ಲಿ ಪುನೀತ್ ಆನೆಯು ಅವರೊಂದಿಗೆ ಹೊಂದಿಕೊಂಡು, ಅವರು ಹೇಳಿದಂತೆ ಕೇಳಬೇಕು. ಇನ್ಮುಂದೆ ಆ ಮಾವುತನೆ ಪುನೀತ್ ಆನೆಯ ಆರೈಕೆ ಮಾಡಬೇಕಾಗುತ್ತದೆ.

ಈ ಭಾರಿ ಉಲ್ಟಾ ಪ್ರಯೋಗ
ಪ್ರತಿ ಭಾರಿ ವೀನಿಂಗ್ ವೇಳೆ ಬಿಡಾರದಲ್ಲಿ ತಾಯಿ ಆನೆಯನ್ನು ಇರಿಸಲಾಗುತಿತ್ತು. ಮರಿ ಆನೆಯನ್ನು ಕಾಡಿನಲ್ಲಿ ಕಟ್ಟಿ ಹಾಕಲಾಗುತಿತ್ತು. ಆದರೆ ಈ ಭಾರಿ ಪ್ರಕ್ರಿಯೆಯನ್ನು ಉಲ್ಟಾ ಮಾಡಲಾಗಿದೆ. ತಾಯಿ ಆನೆಯನ್ನು ಕಾಡಿನಲ್ಲಿ ಕಟ್ಟ ಹಾಕಲಾಗಿದೆ. ಮರಿಯನ್ನು ಬಿಡಾರದಲ್ಲಿ ಬಂಧಿಸಲಾಗಿದೆ. ತಾಯಿ ನೇತ್ರಾವತಿ ಜೊತೆಗೆ ಕುಂತಿ ಮತ್ತು ಶಿವ ಅನ್ನುವ ಆನೆಗಳು ಕೂಡ ಕಾಡಿನಲ್ಲಿವೆ. ಬಿಡಾರದಲ್ಲಿ ಮರಿ ಆನೆ ಪುನೀತ್ ಜೊತೆಗೆ ಸಾಗರ್, ಬಾಲಣ್ಣ, ಬಹದ್ದೂರ್, ಆಲೆ ಆನೆಗಳಿವೆ. ಮರಿ ಆನೆಯನ್ನು ಕಾಡಿನಲ್ಲಿ ಕಟ್ಟಿದರೆ ಒಂಟಿತನ ಕಾಡುವ ಸಾಧ್ಯತೆ ಇದೆ. ಆದರೆ ತಾಯಿ ಆನೆಗಾದರೆ ಕಾಡಿನಲ್ಲಿದ್ದ ಅನುಭವ ಇದೆ. ಹಾಗಾಗಿ ಈ ಭಾರಿ ವೀನಿಂಗ್ನಲ್ಲಿ ಹೊಸ ಮಾದರಿ ಅನುಸರಿಸಲಾಗಿದೆ.
ಆರು ವರ್ಷದವರೆಗೆ ಜೊತೆಗಿರುತ್ತವೆ
ಕಾಡಿನಲ್ಲಾದರೆ ತಾಯಿ ಮತ್ತು ಮರಿ ಆನೆಗಳು ಆರು ವರ್ಷದವರೆಗೂ ಜೊತೆಗಿರುತ್ತವೆ. ಆ ಬಳಿಕ ನೈಸರ್ಗಿಕವಾಗಿ ದೂರಾಗುತ್ತವೆ. ಆದರೆ ಬಿಡಾರದಲ್ಲಿ ಎರಡು ವರ್ಷಕ್ಕೆಲ್ಲಾ ವೀನಿಂಗ್ ಮಾಡಲಾಗುತ್ತದೆ. ಬಿಡಾರದಲ್ಲಿರುವ ಮರಿಗಳು ಹೆಚ್ಚು ಅವಧಿ ತಾಯಿ ಜೊತೆಗಿದ್ದರೆ ಮಾತು ಕೇಳುವುದಿಲ್ಲ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ. ತಾಯಿ ಮತ್ತು ಮರಿ ಆನೆ ಬೇರ್ಪಡುವ ದೃಶ್ಯ ಮನಕಲಕುವಂತಿರುತ್ತದೆ. ಈ ವೇಳೆ ಆನೆಗಳು ರೊಚ್ಚಿಗೇಳುವ ಸಾಧ್ಯತೆಯು ಇರುತ್ತದೆ. ಇದೇ ಕಾರಣಕ್ಕೆ ಈ ಅವಧಿಯಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗುತ್ತದೆ.


Click it and Unblock the Notifications











