ಡೆವಿಲ್ ಹಾಡು ಕದ್ದು ಸಿಕ್ಕಿ ಬಿದ್ದ ಅಜನೀಶ್ ಲೋಕನಾಥ್ ? ಅಲೋಹೊಮರ ಹಿಂದಿನ ರಹಸ್ಯವೇನು ?
ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಅದರಲ್ಲಿಯೂ ಭಾರತದಲ್ಲಿ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಹೊಂದಿರುವ ಭಾರತದಲ್ಲಿ ಪಾಶ್ಚಾತ್ಯ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ. ಆದರೆ ಈಗೀಗ ಈ ಸಂಗೀತ ಲೋಕದಲ್ಲಿ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಾಲ.. ಕಾಲಕ್ಕೆ.. ಹಲವು ಸಂಗೀತ ನಿರ್ದೇಶಕರ...
ವಿರುದ್ದ ಕೃತಿಚೌರ್ಯದ ಆರೋಪವನ್ನು ಹಲವರು ಮಾಡುತ್ತಲೇ ಬರುತ್ತಿದ್ದಾರೆ. ಈ ಸುಳಿಯಲ್ಲಿ ಕನ್ನಡದ ಖ್ಯಾತ- ಪ್ರಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮೇಲಿಂದ ಮೇಲೆ ಸೇರಿಕೊಳ್ಳುತ್ತಿರುವುದು ಈ ಕ್ಷಣದ ದುರಂತ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಹೆಚ್ಚೇನು ಇಲ್ಲ ಕೆಲ ವರ್ಷದ ಹಿಂದೆ ಐತಿಹಾಸಿಕ ದಾಖಲೆ ಬರೆದ ''ಕಾಂತಾರ'' ಮೇಲೆ ಕೂಡ ಕೃತಿಚೌರ್ಯದ ಆರೋಪ ಮಾಡಲಾಗಿತ್ತು. ಚಿತ್ರದ ''ವರಾಹ ರೂಪಂ'' ಹಾಡು ವಿವಾದಕ್ಕೀಡಾಗಿತ್ತು. ಕೇರಳದ ನವರಸಂ ಆಲ್ಬಂನ ''ತೆಕ್ಕುಡಂ ಬ್ರಿಡ್ಜ್'' ತಂಡ ತಮ್ಮ ಹಾಡು ಕದ್ದ ಆರೋಪವನ್ನು ಮಾಡಿತ್ತು.
ಆ ನಂತರ ಈ ವಿವಾದ ಸುಪ್ರೀಂ ಕೋರ್ಟ್ವರೆಗೆ ತಲುಪಿತ್ತು. ಇರಲಿ ವಿಷಯ ಅದಲ್ಲ. ಸದ್ಯದ ಸಮಾಚಾರ ಅಂದರೆ ಅಜನೀಶ್ ಲೋಕನಾಥ್ ಸಂಗೀತ ಬಗ್ಗೆ ಮತ್ತೊಮ್ಮೆ ಅಪಸ್ವರ ಎದ್ದಿದೆ. ''ಡೆವಿಲ್'' ಚಿತ್ರದ ''ಅಲೋಹೊಮರ'' ಹಾಡು ಕದ್ದಿದ್ದು ಎನ್ನುವ ಆರೋಪ ಕೇಳಿ ಬಂದಿದೆ. ದುರಂತ ಅಂದರೆ ಈ ಆರೋಪವನ್ನು ಬೇರೆ ಯಾವ ಚಿತ್ರರಂಗದವರು ಅಲ್ಲ ಬದಲಿಗೆ ಕನ್ನಡ ಚಿತ್ರರಂಗದ ಯುವ ಪ್ರತಿಭಾವಂತ ಸಂಗೀತ ನಿರ್ದೇಶಕರೇ ಮಾಡಿದ್ದಾರೆ.
ಹೌದು, ಅಸಲಿಗೆ ದರ್ಶನ್ ಅಭಿನಯದ ''ಡೆವಿಲ್'' ಚಿತ್ರದ ''ಅಲೋಹೊಮರ್'' ಹಾಡಿನಲ್ಲಿ
''ರತತ್ತತ್ತ ಥಾ'' ಎಂಬ ಕೂಗು ಕೇಳಿ ಬರುತ್ತೆ. ಸಂಗೀತ ಹುಚ್ಚೆಬ್ಬಿಸುತ್ತೆ. ಆದರೆ ಅಸಲಿಗೆ ಇದೇ ''ರತತ್ತತ್ತ'' ಮತ್ತು ಅಲ್ಲಿ ಕೇಳಿ ಬರುವ ಸಂಗೀತ ''ಮಿಸ್ಸಿಂಗ್'' ಎಂಬ ಕನ್ನಡ ಚಿತ್ರದ್ದು. ಈ ಮಾತನ್ನು ನಾವು ಅಲ್ಲ ಬದಲಿಗೆ ''ಮಿಸ್ಸಿಂಗ್'' ಚಿತ್ರದ ಸಂಗೀತ ನಿರ್ದೇಶಕ ತನ್ಮಯ್ ಗುರುರಾಜ್ ಹೇಳಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಮೂಲಕ ತಮ್ಮ ಅಸಮಾಧಾನ-ಅಸಹನೆ ಹೊರ ಹಾಕಿರುವ ಸಂಗೀತ ನಿರ್ದೇಶಕ ತನ್ಮಯ್ ಗುರುರಾಜ್, ತಮ್ಮ ''ಮಿಸ್ಸಿಂಗ್'' ಚಿತ್ರದ ಹಾಡನ್ನು ಮತ್ತು ''ಡೆವಿಲ್'' ಚಿತ್ರದ ಹಾಡನ್ನು ಪ್ಲೇ ಮಾಡಿದ್ದಾರೆ. ಆರಂಭದಲ್ಲಿ ಬರುವ ಸಂಗೀತ ನನ್ನದೇ ಎಂದು ಹೇಳಿದ್ದಾರೆ. ಹಾಗಂಥ ಇಲ್ಲಿ ಇವರು ನೇರವಾಗಿ ಕೃತಿ ಚೌರ್ಯದ ಆರೋಪ ಮಾಡಿಲ್ಲ. ಬದಲಿಗೆ ಕ್ರೀಯಾಶೀಲತೆ ಎಂದು ಹೇಳಿದ್ದಾರೆ. ಒಬ್ಬರ ತಲೆಯಲ್ಲಿ ಬಂದ ಐಡಿಯಾ ಮತ್ತೊಬ್ಬರಿಗೆ ಕೂಡ ಬರಬಹುದು ಎಂದೆಲ್ಲಾ ಮಾತನಾಡಿ ಕೈ ತೊಳೆದುಕೊಂಡಿದ್ದಾರೆ.

ಆದರೆ ತನ್ಮಯ್ ಗುರುರಾಜ್ ಅವರ ಈ ವಿಡಿಯೋ ಇದೀಗ ಚರ್ಚೆಗೆ ನಾಂದಿಯನ್ನು ಹಾಡಿದೆ. ಹಲವರು ಅಜನೀಶ್ ಲೋಕನಾಥ್ ಅವರಲ್ಲಿ ಈ ಕುರಿತು ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಇನ್ನು ಕೆಲವರು ತನ್ಮಯ್ ಭಾರದ್ವಾಜ್ ಅವರ ಒಳ್ಳೆಯ ಗುಣ ಅವರ ಸಕಾರಾತ್ಮಕವಾದ ಚಿಂತನೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಕದ್ದಿದ್ದಾರೆ ಎಂದು ಗೊತ್ತಿದ್ದರೂ ಕ್ರಿಯೇಟಿವಿಟಿ ಎಂದೆಲ್ಲಾ ಹೇಳುತ್ತಿದ್ದೀರಲ್ಲ, ನಿಮ್ಮ ಈ ನಡೆ ಮತ್ತು ನುಡಿಗೆ ನಮ್ಮದೊಂದು ಸಲಾಂ ಎಂದು ಹೇಳುತ್ತಿದ್ದಾರೆ.
ಸದ್ಯ ತನ್ಮಯ ಗುರುರಾಜ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನುಳಿದಂತೆ ''ಡೆವಿಲ್'' ತಂಡ ಆಗಲಿ ಅಥವಾ ಅಜನೀಶ್ ಲೋಕನಾಥ್ ಅವರಾಗಲಿ ತನ್ಮಯ್ ಅವರ ಈ ಮಾತುಗಳಿಗೆ ಉತ್ತರ ನೀಡಿಲ್ಲ. ನೀಡುತ್ತಾರಾ..? ಎನ್ನುವುದನ್ನು ಮುಂದೆ ಕಾದು ನೋಡಬೇಕಿದೆ.


Click it and Unblock the Notifications











