ಖಾಲಿ ಪೇಪರ್ ಕೊರಿಯರ್ ಮಾಡಿ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬುಗೆ ₹4ಲಕ್ಷ ಪಂಗನಾಮ ಹಾಕಿದ ಕಿರಾತಕರು
ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು... ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋಸ ಮಾಡಲು ವಂಚಕರು ಸದಾ ಹೊಸ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ. ಇನ್ನೂ ಇವರ ಕಣ್ಣು ಕೇವಲ ಜನಸಾಮಾನ್ಯರ ಮೇಲೆ ಮಾತ್ರ ಇರುವುದಿಲ್ಲ.
ಬದಲಿಗೆ ಚಿತ್ರರಂಗದವರ ಮೇಲೆ ಕೂಡ ಇರುತ್ತೆ. ಹೆಸರು..ಹಣ...ಕೀರ್ತಿ ಗಳಿಸಿದ ದೊಡ್ಡ ದೊಡ್ಡ ತಾರೆಯರ ಮೇಲೆಯೂ ಇರುತ್ತೆ. ನಿರ್ದೇಶಕ ನಿರ್ಮಾಪಕರ ಮೇಲೆ ಕೂಡ ಇರುತ್ತೆ. ಚೂರು ಯಾಮಾರಿದರೂ ಸಾಕು ಈ ಕಿರಾತಕರು ತಮ್ಮ ಖೆಡ್ಡಾಗೆ ಸೆಲೆಬ್ರೆಟಿಗಳನ್ನು ಕೆಡವಿಕೊಂಡು ಬಿಡುತ್ತಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಇದಕ್ಕೆ ಸದ್ಯದ ಉದಾಹರಣೆ.

ಹೌದು, ಒಂದು ಚಿತ್ರವನ್ನು ನಿರ್ದೇಶನ ಮಾಡಿ ಆ ಚಿತ್ರವನ್ನು ಚಿತ್ರಮಂದಿರಕ್ಕೆ ಕರೆತರುವಷ್ಟರಲ್ಲಿ ಏದುಸಿರು ಬಿಡುವರ ನಡುವೆ, ಕಳೆದ 50 ವರ್ಷಗಳಿಂದ ಹತ್ತು ಹಲವು ಜನಪ್ರಿಯ ಚಿತ್ರಗಳನ್ನು ನೀಡಿದವರು ಎಸ್.ವಿ.ರಾಜೇಂದ್ರ ಸಿಂಗ್ ಬಾಬು. 'ನಾಗಕನ್ಯೆ' .. 'ನಾಗರಹೊಳೆ' .. 'ಕಿಲಾಡಿ ಜೋಡಿ' .. 'ಅಂತ' .. 'ಸಿಂಹದ ಮರಿ ಸೈನ್ಯ' .. 'ಬಂಧನ' .. 'ಬಣ್ಣದ ಗೆಜ್ಜೆ'.. 'ಮುತ್ತಿನ ಹಾರ'.. 'ಮುಂಗಾರಿನ ಮಿಂಚು'..
ಒಂದಾ..ಎರಡಾ.. ಹಲವಾರು ಚಿತ್ರಗಳ ಮೂಲಕ ಕನ್ನಡಿಗರ ಹೃದಯ ಗೆದ್ದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆ ಕಾಲದಲ್ಲಿಯೇ ಹಿಂದಿ ಚಿತ್ರಗಳನ್ನು ಕೂಡ ನಿರ್ದೇಶಿಸಿದ್ದರು. 'ಮೇರಿ ಅವಾಜ್ ಸುನೋ'.. 'ಶರಾರಾ'.. 'ಮೇರಾ ಪೈಸಲಾ'.. 'ಏಕ್ ಸೇ ಭಲೇ ದೋ'.. ಚಿತ್ರಗಳ ಮೂಲಕ ಬಾಲಿವುಡ್ನಲ್ಲಿ ಕೂಡ ತಮ್ಮ ಚಾಪು ಮೂಡಿಸಿದ್ದ ಸಿಂಗ್ ಬಾಬು ತೆಲುಗಿನಲ್ಲಿ ನಾಗಾರ್ಜುನಗೆ ''ಬಣ್ಣದ ಗೆಜ್ಜೆ''ಯನ್ನು ಕೂಡ ಮಾಡಿದ್ದರು.
ಇಂಥಾ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಪುರಾತನ ಚಿತ್ರವೊಂದು ಇನ್ನೂ ಬಿಡುಗಡೆ ಆಗಬೇಕಿದೆ. ಆ ಚಿತ್ರದ ಹೆಸರು ''ರಕ್ತ ಕಾಶ್ಮೀರ''. ಉಪೇಂದ್ರ ಮತ್ತು ರಮ್ಯಾ ಅಭಿನಯದ ಚಿತ್ರ ಇದು. ಸರಿ ಸುಮಾರು 17 ವರ್ಷಗಳ ಹಿಂದೆ ಶುರುವಾದ ಈ ಚಿತ್ರ ಸದ್ಯ ಬಿಡುಗಡೆಯ ಬಾಗಿಲಿಗೆ ಬಂದಿದ್ದು ಇದೇ ಚಿತ್ರದ ಹೆಸರಿನಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರಿಗೆ ವಂಚಕರು ನಾಲ್ಕು ಲಕ್ಷ ರೂಪಾಯಿಯ ಪಂಗನಾಮ ಹಾಕಿದ್ದಾರೆ.
"ರಕ್ತ ಕಾಶ್ಮೀರ" ಚಿತ್ರದ ವಿತರಣೆಯ ಗುಂಗಿನಲ್ಲಿ ರಾಜೇಂದ್ರ ಸಿಂಗ್ ಬಾಬು ಇದ್ದಾಗ, ಮೈಸೂರಿನ ವಿತರಕ ಮುನಿರಾಜು ಅವರ ಮೂಲಕ ತೆಲುಗು ರೈಟ್ಸ್ ಖರೀದಿ ಮಾಡುವ ನೆಪದಲ್ಲಿ ಸಂಪರ್ಕ ಸಾಧಿಸಿದ ಈ ಸೈಬರ್ ಕಳ್ಳರು ₹1.40 ಕೋಟಿಯ ಆಮಿಷವನ್ನು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ತೋರಿಸಿದ್ದಾರೆ. ತೆಲುಗು ಡಬ್ಬಿಂಗ್ ಹಕ್ಕುಗಳನ್ನು ಖರೀದಿಸುವ ಮಾತುಗಳನ್ನಾಡಿದ್ದಾರೆ.

ಈ ಮಾತುಗಳನ್ನು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಕೂಡ ನಂಬಿದ್ದು, ಗಾಂಧಿನಗರದ ಸಂಪ್ರದಾಯದಂತೆ ಒಪ್ಪಂದ ಮಾಡಿಕೊಳ್ಳಲು ತಮ್ಮ ಆಧಾರ್ ಕಾರ್ಡ್.. ಪಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದ್ದಾರೆ.
ಈ ಕ್ಷಣಕ್ಕೆ ಕಾಯುತ್ತಿದ್ದ ಕಿರಾತಕರು ಎಸ್ ವಿ.ರಾಜೇಂದ್ರ ಸಿಂಗ್ ಬಾಬು ಅವರ ಅಕೌಂಟ್ನಿಂದ 4.25 ಲಕ್ಷ ರೂಪಾಯಿ ಎಗರಿಸಿದ್ದಾರೆ. ಆ ನಂತರ ''ಬ್ಲೂಡಾರ್ಟ್'' ಮೂಲಕ ಅಗ್ರಿಮೆಂಟ್ ಪೇಪರ್ಗಳನ್ನು ಕಳುಹಿಸಿರುವುದಾಗಿ ಹೇಳಿದ್ದಾರೆ. ಆದರೆ.. ಅಲ್ಲಿ ಹೋಗಿ ನೋಡಿದಾಗ ಸಿಂಗ್ ಬಾಬು ಅವರಿಗೆ ನಿಂತ ನೆಲ ಕುಸಿದಂತೆ ಆಗಿದೆ. ಯಾಕೆಂದರೆ ಅಲ್ಲಿ ಯಾವ ಒಪ್ಪಂದ ಪತ್ರ ಕೂಡ ಇರಲಿಲ್ಲ. ಬದಲಿಗೆ ಇದ್ದಿದ್ದು ಖಾಲಿ ಪೇಪರ್ ಮಾತ್ರ.
ಆ ನಂತರವೂ ಕೂಡ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿ, ಬ್ಯಾಂಕ್ ಖಾತೆಗೆ ದುಡ್ಡು ಹಾಕಲು ಆಗಲಿಲ್ಲ ಈ ಕಾರಣಕ್ಕೆ ಹಣವನ್ನೇ ಕೊಡುವುದಾಗಿ ಹೇಳಿದ್ದಾನೆ. ಚಿಕ್ಕಪೇಟೆಗೆ ಬನ್ನಿ ಅಲ್ಲಿ ಇಲ್ಲಿ ಎಂದು ಅಲೆದಾಡಿಸಿದ್ದಾನೆ. ಇಷ್ಟೆಲ್ಲಾ ಆದ ನಂತರ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರಿಗೆ ತಾವು ಮೋಸ ಹೋದ ವಿಚಾರ ಗೊತ್ತಾಗಿದ್ದು ಆ ನಂತರ ಯಶವಂತಪುರ ಪೊಲೀಸ್ ಠಾಣೆಗೆ ಹೋಗಿ ದೂರನ್ನು ದಾಖಲಿಸಿದ್ದಾರೆ. ಸದ್ಯ ಸಿಂಗ್ ಬಾಬು ಅವರ ದೂರನ್ನು ದಾಖಲಿಸಿಕೊಂಡಿರುವ ಉತ್ತರ ವಿಭಾಗದ ಸಿಇಎನ್ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕಿರಾತಕರ ಪತ್ತೆಗೆ ಬಲೆ ಬೀಸಿದ್ದಾರೆ.


Click it and Unblock the Notifications











