'ಕಲಿಯುಗದ ಕುಡುಕ'ನ ಯುಗಾಂತ್ಯ, ಬಯಲು ಸೀಮೆಯ ಉತ್ಕ್ರಷ್ಟ ಕಲಾವಿದ ರಾಜು ತಾಳಿಕೋಟೆ ನಿಧನ
ಜನರನ್ನು ನಗಿಸುವುದು ಸುಲಭ ಅಲ್ಲ. ತುಂಬಾನೇ ಕಷ್ಟಕರವಾದ ಕೆಲಸ ಅದು. ಇಂತಹ ಕಷ್ಟಕರವಾದ ಕೆಲಸವನ್ನು ಕೆಲವರು ತುಂಬಾ ಸಲೀಸು ಎಂಬಂತೆ ಮಾಡುತ್ತಾರೆ. ನಗುವುದು ಸಹಜವಾದ ಧರ್ಮ. ಮತ್ತೊಬ್ಬರನ್ನು ನಗಿಸುವುದು ಶ್ರೇಷ್ಠಧರ್ಮ ಎಂದು ನಗಿಸುತ್ತಲೇ ಇರುತ್ತಾರೆ. ಆ ಪೈಕಿ ಒಬ್ಬರಾಗಿದ್ದ ಉತ್ತರ ಕರ್ನಾಟಕದ ದೈತ್ಯ ಪ್ರತಿಭೆ ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಇಂದು ( ಅಕ್ಟೋಬರ್ 13 ) ನಿಧನರಾಗಿದ್ಧಾರೆ.
ಧಾರವಾಡದ ರಂಗಾಯಣ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ರಾಜು ತಾಳಿಕೋಟೆ, ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಬಹುಕಾಲದಿಂದ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದ ರಾಜು ತಾಳಿಕೋಟೆ ಇತ್ತೀಚೆಗೆ ಶೈನ್ ಶೆಟ್ಟಿ ಅಭಿನಯದ ಚಿತ್ರವೊಂದನ್ನು ಒಪ್ಪಿಕೊಂಡಿದ್ದರು. ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣಕ್ಕೆ ರಾಜು ತಾಳಿಕೋಟೆ ಉಡುಪಿಗೆ ಬಂದಿದ್ದರು. ಚಿತ್ರದ ಚಿತ್ರೀಕರಣದಲ್ಲಿ ಕೂಡ ಭಾಗವಹಿಸಿದ್ದರು.ಆ ನಂತರ ವಿಶ್ರಾಂತಿ ಪಡೆಯುತ್ತಿದ್ದರು. ಈ ಸಮಯದಲ್ಲಿ ಅವರಿಗೆ ಹೃದಯಾಘಾತವಾಗಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬರಲಾಯ್ತು ಆದರೆ ಪ್ರಯತ್ನ ಫಲಕಾರಿಯಾಗಲಿಲ್ಲ.
ಇನ್ನು ರಾಜು ತಾಳಿಕೋಟೆ ಅವರಿಗೆ ಈ ಹಿಂದೆ ಕೂಡಹೃದಯಾಘಾತವಾಗಿತ್ತು. ಆಗ ಚಿಕಿತ್ಸೆಯನ್ನು ನೀಡಿ ಸ್ಟಂಟ್ ಹಾಕಲಾಗಿತ್ತು. ರಾಜು ತಾಳಿಕೋಟೆ ಅವರ ಅಂತ್ಯ ಸಂಸ್ಕಾರವನ್ನು ವಿಜಯಪುರದಲ್ಲಿ ಮಾಡುವುದಾಗಿ ಅವರ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ಧಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ರಾಜು ತಾಳಿಕೋಟೆ ಆ ನಂತರ ತಾಳಿಕೋಟೆಯಲ್ಲಿ ಬದುಕು ರೂಪಿಸಿಕೊಂಡಿದ್ದರು. ಇನ್ನು ಕಲೆ ರಾಜು ತಾಳಿಕೋಟೆ ಅವರ ರಕ್ತದಲ್ಲಿಯೇ ಇತ್ತು. ಇವರ ತಂದೆ ತಾಯಿ ರಂಗಭೂಮಿ ಹಿನ್ನೆಲೆಯಾಗಿದ್ದರು. ಖಾಸ್ಗತೇಶ್ವರ ನಾಟಕ ಮಂಡಳಿ ಸ್ಥಾಪನೆ ಮಾಡಿದ್ದರು. ರಾಜ್ಯಾದ್ಯಂತ ಪ್ರದರ್ಶನ ನೀಡಿದ್ದರು.
ತಂದೆ ತಾಯಿ ನಿಧನರಾದ ನಂತರ ರಾಜು ತಾಳಿಕೋಟೆ ಬದುಕು ಅಕ್ಷರಶ: ಬೀದಿಗೆ ಬಂದಿತ್ತು. ಅಣ್ಣನ ಅಗಲಿಕೆ ಗಾಯದ ಮೇಲೆ ಬರೆ ಎಳೆದಿತ್ತು. ಅಲ್ಲಿಂದ ಮುಂದೆ ನಾಲ್ಕನೇ ಕ್ಲಾಸಿನಲ್ಲಿ ಇದ್ದಾಗಲೇ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿದ ರಾಜು ತಾಳಿಕೋಟೆ ಮುಳ್ಳಿನ ಹಾದಿಯಲ್ಲಿ ನಡೆದಿದ್ದರು.ರಸ್ತೆ ಬದಿಯಲ್ಲಿ ಚಕ್ಕಲಿ ಮಾರಿದ್ದರು. ಹೊಟೇಲ್ನಲ್ಲಿ ಕೆಲಸ ಮಾಡಿದ್ದರು. ಲಾರಿ ಕ್ಲೀನರ್ ಆಗಿಯೂ ಕೂಡ ದುಡಿದಿದ್ದರು.

ಆ ನಂತರ ತಮ್ಮ ರಂಗಭೂಮಿಗೆ ಮರಳಿದ ರಾಜು ತಾಳಿಕೋಟೆ ಹತ್ತು ಹಲವು ಪ್ರಯೋಗಗಳನ್ನು ಮಾಡಿದರು. ಅದರಲ್ಲಿಯೂ ಕುಡುಕರ ಜೀವನಕ್ಕೆ ಇವರು ಹಿಡಿದ ಕೈಗನ್ನಡಿಗಳು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದವು. ''ಕಲಿಯುಗದ ಕುಡುಕ''..''ಕುಡುಕರ ಸಾಮ್ರಾಜ್ಯ''.. ''ಅಸಲಿ ಕುಡುಕ'' ಅಪಾರವಾದ ಜನಪ್ರಿಯತೆಯನ್ನು ಗಳಿಸಿದ್ದವು. ಆ ಕಾಲದಲ್ಲಿ ಈ ನಾಟಕಗಳ ಆಡಿಯೋ ಕ್ಯಾಸೆಟ್ಗಳನ್ನು ಜನ ಮುಗಿ ಬಿದ್ದು ಖರೀದಿ ಮಾಡಿದ್ದರು.
ನಿರ್ದೇಶಕ ಆನಂದ್ ಪಿ ರಾಜು ರವರ ''ಹೆಂಡ್ತಿ ಅಂದ್ರೆ ಹೆಂಡ್ತಿ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರಾಜು ತಾಳಿಕೋಟೆ ಅವರಿಗೆ ಯೋಗರಾಜ್ ಭಟ್ ನಿರ್ದೇಶನದ ''ಮನಸಾರೆ'' ಬೆಳ್ಳಿತೆರೆಯಲ್ಲಿ ಹೆಸರು ತಂದು ಕೊಟ್ಟಿತ್ತು. ''ಪಂಚರಂಗಿ''.. ''ಜಾಕಿ''.. ''ಮೈಲಾರಿ''.. ''ಅಂಜದ ಗಂಡು'' ''ವೀರಬಾಹು''.. ''ಜಂಗಲ್ ಜಾಕಿ''.. ''ಟೋಪಿವಾಲಾ''.. ''ಭರ್ಜರಿ''.. ರಾಜು ತಾಳಿಕೋಟೆ ಅವರ ಪ್ರಮುಖ ಚಿತ್ರಗಳು. ''ಬಿಗ್ ಬಾಸ್''ನ ಸೀಸನ್ 7ರಲ್ಲಿ ಕೂಡ ರಾಜು ತಾಳಿಕೋಟೆ ಭಾಗವಹಿಸಿದ್ದರು.
ಅಂದ್ಹಾಗೇ ರಾಜು ತಾಳಿಕೋಟೆ ಅವರ ಮೂಲ ಹೆಸರು ರಾಜೇಸಾಬ್ ಮಕ್ತುಮ್ಸಾಬ್ ಯೆಂಕಂಚಿ. ಆದರೆ, ಜನ ಇವರನ್ನು ರಾಜು ರಾಜು ಎಂದೆ ಕರೆಯುತ್ತಿದ್ದರು. ಹೀಗೆ ರಾಜು ಆದ ರಾಜೇಸಾಬ್ ಆ ನಂತರ ತಮ್ಮೂರಿನ ಹೆಸರಾದ ತಾಳಿಕೋಟೆಯನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಂಡರು. ನನ್ನ ಊರ ಹೆಸರಾದ ತಾಳಿಕೋಟೆಯನ್ನು ಸೇರಿಸಿಕೊಂಡ ನಂತರ ನಾನು ಪ್ರಸಿದ್ಧಿಯಾದೆ ಎಂದು ಹಿಂದೊಮ್ಮೆ ನೀಡಿದ್ದ ಸಂದರ್ಶನದಲ್ಲಿ ''ರಾಜು ತಾಳಿಕೋಟೆ ಹೇಳಿದ್ದರು. ಇನ್ನು ರಾಜು ತಾಳಿಕೋಟೆ ಅವರಿಗೆ ಇಬ್ಬರು ಹೆಂಡತಿಯರು. ಇಬ್ಬರ ಹೆಸರು ಕೂಡ ಪ್ರೇಮಾ. ರಾಜು ತಾಳಿಕೋಟೆ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಕಂಬನಿಯನ್ನು ಮಿಡಿದಿದ್ದಾರೆ. ಕನ್ನಡದ ಪ್ರಸಿದ್ಧ ನಿರ್ದೇಶಕ ಯೋಗರಾಜ್ ಭಟ್ ಅವರು ಕೂಡ ರಾಜು ತಾಳಿಕೋಟೆ ಅವರಿಗೆ ಭಾವಪೂರ್ಣ ವಿದಾಯ ಹೇಳಿದ್ದಾರೆ.


Click it and Unblock the Notifications










