ಪ್ರತಿ ಸಲ ನಮಗೆ ಅದು ಬರಲಿಲ್ಲ, ಇದು ಬರಲಿಲ್ಲ ಅಂತ ನೊಂದುಕೊಳ್ಳುವುದು ಯಜಮಾನರಿಗೆ ನಾವು ಮಾಡುವ ಅವಮಾನ
ಸಾಹಸ ಸಿಂಹ ವಿಷ್ಣುವರ್ಧನ್. ಕನ್ನಡ ಚಿತ್ರರಂಗದ ಯಜಮಾನ. ಸಾಂಸ್ಕ್ರತಿಕ ರಾಯಭಾರಿ. ಬದುಕಿದ್ದಷ್ಟು ದಿನ ಯಾರಿಗೂ ನೋವನ್ನ ನೀಡದ ಕರುಣಾಮಯಿ. ರೂಪ, ಅಭಿನಯ, ಸಂಸ್ಕಾರ, ಸಹನೆ, ಸರಳತೆ, ಸಹಿಸುವಿಕೆ, ಕ್ಷಮಿಸುವಿಕೆ ಎಲ್ಲದಕ್ಕೂ ಅತ್ಯುತ್ತಮ ಉದಾಹರಣೆಯೆನ್ನುವಂತಿದ್ದ ವಿಷ್ಣು ಆದರ್ಶಕ್ಕೆ ಮತ್ತೊಂದು ಹೆಸರು.
ಇಂಥಾ ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಚರ್ಚೆಯಾಗುತ್ತಲೇ ಇರುತ್ತೆ. ಸದ್ಯ ಈ ಚರ್ಚೆ ಇನ್ನೊಮ್ಮೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಚೇತನ್ ಅಹಿಂಸಾ ಹಚ್ಚಿದ ಕಿಡಿ.

ರಾಜಕುಮಾರ್ ಸ್ಮಾರಕದ ವಿಚಾರವನ್ನೇ ಮುಂದಿಟ್ಟುಕೊಂಡು ಈಗ ಹಲವರು ವಿಷ್ಣುವರ್ಧನ್ ಅವರಿಗ್ಯಾಕೆ ಸ್ಮಾರಕ ನಿರ್ಮಾಣ ಮಾಡಲಿಲ್ಲ ಎನ್ನುವ ಚರ್ಚೆ ಮಾಡುತ್ತಿದ್ದಾರೆ. ತಮ್ಮ ಅಸಮಾಧಾನ ಆಕ್ರೋಶವನ್ನು ಕೂಡ ಹೊರ ಹಾಕುತ್ತಿದ್ದಾರೆ. ಚೇತನ್ ಅವರ ಹೇಳಿಕೆಯನ್ನು ಕೂಡ ಈ ವಿಚಾರದಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಇಷ್ಟೇ ಅಲ್ಲ ರಾಜ್ಕುಮಾರ್ ಸ್ಮಾರಕದ ಕುರಿತು ಮಾತನಾಡಿದ್ದಕ್ಕೆ, ಚೇತನ್ ವಿರುದ್ಧ ಮುಗಿ ಬಿದ್ದವರೆಲ್ಲಾ ರಾತ್ರೋ ರಾತ್ರಿ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಧ್ವಂಸ ಮಾಡಿದಾಗ ಎಲ್ಲಿ ಹೋಗಿದ್ದರು ಎಂದು ಪ್ರಶ್ನೆಯನ್ನು ಕೂಡ ಮಾಡುತ್ತಿದ್ದಾರೆ.
ಈ ಎಲ್ಲ ಪರ ವಿರೋಧದ ಚರ್ಚೆಯನ್ನು ಗಮನಿಸಿರುವ ಸಾಹಸಿಂಹ ವಿಷ್ಣುವರ್ಧನ್ ಅವರ ಅಸಂಖ್ಯಾತ ಅಭಿಮಾನಿಗಳನ್ನು ಒಗ್ಗೂಡಿಸಿ ವಿಷ್ಣು ಹೆಸರನ್ನು ಸಾರ್ಥಕಗೊಳಿಸುವ ಕೆಲಸ ಕಾರ್ಯಗಳನ್ನು ವರ್ಷಾನುವರ್ಷಗಳಿಂದ ಮಾಡುತ್ತಾ ಬಂದಿರುವ, ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಹಲವು ಹೋರಾಟಗಳನ್ನು ಕೂಡ ಮಾಡಿರುವ, ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ವಿಷ್ಣುವರ್ಧನ್ ಅವರ ಸಮಸ್ತ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಪ್ರತಿ ಸಲ ನಮಗೆ ಅದು ಬರಲಿಲ್ಲ, ಇದು ಬರಲಿಲ್ಲ ಅಂತ ನೊಂದುಕೊಳ್ಳುವುದು ಮೊದಲು ಬಿಡಿ ಎಂದು ಹೇಳಿದ್ದಾರೆ. ಹಾಗಿದ್ದರೆ ವೀರಕಪುತ್ರ ಶ್ರೀನಿವಾಸ ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.
ವೀರಕಪುತ್ರ ಶ್ರೀನಿವಾಸ ಬರಹ
ಎಲ್ಲಾ ಸೇನಾನಿಗಳಿಗೆ ನಮಸ್ಕಾರ... ಗೊತ್ತಿದ್ದು ಇದೆಲ್ಲಾ ಆಗುತ್ತೋ ಅಥವಾ ಗೊತ್ತಿಲ್ಲದೆಯೇ ಆಗ್ತಿದೆಯೋ ಗೊತ್ತಿಲ್ಲ ; ಆದ್ರೆ ತಪ್ಪಂತೂ ಆಗುತ್ತಿದೆ. ಯಾರಿಗೋ ಏನೋ ಆದಾಗ "ನಮಗ್ಯಾಕೆ ಅದಿಲ್ಲ" ನಮಗ್ಯಾಕೆ ನೀವು ಬರಲಿಲ್ಲ" ಅಂತ ಪೋಸ್ಟ್ ಮಾಡುವುದು ನಿಜಕ್ಕೂ ಅಸಹ್ಯ.

ಬೆಂಗಳೂರಲ್ಲಿ ಸ್ಮಾರಕವಿಲ್ಲ ಅನ್ನೋದು ಬಿಟ್ಟರೆ ಯಜಮಾನ್ರ ಹೆಸರಲ್ಲಿ ಐದೂವರೆ ಏಕರೆ ಜಾಗದಲ್ಲಿ ಸ್ಮಾರಕವಿದೆ ಅನ್ನೋದು ಮರೆಯಬಾರದು. ಕರ್ನಾಟಕ ರತ್ನ ಕೊಡುವುದು ತಡವಾಗಿದೆಯೇ ವಿನಃ ಪ್ರಶಸ್ತಿಯೇ ಸಿಕ್ಕಿಲ್ಲವೆಂದುಕೊಳ್ಳಬಾರದು.
ಯಜಮಾನ್ರ ಹೆಸರಲ್ಲಿ ನಿತ್ಯವೂ ಒಂದಲ್ಲ ಒಂದು ಕಡೆ ರಕ್ತದಾನವಾಗುತ್ತಿದೆ. ಅದಕ್ಕಿಂತ ಶ್ರೇಷ್ಠ ಕೆಲಸ ಇನ್ನೇನಿದೆ. ಯಜಮಾನ್ರ ಹೆಸರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದೇವೆ ಮತ್ತು ಅವುಗಳನ್ನು ಮರಗಳನ್ನಾಗಿಸಿದ್ದೇವೆ. ಅದಕ್ಕಿಂತ ಸಾರ್ಥಕತೆ ಏನಿದೆ? ಯಜಮಾನ್ರ ಹೆಸರಲ್ಲಿ ವರ್ಷ ವರ್ಷ ಮಹಿಳಾ ದಿನಾಚರಣೆಗಳಾಗುತ್ತಿವೆ. ಯಜಮಾನ್ರ ಹೆಸರಲ್ಲಿ ಕಲ್ಯಾಣೋತ್ಸವಗಳಾಗುತ್ತಿವೆ.
ಯಜಮಾನ್ರ ಸಿನಿಮಾಗಳ ಮರುಬಿಡುಗಡೆಗಳು, ಹೊಸ ಸಿನಿಮಾಗಳಿಗಿಂತ ಹೆಚ್ಚಾಗಿ ಸಂಭ್ರಮಿಸಲ್ಪಡುತ್ತಿವೆ. ಯಜಮಾನ್ರ ಕಟೌಟ್ ಜಾತ್ರೆಗೆ ಎರಡು ಲಕ್ಷ ಸೇರಿದ್ದನ್ನು ಮರೆತುಬಿಟ್ಟಿರಾ? ಯಜಮಾನ್ರ ಮೈಸೂರು ಸ್ಮಾರಕ ಉದ್ಘಾಟನೆಗೆ ನಡೆದ ಬಹುದೊಡ್ಡ ವಾಹನ ಜಾಥದ ಬಗ್ಗೆ ಹೆಮ್ಮೆ ಇಲ್ಲವಾ? ಐದು ಕಿಮಿಗಳಷ್ಟು ಉದ್ದ ವಾಹನಗಳು ಸಾಲಗಟ್ಟಿ ನಿಂತಿದ್ದನ್ನು ಸುಲಭಕ್ಕೆ ಯಾರೂ ಮಾಡಲಾರರು ಅನ್ನೋದು ತಿಳಿದಿರಲಿ.
ದೆಹಲಿಯಲ್ಲಿ ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ಆಗಿದ್ದು ಸಣ್ಣ ಸಂಗತಿಯೇ? ಬೆಂಗಳೂರಲ್ಲಿ ಮೂರು ದಿನ ನಿರಂತರವಾಗಿ ರಾಷ್ಟ್ರೀಯ ಉತ್ಸವ ನಡೆದಿದ್ದು ಮತ್ತೆ ಸಾಧ್ಯವೇ? ಅಂಚೆ ಕಚೇರಿಯಿಂದ ಅಂಚೆಚೀಟಿ ಮತ್ತು ಅಂಚೆ ವಿಶೇಷ ಲಕೋಟೆ ಎರಡನ್ನೂ ತನ್ನದಾಗಿಸಿಕೊಂಡಿದ್ದು ಖುಷಿ ಕೊಟ್ಟಿಲ್ಲವೇ? ಒರಿಸ್ಸಾದ ಸಮುದ್ರ ತೀರದ ಮರಳಿನಲ್ಲಿ ಅರಳಿದ ಡಾ.ವಿಷ್ಣುಮರಳು ಶಿಲ್ಪ ಆ ಕಾಲಕ್ಕೆ ದಕ್ಷಿಣ ಭಾರತದಲ್ಲಿಯೇ ಮೊದಲು!

ಉದ್ದದ ರಸ್ತೆ, ಐವತ್ತಕ್ಕೂ ಹೆಚ್ಚು ಪುಸ್ತಕಗಳು, ಅನೇಕ ಉದ್ಯಾನವನಗಳು, ಐನೂರಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾದ ಅಭಿಮಾನಿ ಪೇಜುಗಳು, ನೂರಾರು ಪುತ್ಥಳಿಗಳು, ಅದಕ್ಕೂ ಹೆಚ್ಚಿನ ದಾಖಲೆಗಳು, ಸಾವಿರಾರು ಸಂಭ್ರಮಗಳು ಮುಖ್ಯವಾಗಿ ಅವರಿಲ್ಲವಾಗಿ ಹದಿನಾರು ವರ್ಷ ಕಳೆದರೂ ಅವರನ್ನು ಇನ್ನೂ ಜೀವಂತವಾಗಿಯೇ ಇಟ್ಟಿರುವ ಲಕ್ಷಾಂತರ ಸೇನಾನಿಗಳು.
ಇಷ್ಟೆಲ್ಲಾ ಇದ್ದೂ ಸಹ... ಪ್ರತಿ ಸಲ ನಮಗೆ ಅದು ಬರಲಿಲ್ಲ, ಇದು ಬರಲಿಲ್ಲ ಅಂತ ನೊಂದುಕೊಳ್ಳುವುದು ಮತ್ತು ಅವರಿವರ ಮೇಲೆ ಆರೋಪಿಸುವುದು ನಿಜಕ್ಕೂ ಯಜಮಾನ್ರಿಗೆ ಮಾಡುವ ಅವಮಾನ. ನಾವು ಇನ್ನೊಬ್ಬರ ಮೇಲೆ ಅವಲಂಬಿತರಾಗೋದು ನಾವು ಅಸಹಾಯಕರಾದಾಗ ಮಾತ್ರ..! ಹೇಳಿ... ನಾವು ಅಸಹಾಯಕರಾ? ಅಲ್ಲ ಎನ್ನುವುದಾದರೆ ಇನ್ಮುಂದೆ ಯಾವತ್ತೂ ಸಹ, ಇನ್ನೊಬ್ಬರಿಗೆ ಹೋಲಿಸಿ, ಯಜಮಾನ್ರಿಗೆ ಏನನ್ನೂ ಕೇಳಬೇಡಿ.
ಅದರ ಬದಲು ನಾವು ಗಟ್ಟಿಯಾಗೋಣ... ಅವರ ಹೆಸರಲ್ಲಿ ಇನ್ನೊಂದಷ್ಟು ಸಾರ್ಥಕ ಕೆಲಸಗಳನ್ನು ಮಾಡೋಣ. ಅನಾಥ ಆಶ್ರಮಗಳನ್ನು ಮಾಡೋಣ, ಶಾಲೆಗಳನ್ನು ತೆರೆಯೋಣ, ಪ್ರತಿ ಜೂನಿನಲ್ಲಿ ಲಕ್ಷಾಂತರ ಸಸಿಗಳನ್ನು ನೆಡೋಣ. ರಕ್ತದಾನ, ನೇತ್ರದಾನಕ್ಕೆ ಮುಂದಾಗೋಣ. ಅಶಕ್ತರಿಗೆ ಪಾಲಿಗೆ ಕರ್ಣನಂತಾಗಿಬಿಡೋಣ. ಆದರೆ ಎಂದಿಗೂ ಬೇಡುವ ಕೈಗಳಾಗದಿರೋಣ. ಇದ್ದರೆ ಇರಬೇಕು, ಯಜಮಾನ್ರ ಅಭಿಮಾನಿಗಳಂತಿರಬೇಕು. ಎಂಬ ಮಾತನ್ನು ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯವೂ ಹೌದು.
ನಿಮ್ಮ
ವೀರಕಪುತ್ರ ಶ್ರೀನಿವಾಸ.


Click it and Unblock the Notifications