ಜಾನಕಿ ಅಮ್ಮನಿಗೆ 'ನಾದ ದೇವತೆ' ಎಂಬ ಬಿರುದು ಕೊಟ್ಟಿದ್ದು ಯಾರು ? ಕನ್ನಡದಲ್ಲಿ ಸವಾಲಾಗಿದ್ದ ಹಾಡು ಯಾವುದು ?
ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಅದರಲ್ಲಿಯೂ ಭಾರತದಲ್ಲಿ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಹೊಂದಿರುವ ಭಾರತದಲ್ಲಿ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ.
ಇಂತಹ ದೇಶದಲ್ಲಿ ಇಲ್ಲಿಯವರೆಗೆ ಹಲವಾರು ಗಾಯಕರು ಬಂದಿದ್ದಾರೆ. ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಜನಮಾನಸದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಆ ಪೈಕಿ ಒಬ್ಬರಾಗಿದ್ದವರು ಎಸ್ ಜಾನಕಿ.

ಜಾನಕಿ ಅಮ್ಮ ಹಿನ್ನೆಲೆ
ಆಂಧ್ರಪ್ರದೇಶದ ಗುಂಟೂರು ಜಾನಕಮ್ಮನ ಜನ್ಮ ಸ್ಥಾನ. ಏಪ್ರಿಲ್ 23, 1938 ರಂದು ಜನಿಸಿದ ಎಸ್ ಜಾನಕಿ ನಾದಸ್ವರಂ ವಿದ್ವಾನ್ ಪೈದಿಸ್ವಾಮಿ ಅವರಿಂದ ಸಂಗೀತ ಕಲಿತರು.
ತಮ್ಮ 9ನೇ ವಯಸ್ಸಿನಲ್ಲೇ ವೇದಿಕೆ ಏರಿದರು. 1950ರ ದಶಕದ ಕೊನೆಯಲ್ಲಿ ಚಿತ್ರರಂಗಕ್ಕೆ ಬಂದ ಜಾನಕಿ ಆ ನಂತರ 20 ಭಾಷೆಗಳಲ್ಲಿ ತಮ್ಮ ಚಿನ್ನದ ಕಂಠ ಕುಣಿಸಿದ್ದರು.
ಎಸ್ ಜಾನಕಿ ಅವರ ದೇಹಕ್ಕೆ ವಯಸ್ಸಾಗಿತ್ತು ಅಷ್ಟೇ. ಆದರೆ ಅವರ ಕಂಠ ಮಾತ್ರ 20ರ ಹರೆಯದ ಗಾಯಕಿಯರಂತೆ ಇತ್ತು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನ ಸಾವಿರಾರು ಹಾಡುಗಳನ್ನು ಹಾಡಿದ್ದರು ಎಸ್ ಜಾನಕಿ.
ತಮ್ಮ 50ಕ್ಕೂ ಅಧಿಕ ವರ್ಷಗಳ ವೃತ್ತಿಬದುಕಿನಲ್ಲಿ 2007ರ ಸಮಯಕ್ಕೆ ಜಾನಕಿ ಹಾಡಿದ ಹಾಡುಗಳ ಸಂಖ್ಯೆ 20,000. ಗೂಗಲ್ ನಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ ಇವರು ಹಾಡಿರುವ ಹಾಡುಗಳ ಸಂಖ್ಯೆ 48,000.

ಕನ್ನಡದ ಖ್ಯಾತ ಹಾಡುಗಳು
ಕನ್ನಡದಲ್ಲಿ ಅತ್ಯಂತ ಮಧುರವಾದ ಸೋಲೋ ಹಾಡುಗಳನ್ನು ಕೊಟ್ಟ ಖ್ಯಾತಿ ಜಾನಕಿ ಅವರಿಗಿದೆ. ಅವರ ತಾಯ್ನುಡಿ ಕನ್ನಡ ಅಲ್ಲದಿದ್ದರೂ ಸ್ಪಷ್ಟವಾಗಿ, ಸುಲಲಿತವಾಗಿ ಕನ್ನಡ ಹಾಡುಗಳು ಹಾಲು ಜೇನಿನಂತೆ ಅವರ ಕಂಠಸಿರಿಯಿಂದ ಹೊರಹೊಮ್ಮಿವೆ.
ಸವಾಲಾದ ಕನ್ನಡ ಹಾಡು ಯಾವುದು ?
ಎಸ್ ಜಾನಕಿ ಅವರು ಕನ್ನಡದಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದರೂ ಅವರಿಗೆ ನಿಜವಾಗಿಯೂ ಸವಾಲಾದ ಹಾಡು ಯಾವುದು ಎಂದರೆ ಥಟ್ಟನೆ ಅವರು ಹೇಮಾವತಿ (1977) ಚಿತ್ರದ "ಶಿವ ಶಿವ ಎನ್ನದ ನಾಲಿಗೆ ಏಕೆ ಶಿವನನು ಸ್ಮರಿಸದ ಜೀವವು ಏಕೆ" ಎಂದು ಹೇಳುತ್ತಿದ್ದರು.
ಜಾನಕಿ ಹಾಡಿರುವ ಕನ್ನಡ ಹಾಡುಗಳು ಕೇವಲ ಸಂಖ್ಯೆಯಲ್ಲಷ್ಟೇ ಅಲ್ಲದೆ ಗುಣಮಟ್ಟದಲ್ಲೂ ಅತ್ಯುತ್ತಮವಾಗಿರುವುದು ವಿಶೇಷ. ಶಾಸ್ತ್ರೀಯ ಧಾಟಿಯ "ಭಾರತಭೂಷಿರ" ದಿಂದ ಹಿಡಿದು ಭಾವನಾತ್ಮಕವಾಗಿ ಹಿಡಿದಿಡುವ "ಸುಖದ ಸ್ವಪ್ನದ ಗಾನ" ಆಗಿರಬಹುದು, ಗಗನವು ಎಲ್ಲೋ ಎಂಬ ಹರ್ಷದಾಯಕ ಧಾಟಿ, ಕಂಗಳು ತುಂಬಿರಲು ಎಂಬ ಕರುಣಾಜನ ರಸ ಉಕ್ಕಿಸುವ ಹಾಡುಗಳು, ಇಂದು ಎನಗೆ ಗೋವಿಂದ ಎಂದು ಭಕ್ತಿರಸ ಉಕ್ಕಿಸುವ, ದೇವರ ಆಟ ಬಲ್ಲವರ್ಯಾರು ಎಂಬ ಆಧ್ಯಾತ್ಮಕ ಚಿಂತನೆ ಹಕ್ಕುವ ಹಾಡುಗಳನ್ನು ಕೇಳಿದರೆ ಇಂದಿಗೂ ಮೈ ಪುಳಕಗೊಳ್ಳುತ್ತದೆ.
ಮೂಡಲ ಮನೆಯ (ಬೆಳ್ಳಿಮೋಡ), ನೋಡು ಬಾ ನೋಡು ಬಾ (ಮಿಸ್ ಲೀಲಾವತಿ), ಪಂಚಮವೇದ (ಗೆಜ್ಜೆಪೂಜೆ), ಯಾವೂರವ್ವ ಇವ ಯಾವುರವ್ವ (ಎಡಕಲ್ಲುಗುಡ್ಡದ ಮೇಲೆ), ಯಾವ ಜನ್ಮದ ಮೈತ್ರಿ (ಗೌರಿ), ಆಕಾಶದೀಪವು ನೀನು (ಪಾವನ ಗಂಗ), ಬಾನಲ್ಲು ನೀನೆ (ಬಯಲುದಾರಿ), ನೀ ಇರಲು ಜೊತೆಯಲ್ಲಿ (ಗುಣ ನೋಡಿ ಹೆಣ್ಣು ಕೊಡು)..
ನಾದದೇವತೆ ಅಂದಿದ್ದರು ನಾದ ಬ್ರಹ್ಮ
ಹೀಗೆ ನನ್ನೆದೆ ಕೋಗಿಲೆಯ ಎಂದು ಹಾಡಿದ ಜಾನಕಿ ಅವರಿಗೆ ನಾದಬ್ರಹ್ಮ ಹಂಸಲೇಖ 'ನಾದ ದೇವತೆ' ಎಂಬ ಬಿರುದು ನೀಡಿದ್ದರು.
ಅಸಂಖ್ಯಾತ ಪ್ರಶಸ್ತಿಗಳು
ಇನ್ನು ಪ್ರಶಸ್ತಿ, ಬಿರುದುಗಳ ವಿಚಾರಕ್ಕೆ ಬಂದರೆ ಲೆಕ್ಕವಿಲ್ಲದಷ್ಟು ಸನ್ಮಾನ, ಬಹುಮಾನಗಳಿಗೆ ಪಾತ್ರವಾಗಿದ್ದವರು ಎಸ್.ಜಾನಕಿ. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಜೊತೆಗೆ 31 ಬಾರಿ ವಿವಿಧ ರಾಜ್ಯ ಪ್ರಶಸ್ತಿಗಳು ಅರಸಿಕೊಂಡು ಹೋಗಿದ್ದವು.
ಇದಲ್ಲದೇ ಪದ್ಮಭೂಷಣ: 2013ರಲ್ಲಿ ಅವರಿಗೆ ದೇಶದ ಪ್ರತಿಷ್ಠಿತ 'ಪದ್ಮಭೂಷಣ' ಪ್ರಶಸ್ತಿ ಒಲಿದುಬಂದಿತ್ತು.
ಕರ್ನಾಟಕ ಸರ್ಕಾರದಿಂದ ಗೌರವಾನ್ವಿತ 'ರಾಜ್ಯೋತ್ಸವ ಪ್ರಶಸ್ತಿ' ಹಾಗೂ ತಮಿಳುನಾಡು ಸರ್ಕಾರದಿಂದ 'ಕಲೈಮಾಮಣಿ ಪ್ರಶಸ್ತಿ' ಮುಡಿಗೇರಿಸಿಕೊಂಡಿದ್ದರು.
ಮೈಸೂರು ವಿಶ್ವವಿದ್ಯಾಲಯವು ಅವರ ಸಂಗೀತ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿತ್ತು. ಹೀಗೆ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಯನ್ನು ನೀಡಿರುವ ಎಸ್.ಜಾನಕಿ ಇನ್ನು ನೆನಪು ಮಾತ್ರ. ಹೋಗಿ ಬನ್ನಿ ಜಾನಕಮ್ಮ...


Click it and Unblock the Notifications