ಧ್ರುವ ಸರ್ಜಾ ಜೊತೆ ಕೈ ಜೋಡಿಸಿದ 'ರಾಬರ್ಟ್' ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ
ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೂರು ವರ್ಷಕ್ಕೊಂದು ಚಿತ್ರ ಮಾಡ್ತಾರೆ ಅನ್ನುವ ಪ್ರೀತಿ ತುಂಬಿದ ತಕರಾರೊಂದು ಇವರ ಅಭಿಮಾನಿಗಳಲ್ಲಿದೆ. ಕನಿಷ್ಠ ವರ್ಷಕ್ಕೊಂದಾದರೂ ಚಿತ್ರ ಮಾಡುವಂತೆ ಇವರ ಭಕ್ತಗಣ ಮೇಲಿಂದ ಮೇಲೆ ಮನವಿ ಪತ್ರವನ್ನೂ ಸಲ್ಲಿಸಿದ್ದು ಇದೆ. ಧ್ರುವ ಕೂಡ ತಮ್ಮ VIP ಬಣದಿಂದ ಬಂದ ಈ ಮನವಿ ಪತ್ರವನ್ನ ಗಂಭೀರವಾಗಿ ಪರಿಗಣಿಸಿ ಕೆಲಸಕ್ಕೆ ಇಳಿದಿದ್ದಾರೆ ಕೂಡ.
ಆದರೂ ಅದ್ಯಾಕೋ.. ಈ ತ್ರೈವಾರ್ಷಿಕ ಯೋಜನೆ ಮಾತ್ರ ಧ್ರುವ ಸರ್ಜಾ ಅವರನ್ನ ನೆರಳಿನಂತೆ ಹಿಂಬಾಲಿಸುತ್ತಾನೇ ಇದೆ. ಇದಕ್ಕೆ ಪೂರಕವಾಗಿ ಧ್ರುವ ಅಭಿನಯದ ''ಕೆಡಿ'' ಮುಹೂರ್ತ ಭಾಗ್ಯ ಕಂಡು ಮೂರುವರೆ ವರ್ಷಗಳಾಗಿವೆ. ಆದರೂ ಬಿಡುಗಡೆಯ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ. ಹೀಗಿರುವಾಗ ಇದೀಗ ಧ್ರುವಾ ಸರ್ಜಾ ಅವರ ಜೊತೆ ಉಮಾಪತಿ ಶ್ರೀನಿವಾಸ್ ಹೊಸ ಚಿತ್ರವೊಂದನ್ನು ಘೋಷಿಸಿದ್ಧಾರೆ.

ಹೌದು. ಇಂದು ( ಅಕ್ಟೋಬರ್ 6 ) ಧ್ರುವಾ ಸರ್ಜಾಗೆ ಅವರಿಗೆ ಹುಟ್ಟುಹಬ್ಬದ ಸಂಭ್ರಮ.. ಸಡಗರ. ಈ ಸಡಗರವನ್ನು ಇವರ ವಿಐಪಿ ಅಭಿಮಾನಿಗಳು ನಿನ್ನೆ ರಾತ್ರಿಯಿಂದನೇ ಹೆಚ್ಚು ಮಾಡಿದ್ದರು. ರಕ್ತದಾನ, ಅನ್ನದಾನ ಅಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಇಷ್ಟೇ ಅಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ಎರಡೂ ಲಕ್ಷಕ್ಕೂ ಅಧಿಕ ಪುಸ್ತಕವನ್ನು ಕೂಡ ವಿತರಣೆ ಮಾಡಿದರು.
ಈ ಸಂಭ್ರಮಕ್ಕೆ ಚಿತ್ರವನ್ನು ಘೋಷಣೆ ಮಾಡುವ ಮೂಲಕ ಉಮಾಪತಿ ಶ್ರೀನಿವಾಸ್ ಮತ್ತಷ್ಟು ಮೆರಗು ನೀಡಿದ್ಧಾರೆ. ಈ ಕುರಿತು ಇಂದು ಬರ್ತ್ ಡೇ ಸಂದರ್ಭದಲ್ಲಿ ಘೋಷಣೆ ಮಾಡಿದ ಉಮಾಪತಿ ಶ್ರೀನಿವಾಸ್ ಚಿತ್ರರಂಗ ಯಾರ ಸ್ವತ್ತು ಅಲ್ಲ, ಯಾವ ವರ್ಗಕ್ಕೂ ಸೇರಿದ್ದು ಅಲ್ಲ. ಧ್ರುವಾ ಸರ್ಜಾ ಅವರಂತೆ ಯಾರು ಯಾರು ಶ್ರಮ ಹಾಕಿ ಕೆಲಸ ಮಾಡ್ತಾರೋ ಅವರ ಮನೆಯಲ್ಲಿ ಖಂಡಿತವಾಗಿಯೂ ಕಲಾ ಸರಸ್ವತಿ ನೆಲೆಯೂರುತ್ತಾಳೆ ಎಂದು ಹೇಳಿದ್ದಾರೆ. ''ಕೆಡಿ'' ಸೇರಿ ಧ್ರುವಾ ಅಭಿನಯದ ಇನ್ನು ಕೆಲ ಚಿತ್ರಗಳು ಬರುತ್ತಿವೆ ಆ ಎಲ್ಲಾ ಚಿತ್ರಗಳಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.

ಉಮಾಪತಿ ಶ್ರೀನಿವಾಸ್ ಹೀಗೆ ವೇದಿಕೆ ಮೇಲೆ ತಮ್ಮ ಮತ್ತು ಧ್ರುವಾ ಕಾಂಬಿನೇಷನನ್ ಚಿತ್ರ ಘೋಷಣೆ ಮಾಡುತ್ತಿದ್ದಂತೆಯೇ ನೆರೆದ ಅಭಿಮಾನಿಗಳು ಸಂಭ್ರಮದಿಂದ ಶಿಳ್ಳೆ ಹೊಡೆದಿದ್ದಾರೆ. ಇನ್ನುಳಿದಂತೆ ಅಭಿಮಾನಿಗಳ ಅಭಿಮಾನದ ಕುರಿತು ಮಾತನಾಡಿದ ಧ್ರುವಾ ಸರ್ಜಾ ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಮಳೆ ಇದ್ದರೂ ಕೂಡ ಬೇರೆ ಬೇರೆ ಊರುಗಳಿಂದ ಬಂದಿದ್ಧಾರೆ ಎಂದು ಹೇಳಿರುವ ಧ್ರುವಾ ಎಲ್ಲ ಕಲಾವಿದರ ಪಾಲಿಗೆ ಇದೊಂದು ರೀತಿಯ ಪುಣ್ಯ ಎಂದು ಹೇಳಿದ್ಧಾರೆ.
ಇನ್ನೂ ಅರ್ಥಪೂರ್ಣವಾದ ಬರ್ತ್ ಡೇ ಆಚರಿಸಿಕೊಳ್ಳಬೇಕೆನ್ನುವ ಉದ್ದೇಶ ನನ್ನದು. ಇದಕ್ಕೆ ತಕ್ಕಂತೆ ಹಲವು ಸಮಾಜ ಮುಖಿ ಕೆಲಸಗಳನ್ನು ಅಭಿಮಾನಿಗಳು ಮಾಡಿದ್ದಾರೆ ಎಂದು ಹೇಳಿರುವ ಧ್ರುವಾ ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿದ್ದಾರೆ.
ಇದು ಹೊರತು ಪಡಿಸಿದರೆ ಆಗಲೇ ಹೇಳಿದಂತೆ ಸದ್ಯ ''ಕೆಡಿ'' ಚಿತ್ರಕ್ಕೆ ಇವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಖುದ್ದು ಧ್ರುವಾ ಕೂಡ ''ಕೆಡಿ'' ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ಧಾರೆ. ಈ ಹಿನ್ನೆಲೆ ಇಂದು ''ಕೆಡಿ'' ಚಿತ್ರದ ಬಿಡುಗಡೆಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದಾಗ ಧ್ರುವಾ ಡೈರೆಕ್ಟರ್ ಅವರಿಗೆ ಕೇಳಬೇಕು ಎಂದು ಹೇಳಿದ್ಧಾರೆ. ಡೈರೆಕ್ಟರ್ ಆದಷ್ಟು ಬೇಗ ಮಾಹಿತಿ ಕೊಡಲಿ ಎಂದು ಮಾಧ್ಯಮದವರ ಮೂಲಕ ನಾನು ಕೂಡ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಅಂದ್ಹಾಗೇ ಧ್ರುವಾ ಸರ್ಜಾ ಹುಟ್ಟುಹಬ್ಬದ ಪ್ರಯುಕ್ತ ''ಕೆಡಿ'' ಚಿತ್ರದ ಹೊಸ ಪೋಸ್ಟರ್ವೊಂದನ್ನು ಇಂದು ಬಿಡುಗಡೆ ಮಾಡಲಾಗಿದೆ.


Click it and Unblock the Notifications











