'ಜಮ್ತಾರ' ನಿರ್ಮಾಪಕರ ಜೊತೆ ಕೈ ಜೋಡಿಸಿದ ಪವನ್ ಕುಮಾರ್, ಬಾಲಿವುಡ್ನತ್ತ ಕನ್ನಡದ ಮತ್ತೊಬ್ಬ ನಿರ್ದೇಶಕ
ಕನ್ನಡದ ಹಲವು ನಾಯಕಿಯರಿಗೆ ಪರಭಾಷೆಯಲ್ಲಿ ಈಗ ಡಿಮ್ಯಾಂಡ್ ಇದೆ. ರಶ್ಮಿಕಾ ಮತ್ತು ಶ್ರೀಲೀಲಾ ಅವರನ್ನು ಬಾಲಿವುಡ್ ಬಿಗಿದಪ್ಪಿಕೊಂಡಿದ್ದರೆ ಆಶಿಕಾ ರಂಗನಾಥ್ .. ಮೆಘಾ ಶೆಟ್ಟಿ .. ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ರುಕ್ಮಿಣಿ ವಸಂತ್ ಅವರ ಹವಾ ಸದ್ಯ ದೇಶದೆಲ್ಲೆಡೆ ಇದೆ. ಮುಂದೆ ಗಾಳಿ ಯಾವ ಕಡೆ ಜೋರು ಬೀಸುತ್ತೆ...
ಆ ಕಡೆ ರುಕ್ಮಿಣಿ ಹೋಗಲಿದ್ದಾರೆ. ರಚಿತಾ ರಾಮ್ ಕೂಡ ಒಂದು ಕಾಲು ಕಾಲಿವುಡ್ನಲ್ಲಿ ಇಟ್ಟಿದ್ದಾರೆ. ಇನ್ನೂ ಕೇವಲ ನಾಯಕಿಯರು ಮಾತ್ರ ಅಲ್ಲ. ಕನ್ನಡದ ಹಲವು ನಿರ್ದೇಶಕರು ಕೂಡ ಪರಭಾಷೆಗೆ ದಂಡೆತ್ತಿ ಹೋಗಿದ್ದಾರೆ. ಪ್ರಶಾಂತ್ ನೀಲ್ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರೆ ನಂದಕಿಶೋರ್ ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರಿಗೆ ಚಿತ್ರ ನಿರ್ದೇಶನ ಮಾಡಿದ್ದಾರೆ.

ಇನ್ನೂ ಕನ್ನಡದಲ್ಲಿ 8-10 ಚಿತ್ರಗಳನ್ನು ನಿರ್ದೇಶಿಸಿರುವ ಹರ್ಷ ಕೂಡ ಈ ವರ್ಷ ಬಾಲಿವುಡ್ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ''ಬಾಘಿ 4'' ಚಿತ್ರವನ್ನು ನಿರ್ದೇಶನ ಮಾಡಿ ಬಂದಿದ್ದಾರೆ. ''ಗೂಗ್ಲಿ''.. ''ನಟ ಸಾರ್ವಭೌಮ'' ನಿರ್ದೇಶಕ ಪವನ್ ಒಡೆಯರ್ ಕೂಡ ''ನೋಟರಿ'' ಎಂಬ ಚಿತ್ರವನ್ನು ಮಾಡಿದ್ಧಾರೆ. ಸದ್ಯ ಈ ಸಾಲಿಗೆ ಪವನ್ ಕುಮಾರ್ ಕೂಡ ಸೇರಿಕೊಂಡಿದ್ಧಾರೆ.
ಹೌದು, ಪವನ್ ಕುಮಾರ್.. ಕನ್ನಡದ ಮತ್ತೊಬ್ಬ ಕ್ರಿಯಾಶೀಲ ನಿರ್ದೇಶಕ. ''ಲೂಸಿಯಾ'' ಮತ್ತು ''ಯುಟರ್ನ್'' ಇವರ ಎರಡು ಅತ್ಯುತ್ತಮ ಕೃತಿಗಳು. ಇವರ ''ಯುಟರ್ನ್'' ಅದ್ಯಾವ್ಯಾವ ಭಾಷೆಗೆ ರಿಮೇಕ್ ಆಗಿದೆ ಎಂಬ ಲೆಕ್ಕವನ್ನು ಖುದ್ದು ಪವನ್ ಕುಮಾರ್ ಅವರೇ ತಪ್ಪಿರಬೇಕು.
ಇಂಥಾ ಪವನ್ ಕುಮಾರ್ ಹಾಗೇ ನೋಡಿದರೆ ಒಂದು ದಶಕದ ಹಿಂದೆಯೇ ಹಿಂದಿಗೆ ಹೋಗಬೇಕಿತ್ತು. ಆದರೆ.. ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಆ ನಂತರ ''ಲೈಲಾ'' ಎಂಬ ವೆಬ್ ಸರಣಿಯನ್ನು ಪವನ್ ಕುಮಾರ್ ಡೈರೆಕ್ಟ್ ಮಾಡಿದ್ದರು. ಆದರೆ.. ಇವರ ಜೊತೆ ಇನ್ನು ಇಬ್ಬರು ನಿರ್ದೇಶಕರು ಆಗ ಅಕ್ಕ ಪಕ್ಕ ಇದ್ದರು.
ಹೀಗಾಗಿ ಪವನ್ ಕುಮಾರ್ ಅವರ ಕಾರ್ಯವೈಖರಿಯನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಹಿಂದಿಯವರಿಗೆ ಸಿಕ್ಕಿರಲಿಲ್ಲ. ಆದರೆ ಈಗ ಹಿಂದಿಯಲ್ಲಿ ಚೊಚ್ಚಲ ಚಿತ್ರ ನಿರ್ದೇಶನಕ್ಕೆ ಪವನ್ ಕುಮಾರ್ಗೆ ಕಾಲ ಕೂಡಿ ಬಂದಿದೆ. ಇದಕ್ಕೆ ಪುರಾವೆ ಎನ್ನುವಂತೆ ಪವನ್ ಕುಮಾರ್ ಈಗ ಹಿಂದಿಯಲ್ಲಿ ಬಂದ ದಿ ಬೆಸ್ಟ್ ವೆಬ್ ಸರಣಿಯಲ್ಲಿ ಒಂದಾದ ''ಜಮ್ತಾರ''ದ ನಿರ್ಮಾಪಕರ ಜೊತೆ ಕೈ ಜೋಡಿಸಿದ್ದಾರೆ.

ಪವನ್ ಕುಮಾರ್ ಮತ್ತು ಜಮ್ತಾರ ನಿರ್ಮಾಪಕ ಮನೀಶ್ ತ್ರೇಹನ್ ಮಾಡಲು ಹೊರಟ ಈ ಚಿತ್ರದ ಕಥಾ ಹಂದರವೇನು..? ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಆಗಿರುತ್ತಾ..? ಹೀಗೆ ಹಲವರು ಪ್ರಶ್ನೆಗಳಿಗೆ ಉತ್ತರ ಸದ್ಯ ಇಲ್ಲವಾದರೂ ಮುಂಬರುವ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ. ಚಿತ್ರದ ನಿರ್ಮಾಪಕ ಮನೀಶ್ ತ್ರೇಹನ್ ಹಿಂದಿಯವರಾದ ಹಿನ್ನೆಲೆ ಪವನ್ ಕುಮಾರ್ ಅವರ ಈ ಪ್ರಾಜೆಕ್ಟ್ ಹಿಂದಿಯಲ್ಲಿಯೇ ನಿರ್ಮಾಣವಾಗಲಿದೆ. ಕನ್ನಡಕ್ಕೆ ಆ ನಂತರ ಡಬ್ ಆದರೂ ಆಗಬಹುದು. ಇನ್ನು ಪವನ್ ಕುಮಾರ್ ಮತ್ತು ಮನೀಶ್ ಕೈ ಜೋಡಿಸಿರುವುದು ಚಿತ್ರಕ್ಕಾ..? ವೆಬ್ ಸರಣಿಗಾ..? ಈ ಕುತೂಹಲ ಕೂಡ ಇದೆ.
ಇನ್ನುಳಿದಂತೆ ಚಿತ್ರದ ತಾರಾಬಳಗ ಮತ್ತು ತಂತ್ರಜ್ಞರ ಕುರಿತು ಕೂಡ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಕೇವಲ ಮಾತುಕತೆಯಾಗಿದೆ. ಪವನ್ ಕುಮಾರ್ ಹೇಳಿದ ಎಳೆ ಮನೀಶ್ ತ್ರೇಹನ್ ಅವರಿಗೆ ಇಷ್ಟವಾಗಿದೆ. ಕಥೆಗೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿವೆ ಎನ್ನುವುದಷ್ಟೇ ಸದ್ಯಕ್ಕೆ ಲಭ್ಯ ಇರುವ ಮಾಹಿತಿ. ಪವನ್ ಕುಮಾರ್ ಅವರಿಗೆ ಶುಭಾಶಯಗಳು.


Click it and Unblock the Notifications











