ಯಾರಿಗೂ ಟಾಂಗ್ ಕೊಡಲಿಲ್ಲ. ಕೆ. ಎಲ್ ರಾಹುಲ್ ಬ್ಯಾಟ್ ನೆಲಕ್ಕೆ ಗುದ್ದಿ ಅಬ್ಬರಿಸಿದ್ದಕ್ಕೆ ಕಾರಣ 'ಕಾಂತಾರ' ಸಿನಿಮಾ.
ಕೆ ಎಲ್ ರಾಹುಲ್ ಹೆಮ್ಮೆಯ ಕನ್ನಡಿಗ. ಆದರೆ ಹಿತ್ತಲ ಗಿಡ ಮದ್ದಲ್ಲ. ಪ್ರತಿಭಾವಂತ ರಾಹುಲ್ ಗೆ ಮಣೆ ಹಾಕುವ ಬದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕುಲಗೋತ್ರ ಗೊತ್ತಿರದವರನ್ನೆಲ್ಲ ಕರೆದುಕೊಂಡು ಬಂದಿದೆ. ಅವಕಾಶವನ್ನು ನೀಡಿದೆ. ತವರು ತಂಡಕ್ಕೆ ಆಡುವ ಅವಕಾಶದಿಂದ ವಂಚಿತರಾದ ಹಿನ್ನೆಲೆ ಸಹಜವಾಗಿ ಕೆ ಎಲ್ ರಾಹುಲ್ ಅವರಿಗೆ ಅಸಮಾಧಾನ ಇದ್ದೇ ಇದೆ.
ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ದೆಹಲಿ ಪರವಾಗಿ ಅಬ್ಬರಿಸಿ ಬೊಬ್ಬಿರಿದ ನಂತರ ಎಳೆದ ವೃತ್ತ ಆ ನಂತರ ಸಂಭ್ರಮಿಸಿದ ರೀತಿಯೇ ಇದಕ್ಕೆ ಕೈಗನ್ನಡಿ.

ಹಾಗಂಥ ಕೆ ಎಲ್ ರಾಹುಲ್ ಗೆ ಯಾರ ಮೇಲೂ ದ್ವೇಷ ಇಲ್ಲ. ತನ್ನನ್ನೂ ಕಡೆಗಣಿಸಿದ ಕೋಪ ಇರಬಹುದಷ್ಟೇ. ಆದರೆ ಅನೇಕರು ಕೆ.ಎಲ್.ರಾಹುಲ್ ಅದ್ಯಾರಿಗೋ ಟಾಂಗ್ ಕೊಟ್ಟರು ಎಂದು ಹುಯಿಲೆಬ್ಬಿಸಿದ್ದಾರೆ. ಬೆಂಗಳೂರಿನ ದತ್ತು ಮಗ ವಿರಾಟ್ ಕೊಹ್ಲಿ ಮತ್ತು ಮನೆ ಮಗ ರಾಹುಲ್ ನಡುವೆ ತಂದಿಡುವ ಪ್ರಯತ್ನ ಮಾಡುತ್ತಿದ್ದಾರೆ.
ಇದರ ನಡುವೆ ಕೆ.ಎಲ್ ರಾಹುಲ್ ಸಂಭ್ರಮಾಚರಣೆಗೆ ರಿಷಬ್ ಶೆಟ್ಟಿಯ ಕ್ಲಾಸಿಕ್ ಚಿತ್ರ ಕಾಂತಾರ ಚಿತ್ರ ಕಾರಣ ಎನ್ನುವ ವಿಚಾರ ಜಗಜ್ಜಾಹೀರಾಗಿದೆ. ಖುದ್ದು ರಾಹುಲ್ ಈ ವಿಚಾರ ಹೇಳಿದ್ದಾರೆ.
ಹೌದು ತಮ್ಮ ಸಂಭ್ರಮಾಚರಣೆಯ ಕುರಿತು ಪಂದ್ಯ ಮುಕ್ತಾಯವಾದ ನಂತರ ಈ ಕುರಿತು ಮಾತನಾಡಿರುವ ಕೆಎಲ್ ರಾಹುಲ್, ಕಾಂತಾರ ನನ್ನ ಅಚ್ಚು ಮೆಚ್ಚಿನ ಚಿತ್ರ ಆ ಚಿತ್ರದಲ್ಲಿ ರಿಷಬ್ ಶೆಟ್ಟಿಯವರು ಕೊನೆಯ ಸನ್ನಿವೇಶದಲ್ಲಿ ಇದು ನನ್ನ ಜನರಿಗೆ ಸೇರಿದ ನೆಲ, ಇದು ನನ್ನ ಜಾಗ ಎಂದು ಹೇಳಿದ್ದರು. ಅದೇ ರೀತಿ ನಾನು ಕೂಡ ಇದು ನನ್ನ ನೆಲ ಎಂಬ ಸಂದೇಶ ಸಾರುವುದಕ್ಕೆ ಆ ರೀತಿಯ ಸಂಭ್ರಮಾಚರಣೆ ಮಾಡಿರುವುದಾಗಿ ಹೇಳಿದ್ದಾರೆ. ಚಿನ್ನಸ್ವಾಮಿ ನನ್ನ ನೆಚ್ಚಿನ ಕ್ರೀಡಾಂಗಣ, ಕಾಂತಾರ ನನ್ನ ನೆಚ್ಚಿನ ಸಿನಿಮಾ ಹೀಗಾಗಿ ನಾನು ಆ ರೀತಿ ಸೆಲೆಬ್ರೇಷನ್ ಮಾಡಿದೆ ಎಂದು ಕೂಡ ಕೆ.ಎಲ್.ರಾಹುಲ್ ಹೇಳಿದ್ದಾರೆ.
ಅಂದ್ಹಾಗೇ ನಿನ್ನೆ ನಡೆದ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 93 ರನ್ ಬಾರಿಸಿದ್ದರು. ಔಟಾಗದೇ ಅಜೇಯರಾಗಿ ಉಳಿದರು. ಈ ಮೂಲಕ ಅಂಕ ಪಟ್ಟಿಯಲ್ಲಿ ದೆಹಲಿ ತಂಡವನ್ನು ಎರಡನೇ ಸ್ಥಾನಕ್ಕೇರಿಸುವಲ್ಲಿ ನೆರವಾದರು. ಇನ್ನು
ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭವನ್ನು ಕಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಗೆಲ್ಲುವುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ ಕೆಎಲ್ ರಾಹುಲ್ ಆ ನಂತರ ಪಂದ್ಯದ ದಿಕ್ಕನ್ನು ಬದಲಿಸಿದರು. ಇನ್ನು ಕೇವಲ 7 ರನ್ ಗಳಿಸಿದ್ದಾಗ ಕಎಲ್ ರಾಹುಲ್ ಆಕಾಶದೆತ್ತರಕ್ಕೆ ಹೊಡೆದ ಚೆಂಡನ್ನು ಹಿಡಿಯುವಲ್ಲಿ ಆರ್ಸಿಬಿ ವಿಫಲವಾಯಿತು.
ಈ ಕುರಿತು ಕೂಡ ಪಂದ್ಯ ಮುಗಿದ ನಂತರ ಮಾತನಾಡಿದ್ದ ಕೆಎಲ್ ರಾಹುಲ್ ಅದೃಷ್ಟ ನನ್ನ ಪರವಾಗಿ ಇತ್ತು, ನನ್ನ ನೆಲ, ನನ್ನ ಊರು, ಎಲ್ಲರಿಗಿಂತ ಹೆಚ್ಚು ಇಲ್ಲಿನ ವಾತಾವರಣ ಪರಿಸ್ಥಿತಿಯ ಬಗ್ಗೆ ನನಗೆ ಗೊತ್ತಿತ್ತು ಎಂದು ಹೇಳಿದ್ದ ಕೆಎಲ್ ರಾಹುಲ್ ಯಾರು ಎಲ್ಲಿ ಹೇಗೆ ಔಟಾದರು ಎಂದು ನಾನು ವಿಕೆಟ್ ಹಿಂದೆ ನಿಂತು ಗಮನಿಸುತ್ತಿದ್ದೆ ಅದ್ರಂತೆಯೇ ಆಡವಾಡುವ ಪ್ರಯತ್ನ ಮಾಡಿದೆ ಎಂದು ಹೇಳಿದ್ದರು.
ಮತ್ತೊಂದು ಕಡೆ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುತ್ತಿದ್ದಂತೆಯೇ ಸಂಭ್ರಮಿಸಿದ್ದ ಕೆಎಲ್ ರಾಹುಲ್ ಪತ್ನಿ ಆಥಿಯಾ ಶೆಟ್ಟಿ, ಕೆಎಲ್ ರಾಹುಲ್ ಬ್ಯಾಟ್ ಎತ್ತಿ ಸಂಭ್ರಮ ಪಡುತ್ತಿರುವ ಫೋಟೊ ಹಂಚಿಕೊಂಡಿದ್ದರು. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಉಫ್ ಈ ವ್ಯಕ್ತಿ ಎಂದು ಬರೆದುಕೊಂಡಿದ್ದರು.


Click it and Unblock the Notifications











