ಪೂಜಾಗಾಂಧಿ 'ಮುತ್ತುಲಕ್ಷ್ಮಿ'ಯ ಅಸಲಿ ಕಥೆ ಏನು?
ಈಗಾಗಲೆ ಮುತ್ತುಲಕ್ಷ್ಮಿ ಬಗ್ಗೆ ನಿರ್ದೇಶಕ ಎಎಂಆರ್ ರಮೇಶ್ ಅವರು ತಮ್ಮ ಅಟ್ಟಹಾಸ ಚಿತ್ರದಲ್ಲಿ ಬೆಳಕು ಚೆಲ್ಲಿದ್ದಾರೆ. ಆದರೆ ಆ ಚಿತ್ರದ ಮೇಲೆ ಮುತ್ತುಲಕ್ಷ್ಮಿ ಕೋರ್ಟ್ ಮೆಟ್ಟಿಲೇರಿದ್ದರು. ನನ್ನ ಗಂಡ ವೀರಪ್ಪನ್ ಮತ್ತು ನನ್ನನ್ನು ಕೆಟ್ಟದಾಗಿ ಬಿಂಬಿಸುತ್ತಿರುವ 'ಅಟ್ಟಹಾಸ' ಸಿನಿಮಾದ ಮೇಲೆ ನಿಷೇಧ ಹೇರಬೇಕು ಎಂದು ಆರೋಪಿಸಿದ್ದರು.
ಈಗ ಮುತ್ತುಲಕ್ಷ್ಮಿ ಕುರಿತ ಅದೇ ಹೆಸರಿನ ಚಿತ್ರ ಸೆಟ್ಟೇರಿದೆ. ಈ ಚಿತ್ರವನ್ನು ಪೂಜಾಗಾಂಧಿ ನಿರ್ಮಿಸುವುದರ ಜೊತೆಗೆ ನಟಿಸುತ್ತಿದ್ದಾರೆ. ಚಿತ್ರದ ಅಡಿಬರಹ "w/o ವೀರಪ್ಪನ್" ಎಂಬುದು. ಎಎಂಆರ್ ರಮೇಶ್ ಅವರು 'ಅಟ್ಟಹಾಸ' ಚಿತ್ರ ತೆಗೆಯಬೇಕಾದರೆ ಚಿತ್ರದ ಬಗ್ಗೆ ಮುತ್ತುಲಕ್ಷ್ಮಿ ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದರು. [ಅಟ್ಟಹಾಸ : ನಿಸ್ಸಂದೇಹವಾಗಿ ಒಳ್ಳೆ ಸಿನಿಮಾ]
ಈ ಬಾರಿ ಪೂಜಾಗಾಂಧಿ ಅವರು ಸ್ವತಃ ಮುತ್ತುಲಕ್ಷ್ಮಿ ಅವರನ್ನು ಸಂಪರ್ಕಿಸಿ ಅವರ ಒಪ್ಪಿಗೆ ತೆಗೆದುಕೊಂಡು, ಚಿತ್ರದಲ್ಲಿ ಅವರಿಗೂ ಪಾತ್ರ ನೀಡಿ ಮುತ್ತುಲಕ್ಷ್ಮಿಯನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಕೆಲವು ಸನ್ನಿವೇಶಗಳಲ್ಲಿ ಮುತ್ತುಲಕ್ಷ್ಮಿ ಕಾಣಿಸಿಕೊಳ್ಳಲಿದ್ದಾರೆ. ಮುತ್ತುಲಕ್ಷ್ಮಿ ಇನ್ನಷ್ಟು ವಿವರಗಳು ಸ್ಲೈಡ್ ನಲ್ಲಿ...

ಮುತ್ತುಲಕ್ಷ್ಮಿ ಕುರಿತ ಅಸಲಿ ಕಥೆ ಇದು
ಈ ಚಿತ್ರವನ್ನು ಪೂಜಾಗಾಂಧಿ ಪ್ರೊಡಕ್ಷನ್ ನಲ್ಲಿ ವಿಜಯನಾಯಕ್ ಅವರು ನಿರ್ಮಿಸುತ್ತಿದ್ದಾರೆ. ಇದುವರೆಗೂ ಮುತ್ತುಲಕ್ಷ್ಮಿ ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಆದರೆ ತಮ್ಮ ಚಿತ್ರದಲ್ಲಿ ಮುತ್ತುಲಕ್ಷ್ಮಿ ಕುರಿತ ಅಸಲಿ ಕಥೆ ಇರುತ್ತದೆ ಎಂದಿದ್ದಾರೆ.

ಅಟ್ಟಹಾಸ ಚಿತ್ರದಲ್ಲಿ ಕೆಟ್ಟದಾಗಿ ಬಿಂಬಿಸಲಾಗಿತ್ತು
ಎಎಂಆರ್ ರಮೇಶ್ ಅವರ 'ಅಟ್ಟಹಾಸ' ಚಿತ್ರದಲ್ಲಿ ಕೆಲವು ಸನ್ನಿವೇಶಗಳನ್ನು ತಪ್ಪಾಗಿ ತೋರಿಸಲಾಗಿದೆ. ಇವೆಲ್ಲಕ್ಕೂ 'ಮುತ್ತುಲಕ್ಷ್ಮಿ' ಚಿತ್ರದಲ್ಲಿ ಉತ್ತರ ಸಿಗಲಿದೆ ಎನ್ನುತ್ತಾರೆ ಸ್ವತಃ ಮುತ್ತುಲಕ್ಷ್ಮಿ.

ಮುತ್ತುಲಕ್ಷ್ಮಿ ಇನ್ನೊಂದು ಮುಖ ಅನಾವರಣ
ಚಿತ್ರದ ನಿರ್ದೇಶಕ ಜಗ್ಗಿ ಜೊತೆಗೆ ಏಳು ಗಂಟೆಗಳ ಕಾಲ ನಿರಂತರಾಗಿ ಹಲವಾರು ವಿಷಯಗಳನ್ನು ಚರ್ಚಿಸಿ ಈಗ ತೆರೆಗೆ ತರಲಾಗುತ್ತಿದೆ. ಮುತ್ತುಲಕ್ಷ್ಮಿಯ ಇನ್ನೊಂದು ಮುಖ ಚಿತ್ರದಲ್ಲಿ ಅನಾವರಣಗೊಳ್ಳಲಿದೆ.

ಇಷ್ಟು ವರ್ಷಗಳ ಕಾಲ ಮುಚ್ಚಿಟ್ಟಿದ್ದ ಸತ್ಯ
ಚಿತ್ರದಲ್ಲಿ ತಮ್ಮ ಅಸಲಿ ಕಥೆಯನ್ನು ನಿರೀಕ್ಷಿಸಬಹುದು ಎನ್ನುತ್ತಾರೆ ಮುತ್ತುಲಕ್ಷ್ಮಿ. ಇಷ್ಟು ವರ್ಷಗಳ ಕಾಲ ಮುಚ್ಚಿಟ್ಟಿದ್ದ ಸತ್ಯಗಳನ್ನು ಈ ಚಿತ್ರದಲ್ಲಿ ಅನಾವರಣಗೊಳಿಸುತ್ತಿದ್ದೇನೆ ಎಂದಿದ್ದಾರೆ ವೀರಪ್ಪನ್ ಪತ್ನಿ.

ವೀರಪ್ಪನ್ ಗೆ ಈ ರೀತಿ ಆಗುತ್ತದೆ ಎಂದುಕೊಂಡಿರಲಿಲ್ಲ
ವೀರಪ್ಪನ್ ಈ ರೀತಿ ಆಗುತ್ತಾನೆ ಎಂದು ನಾನು ಕನಸುಮನಸಿನಲ್ಲೂ ಊಹಿಸಿರಲಿಲ್ಲ. ವೀರಪ್ಪನ್ ಜೊತೆಗೆ ಮೂರು ವರ್ಷಗಳಿಗೂ ಅಧಿಕ ಕಾಲ ಜೀವಿಸಿದೆ. ಇದರ ಪ್ರತಿಫಲವಾಗಿ ಇಬ್ಬರು ಮಕ್ಕಳಿದ್ದಾರೆ.

ನನ್ನ ಜೀವನದಲ್ಲಿ ನಡೆದ ಅತಿದೊಡ್ಡ ದುರಂತ
ನನ್ನ ಜೀವನದಲ್ಲಿ ನಡೆದ ಅತಿದೊಡ್ಡ ದುರಂತ ಎಂದರೆ, ಕಾಡ್ಗಿಚ್ಚಿನಲ್ಲಿ ಸಿಕ್ಕಿ ಬಿದ್ದಾಗ ಯಾರೊಬ್ಬರೂ ನನ್ನನ್ನು ರಕ್ಷಿಸಲು ಬರಲಿಲ್ಲ. ಅಲ್ಲಿಂದ ಬದುಕಿ ಬಂದಮೇಲೆ ಜೀವನ ನಿಜಕ್ಕೂ ನರಕಸದೃಶ್ಯವಾಯಿತು.

ರಾಜ್ ಕುಮಾರ್ ಕಿಡ್ನಾಪ್ ನಿದರ್ಶನ ಇರಲ್ಲ
ತಮ್ಮ ಚಿತ್ರದಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ಕಿಡ್ನಾಪ್ ಕಥೆ ಸೇರಿದಂತೆ ಉಳಿದ ಅಂಶಗಳಿರುವುದಿಲ್ಲ. ಈ ಚಿತ್ರವನ್ನು ಯಾವುದೇ ಕಮರ್ಷಿಯಲ್ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೆಗೆಯುತ್ತಿಲ್ಲ. ಸತ್ಯ ಏನು ಎಂಬುದನ್ನು ಜನಕ್ಕೆ ತಿಳಿಸಬೇಕಾಗಿದೆ.

ಮಹಿಳೆಯೊಬ್ಬಳ ದುರಂತ ಕಥೆ
ಮಹಿಳೆಯೊಬ್ಬಳ ಬಾಳಿನಲ್ಲಿ ನಡೆದ ಘಟನೆಗಳು ಏನೆಲ್ಲಾ ದುರಂತಕ್ಕೆ ಕಾರಣವಾದವು ಎಂಬುದನ್ನು ಹೇಳಲು ಹೊರಟಿದ್ದೇವೆ. ಇದಕ್ಕೆಲ್ಲಾ ಯಾರು ಕಾರಣರಾದರು, ಮಹಿಳೆಯೊಬ್ಬಳು ಎದುರಿಸಿದ ಕಷ್ಟಗಳ ಸರಮಾಲೆಯೇ ಮುತ್ತುಲಕ್ಷ್ಮಿ. ಅಂದಹಾಗೆ ಇದೊಂದು ತ್ರಿಭಾಷಾ ಚಿತ್ರ. ಕನ್ನಡ, ತೆಲುಗು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ.


Click it and Unblock the Notifications











