"ಕನ್ನಡ ಇಂಡಸ್ಟ್ರಿ ಬಿಟ್ಟು ಹೋಗಲ್ಲ": ಬಾಲಿವುಡ್ ಅವಕಾಶ ತಿರಸ್ಕರಿಸಿದ ಝೈದ್ ಖಾನ್!
'ಬನಾರಸ್' ಸಿನಿಮಾ ಮೂಲಕ ಯುವ ನಟ ಝೈದ್ ಖಾನ್ ಚಿತ್ರರಂಗ ಪ್ರವೇಶಿಸಿದ್ದರು. ಕೆಲವರು ಝೈದ್ ಬಾಲಿವುಡ್ಗೆ ಹೇಳಿಮಾಡಿಸಿದ ನಟ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಹಿಂದಿ ಸಿನಿಮಾ ಅವಕಾಶವನ್ನು ಯುವ ನಟನ ತಿರಸ್ಕರಿಸಿದ್ದಾರೆ.
ಜಯತೀರ್ಥ ನಿರ್ದೇಶನದ 'ಬನಾರಸ್' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಆಗಿತ್ತು. ರೊಮ್ಯಾಂಟಿಕ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಝೈದ್ ಖಾನ್ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿತ್ತು. ಬಹಳ ವರ್ಷಗಳಿಂದ ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಚಿತ್ರರಂಗಕ್ಕೆ ಬರುವ ಬಗ್ಗೆ ಚರ್ಚೆ ನಡೀತಿತ್ತು. ನೇರವಾಗಿ ಅವರು ಬಾಲಿವುಡ್ಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗಿತ್ತು. ಹೀರೊ ಆಗೋಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಝೈದ್ 'ಬನಾರಸ್' ಚಿತ್ರದಲ್ಲಿ ನಟಿಸಿದ್ದರು.
ಹೆಚ್ಚು ಬಿಲ್ಡಪ್ ಇಲ್ಲದೇ ಸೀದಾ ಸಾದಾ ಹುಡುಗನಾಗಿ 'ಬನಾರಸ್' ಚಿತ್ರದಲ್ಲಿ ಝೈದ್ ಮಿಂಚಿದ್ದರು. ನಟನೆ ವಿಚಾರಕ್ಕೆ ಬಂದರೆ ಇದು ಅವರ ಮೊದಲ ಸಿನಿಮಾ ಅನ್ನಿಸಲೇ ಇಲ್ಲ. ನಾಯಕಿಯಾಗಿ ಸೋನಲ್ ಮಂತೆರೋ ಸಾಥ್ ಕೊಟ್ಟಿದ್ದರು. ಮೊದಲ ಪ್ರಯತ್ನದಲ್ಲಿ ಒಂದು ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಟೈಮ್ ಟ್ರಾವೆಲಿಂಗ್ ಕಥೆ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಿತ್ತು.

ಬಾಲಿವುಡ್ ಅವಕಾಶ ತಿರಸ್ಕರಿಸಿದ ಝೈದ್
'ಬನಾರಸ್' ಸಿನಿಮಾ ಅಷ್ಟಾಗಿ ಸದ್ದು ಮಾಡದೇ ಇದ್ದರೂ ಝೈದ್ ಭರವಸೆಯ ನಟನಾಗುವ ಸುಳಿವು ನೀಡಿದ್ದಾರೆ. ಇದೆಲ್ಲದರ ಮಧ್ಯೆ ಬಾಲಿವುಡ್ ನಿರ್ದೇಶಕರೊಬ್ಬರು ಝೈದ್ ಖಾನ್ ಹೀರೊ ಮಾಡಿ ಹಿಂದಿ ಸಿನಿಮಾ ಮಾಡಲು ಬಂದಿದ್ದರಂತೆ. ಕಥೆ ಕೇಳಿ ನಟಿಸೋಕೆ ಒಪ್ಪಿದ್ದ ಯುವನಟ ಅದೊಂದು ಕಾರಣಕ್ಕೆ ಆಫರ್ ರಿಜೆಕ್ಟ್ ಮಾಡಿದ್ದಾರಂತೆ. ದೊಡ್ಡ ಬಜೆಟ್ಟಿನ ಈ ಸಿನಿಮಾ ಬಾಲಿವುಡ್ನ ಟಾಪ್ ಹೀರೊಯಿನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಆದರೂ ಕೂಡ ಝೈದ್ ಖಾನ್ ನಟಿಸೋಕೆ ನೋ ಎಂದಿದ್ದಾರಂತೆ.

ಕನ್ನಡ ಇಂಡಸ್ಟ್ರಿ ಬಿಟ್ಟು ಹೋಗಲ್ಲ
ನಿರ್ದೇಶಕರು ಹೇಳಿದ ಕಥೆ ಏನೋ ಝೈದ್ ಖಾನ್ಗೆ ಇಷ್ಟ ಆಗಿದೆ. ನಟಿಸೋಕು ಓಕೆ ಎಂದಿದ್ದಾರೆ. ಆದರೆ ಬರೀ ಹಿಂದಿಯಲ್ಲಿ ಸಿನಿಮಾ ಮಾಡಬೇಕು ಎನ್ನುವ ಕಂಡೀಷನ್ಗೆ ಜಮೀರ್ ಅಹಮದ್ ಪುತ್ರ ಒಲ್ಲೆ ಎಂದಿದ್ದಾರಂತೆ. ಕನ್ನಡ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಸಿನಿಮಾ ಮಾಡಿದರೆ ನಾನು ನಟಿಸೋಕೆ ಸಿದ್ಧ, ಬರೀ ಹಿಂದಿ ಆದರೆ ಬೇಡವೇ ಬೇಡ ಎಂದು ಝೈದ್ ಖಾನ್ ನಿರ್ದೇಶಕರಿಗೆ ಹೇಳಿ ಕಳುಹಿಸಿದ್ದಾರೆ.

ನಾನು ಗೆದ್ದಿರುವುದು ಕನ್ನಡಿಗರಿಂದ
"ನೀವು ನನ್ನನ್ನು ಅಪ್ರೋಚ್ ಮಾಡಲು ಕಾರಣವಾಗಿರುವುದು 'ಬನಾರಸ್' ಸಿನಿಮಾ. ಅದು ಪ್ರಧಾನವಾಗಿ ತಯಾರಾಗಿರುವುದು, ಗೆದ್ದಿರುವುದು ಕನ್ನಡಿಗರಿಂದ. ನಾನು ಯಾವ ಕಾರಣಕ್ಕೂ ಕನ್ನಡ ಚಿತ್ರರಂಗ ಬಿಟ್ಟು ಬರುವ ಮಾತೇಯಿಲ್ಲ" ಎಂದು ಝೈದ್ ಖಾನ್ ಹೇಳಿದ್ದಾರಂತೆ.

ಹೊಸ ಕಥೆಗಳ ಹುಡುಕಾಟ
'ಬನಾರಸ್' ನಂತರ ನಟ ಝೈದ್ ಖಾನ್ ಕನ್ನಡದಲ್ಲೇ ಹೊಸ ಕಥೆಗಳ ಹುಟುಕಾಟದಲ್ಲಿ ಬ್ಯುಸಿಯಾಗಿದ್ದಾರೆ. ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡು ನಟಿಸೋಕೆ ಮುಂದಾಗಿದ್ದಾರೆ. ಸಾಕಷ್ಟು ಜನ ನಿರ್ದೇಶಕರು ಝೈದ್ಗೆ ಕಥೆಗಳನ್ನು ಹೇಳುತ್ತಿದ್ದಾರೆ. ಶೀಘ್ರದಲ್ಲೇ 2ನೇ ಸಿನಿಮಾವನ್ನು ಕೂಡ ಘೋಷಣೆ ಮಾಡಲಿದ್ದಾರೆ.


Click it and Unblock the Notifications











