ಕರೆದರೆ ಹೆಸರ, ಕಳಿಸುವೆ ಉಸಿರ ; 'ಸಪ್ತಮಿ ಗೌಡ'ಗೆ 'ಯುವ' ಬರೆದ ಕವಿತೆ ಹೇಗಿದೆ ..?
ಯುವ ಹವಾ ಹೇಗಿದೆ ಅನ್ನುವುದಕ್ಕೆ "ಒಬ್ಬನೇ ಶಿವಾ... ಒಬ್ಬನೇ ಯುವಾ" ಹಾಡು ಅತ್ಯುತ್ತಮ ಉದಾಹರಣೆ. ಬಿಡುಗಡೆಯಾದ ದಿನದಿಂದ ಹಿಡಿದು ಇಲ್ಲಿಯವರೆಗೆ ಈ ಹಾಡು ಮಾಡಿರುವ ಸದ್ದು ಅಷ್ಟಿಷ್ಟಲ್ಲ. ದೊಡ್ಮನೆ ಅಭಿಮಾನಿಗಳಲ್ಲಿ ಅಷ್ಟೇ ಅಲ್ಲ, ಸಾಮಾನ್ಯ ಸಿನಿಪ್ರೇಮಿಗಳ ಬಾಯಲ್ಲಿಯೂ ಸುಲಲಿತವಾಗಿ ಹಾಡು ನಲಿದಾಡುತ್ತಿದೆ. ಈಗ ಈ ಹಾಡಿನ ಪ್ರಭೆಯಲ್ಲಿ ಸಂತೋಷ್ ಆನಂದ್ ರಾಮ್ ತಮ್ಮ ಚಿತ್ರದ ಎರಡನೇ ಹಾಡನ್ನ ಹೊರ ಬಿಟ್ಟಿದ್ದಾರೆ. ಸದ್ಯಕ್ಕೆ ಯುಟ್ಯೂಬ್ ನಲ್ಲಿ ಈ ಹಾಡಿನದ್ದೇ ಕಲರವ.
"ಏನೂ ಹೇಳಲಿ ನಾನು ಹೊಸ ತರ , ಏನೇ ಇದ್ದರೂ ನಿನ್ನ ನಂತರ" ಎಂಬ ಚೆಂದದ ಸಾಲುಗಳಿಂದ ಆರಂಭವಾಗುವ ಈ ಹಾಡನ್ನ 'ಸಂಜಿತ್ ಹೆಗ್ಡೆ' ಹಾಡಿದ್ದಾರೆ. ಇನ್ನೂ ಸಾಹಿತ್ಯ 'ಪ್ರಮೋದ್ ಮರವಂತೆ' ಬರೆದಿದ್ದಾರೆ. ಈ ಪ್ರಮೋದ್ ಬೇರೆ ಯಾರು ಅಲ್ಲ ಬದಲಿಗೆ 'ಸಿಂಗಾರ ಸಿರಿಯೇ' ಹಾಡಿನ ಮೂಲಕ ಸಂಚಲನ ಸೃಷ್ಟಿಸಿದವರು ಅನ್ನುವುದು ನಿಮ್ಮ ಗಮನಕ್ಕಿರಲಿ. 'ಅಜನೀಶ್ ಲೋಕನಾಥ್' ಸಂಗೀತ ಈ ಹಾಡಿನ ಇನ್ನೊಂದು ಶಕ್ತಿ

ಇನ್ನೂ ಮೊದಲ ಹಾಡಿನಲ್ಲಿ 'ಮಾಸ್' ಆಡಿಯನ್ಸ್ ನ ಹುಚ್ಚೆದ್ದು ಕುಣಿಸಿದ್ದ ಯುವ, ಈ ಹಾಡಿನಲ್ಲಿ 'ಕ್ಲಾಸ್' ಹೃದಯಗಳಿಗೆ ಕನ್ನ ಹಾಕಿದ್ದಾರೆ. ಮಾಸ್ ಗೂ ಜೈ ಕ್ಲಾಸಿಗೂ ಸೈ ಎಂಬ ಸಂದೇಶವನ್ನೂ 'ಯುವ' ಚಿತ್ರದ ಈ ಹಾಡಿನ ಮೂಲಕ ರವಾನೆ ಮಾಡಿದ್ದಾರೆ 'ಯುವ'.
ಅಜನೀಶ್ ಲೋಕನಾಥ್ 'ಸಂಗೀತ', 'ಪ್ರಮೋದ್ ಮರವಂತೆ 'ಸಾಹಿತ್ಯ' ಹಾಗೂ ಸಂಜಿತ್ ಹೆಗ್ಡೆಯ ಚಿನ್ನದ 'ಕಂಠ'ದ ಜೊತೆ ಹಾಡಲ್ಲಿ 'ಯುವರಾಜ್ ಕುಮಾರ್' ಹಾಗೂ 'ಸಪ್ತಮಿ ಗೌಡ' ಅವರನ್ನ ನೋಡುವುದೇ 'ಹಿತವಾದ ಅನುಭವ'. ಯಾಕೆಂದರೆ ಈ ಹಾಡು 'ನೂರು ಭಾವ ಸೇರಿ' ಮೂಡಿ ಬಂದಿದೆ. ಹೀಗಾಗಿಯೇ ಚಿತ್ರದ ಬಿಡುಗಡೆ ತಡವಾಗಿದ್ದಕ್ಕೆ ಅಭಿಮಾನಿಗಳಲ್ಲಿದ್ದ' ನವಿರಾದ ಮುನಿಸನ್ನ' ಈ ಹಾಡು ಮರೆಸಿದೆ. ಅಭಿಮಾನಿಗಳ 'ಹೃದಯ'ವನ್ನೂ ಗೆಲ್ತಿದೆ
ಇನ್ನೂ 'ಯುವ' ಚಿತ್ರದ ಈ ನವನವೀನ ಹಾಡನ್ನ ನೋಡಿದ ನಂತರ ಅನೇಕರು, ಪವರ್ ಸ್ಟಾರ್ 'ಪುನೀತ್ ರಾಜ್ ಕುಮಾರ್' ಅಭಿನಯಿಸಿದ್ದ 'ಜಾಕಿ' ಚಿತ್ರದ 'ಎರಡು ಜಡೆಯನ್ನು ಎಳೆದು ಕೇಳುವೆನು' ಹಾಡನ್ನ ನೆನಪು ಮಾಡಿಕೊಳ್ತಿದ್ದಾರೆ. ಅದಕ್ಕೆ 'ಅಪ್ಪು' ಅವರಲ್ಲಿ ಇದ್ದಂತೆ ಯುವ ಅವರಲ್ಲಿರುವ 'ಮುಗ್ದತೆ' ಕಾರಣಾನಾ ಅಥವಾ 'ಹಾವ ಭಾವ' ಕಾರಣಾನಾ ಗೊತ್ತಿಲ್ಲ. ಒಟ್ಟಿನಲ್ಲಿ ಎಷ್ಟೇ ಆದರೂ ಯುವರಾಜ್ ಕುಮಾರ್ ಅಪ್ಪು ಅವರ 'ಉತ್ತರಾಧಿಕಾರಿ' ಅಲ್ಲವೇ ಅನ್ನುವ ಅಭಿಪ್ರಾಯ ಸದ್ಯಕ್ಕೆ ವ್ಯಕ್ತವಾಗ್ತಿದೆ.

ಉಳಿದಂತೆ 'ಕಾಂತಾರ' ಚಿತ್ರದ ಮೂಲಕ ಕೇವಲ ಕನ್ನಡಿಗರ ಹೃದಯವನ್ನಷ್ಟೇ ಅಲ್ಲ ಅಖಂಡ ಭಾರದೆಲ್ಲೆಡೆ ಮನೆ ಮಾತಾದ 'ಸಪ್ತಮಿ ಗೌಡ', ಯುವ ಚಿತ್ರದ ಮೂಲಕ ಇನ್ನೊಂದು ಮೆಟ್ಟಿಲನ್ನೇರಲಿದ್ದಾರೆ ಅನ್ನುವ ಸುಳಿವನ್ನೂ ಈ ಹಾಡು ನೀಡ್ತಿದೆ. ಅಷ್ಟರ ಮಟ್ಟಿಗೆ ಹಾಡು ಕಣ್ಮನ ಸೆಳೆಯುವಂತೆ ಇದೆ. ಚಿತ್ರದ ಮೇಲಿನ ಭರವಸೆಯನ್ನೂ ಹಾಡು ಹೆಚ್ಚಿಸಿದೆ.
ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಮೂಲಕ ಸಿದ್ಧವಾಗಿರುವ 'ಯುವ' ಚಿತ್ರಕ್ಕೆ ಅಭಿಮಾನಿ ಬಳಗ ಜಾತಕ ಪಕ್ಷಿಯಂತೆ ಕಾಯುತ್ತಿದೆ. 'ನಗುವುದ ಕಲಿಸಿದ ಮಗುವಿನ ಮನಸನ್ನ' ಹೊಂದಿದ್ದ ಅಪ್ಪು ಅವರನ್ನ ನೆನೆಯುತ್ತಾ ಯುವ ರಾಜ್ ಕುಮಾರ್ ಅವರಿಗೆ ಭವ್ಯವಾದ 'ಸ್ವಾಗತ' ಕೋರಲು ತುದಿಗಾಲಿನಲ್ಲಿ ನಿಂತಿದೆ.
ಒಟ್ಟಿನಲ್ಲಿ ಯುವ ಚಿತ್ರದ ಎರಡನೇ ಹಾಡು ಸದ್ಯಕ್ಕೆ ಬಿಡುಗಡೆಯಾಗಿದೆ. ಟ್ರೆಂಡಿಂಗ್ ನಲ್ಲಿಯೂ ಇದೆ. ನೀವೆಲ್ಲ ಹರಸಿ ಹಾರೈಸುತ್ತೀರಾ ಎನ್ನುವ ನಿರೀಕ್ಷೆ ದೊಡ್ಮನೆಗೆ ಇದೆ. ಅಪ್ಪು ಆಶಿರ್ವಾದ ಯುವ ಮೇಲಿದೆ. ನೆನಪಿರಲಿ ಚಿತ್ರ ಇದೇ ಮಾರ್ಚ್ 29ಕ್ಕೆ ಬಿಡುಗಡೆಯಾಗಲಿದೆ.


Click it and Unblock the Notifications











