ಇನ್ನು 20 ದಿನ ದರ್ಶನ್ಗೆ ಯಾವುದೇ ಭಯ ಇಲ್ಲ..!
ಪರಪ್ಪನ ಅಗ್ರಹಾರದಿಂದ ಮುಕ್ತಿಯನ್ನು ಪಡೆದು ಸದ್ಯ ದರ್ಶನ್ ತಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ವಹಿಸಿದ್ದಾರೆ. ಪತ್ನಿಯ ಜೊತೆ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ದಾರೆ. ಕಳೆದ ವರ್ಷ ನಡೆದ ಕಹಿಯನ್ನೆಲ್ಲ ಮರೆತು ಮನೆ-ಮಗ-ಸಂಸಾರ-ಎಂದು ಓಡಾಡಿಕೊಂಡು ಇದ್ದಾರೆ. ರಾಜಸ್ಥಾನದಲ್ಲಿ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಕೂಡ ಭಾಗವಹಿಸಿದ್ದಾರೆ.ಚಿತ್ರೀಕರಣ ಮುಗಿಸಿಕೊಂಡು ಮರಳಿ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ ಎನ್ನುವ ಸುದ್ದಿ ಕೂಡ ಇದೆ.
ಹಾಗಂಥ ಸಮಸ್ಯೆ ಬಗೆಹರಿಯಿತು ಅಂತಲ್ಲ. ಯಾಕೆಂದರೆ.. ದರ್ಶನ್ಗೆ ನೀಡಿರುವ ಜಾಮೀನು ರದ್ದು ಮಾಡಬೇಕೆಂದು ಕೋರಿ ಖಾಕಿ ಪಡೆ ಸುಪ್ರೀಂ ಕೋರ್ಟ್ನ ಮೆಟ್ಟಿಲನ್ನೇರಿದೆ.ಇದರಿಂದ ದರ್ಶನ್ ಜಾಮೀನು ರದ್ದು ಮಾಡಲು ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಮನವಿ ಮಾಡಿದ್ದು ಎ 1 ಪವಿತ್ರಾ ಗೌಡ, ಎ 2 ದರ್ಶನ್, ಎ 6 ಜಗದೀಶ್, ಎ 7 ಅನುಕುಮಾರ್, ಎ 11 ನಾಗರಾಜ್, ಎ 12 ಎಂ ಲಕ್ಷ್ಮಣ್ ಮತ್ತು ಎ 14 ಪ್ರದೋಷ್ ಗೆ ಮತ್ತೆ ಡವ ಡವ ಶುರುವಾಗಿದೆ.

ಇನ್ನು, ದರ್ಶನ್ಗೆ ಹೈಕೋರ್ಟ್ ಅವಸರ ಅವಸರವಾಗಿ ಜಾಮೀನು ನೀಡಿದೆ. ದರ್ಶನ್ ಒಬ್ಬ ಹೀರೋ ಎನ್ನುವುದನ್ನು ಮಾತ್ರ ಪರಿಗಣಿಸಿ ಮಾತ್ರ ಜಾಮೀನು ನೀಡಿದೆ. ಸಾಕ್ಷ್ಯ ತಿರುಚುವ ಸಾಧ್ಯತೆಯ ಬಗ್ಗೆ ಹೈಕೋರ್ಟ್ ಪರಿಗಣಿಸಿಲ್ಲ ಎಂದು ಪ್ರಾಸಿಕ್ಯೂಷನ್ ಮನವಿಯನ್ನು ಮಾಡಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಟೆಕ್ನಿಕಲ್ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಲು ಹೈಕೋರ್ಟ್ ವಿಫಲವಾಗಿದೆ ಹೀಗಾಗಿ ಮಧ್ಯಂತರ ಪರಿಹಾರವಾಗಿ ಏಕಪಕ್ಷೀಯ ಆದೇಶ ನೀಡಬೇಕು ಎಂದು ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಅರ್ಜಿಯಲ್ಲಿ ಕೋರಿದೆ.
ದರ್ಶನ್ಗೆ ಆರು ವಾರಗಳ ಕಾಲ ಮಧ್ಯಂತರ ಬೇಲ್ ನೀಡಿದ್ದಾಗಲೂ ಕೂಡ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡಿಲ್ಲ, ದರ್ಶನ್ ಮತ್ತು ಅವರ ಸಹಚರರು ಜಾಮೀನಿಗೆ ಅರ್ಹರಲ್ಲ, ಕೇಸ್ನಲ್ಲಿ ಪ್ರಬಲ ಸಾಕ್ಷಿಗಳಿದ್ದರೂ ಕೂಡ ಹೈಕೋರ್ಟ್ ಪರಿಗಣಿಸಲು ವಿಫಲವಾಗಿದೆ ಹೀಗಾಗಿ ಜಾಮೀನು ಆದೇಶಕ್ಕೆ ತಡೆ ನೀಡುವಂತೆ ಮನವಿಯನ್ನು ಮಾಡಿದೆ.
ಹೀಗೆ ಪ್ರಾಸಿಕ್ಯೂಷನ್ ಸಲ್ಲಿಸಿದ ಆಕ್ಷೇಪಣಾ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಬೇಕಿದ್ದ ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆಯನ್ನು ಇಂದು ಮತ್ತೆ ಮುಂದೂಡಿದೆ. ಆರೋಪಿಗಳ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಸೂಚನೆಯನ್ನು ನೀಡಿರುವ ಸುಪ್ರೀಂ ಕೋರ್ಟ್ ಏಪ್ರಿಲ್ 22ರಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ. ನ್ಯಾಯಮೂರ್ತಿ ಪರ್ದೀವಾಲಾ ಮತ್ತು ನ್ಯಾಯಮೂರ್ತಿ ಮಹದೇವನ್ ಪೀಠ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.
ಇನ್ನುಳಿದಂತೆ ಈ ಮೊದಲು ಬೆಂಗಳೂರಿನ ಗಡಿಯಾಚೆ ಒಂದು ಹೆಜ್ಜೆ ಇಡಬೇಕೆಂದರೂ ಅಪ್ಪಣೆ ಪಡೆಯಬೇಕು ಎಂಬ ಷರತ್ತನ್ನೂ ನ್ಯಾಯಾಲಯ ಹಾಕಿತ್ತು. ಇದರಿಂದ ಕಂಗಾಲಾಗಿದ್ದ ದರ್ಶನ್ ಮೈಸೂರಿಗೆ ಹೋಗಬೇಕು ಅಂದರೂ ಕೂಡ ಕೋರ್ಟ್ನ ಮೊರೆ ಹೋಗಬೇಕಾಗಿತ್ತು. ನ್ಯಾಯಾಲಯದ ಅನುಮತಿಯನ್ನು ಪಡೆದ ಮೇಲೆಯೇ ಮೈಸೂರಿಗೆ ತೆರಳಬೇಕಾಗಿತ್ತು. ಆದರೆ ಈಗ ದರ್ಶನ್ ಫುಲ್ ಜಾಲಿ ಜಾಲಿ. ಯಾಕೆಂದರೆ ಈ ಷರತ್ತು ಸಡಿಲಿಕೆ ಕೋರಿ ದರ್ಶನ್ ಸಲ್ಲಿಸಿದ್ದ ಮನವಿಯನ್ನು ಕೆಲ ದಿನಗಳ ಹಿಂದೆ ನ್ಯಾಯಾಲಯ ಪುರಸ್ಕರಿಸಿತ್ತು. ದೇಶದ ಒಳಗೆ ಎಲ್ಲಿ ಬೇಕಾದರೂ ತಿರುಗಾಡಲು ದರ್ಶನ್ಗೆ ಹೈಕೋರ್ಟ್ ಅನುಮತಿಯನ್ನು ನೀಡಿತ್ತು.
ನ್ಯಾಯಾಲಯ ಅನುಮತಿ ನೀಡುತ್ತಿದ್ದಂತೆಯೇ ಕೇರಳಕ್ಕೆ ತೆರಳಿದ್ದ ದರ್ಶನ್ ಶತ್ರು ಸಂಹಾರ ಪೂಜೆಯನ್ನು ಮಾಡಿದ್ದರು. ಆ ನಂತರ ರಾಜಸ್ಥಾನಕ್ಕೆ ತೆರಳಿ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈಗ ದರ್ಶನ್ ಜಾಮೀನು ರದ್ದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ಏಪ್ರಿಲ್ 22ರವರೆಗೆ ಮುಂದೂಡಿದೆ. ಈ ಹಿನ್ನೆಲೆ ಇನ್ನು ಇಪ್ಪತ್ತು ದಿನ ದರ್ಶನ್ ಯಾವ ಭಯ ಇಲ್ಲದೇ ತಮ್ಮ ಕೆಲಸಗಳಲ್ಲಿ ಮಗ್ನರಾಗಬಹುದು.


Click it and Unblock the Notifications











