ಅಪ್ಪುಗಾಗಿ ಕಾದಿದ್ದ ಡಾ ರಾಜ್ಕುಮಾರ್ ಸಹೋದರಿ ನಾಗಮ್ಮ ನಿಧನ
ಕನ್ನಡ ಚಿತ್ರರಂಗಕ್ಕೆ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕತ, ವರನಟ, ಡಾ.ರಾಜ್ ಕುಮಾರ್ ಅವರ ಕೊಡುಗೆ ದೊಡ್ಡದು. ಕನ್ನಡ ಚಿತ್ರರಂಗದ ಹಲವು ಏಳು-ಬೀಳುಗಳಿಗೆ ಸಾಕ್ಷಿಯಾಗಿದ್ದ ರಾಜ್ ಅವರ ತಲೆಮಾರಿನ ಕೊನೆಯ ಹಿರಿಯ ಸದಸ್ಯೆಯಾಗಿದ್ದ ಅವರ ಸಹೋದರಿ ನಾಗಮ್ಮ [ 94 ವರ್ಷ] ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ದೊಡ್ಡ ಗಾಜನೂರಿನಲ್ಲಿ ಶುಕ್ರವಾರ ನಿಧನರಾದರು.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮ, ಗಾಜನೂರಿನಲ್ಲಿ ವಾಸವಾಗಿದ್ದರು. ತೋಟದ ಮನೆಯಲ್ಲಿ ಉಳಿದುಕೊಂಡಿದ್ದರು. ಐವರು ಪುತ್ರರು, ಮೂವರು ಪುತ್ರಿಯರನ್ನು ಹೊಂದಿದ್ದ ನಾಗಮ್ಮ ಅವರಿಗೆ ಪುನೀತ್ ರಾಜ್ಕುಮಾರ್ ಅವರ ಮೇಲೆ ತುಂಬಾ ಪ್ರೀತಿ ಇತ್ತು.

ದೊಡ್ಮನೆಯ ಹುಡುಗ ಪುನೀತ್ ರಾಜ್ ಕುಮಾರ್ ಅಗಲಿರುವ ವಿಚಾರವನ್ನು ಮೂರುವರೆ ವರ್ಷಗಳಾದರು ಅರಿಯದಿದ್ದ ನಾಗಮ್ಮ, ತನ್ನ ನೆಚ್ಚಿನ ಪುನೀತ್ ಅವರನ್ನು ನೋಡಲು ಕಾಯುತ್ತಿದ್ದರು. ನೋಡಬೇಕೆಂಬ ಆಸೆಯನ್ನು ಕೂಡ ಹಲವು ಬಾರಿ ವ್ಯಕ್ತಪಡಿಸಿದ್ದರು.
ಪುನೀತ್ ರಾಜ್ ಕುಮಾರ್ ನಮ್ಮ ನಡುವೆ ಇದ್ದಾರೆ ಎಂದುಕೊಂಡೇ ಮೂರು ವರ್ಷದ ಹಿಂದೆ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದೆ ನಾಗಮ್ಮ ಆ ನಂತರ ಅಪ್ಪು ನಿರ್ಮಾಣದಡಿ ಸಿದ್ಧವಾದ 'ಗಂಧದಗುಡಿ' ಸಾಕ್ಷ್ಯಚಿತ್ರವನ್ನು ನೋಡುವ ಆಸೆಯನ್ನು ಕೂಡ ವ್ಯಕ್ತಪಡಿಸಿದ್ದರು. ರಾಜ್ 'ಗಂಧದ ಗುಡಿ'ಯಂತೆ ಅಪ್ಪು 'ಗಂಧದಗುಡಿ' ಯಶಸ್ವಿಯಾಗಲಿ ಎಂದು ಹಾರೈಸಿದ್ದರು.
ಇನ್ನು ನಾಲ್ಕೈದು ತಿಂಗಳ ಹಿಂದೆ ಗಾಜನೂರಿಗೆ ಹೋಗಿದ್ದ ಯೂಟ್ಯೂಬರ್ ಒಬ್ಬರ ಜೊತೆ ಮಾತನಾಡಿದ್ದ ನಾಗಮ್ಮ,'ಅಪ್ಪು ಕಂದ ಒಮ್ಮೆ ಬಂದು ನನ್ನನ್ನು ನೋಡಿಕೊಂಡು ಹೋಗು' ಎಂದಿದ್ದರು.
ನಾಗಮ್ಮ ಮೇಲೆ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿ ದೊಡ್ಮನೆಯ ಎಲ್ಲ ಸದಸ್ಯರಿಗೆ ಅಪಾರವಾದ ಪ್ರೀತಿ ಇತ್ತು.ಗಾಜನೂರಿಗೆ ಹೋದಾಗಲೆಲ್ಲ ನಾಗಮ್ಮ ಅವರನ್ನು ಭೇಟಿ ಆಗಿ, ದೊಡ್ಮನೆಯ ಸದಸ್ಯರು ಆಶೀರ್ವಾದ ಪಡದು ಬರುತ್ತಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಶಿವಣ್ಣ ಗಾಜನೂರಿಗೆ ಹೋದಾಗ ಕೈ ಹಿಡಿದುಕೊಂಡು ಭವಿಷ್ಯ ಹೇಳಿದ್ದರು. ಕೆನ್ನೆಗೆ ಮುತ್ತು ಕೊಟ್ಟು ಹರಸಿದ್ದರು.
ಅಪ್ಪು ಅಗಲಿರುವ ವಿಚಾರವನ್ನು ನಾಗಮ್ಮ ಅವರಿಂದ ಮುಚ್ಚಿಟ್ಟಿದ್ದ ಕುರಿತು ನಾಲ್ಕು ತಿಂಗಳ ಹಿಂದೆಯಷ್ಟೇ ''ಪವರ್ ಟಿವಿ''ಗೆ ನೀಡಿದ್ದ ಸಂದರ್ಶನಲ್ಲಿ ಮಾತನಾಡಿದ್ದ ಶಿವಣ್ಣ, ನಾಗತ್ತೆಗೆ ಈಗ 93 ವರ್ಷ ಅಪ್ಪು ಅಗಲಿ ಮೂರು ನಾಲ್ಕು ವರ್ಷ ಆಯ್ತು ಆ ವಿಚಾರ ಅವರಿಗೆ ಗೊತ್ತಾಗುವುದು ಬೇಡ, ಅವರು ಆಶೀರ್ವಾದ ಮಾಡ್ತಾ ಇರಬೇಕು ಎಂದು ಹೇಳಿದ್ದರು. ಎರಡು ಮೂರು ವರ್ಷಗಳಿಂದ ಹುಷಾರಿಲ್ಲ ಗೊತ್ತಾದರೆ ಅವರಿಗೆ ತಡೆದುಕೊಳ್ಳಲು ಆಗಲ್ಲ ಹೀಗಾಗಿ ಗೊತ್ತಾಗುವುದು ಬೇಡ ಎಂದು ಹೇಳಿದ್ದರು.
ನಾಗಮ್ಮ ನಿಧನದ ಸುದ್ದಿಯನ್ನು ಕೇಳಿ ಚಿತ್ರದ ಕೆಲಸದ ಪ್ರಯುಕ್ತ ಇಂದು ಬೆಳಗ್ಗೆಯಷ್ಟೇ ಗೋವಾಗೆ ತೆರಳಿದ್ದ ಶಿವಣ್ಣ ಮರಳಿ ಬರುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ದೊಡ್ಮನೆಯ ಕುಟುಂಬದವರು ಗಾಜನೂರಿಗೆ ತೆರಳಲಿದ್ದು, ನಾಗಮ್ಮನವರ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಲಿದ್ದಾರೆ. ನಾಗಮ್ಮನವರ ಅಂತ್ಯಕ್ರಿಯೆ ನಾಳೆ (ಆಗಸ್ಟ್ 2) ಗಾಜನೂರಿನಲ್ಲಿಯೇ ನಡೆಯಲಿದೆ.


Click it and Unblock the Notifications











