'ಬಿಗ್ ಬಾಸ್'ದಿಂದ ಹೊರ ಬಂದು ತಲ್ವಾರ್ ಹಿಡಿದ ಧರ್ಮ ಕೀರ್ತಿರಾಜ್..!
ಬಿಗ್ ಬಾಸ್ ಸಹಾಯದಿಂದ ಕರುನಾಡಿನೆಲ್ಲೆಡೆ ಇನ್ನು ಹೆಚ್ಚಿನ ಜನರಿಗೆ ತಲುಪುವಲ್ಲಿ ಯಶಸ್ವಿಯಾದವರಲ್ಲಿ ಧರ್ಮ ಕೀರ್ತಿರಾಜ್ ಕೂಡ ಒಬ್ಬರು. ಹೆಚ್ಚು ಕಡಿಮೆ ಕಳೆದೊಂದುವರೆ ದಶಕದಿಂದ ಚಿತ್ರರಂಗದಲ್ಲಿ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳುತ್ತಾನೇ ಬಂದ ಧರ್ಮ ಸದ್ಯ ತಲ್ವಾರ್ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮೇಕಿಂಗ್ ವಿಡಿಯೋ ಮತ್ತು ಹಾಡೊಂದನ್ನು ಬಿಡುಗಡೆ ಮಾಡಲಾಯಿತು.
ತಲ್ವಾರ್ ಹೆಸರೇ ಹೇಳುವಂತೆ ಸಾಹಸ ಪ್ರಧಾನ ಚಿತ್ರ. ಇಲ್ಲಿ ಧರ್ಮ ಬೇರೆಯದ್ದೇ ರೂಪದಲ್ಲಿ ಕಾಣಸಿಗಲಿದ್ದಾರೆ. ದುಡ್ಡಿಗಾಗಿ ಏನ್ ಬೇಕಾದರೂ ಮಾಡುವ ಹುಡುಗನ ಪಾತ್ರ ಇವರದ್ದು. ಇನ್ನು ಚಿತ್ರದಲ್ಲಿ ಕೇವಲ ಹೊಡಿ ಬಡಿ ಮಾತ್ರವಲ್ಲ. ಮದರ್ ಸೆಂಟಿಮೆಂಟ್ ಕೂಡ ಚಿತ್ರದಲ್ಲಿದೆ. ಈ ಕಾರಣಕ್ಕೆ ಚಿತ್ರ ಗೆಲ್ಲುತ್ತೆ ಎನ್ನುವ ನಂಬಿಕೆ ಧರ್ಮ ಕೀರ್ತಿರಾಜ್ಗೆ ಇದೆ.

ಇನ್ನು ಈ ಹಿಂದೆ ಮುಮ್ತಾಜ್ ಚಿತ್ರವನ್ನು ನಿರ್ದೇಶಿಸಿದ್ದ ಮುರಳಿ ಈ ಚಿತ್ರವನ್ನು ನಿರ್ದೇಶಿಸಿದ್ಧಾರೆ. ವಿಶೇಷ ಅಂದರೆ ಇವರ ಹಿಂದಿನ ಮುಮ್ತಾಜ್ ಚಿತ್ರದಲ್ಲಿ ಕೂಡ ನಾಯಕನಾಗಿ ಧರ್ಮ ಕೀರ್ತಿರಾಜ್ ಅವರೇ ಕಾಣಿಸಿಕೊಂಡಿದ್ದರು. ಈ ಚಿತ್ರದ ಮೂಲಕ ರೌಡಿಸಂ ಮತ್ತು ಸಂಬಂಧಗಳ ಕುರಿತ ಕಥೆಯನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಿರುವ ಮುರಳಿ ಅವರ ಪಾಲಿಗೆ ನಿರ್ದೇಶಕ ದಿನೇಶ್ ಬಾಬು, ನಿರ್ಮಾಪಕ ಉಮೇಶ್ ಬಣಕಾರ್ ಮತ್ತು ಛಾಯಾಗ್ರಾಹಕ ಸುರೇಶ್ ಬೈರಸಂದ್ರ ಅವರು ಅವತ್ತು ಇವತ್ತು ಯಾವತ್ತಿದ್ದರೂ ಚಿತ್ರರಂಗದ ಗುರುಗಳು.
ಹಾಸ್ಟೆಲ್ನಲ್ಲಿ ನಡೆದ ನೈಜ ಘಟನೆಯನ್ನು ಚಿತ್ರವನ್ನಾಗಿಕಸುವ ಪ್ರಯತ್ನ ಮಾಡಿರುವ ಮುರಳಿ ಈ ಚಿತ್ರಕ್ಕೆ ಮೂರು ವರ್ಷ ಕಷ್ಟ ಪಟ್ಟಿದ್ದಾರೆ. ಗೆಲ್ಲಲೇಬೇಕೆಂದು ಬೆವರು ಸುರಿಸಿದ್ದಾರೆ. ಇವರ ಈ ಶ್ರಮಕ್ಕೆ ಚಿತ್ರದ ಛಾಯಾಗ್ರಾಹಕ ಸುರೇಶ್ ಬೈರಸಂದ್ರ ನಿರ್ಮಾಪಕರಲ್ಲಿ ಒಬ್ಬರಾಗುವ ಮೂಲಕ ಸಾಥ್ ನೀಡಿದ್ದಾರೆ. ಇವರ ಪ್ರಕಾರ ಚಿತ್ರದ ಮೂರು ಹಾಡುಗಳು ಪ್ರೇಕ್ಷಕರ ಮನ ಗೆಲ್ಲಲಿದ್ದು ಚಿತ್ರದಲ್ಲಿರುವ ನಾಲ್ಕು ಸಾಹಸ ಸನ್ನಿವೇಶಗಳು ಆಕ್ಷನ್ ಪ್ರಿಯರಿಗೆ ಮನರಂಜನೆಯ ರಸದೌತಣ ಬಡಿಸಲಿವೆ.
ಇನ್ನೂ ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರತಿಭಾವಂತ ಕಲಾವಿದ ಜೆಕೆ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಯಕಿಯ ಪಾತ್ರಕ್ಕೆ ಅದಿತಿ ಬಣ್ಣ ಹಚ್ಚಿದ್ದಾರೆ. ಇವರದ್ದು ಇಲ್ಲಿ ಎರಡು ಶೇಡ್ ಇರುವ ಪಾತ್ರ. ಅವಿನಾಶ್ ಮತ್ತು ಶರತ್ ಲೋಹಿತಾಶ್ವ ಅವರಂತಹ ಹಿರಿಯ ಕಲಾವಿದರು ಕೂಡ ಚಿತ್ರದಲ್ಲಿದ್ದಾರೆ. ಪ್ರವೀಣ್ ಕೆಬಿ ಚಿತ್ರದ ಹಾಡುಗಳಿಗೆ ರಾಗವನ್ನು ಸಂಯೋಜಿಸಿದ್ದಾರೆ. ಇನ್ನುಳಿದಂತೆ ಬಿಉಡಗಡೆಯಾದ ವಿಡಿಯೋ ಹಾಡನ್ನು ಡಾ.ಉಮೇಶ್ ಪಿಲ್ಲಿಕುಡೆ ಬರೆದಿದ್ದು ವಿಜೇತ್ ಈ ಹಾಡನ್ನು ಹಾಡಿದ್ದಾರೆ. ಸದ್ಯ ತಲ್ವಾರ್ ಚಿತ್ರದ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು ಚಿತ್ರ ಇದೇ ತಿಂಗಳು ತೆರೆಗೆ ಬರಲಿದೆ.


Click it and Unblock the Notifications











