ಚಿತ್ರರಂಗದ ಮನವಿಗೆ ಮನ್ನಣೆ: ಚಿತ್ರಮಂದಿರದ ಮೇಲೆ ಹೇರಿದ್ದ ನಿರ್ಬಂಧ ಸಡಿಲಿಕೆ
ಚಿತ್ರರಂಗದ ಮನವಿಗೆ ಮನ್ನಣೆ ನೀಡಿರುವ ರಾಜ್ಯ ಸರ್ಕಾರವು ಚಿತ್ರಮಂದಿರದ ಮೇಲೆ ನಿನ್ನೆ ಹೇರಲಾಗಿದ್ದ ನಿರ್ಬಂಧವನ್ನು ಸಡಿಲಿಸಿದೆ.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದ ಕಾರಣ ಚಿತ್ರಮಂದಿರಲ್ಲಿ 50% ಸೀಟು ಭರ್ತಿ ಸೇರಿದಂತೆ ಹಲವು ನಿರ್ಬಂಧಗಳನ್ನು ಸರ್ಕಾರ ಹೇರಿತ್ತು. ಚಿತ್ರಮಂದಿರದ ಮೇಲೆ ಹೇರಲಾದ ನಿರ್ಬಂಧದಿಂದ ಆತಂಕಗೊಂಡ ಚಿತ್ರರಂಗವು ಸರ್ಕಾರದ ಕ್ರಮಕ್ಕೆ ತೀವ್ರವಾದ ಅಸಮಾಧಾನ ವ್ಯಕ್ತಪಡಿಸಿತ್ತು.
ಆದರೆ ಈಗ ಸರ್ಕಾರವು ಆದೇಶವನ್ನು ಸಡಿಲಿಸಿದ್ದು, ನಾಳೆಯಿಂದ ಚಿತ್ರಮಂದಿರಗಳು ಯಥಾಸ್ಥಿತಿಯಲ್ಲಿ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಕೆಲಸ ಮಾಡಬಹುದಾಗಿದೆ. ಆದರೆ ಈ ಆದೇಶ ಏಪ್ರಿಲ್ 7ನೇ ತಾರೀಖಿನ ವರೆಗೆ ಮಾತ್ರವೇ ಅನ್ವಯ ಆಗಲಿದೆ. 100% ಆಕ್ಯುಪೆನ್ಸಿ ಇದ್ದರೂ ಚಿತ್ರಮಂದಿರಗಳ ಸ್ಯಾನಿಟೈಸೇಶನ್, ಮಾಸ್ಕ್ ಬಳಕೆ ಕಡ್ಡಾಯವಾಗಿ ಮುಂದುವರೆಯಬೇಕಿದೆ.

ಏಪ್ರಿಲ್ 7 ರ ವರೆಗೆ ರಾಜ್ಯದಾದ್ಯಂತ ಎಲ್ಲ ಚಿತ್ರಮಂದಿರಗಳು ಪೂರ್ಣ ಸೀಟು ಸಾಮರ್ಥ್ಯದಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಬಹುದಾಗಿದೆ. ಆದರೆ ಏಪ್ರಿಲ್ 7 ರ ನಂತರ ಹೊಸ ಕೋವಿಡ್ ಮಾರ್ಗಸೂಚಿ ಹೊರಡಿಸಲಾಗುತ್ತಿದ್ದು. ಹೊಸ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕಾಗುತ್ತದೆ.
ಶುಕ್ರವಾರ ಹೊರಡಿಸಿದ್ದ ಮಾರ್ಗಸೂಚಿಯಂತೆ ರಾಜ್ಯದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಧಾರವಾಡ, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವ್ಯಾಪ್ತಿಯ ಚಿತ್ರಮಂದಿರಗಳಲ್ಲಿ ಶೇ 50 ಪ್ರೇಕ್ಷಕರಿಗಷ್ಟೆ ಅವಕಾಶ ನೀಡಲಾಗಿತ್ತು. ಆದರೆ ಈಗ ಸರ್ಕಾರವು ಆದೇಶವನ್ನು ಬದಲಾಯಿಸಿದೆ.
ನಿನ್ನೆ ರಾಜ್ಯ ಸರ್ಕಾರ ಹೊರಡಿಸಿದ್ದ ಈ ದಿಢೀರ್ ಆದೇಶಕ್ಕೆ ಚಿತ್ರರಂಗದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್, ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ಯಶ್, ಸುದೀಪ್ ಇನ್ನೂ ಹಲವರು ಸರ್ಕಾರದ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
Recommended Video
ಇಂದು ಸಂಜೆಯಷ್ಟೆ ನಟ ಪುನೀತ್ ರಾಜ್ಕುಮಾರ್ ಅವರು ಸಿಎಂ ಅವರನ್ನು ಭೇಟಿಯಾಗಿ ವೈಯಕ್ತಿಕವಾಗಿ ಮನವಿ ಮಾಡಿದ್ದರು. ಪುನೀತ್ ಭೇಟಿ ಬಳಿಕ ಸರ್ಕಾರ ತಮ್ಮ ಆದೇಶವನ್ನು ಬದಲಾಯಿಸಿಕೊಂಡಿದೆ.


Click it and Unblock the Notifications











