ರಾಜ್ಯಮಟ್ಟದ ನಾಟಕ ಪ್ರಶಸ್ತಿ ಗೆದ್ದ ಪತ್ರಕರ್ತ ನವೀನ್
ರಂಗಭೂಮಿಗೆ ಶತಮಾನಗಳ ಇತಿಹಾಸವಿದೆ. ಇಂದಿನ ಸಾಮಾಜಿಕ ಜಾಲತಾಣಗಳು, ಟಿವಿ, ಧಾರಾವಾಹಿ, ಮೊಬೈಲ್ ಗಳ ಆರ್ಭಟದ ನಡುವೆಯು ರಂಗಭೂಮಿ ಕುಂದದೆ ಹೊಸ ಹೊಸ ರೂಪಾಂತರದೊಂದಿಗೆ ಮತ್ತಷ್ಟು ವಿನೂತನವಾಗಿ ಬೆಳೆಯುತ್ತಿದೆ. ಇದಕ್ಕೆ ಉದಾಹರಣೆ ಅಂದರೆ ಇತ್ತೀಚಿಗೆ ಉಡುಪಿಯಲ್ಲಿ ನಡೆದ 40ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ.
ರಂಗಭೂಮಿ ಉಡುಪಿ ಆಯೋಜನೆ ಮಾಡಿದ್ದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಅನೇಕ ರಂಗಭೂಮಿ ಕಲಾವಿದರು ಮತ್ತು ಅನೇಕ ನಾಟಕ ತಂಡಗಳು ಭಾಗಿಯಾಗಿತ್ತು. ಈ ಸ್ಪರ್ಧೆಯಲ್ಲಿ 'ಫಿಲ್ಮಿಬೀಟ್ ಕನ್ನಡ'ದ ವರದಿಗಾರ ನವೀನ್ (ನವಿ ಕನಸು) ಅತ್ಯುತ್ತಮ ನಟ ತೃತೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ.
40ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಸುಮಾರು 500 ನಾಟಕಗಳ ಪೈಕಿ ಒಟ್ಟು 12 ನಾಟಕ ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಬೆಂಗಳೂರಿನ 'ಸೈಡ್ ವಿಂಗ್ ಕಲ್ಚರಲ್ ಟ್ರಸ್ಟ್' ಕೂಡ ಒಂದು. ಸೈಡ್ ವಿಂಗ್ ಪ್ರದರ್ಶಿಸಿದ 'ನಾಯೀಕಥೆ' ನಾಟಕ ಮೂರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅವರು ರಚಿಸಿದ 'ನಾಯೀಕಥೆ' ನಾಟಕವನ್ನು ಎಂ ಎಂ ಶೈಲೇಶ್ ಕುಮಾರ್ ನಿರ್ದೇಶನ ಮಾಡಿದ್ದರು. ಈ ನಾಟಕದಲ್ಲಿ ನವೀನ್ (ನವಿ ಕನಸು) ನಾಯೀಮಗ ಪಾತ್ರದಲ್ಲಿ ಅಭಿನಯ ಮಾಡಿದ್ದರು.
ನವೀನ್ ಸುಮಾರು ಎರಡು ವರ್ಷಗಳಿಂದ ರಂಗಭೂಮಿಯಲ್ಲಿ ಹವ್ಯಾಸಿ ಕಲಾವಿದನಾಗಿ ತೊಡಗಿಸಿಕೊಂಡಿದ್ದಾರೆ. ಪತ್ರಕರ್ತ ವೃತ್ತಿಯ ಜೊತೆ ಜೊತೆಗೆ ರಂಗಭೂಮಿಯಲ್ಲೂ ಗುರುತಿಸಿಕೊಂಡಿರುವ ನವೀನ್ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇನ್ನು ನಾಯೀಕಥೆ ನಾಟಕಕ್ಕೆ ಒಟ್ಟು 3 ಪ್ರಶಸ್ತಿಗಳು ಲಭಿಸಿದೆ. ಉತ್ತಮ ಸಂಗೀತ ಪ್ರಶಸ್ತಿ ಮತ್ತು ಮೆಚ್ಚುಗೆ ಬಹುಮಾನ ಶಾರಿ ಪಾತ್ರಧಾರಿ ಅಶ್ವಿತಾ ಹೆಗ್ಡೆ ಪಾಲಾಗಿದೆ.
ಉಡುಪಿಯಲ್ಲಿ ನಡೆದ ನಾಯಕ ಸ್ಪರ್ಧೆಯಲ್ಲಿ ರಾಜ್ಯದ ನಾನಾಭಾಗಗಳಿಂದ ನಾಟಕತಂಡ ಭಾಗಿಯಾಗಿತ್ತು. ಮೈಸೂರು, ಬೆಂಗಳೂರು, ಬಳ್ಳಾರಿ, ಉಡುಪಿ, ಮಂಗಳೂರು ಸೇರಿದಂತೆ ಎಲ್ಲಾ ಕಡೆಯಿಂದ ರಂಗಭೂಮಿ ಕಲಾವಿದರು ಭಾಗಿಯಾಗಿದ್ದರು.



Click it and Unblock the Notifications











