ಮಾಜಿ ಸಚಿವೆ, ನಟಿ ಉಮಾಶ್ರೀ ಮನೆಯಲ್ಲಿ ಕಳ್ಳತನ
ಸ್ಯಾಂಡಲ್ ವುಡ್ ನ ಹಿರಿಯ ನಟಿ ಮತ್ತು ಮಾಜಿ ಸಚಿವೆ ಉಮಾಶ್ರೀ ನಿವಾಸದಲ್ಲಿ ಕಳ್ಳತವಾಗಿರುವ ಬಗ್ಗೆ ವರದಿಯಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿಯ ವಿದ್ಯಾನಗರದಲ್ಲಿರುವ ಸಚಿವೆ ಉಮಾಶ್ರೀ ಮನೆಯಲ್ಲಿ ಭಾನುವಾರ ತಡರಾತ್ರಿ ಕಳ್ಳತನ ನಡೆದಿದ್ದು, ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ಪ್ರಮುಖ ವಸ್ತುಗಳನ್ನು ಹೊತ್ತೊಯ್ದಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಉಮಾಶ್ರೀ ಸದ್ಯ ಬೆಂಗಳೂರಿನಲ್ಲಿದ್ದು, ಆರ್ ಆರ್ ನಗರ ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗಾಗಿ ಬಾಗಲಕೋಟೆಯಲ್ಲಿರುವ ಮನೆಗೆ ಬೀಗ ಹಾಕಿದ್ದಾರೆ. ಇದೇ ಸಮಯವನ್ನು ಕಾದು ಕಳ್ಳರು ಮನೆಯೊಳಗೆ ನುಗ್ಗಿದ್ದಾರೆ.
ರಾತ್ರಿ ಸುಮಾರು 2 ಗಂಟೆ ಬಳಿಕ ಕಳ್ಳತನ ನಡೆದಿದ್ದು, ಮನೆಯ ಬೀಗ ಒಡೆದು ಕಳ್ಳರು ಮನೆಯೊಳಗೆ ನುಗ್ಗಿದ್ದಾರೆ. ಘಟನೆ ಬಳಿಕ ಬನಹಟ್ಟಿ ಸಿಪಿಐ ಕರುಣೇಶಗೌಡ ಹಾಗೂ ತೇರದಾಳ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಮೂಲಗಳ ಪ್ರಕಾರ, ಮನೆಯಲ್ಲಿ ಪೀಠೋಪಕರಣ, ದಿನಬಳಕೆಯ ವಸ್ತುಗಳು ಬಿಟ್ಟರೆ ಬೆಲೆ ಬಾಳುವ ವಸ್ತುಗಳು ಏನು ಇರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಊಮಾಶ್ರೀ ಇನ್ನೂ ಬೆಂಗಳೂರಿನಲ್ಲೇ ಇರುವ ಕಾರಣ ಮನೆಗೆ ಹೋಗಿ ನೋಡಿದ ಮೇಲೆ ಏನೆಲ್ಲ ವಸ್ತುಗಳು ಕಳ್ಳತನವಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಲಿದೆ.


Click it and Unblock the Notifications











