ಕಾರು ಚಾಲಕನಿಂದಲೇ ನಿರ್ಮಾಪಕನ ಮನೆ ಕಳ್ಳತನ: ಬಂಧನ
ಶಿವರಾಜ್ ಕುಮಾರ್ ನಟನೆಯ 'ಭಾಗ್ಯದ ಬಳೆಗಾರ', ಲೂಸ್ ಮಾದ ಯೋಗಿಯ 'ನಂದ ಲವ್ಸ್ ನಂದಿತ', ಮಾಲಾಶ್ರಿ ನಟನೆಯ 'ಮಹಾಕಾಳಿ' ಇನ್ನೂ ಕೆಲವು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಮೇಶ್ ಕಶ್ಯಪ್ ಅವರ ಮನೆಯಲ್ಲಿ ಜುಲೈ 10ರಂದು ಕಳ್ಳತನ ನಡೆದಿತ್ತು.
ಇದೀಗ ಕಳ್ಳರು ಸಿಕ್ಕಿಬಿದ್ದಿದ್ದು ರಮೇಶ್ ಕಶ್ಯಪ್ರ ಕಾರು ಚಾಲಕನೇ ನಕಲಿ ಕೀ ಬಳಸಿ ಮಾಲೀಕರ ಮನೆ ದೋಚಿದ್ದಾನೆ. ಈ ಕಾರ್ಯದಲ್ಲಿ ಅವನಿಗೆ ಜೊತೆಯಾಗಿದ್ದ ಮತ್ತೊಬ್ಬ ವ್ಯಕ್ತಿಯನ್ನೂ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಚಂದ್ರಶೇಖರ್ (32) ರಮೇಶ್ ಕಶ್ಯಪ್ರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಾಲೀಕರ ವಿಶ್ವಾಸವನ್ನೂ ಗಳಿಸಿದ್ದ. ರಮೇಶ್ರ ಮನೆಯ ಕೀಲಿ ಕೈ ತೆಗೆದುಕೊಂಡು ನಕಲಿ ಕೀ ಮಾಡಿಸಿಕೊಂಡಿದ್ದ ಚಂದ್ರಶೇಖರ್, ಮನೆಯಲ್ಲಿ ಹಣ ಎಲ್ಲಿದೆ, ಚಿನ್ನ ಎಲ್ಲಿದೆ ಎಂಬ ಮಾಹಿತಿಯನ್ನೂ ತಿಳಿದುಕೊಂಡಿದ್ದ.

ನಕಲಿ ಕೀ ಅನ್ನು ತನ್ನ ಗೆಳೆಯ ಅಭಿಷೇಕ್ಗೆ ನೀಡಿದ್ದ ಚಂದ್ರಶೇಖರ್ ಆತನಿಂದ ಕಳವು ಮಾಡಿಸಿದ್ದ. ಮನೆಯಲ್ಲಿದ್ದ 3 ಲಕ್ಷ ಹಣ, 710 ಗ್ರಾಂ ಚಿನ್ನ ದೋಚಿದ್ದರು ಈ ಖದೀಮರು. ಕದ್ದ ಚಿನ್ನವನ್ನು ಅಟಿಕಾ ಗೋಲ್ಡ್ ಸಂಸ್ಥೆಯಲ್ಲಿ ಗಿರವಿ ಇಟ್ಟು ಹಣ ಪಡೆದಿದ್ದರು.
ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರು ನಂತರ ಮೊಬೈಲ್ ಸಿಡಿಆರ್, ಟವರ್ ಮಾಹಿತಿ ಇನ್ನಿತರೆಗಳ ಪರಿಶೀಲನೆ ನಡೆಸಿ ಕಳ್ಳನೊಂದಿಗೆ ಚಾಲಕ ಚಂದ್ರಶೇಖರ್ ಸಂಪರ್ಕ ಇರುವುದು ಪತ್ತೆ ಮಾಡಿದ್ದರು. ಇದೀಗ ಚಂದ್ರಶೇಖರ್ ಹಾಗೂ ಅಭಿಷೇಕ್ ಇಬ್ಬರೂ ಪೊಲೀಸರ ಅತಿಥಿಗಳಾಗಿದ್ದಾರೆ.
ರಮೇಶ್ ಕಶ್ಯಪ್ ಕನ್ನಡದ ಹಿರಿಯ ನಿರ್ಮಾಪಕರಾಗಿದ್ದು 'ಭಾಗ್ಯದ ಬಳೆಗಾರ', 'ನಂದ ಲವ್ಸ್ ನಂದಿತ', 'ಮಹಾಕಾಳಿ, 'ಮರಿ ಟೈಗರ್' ಇನ್ನೂ ಕೆಲವು ಸಿನಿಮಾಗಳನ್ನು ತಮ್ಮ ಸಿಂಹಾದ್ರಿ ಪ್ರೊಡಕ್ಷನ್ ಸಂಸ್ಥೆ ಮೂಲಕ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











