'ದ್ವೇಷ, ಅಸೂಯೆ ಹರಡಿಸುವ ಕೆಲಸ ಮೊದಲು ಬಿಡಿ', ಕೆಂಡ ಕಾರಿದ್ದೇಕೆ ಕಿಚ್ಚ ಸುದೀಪ್..?
ದರ್ಶನ್ ಮತ್ತು ಸುದೀಪ್ ಕನ್ನಡದ ಇಬ್ಬರು ಸೂಪರ್ ಸ್ಟಾರ್ಗಳು. ಆದರೆ ಅದ್ಯಾವ ಘಳಿಗೆಯಲ್ಲಿ ಈ ದೊಡ್ಡ ನಾಯಕರು ಪರಸ್ಪರ ಮುನಿಸಿಕೊಂಡು ಮುಖ ತಿರುಗಿಸಿಕೊಂಡರೋ ? ಅಂದಿನಿಂದ ಶುರುವಾದ ಅಸಮಾಧಾನ- ಅಭಿಮಾನಿಗಳ ನಡುವಿನ ಸೋಶಿಯಲ್ ಮೀಡಿಯಾ ಜಗಳ ಇವತ್ತಿನವರೆಗೆ ಬೆಳೆದುಕೊಂಡೇ ಬಂದಿದೆ.
ನಿಜಾ, ಭಿನ್ನಾಭಿಪ್ರಾಯಗಳೇನೇ ಇದ್ದರೂ ದರ್ಶನ್ ಅವರ ಅಭಿಮಾನಿಗಳ ಅಫಿಶಿಯಲ್ ಸಂಘಟನೆ ಡಿ ಕಂಪನಿ ಮತ್ತು ಸುದೀಪ್ ಅವರ ಸಾಂಸ್ಕ್ರತಿಕ ಪರಿಷತ್ತು ಮೊದಲಿನಂದಲೂ ಘನತೆಯಿಂದಲೇ ನಡೆದುಕೊಂಡು ಬಂದಿದೆ. ಅಭಿಮಾನ ಮತ್ತು ಅಭಿಪ್ರಾಯಗಳನ್ನು ಶಿಸ್ತಿನಿಂದಲೇ ಪ್ರದರ್ಶಿಸಿವೆ. ಆದರೆ. ಇದರ ನಡುವೆ ಕೆಲವರು ಕಿರಾತಕರು, ಆತುರಗೆಟ್ಟವರು, ಅಭಿಮಾನದ ಹೆಸರಿನಲ್ಲಿ ರಂಪ ರಾಮಾಯಣ ಮಾಡುತ್ತಲೇ ಬರುತ್ತಿದ್ದಾರೆ. ಸಣ್ಣ ವಿಚಾರವನ್ನು ದೊಡ್ಡದು ಮಾಡಿ ಕೆಸರೆರಚಿಕೊಳ್ಳುವ ಕೆಲಸವನ್ನು ನಿಯತ್ತಾಗಿ ಮಾಡುತ್ತಾ ಬಂದಿದ್ದಾರೆ. ಇನ್ನು ಇವರ ಈ ಅಂಧಾಭಿಮಾನಕ್ಕೆ ಕೆಲವರು ಕುಮ್ಮಕ್ಕನ್ನು ಕೂಡ ನೀಡುತ್ತಿದ್ದಾರೆ. ಮೊನ್ನೆ ಮೊನ್ನೆ ಆಗಿದ್ದು ಕೂಡ ಇದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಸುದೀಪ್ ತಮ್ಮ ಮ್ಯಾಕ್ಸ್ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಸ್ವಾಗತದಿಂದ ತಮ್ಮ ನೋವನ್ನೆಲ್ಲ ಕೆಲ ಕಾಲ ಮರೆತು ಸಂಭ್ರಮ ಪಡಲು ಬಂದವರ ಜೊತೆ ಸಂಭ್ರಮಿಸಿದ್ದರು. ಕೇಕ್ ಕಟ್ ಮಾಡಿದ್ದರು. ಆದರೆ, ಈ ಸಮಯದಲ್ಲಿ ಎಲ್ಲರ ಕಣ್ಣು ಕೇಕ್ ಮೇಲಿದ್ದ ಬಾಸಿಸಂ ಕಾಳ ಮುಗೀತು ಮ್ಯಾಕ್ಸ್ ಮ್ಯಾಕ್ಸಿಮಮ್ ಕಾಲ ಶುರುವಾಯ್ತು ಎಂದು ಬರೆಯಲಾಗಿದ್ದ ಸಾಲಿನ ಮೇಲೆ ಬಿತ್ತು. ನೋಡ..ನೋಡುತ್ತಾ.. ಕೇಕ್ ಫೋಟೊ ವೈರಲ್ ಆಯ್ತು.
ಇನ್ನು ಇದೇ ಸಮಯದಲ್ಲಿ ಕಾದು ಕುಂತಿದ್ದ ಕೆಲವರು ದರ್ಶನ್ ಅವರಿಗೆ ಸುದೀಪ್ ತಮ್ಮ ಕೇಕ್ ಮೂಲಕ ತಿರುಗೇಟನ್ನು ನೀಡಿದ್ದಾರೆ ಎಂದು ಹುಯಿಲೆಬ್ಬಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರಕ್ಕೆ ಕಿಚ್ಚನ್ನು ಹಚ್ಚಿದರು. ಕೊನೆ ಕೊನೆಗೆ ಕೇಕ್ ತಂದ ತಪ್ಪಿಗೆ ಬೇಸತ್ತು ಪ್ರದೀಪ್ ಸ್ಪಷ್ಟನೆಯನ್ನು ನೀಡಿದರು. ಆದರೂ ಅಸಮಾಧಾನದ ಅಲೆ ಕಡಿಮೆಯಾಗಲಿಲ್ಲ. ಹೀಗಾಗಿಯೇ ಮ್ಯಾಕ್ಸ್ ಚಿತ್ರದ ಸಕ್ಸಸ್ ಪತ್ರಿಕಾಗೋಷ್ಠಿಯಲ್ಲಿ ನಾನ್ಯಾಕೆ ಟಾಂಟ್ ಕೊಡಲಿ ಎಂದು ಸುದೀಪ್ ಪ್ರಶ್ನೆ ಕೇಳಿದ್ದರು. ಕನ್ನಡ ಚಿತ್ರರಂಗ ಒಂದು ಮನೆ ಎನ್ನುವುದನ್ನು ಹೇಳಿದ್ದರು. ಈಗ ಸುದೀಪ್ ಇದೇ ವಿಚಾರದ ಕುರಿತು ಮತ್ತೆ ಮಾತನಾಡಿದ್ದಾರೆ. ಹೀಗೆ ಆದರೆ ಕನ್ನಡ ಚಿತ್ರರಂಗದ ಕಥೆ ಹರೋಹರ ಎಂದಿದ್ದಾರೆ.

ಹೌದು, ರಾಘವೇಂದ್ರ ಚಿತ್ರವಾಣಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುದೀಪ್ ಇಲ್ಲದೇ ಇರುವ ಕಥೆಗಳು ಸೃಷ್ಟಿಯಾಗೋದು ಬೇಡ, ಇಲ್ಲದಿರುವ ಅಪರಾಧಿಗಳು ಹುಟ್ಟಿಕೊಳ್ಳೋದು ಬೇಡ, ಮಾಡದಿರುವ ಅಪರಾಧ ದೊಡ್ಡದಾಗುವುದು ಬೇಡ, ಯಾದು ಯಾವುದಕ್ಕೋ ಜಾಗ ಮಾಡಿಕೊಡುವ ಅವಕಾಶ ಇಲ್ಲ ನಮ್ಮಲ್ಲಿ ಎಂದಿದ್ದಾರೆ. ಅವರು ಇವರಿಗೆ ಹೇಳಿದರು, ಇವರು ಅವರಿಗೆ ಹೇಳಿದರು, ನಮಗೆ ದೇವರು ಒಳ್ಳೆಯ ಸ್ಥಾನದಲ್ಲಿ ಇಟ್ಟಿದ್ದಾನೆ ಭಗವಂತ ಯಾರಿಗಾದರು ಮುಖದ ಮೇಲೆ ಹೇಳಬೇಕು ಅಂದರೆ ನಾನು ಹೇಳಬಲ್ಲೆ ಎಂದಿದ್ದಾರೆ.
ಮುಂದುವರೆದು ಹೆದರುವುದು ಯಾಕೆ ? ಇಲ್ಲಿ ಅಭಿಮಾನಿಗಳಿದ್ದಾರೆ ಎಂದ ತಕ್ಷಣ ನಾವು ರಾಜ ಅಲ್ಲ ಒಂದೆರಡು ಸಿನಿಮಾ ಚೆನ್ನಾಗಿ ಹೋದ ಮಾತ್ರಕ್ಕೆ ಇದು ನಮ್ಮ ರಾಜ್ಯ ಅಲ್ಲ ಎಂದು ಹೇಳಿರುವ ಸುದೀಪ್ ನಮ್ಮ ಹಿರಿಯರೆಲ್ಲ ಚೆನ್ನಾಗಿ ದುಡಿದು ದುಡಿದು ಚಿತ್ರರಂಗಕ್ಕೆ ನೀರು ಹಾಕಿ ಬೆಳೆಸಿ ನಮ್ಮೆಲ್ಲರ ಕೈಯಲ್ಲಿ ಕೊಟ್ಟು ಹೋಗಿದ್ದಾರೆ, ನಮ್ಮ ಮೇಲೆ ನಮ್ಮ ಹಿರಿಯರಾದ ಶಿವಣ್ಣ ಇದ್ದಾರೆ ರವಿ ಸರ್ ಇದ್ದಾರೆ. ನಮ್ಮ ಜೊತೆ ಬಂದಿರುವ ಅನೇಕ ನಾಯಕರು, ನಿರ್ಮಾಪಕರು ನಿರ್ದೇಶಕರು ಇದ್ದಾರೆ. ಹಿರಿಯ ನಿರ್ಮಾಪಕರು ಇದ್ದಾರೆ. ನಮ್ಮ ಇಂಡಸ್ಟ್ರೀ ಈಗ ನಮ್ಮೆಲ್ಲರ ಕೈಯಲ್ಲಿದೆ ಇದಕ್ಕೆ ನಾವು ನೀರು ಹಾಕಿ ಬೆಳೆಸಿ ನಮ್ಮ ಕಿರಿಯರಿಗೆ ನಾವು ನೀಡಿ ಹೋಗಬೇಕು ಇದೊಂದು ಸಂಪ್ರದಾಯ ಎಂದಿದ್ದಾರೆ.
ಆದರೆ ಇಲ್ಲಿ ಬೇಡದೆ ಇರುವ ವಿಚಾರ ಎಲ್ಲ ಚರ್ಚೆಯಾಗುತ್ತೆ, ಅವರಿಗೆ ಟಾಂಟ್ ಕೊಟ್ಟರು, ಇವರಿಗೆ ಟಾಂಟ್ ಕೊಟ್ಟರು, ಅರೇ ನಾನು ಹೇಳೇ ಇಲ್ಲ ಎಂದು ಬೇಸರವನ್ನು ಹೊರ ಹಾಕಿದ್ದಾರೆ. ನಾವೆಲ್ಲ ಸಿನಿಮಾ ಮಾಡಿಕೊಂಡು ಮುಂದೆ ಹೋಗಬೇಕೆ ಹೊರತು ಈ ಎಲ್ಲ ಚಿಕ್ಕ ಚಿಕ್ಕ ವಿಚಾರಗಳನ್ನು ಮಾತನಾಡುತ್ತಾ ಕೂರಬಾರದು ಎಂದಿರುವ ಸುದೀಪ್ ನಮ್ಮಲ್ಲಿ ತುಂಬಾ ವಿಚಾರಗಳು ಕ್ಲೀನ್ ಆಗಬೇಕು ಹಾಗಾದಾಗ ಮಾತ್ರ ಇಂಡಸ್ಟ್ರೀ ಉಳಿಯುತ್ತೆ ಎಂದು ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ. ದರ್ಶನ್ ಕಾಲೆಳೆದುಕೊಂಡು ಮಾತನಾಡಿಕೊಂಡು ಕುಂತರೆ ನನಗೇನು ಸಿಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ಹೊಸಬರಿಗೆ ಇಲ್ಲ ಸಲ್ಲದ ಪ್ರಶ್ನೆ ಕೇಳಿ ಅವರನ್ನು ಸಿಲುಕಿ ಹಾಕಿಸಬಾರದು ಎಂದಿರುವ ಸುದೀಪ್ ಇಲ್ಲದಿರುವ ಕಥೆಗಳಿಗೆ ಮನ್ನಣೆ ಕೊಡಬಾರದು ಎಂದು ಕಿವಿ ಮಾತನ್ನು ಕೂಡ ಹೇಳಿದ್ದಾರೆ.
ಇನ್ನುಇದೇ ತರ ದ್ವೇಷ ಅಸೂಯೆ ಹರಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಕುಂತರೆ, ಬೇಡದಿರುವ ವಿಚಾರಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದರೆ ಕನ್ನಡ ಚಿತ್ರರಂಗ ಜಾಸ್ತಿ ದಿನ ಇರಲ್ಲ ಎಂದು ಬೇಸರದಿಂದ ಹೇಳಿದ್ದಾರೆ. ಈಗಾಗಲೇ ಹೊರಗಡೆಯವರ ಹಾವಳಿ ಜಾಸ್ತಿಯಾಗಿದೆ, ಚಾಲೆಂಜ್ಗಳ ಮೇಲೆ ನಮ್ಮ ಊರಿನಲ್ಲಿ ಬಿಸಿನೆಸ್ ಜಾಸ್ತಿ ಮಾಡ್ತಿದ್ದಾರೆ, ಮಾಡಲಿ ಒಳ್ಳೆಯದು ತಪ್ಪು ಎಂದು ನಾನು ಹೇಳ್ತಿಲ್ಲ ಆದರೆ ನಾವು ನಮ್ಮ ಊರನ್ನು ಕಾಪಾಡಿಕೊಳ್ಳಲಿಲ್ಲ ಅಂದರೆ ನಮ್ಮ ಭಾಷೆ ಕಾಪಾಡಿಕೊಳ್ಳಲಿಲ್ಲ ಅಂದರೆ ನಮಗೆ ಎಲ್ಲಿದೆ ನಾಳೆ ನೆಲೆ ಎಂದು ಪ್ರಶ್ನೆ ಮಾಡಿದ್ದಾರೆ.


Click it and Unblock the Notifications











