'ಮಾತಾಡೋದಕ್ಕೆ ಎದ್ದು ನಿಂತರೆ ಸಾಕು, ಸಾರಾ ಗೋವಿಂದು ಏಯ್ ಕೂತ್ಕೋ ಅಂತ ಗದರುತ್ತಾರೆ'- ನೀತು...!
ಮಲಯಾಳಂ ಚಿತ್ರರಂಗ ಅಲ್ಲೋಲ..ಕಲ್ಲೋಲವಾಗಿದೆ. ಚಿತ್ರರಂಗದಲ್ಲಿನ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿ ನ್ಯಾಯಮೂರ್ತಿ ಕೆ. ಹೇಮಾ ಸಮಿತಿ ಸಲ್ಲಿಸಿದ ವರದಿಯಿಂದ ಮಲಯಾಳಂ ಚಿತ್ರರಂಗದ ಮುಖವಾಡ ಕಳಚಿ ಬಿದ್ದಿದೆ. ಅದು ತೆರೆದಿಟ್ಟಿರುವ ಸತ್ಯ ಕೇವಲ ಮಲಯಾಳಂ ಚಿತ್ರರಂಗವನ್ನಷ್ಟೇ ಅಲ್ಲ, ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ. ಇದಕ್ಕೆ ಪೂರಕವಾಗಿ ಹಲವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿರುವ ಪುರುಷರ ಮನಸ್ಥಿತಿಯ ಕುರಿತು ಕಿಡಿ ಕಾರುತ್ತಿದ್ದಾರೆ.
ಹಾಗಂಥ ಬೇರೆ ಭಾಷೆಯ ಚಿತ್ರರಂಗದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರೆ. ಬೇರೆ ಕಡೆ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿ ಇಲ್ಲ ಅಂತ ಅಲ್ಲ. ಯಾಕೆಂದರೆ.. ಮಿಲನಾ ಚಿತ್ರದ ನಾಯಕಿ ಪಾರ್ವತಿ ಸೇರಿ ಹಲವರು ಹೇಳಿರುವ ಪ್ರಕಾರ ಇದು ಕೇವಲ ಮಲಯಾಳಂ ಚಿತ್ರರಂಗದ ಸಮಸ್ಯೆಯಲ್ಲ. ಬದಲಿಗೆ ಎಲ್ಲ ಭಾಷೆಯ ಚಿತ್ರರಂಗದ ಸಮಸ್ಯೆ. ಕೆಲಸ ಮಾಡುವ ಸ್ಥಳ ಯಾವುದೇ ಇರಲಿ ಅಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಈಗ ತುರ್ತಾಗಿ ಆಗಬೇಕಿದೆ. ಹೀಗಾಗಿಯೇ ಬೇರೆ ಬೇರೆ ಭಾಷೆಯಲ್ಲಿ ಕೂಡ ಅನೇಕರು ನಮ್ಮಲ್ಲಿಯೂ ಕೇರಳದಲ್ಲಿ ರಚನೆಯಾದಂತೆ ಸಮಿತಿಯೊಂದನ್ನು ರಚನೆ ಮಾಡಿ ಎಂಬ ಮನವಿಯನ್ನು ಸರ್ಕಾರಕ್ಕೆ ಮಾಡಿಕೊಳ್ಳುತ್ತಿದ್ಧಾರೆ. ಕನ್ನಡ ಚಿತ್ರರಂಗದಲ್ಲಿ ಕೂಡ ಈ ಕೂಗು ಕೇಳಿ ಬಂದಿದೆ. ಆದರೆ ಈ ಕೂಗಿಗೆ ಅಂದುಕೊಂಡ ಬೆಲೆ ಸಿಕ್ತಿಲ್ಲ. ಬಲ ಕೂಡ ಸಿಕ್ತಿಲ್ಲ

ಹೌದು, ವಿಚಾರ ಯಾವುದೇ ಇರಲಿ, ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎನ್ನುವ ಮಾತು ಮೊದಲಿಂದ ಇದೆ. ಈ ಮಾತು ನಿನ್ನೆ ಮತ್ತೊಮ್ಮೆ ಸಾಬೀತಾಗಿದೆ. ಮಹಿಳೆಯರ ಸುರಕ್ಷತೆಯ ಕುರಿತು ಸಮಿತಿ ರಚನೆಗೆ ಕನ್ನಡ ಚಿತ್ರರಂಗದ ಹಿರಿಯ ನಾಯಕಿಯರಿಂದನೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ. ಕನ್ನಡ ಚಿತ್ರರಂಗದಲ್ಲಿ ಯಾವ ಲೈಂಗಿಕ ಕಿರುಕುಳ ಇಲ್ಲ, ಯಾವ ಸಮಿತಿ ಬೇಡ ಎಂದು ಭಾವನಾ ರಾಮಣ್ಣ ಹೇಳಿದರೆ, ನೀತು, ನಿರ್ದೇಶಕಿ ಕವಿತಾ ಲಂಕೇಶ್ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಇದೆ ಸಮಿತಿ ಬೇಕು ಎಂದಿದ್ದಾರೆ. ಸಭೆಗೆ ಕರೆದು ನಮಗೆ ಮಾತನಾಡೋಕೆ ಅವಕಾಶನೇ ಕೊಡಲ್ಲ, ನಮ್ಮ ಮಾತು ಕೇಳಿಸಿಕೊಳ್ಳುವ ತಾಳ್ಮೆ ಕೂಡ ಇಲ್ಲಿ ಯಾರಿಗೂ ಇಲ್ಲ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.
ಚಿತ್ರರಂಗದಲ್ಲಿ ನನಗೆ ಕಹಿ ಅನುಭವ ಆಗಿದೆ. ಚಿತ್ರದ ಚಿತ್ರೀಕರಣದ ನೆಪದಲ್ಲಿ ಕೆಟ್ಟದಾಗಿ ಮುಟ್ಟುತ್ತಾರೆ, ಮಾತನಾಡುತ್ತಾರೆ, ನಾನು ನನ್ನ ಕಣ್ಣಾರೆ ಇದೆಲ್ಲವನ್ನು ನೋಡಿದ್ದೇನೆ ಎಂದಿರುವ ನೀತು, ಮಾತನಾಡಲು ಮುಂದಾದರೆ ಸಾಕು ಸಾರಾ ಗೋವಿಂದು ಕುತ್ಕೋ ಎಂದು ಗದರಿಸುತ್ತಾರೆ ಎಂದು ಹೇಳಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಸಹಾಯ ಕೇಳಿ ಬಂದಾಗಲೇ ನನಗೆ ಇಲ್ಲಿ ಯಾರು ಸಹಾಯ ಮಾಡಲಿಲ್ಲ ಈಗ ಮಾಡುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಪಾಶ್ ಕಮಿಟಿ ಆಗಬೇಕು ಅನ್ನೋದು ಗೆಜೆಟ್ ನಲ್ಲಿಯೇ ಇದೆ. ಹಾಗೊಂದು ವೇಳೆ ಕಮಿಟಿ ರಚನೆ ಆದರೆ ನನಗೆ ಆದ ಅನುಭವವನ್ನು ಅವರ ಜೊತೆ ನಾನು ಮುಕ್ತವಾಗಿ ಹಂಚಿಕೊಳ್ಳುತ್ತೇನೆ ಎಂದು ನೀತು ಹೇಳಿದ್ದಾರೆ.
ಮುಂದುವರೆದು ಚಿತ್ರರಂಗದಲ್ಲಿ ಚಿಕ್ಕ ಚಿಕ್ಕ ವಿಚಾರಕ್ಕೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದಿರುವ ನೀತು, ಒಬ್ಬ ಹಿರಿಯ ನಟ ಹೆಣ್ಣು ಮಕ್ಕಳ ಮೇಲೆ ಎಷ್ಟು ಖರ್ಚು ಮಾಡ್ತಾರೆ ನೋಡಿ ಅಂತ ಹೇಳ್ತಾರೆ. ಯಾಕೆ ಬರೀ ಗಂಡು ಮಕ್ಕಳಿಗೆ ಮಾತ್ರ ಖರ್ಚು ಮಾಡಬೇಕಾ ಎಂದಿರುವ ನೀತು, ನಟಿಯರು ಕೂಡ ದುಡಿಯೋದಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲ ನಿರ್ಮಾಪಕರು ಕೂಡ ನನಗೆ ಮಾತನಾಡಲು ಬಿಡಲಿಲ್ಲ, ಇಲ್ಲಿ ಮಾತನಾಡಲು ಬಿಡಲಿಲ್ಲ ಅಂದರೆ ಬೇರೆಯವರ ಬಳಿ ಹೋಗಿ ನಾನು ಸಮಸ್ಯೆ ಹೇಳುವೆ, ರಚನೆಯಾಗಲಿರುವ ಪಾಶ್ ಕಮಿಟಿ ಬಗ್ಗೆ ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.


Click it and Unblock the Notifications











