"ಕರಗ ಆಚರಣೆಯನ್ನು 'ಹೆಡ್ಬುಷ್' ಚಿತ್ರದಲ್ಲಿ ಬೇಕಾಬಿಟ್ಟಿ ತೋರಿಸಿದ್ದಾರೆ": ತಿಗಳ ಸಮುದಾಯ ಅಸಮಾಧಾನ
ಧನಂಜಯ ನಟನೆಯ 'ಹೆಡ್ಬುಷ್' ಚಿತ್ರದಲ್ಲಿ ವೀರಗಾಸೆ ಕಲೆಗೆ ಅಪಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ನಟ ಧನಂಜಯ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ಮತ್ತೊಂದು ಕಡೆ ಚಿತ್ರದಲ್ಲಿ ಇತಿಹಾಸ ಪ್ರಸಿದ್ಧ ಕರಗ ಆಚರಣೆಯನ್ನು ಬೇಕಾಬಿಟ್ಟಿ ತೋರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಚಿತ್ರದ ವಿರುದ್ಧ ಫಿಲ್ಮ್ ಛೇಂಬರ್ಗೆ ದೂರು ನೀಡಲು ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯದ ಮುಖಂಡರು ಮುಂದಾಗಿದ್ದಾರೆ.
'ಹೆಡ್ಬುಷ್' ಚಿತ್ರದಲ್ಲಿ ದೈವದ ಬಗ್ಗೆ ಬಹಳ ಹಗುರವಾದ ಪದಗಳ ಬಳಕೆ ಮಾಡಲಾಗಿದೆ. ಸಂಪ್ರದಾಯ ಬದ್ಧ ದೈವ ಆಚರಣೆಯನ್ನ ಚಿತ್ರದಲ್ಲಿ ಬೇಕಾಬಿಟ್ಟಿ ತೋರಿಸಲಾಗಿದೆ. ಕೂಡಲೇ 'ಹೆಡ್ಬುಷ್' ಚಿತ್ರದಲ್ಲಿರುವ ಕೆಲವು ಸನ್ನಿವೇಶಗಳನ್ನು, ಪದಗಳನ್ನು ತೆಗೆಯಬೇಕು ಎಂದು ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. ಈ ಸಂಬಂಧ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಿರುವ ಸಮುದಾಯದ ಮುಖಂಡರು ಮುಂದಾಗಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ಗೆ ಧರ್ಮರಾಯ ಸ್ವಾಮಿ ದೇವಸ್ಥಾನ ಹಾಗೂ ಕರಗ ಸಮಿತಿ ಅಧ್ಯಕ್ಷ ಸತೀಶ್ ಮಾಹಿತಿ ನೀಡಿದ್ದಾರೆ.
"ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯ ಬಹಳ ಶ್ರದ್ದೆ ಹಾಗೂ ಭಕ್ತಿ ಯಿಂದ ಕರಗವನ್ನ ಆಚರಣೆ ಮಾಡಲಾಗುತ್ತದೆ. ಬೆಂಗಳೂರಿನ ಜಗತ್ಪಸಿದ್ಧಿ ಆಗಿದೆ. ಇಂತಹ ಕರಗದ ಬಗ್ಗೆ ಚಿತ್ರದಲ್ಲಿ "ಅದ್ಯಾವುದೋ ಜುಜುಬಿ ಕರಗದ ಬಗ್ಗೆ ಯಾಕೋ ತಲೆ ಕೆಡಿಸಿಕೊಳ್ಳುತ್ತೀಯಾ" ಎನ್ನುವ ಡೈಲಾಗ್ ಬರುತ್ತದೆ. 'ಜುಜುಬಿ ಕರಗ' ಅಂತ ಹಗುರವಾದ ಪದ ಬಳಕೆ ಸರಿಯಲ್ಲ. 18 ವರ್ಷ ಯಶಸ್ವಿಯಾಗಿ ಕರಗ ಹೊತ್ತು ನಮ್ಮ ಸಮುದಾಯದಲ್ಲಿ ದೇವರ ಸ್ವರೂಪವಾಗಿದ್ದ ಶಿವಶಂಕರ್ ಅವರನ್ನು ಏಕವಚನದಲ್ಲಿ ಅವನು, ಇವನು ಅಂತ ಪದ ಬಳಕೆ ಮಾಡಲಾಗಿದೆ. ಕರಗಕ್ಕೆ ತನ್ನದೇ ಆದ ಘನತೆ, ಗಾಂಭೀರ್ಯ ಇದೆ. ಆದರೆ ಈ ಚಿತ್ರದಲ್ಲಿ ಕರಗದ ಕೈಯಲ್ಲಿ ಕೆಟ್ಟದಾಗಿ ಡ್ಯಾನ್ಸ್ ಮಾಡಿಸಿ, ಸುತ್ತ ನಿಂತು ಚಪ್ಪಾಳೆ ತಟ್ಟುವ ದೃಶ್ಯ ಇದೆ.

ಚಿತ್ರದಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನ ಹಾಗೂ ತಿಗಳರ ಪೇಟೆ ಕರಗ ಅಂತ ತೋರಿಸಲಾಗುತ್ತೆ. ಆದರೆ ಅಲ್ಲಿ ತೋರಿಸಿರುವ ಕರಗ ಚುಂಚಗಟ್ಟ ಕರಗ ತೋರಿಸಲಾಗಿದೆ. ಆ ಮೂಲಕ ನಮ್ಮ ಸಮುದಾಯದ ಆಚಾರ ವಿಚಾರಗಳನ್ನ ಚಿತ್ರದಲ್ಲಿ ಗಾಳಿಗೆ ತೂರಲಾಗಿದೆ. ದೈವ, ಆಚಾರಗಳ ಬಗ್ಗೆ ಚಿತ್ರಗಳನ್ನ ಮಾಡುವಾಗ ಬಹಳ ಜಾಗರೂಕತೆಯಿಂದ ಮಾಡಬೇಕು. ಯಾವುದೇ ಸಮುದಾಯದ ನಂಬಿಕೆ, ಆಚಾರ ವಿಚಾರಗಳಿಗೆ ಧಕ್ಕೆಯಾಗಬಾರದು. ಚಿತ್ರದಲ್ಲಿ ಬರುವ ಕೆಲ ಪದಗಳು ಹಾಗೂ ದೃಶ್ಯ ನಮ್ಮ ಸಮುದಾಯಕ್ಕೆ ನಾವು ಶ್ರದ್ದೆಯಿಂದ ಆಚರಣೆ ಮಾಡುವ ವಿಚಾರಗಳಿಗೆ ಧಕ್ಕೆಯಾಗಿದೆ ಎಂದು ಚಿತ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಮಾಧ್ಯಮದ ಮೂಲಕ ಧನಂಜಯ ಅವರು ಸ್ವಾರಿ ಹೇಳಿದ್ದಾರೆ. ನಮಗೆ ಸಿನಿಮಾ ಬಗ್ಗೆ ಯಾವುದೇ ಅಭ್ಯಂತರ ಇಲ್ಲ. ಡಾನ್ ಜಯರಾಜ್ ಅವರಿಗೆ ತಿಗಳರ ಪೇಟೆಯಲ್ಲಿ ನಮ್ಮ ಸಮುದಾಯದವರ ಜೊತೆ ಆತ್ಮೀಯ ಒಡನಾಟ ಇತ್ತು. 'ಹೆಡ್ಬುಷ್' ಸಿನಿಮಾ ಚೆನ್ನಾಗಿ ಮಾಡಿದ್ದಾರೆ. ಅವರಿಗೆ ಶುಭವಾಗಲಿ. ಆದರೆ ನಮ್ಮ ಆಚಾರ ವಿಚಾರ ನಂಬಿಕೆಯನ್ನು ತಪ್ಪಾಗಿ ತೋರಿಸಿರುವ ಕೆಲ ಸನ್ನಿವೇಶ ಹಾಗೂ ಪದಗಳನ್ನು ತೆಗೆಯಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಫಿಲ್ಮ್ ಛೇಂಬರ್ಗೆ ದೂರು ನೀಡಲು ಮುಂದಾಗಿದ್ದಾರೆ.


Click it and Unblock the Notifications











