ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಸುದೀಪ್, ಯಶ್, ರಾಧಿಕಾ ಫಸ್ಟ್ ರಿಯಾಕ್ಷನ್
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕೂಡಲೇ ಸರ್ಕಾರ, ಸೇನೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ. ಸಿನಿಮಾ ತಾರೆಯರು ಕೂಡ ಇದಕ್ಕೆ ದನಿಗೂಡಿಸಿದ್ದಾರೆ.
ಬಾಲಿವುಡ್ ತಾರೆಯರು ಮಾತ್ರವಲ್ಲ ಕನ್ನಡ ಸಿನಿಮಾ ತಾರೆಯರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವರಾಜ್ಕುಮಾರ್, ರಶ್ಮಿಕಾ ಮಂದಣ್ಣ, ಯಶ್, ರಾಧಿಕಾ ಪಂಡಿತ್ ಸೇರಿದಂತೆ ಕೆಲವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದೀಗ ನಟ ಕಿಚ್ಚ ಸುದೀಪ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ. ಉಗ್ರರ ಈ ಹೇಯಕೃತ್ಯಕ್ಕೆ ನ್ಯಾಯ ಸಿಗಬೇಕು ಎಂದು ಸುದೀಪ್ ಆಗ್ರಹಿಸಿದ್ದಾರೆ.

ಸುದೀಪ್ ಟ್ವೀಟ್
"ಪಹಲ್ಗಾಮ್ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿ ನಿಜಕ್ಕೂ ಹೃದಯ ವಿದ್ರಾವಕ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ, ಬದಲಾಗಿ ನಮ್ಮ ರಾಷ್ಟ್ರದ ಸ್ಫೂರ್ತಿಯ ಮೇಲಿನ ದಾಳಿ. ಇದು ಸಂಯಮದ ಸಮಯವಲ್ಲ, ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ನೀಡಬೇಕಾದ ಸಮಯ" ಎಂದು ಸುದೀಪ್ ಆಕ್ರೋಶ ಹೊರ ಹಾಕಿದ್ದಾರೆ.
ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಟ್ಯಾಗ್ ಮಾಡಿ "ಈ ಹೇಡಿತನದ ಕೃತ್ಯದ ಹಿಂದಿರುವವರಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ" ಎಂದು ಸುದೀಪ್ ಬರೆದುಕೊಂಡಿದ್ದಾರೆ. ಸದ್ಯ ಸುದೀಪ್ 'ಬಿಲ್ಲ ರಂಗ ಬಾಷ' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. 'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಸೈನಿಕನ ಪಾತ್ರದಲ್ಲಿ ನಟಿಸಿದ್ದರು.
ಯಶ್ ಪೋಸ್ಟ್
"ಪಹಲ್ಗಾಮ್ನಲ್ಲಿ ಮುಗ್ಧ ಜನರನ್ನು ಕ್ರೂರವಾಗಿ ಹತ್ಯೆ ಮಾಡಿರುವುದು ತೀವ್ರ ದುಃಖ ತಂದಿದೆ. ಮುಗ್ಧ ವ್ಯಕ್ತಿಗಳ ಮೇಲಿನ ದಾಳಿಯನ್ನು ಊಹಿಸಲು ಸಾಧ್ಯವಿಲ್ಲ. ಈ ಭೀಕರ ದುರಂತದ ಶೋಕದಲ್ಲಿ ಬಲಿಪಶುಗಳ ಕುಟುಂಬಗಳು ಮತ್ತು ರಾಷ್ಟ್ರದೊಂದಿಗೆ ದೃಢವಾಗಿ ನಿಲ್ಲುತ್ತೇನೆ." ಎಂದು ಯಶ್ ಪೋಸ್ಟ್ ಮಾಡಿದ್ದಾರೆ.
ರಾಧಿಕಾ ಪೋಸ್ಟ್
"ಪಹಲ್ಗಾಮ್ನಲ್ಲಿ ಅಮಾಯಕರು ಬಲಿಯಾದ ಹೃದಯವಿದ್ರಾವಕ ಸುದ್ದಿಯಿಂದ ಆಘಾತವಾಗಿದೆ. ಈ ದುರಂತದಿಂದ ನೋವುಂಡ ಪ್ರತಿಯೊಂದು ಕುಟುಂಬದ ದುಃಖದಲ್ಲಿ ನಾನು ಭಾಗಿ ಆಗುತ್ತೇನೆ, ಧೈರ್ಯ ತುಂಬುವಂತೆ ಪ್ರಾರ್ಥಿಸುತ್ತೇನೆ" ಎಂದು ನಟಿ ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಶಿವಣ್ಣ ಪ್ರತಿಕ್ರಿಯೆ
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನಟ ಶಿವರಾಜ್ಕುಮಾರ್ ಪ್ರತಿಕ್ರಿಯಿಸಿದ್ದರು. "ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದದ ಭಾರತದಲ್ಲಿ ಇಂತಹ ಕೃತ್ಯಗಳು ಮರುಕಳಿಸದಿರಲಿ. ಹಾಗೆಯೇ ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಮತ್ತು ನಮ್ಮನ್ನು ಅಗಲಿದ ಎಲ್ಲಾ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತಾ ಎಲ್ಲಾ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ದೇವರು ನೀಡಲಿ. ಈ ಪೈಶಾಚಿಕ ಕೃತ್ಯ ಎಸಗುವವರ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸದಾ ಬೆಂಬಲವಿರುತ್ತದೆ" ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು.
'ಎಕ್ಕ' ಚಿತ್ರತಂಡ
ಯುವರಾಜ್ಕುಮಾರ್ ಹುಟ್ಟುಹಬ್ಬ(ಏಪ್ರಿಲ್ 23)ದ ಸಂಭ್ರಮದಲ್ಲಿ 'ಎಕ್ಕ' ಚಿತ್ರದ ಟೀಸರ್ ರಿಲೀಸ್ ಆಗಬೇಕಿತ್ತು. ಆದರೆ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆ ಚಿತ್ರತಂಡ ಸಂಭ್ರಮಾರಣೆ ಬೇಡ, ದೇಶದ ಶೋಕಾಚರಣೆಯಲ್ಲಿ ನಾವು ಭಾಗಿ ಆಗೋಣ. ನಾಳೆ(ಏಪ್ರಿಲ್ 24) ಸಿನಿಮಾ ಟೀಸರ್ ಬಿಡುಗಡೆ ಆಗುತ್ತದೆ ಎಂದು ಮಾಹಿತಿ ನೀಡಿದೆ. ಈ ಸಂಬಂಧ ಒಂದು ಪತ್ರ ಬರೆದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಎಲ್ಲಾ ಚಿತ್ರರಂಗದ ತಾರೆಯರು ಈ ಘಟನೆಯನ್ನು ಖಂಡಿಸುತ್ತಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ.


Click it and Unblock the Notifications











