ಈ ವಾರ ಬಿಡುಗಡೆ ಆಗಿರುವ ಕನ್ನಡ ಚಿತ್ರಗಳ ಪಟ್ಟಿ; ಯಾವ್ದು ಇಂಟ್ರೆಸ್ಟಿಂಗ್
ಗಣೇಶ ಹಬ್ಬದ ಸಡಗರ ಇನ್ನು ಕಮ್ಮಿ ಆಗಿದೆ. ಮತ್ತೆ ವೀಕೆಂಡ್ ಬಂದಿದ್ದು ಒಂದಷ್ಟು ಕನ್ನಡ ಸಿನಿಮಾಗಳು ತೆರೆಗೆ ಬಂದಿದೆ. ಕೆಲ ಸಿನಿಮಾಗಳು ಯಾವುದೇ ಪ್ರಚಾರ ಇಲ್ಲದೇ ಬಿಡುಗಡೆ ಆಗಿವೆ. ವಿನಯ್ ರಾಜ್ಕುಮಾರ್ ನಟನೆಯ 'ಅಂದೊಂದಿತ್ತು ಕಾಲ' ಸಿನಿಮಾ ಮಾತ್ರ ತಕ್ಕಮಟ್ಟಿಗೆ ಸದ್ದು ಮಾಡ್ತಿದೆ.
ಕಳೆದೊಂದು ತಿಂಗಳಲ್ಲಿ ಬಿಡುಗಡೆಯಾದ ದೊಡ್ಡ ಸಿನಿಮಾಗಳ ಆರ್ಭಟ ಇನ್ನು ಕಮ್ಮಿ ಆಗಿದೆ. ಕನ್ನಡದ 'ಸು ಫ್ರಂ ಸೋ' ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ. ಆನಿಮೇಷನ್ ಸಿನಿಮಾ 'ಮಹಾವತಾರ್ ನರಸಿಂಹ' 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ರಜನಿಕಾಂತ್ 'ಕೂಲಿ' ಹಾಗೂ ಹೃತಿಕ್, ತಾರಕ್ ನಟನೆಯ 'ವಾರ್- 2' ಚಿತ್ರಗಳು ಇನ್ನು ಪ್ರೇಕ್ಷಕರನ್ನು ರಂಜಿಸುತ್ತಲೇ ಇವೆ.

ಎರಡು ವಾರಗಳಿಂದ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಈ ವಾರ ಒಂದಷ್ಟು ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಕೆಲ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಕೂಡ ಎದುರಾಗಿದೆ. ಅದಕ್ಕೆ ಕಾರಣ ಕೂಡ ಇದೆ.
1. ಅಂದೊಂದಿತ್ತು ಕಾಲ
ಕೀರ್ತಿ ಕೃಷ್ಣ ನಿರ್ದೇಶನದ 'ಅಂದೊಂದಿತ್ತು ಕಾಲ' ಸಿನಿಮಾ ಈ ವಾರ ರಾಜ್ಯಾದ್ಯಂತ ತೆರೆಗೆ ಬಂದಿದೆ. ಬಹಳ ಹಿಂದೆ ಸೆಟ್ಟೇರಿದ್ದ ಚಿತ್ರಕ್ಕೆ ಅಂತೂ ಇಂತೂ ಬಿಡುಗಡೆ ಭಾಗ್ಯ ಸಿಕ್ಕಿದೆ. ವಿನಯ್ ರಾಜ್ಕುಮಾರ್ ಜೊತೆಗೆ ಅದಿತಿ ಪ್ರಭುದೇವ ಹಾಗೂ ನಿಶಾ ರವಿಕೃಷ್ಣನ್ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. 90ರ ದಶಕದ ಕಥಾಹಂದರ ಚಿತ್ರದಲ್ಲಿದೆ. ವಿನಯ್ ವಿಭಿನ್ನ ಲುಕ್ನಲ್ಲಿ ಮಿಂಚಿದ್ದಾರೆ.
ತೀರ್ಥಹಳ್ಳಿ ಹಾಗೂ ಬೆಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ರಾಘವೇಂದ್ರ ವಿ. ಸಂಗೀತ ಚಿತ್ರಕ್ಕಿದೆ. 180 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬಂದಿದೆ. ಭುವನ್ ಸುರೇಶ್ ಚಿತ್ರಕ್ಕೆ ಹಣ ಹೂಡಿದ್ದಾರೆ.

2. ರಿಪ್ಪನ್ ಸ್ವಾಮಿ
ವಿಜಯ್ ರಾಘವೇಂದ್ರ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 'ರಿಪ್ಪನ್ ಸ್ವಾಮಿ'. ಕಿಶೋರ್ ಮೂಡಬಿದ್ರೆ ನಿರ್ದೇಶನದಲ್ಲಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಹಳ್ಳಿಯ ಹಿನ್ನೆಲೆಯಲ್ಲಿ ಈ ಸಿನಿಮಾ ಕಥೆ ಸಾಗುತ್ತದೆ. ರಗಡ್ ಅವತಾರದಲ್ಲಿ ವಿಜಯ್ ಮಿಂಚಿದ್ದಾರೆ. ಇಡೀ ಮಲೆನಾಡನ್ನು ತಲ್ಲಣಗೊಳಿಸುವಂತಹ ಒಂದು ಅಪರಾಧ ಪ್ರಕರಣದ ಸುತ್ತಾ ಇಡೀ ಸಿನಿಮಾ ಸುತ್ತುತ್ತದೆ. ವಿಜಯ್ ಪತ್ನಿ ಪಾತ್ರದಲ್ಲಿ ಅಶ್ವಿನಿ ಚಂದ್ರಶೇಖರ್ ನಟಿಸಿದ್ದಾರೆ. ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಪ್ರಕಾಶ್ ತುಮ್ಮಿನಾಡು ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.
3. ಗೌರಿ ಶಂಕರ
ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಅಪೂರ್ವ ಗಂಡ ಹೆಂಡತಿಯಾಗಿ ನಟಿಸಿರುವ 'ಗೌರಿ ಶಂಕರ' ಸಿನಿಮಾ ಈ ವಾರವೇ ತೆರೆಗೆ ಬಂದಿದೆ. ಆದರೆ ಈ ಬಗ್ಗೆ ಹೆಚ್ಚು ಜನರಿಗೆ ಗೊತ್ತೇಯಿಲ್ಲ. ಕೇವಲ ಏಳೆಂಟು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಅನೀಶ್ ನಿರ್ದೇಶನದ ಈ ಸಿನಿಮಾ ಕಥೆ 3 ಪಾತ್ರಗಳ ಸುತ್ತಾ ಸುತ್ತುತ್ತದೆ. ವಿಭೀನ್ನ ಗೆಟಪ್ಗಳಲ್ಲಿ ಕ್ರೇಜಿಸ್ಟಾರ್ ಮಿಂಚಿದ್ದಾರೆ.
4. ವಿಷ್ಣುವರ್ಧನ
ಸೆಪ್ಟೆಂಬರ್ 2ರಂದು ನಟ ಸುದೀಪ್ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ಕಿಚ್ಚ ನಟಿಸಿದ್ದ 'ವಿಷ್ಣುವರ್ಧನ' ಸಿನಿಮಾ 3 ದಿನ ಮುನ್ನ ರೀ-ರಿಲೀಸ್ ಆಗಿದೆ. ಪಿ. ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಜಾಕಿ ಭಾವನಾ ಹಾಗೂ ಪ್ರಿಯಾಮಣಿ ನಾಯಕಿಯರಾಗಿ ಮಿಂಚಿದ್ದಾರೆ. ದ್ವಾರಕೀಶ್ ಚಿತ್ರ ಬ್ಯಾನರ್ ಅಡಿಯಲ್ಲಿ ಸಿನಿಮಾ 2011ರಲ್ಲಿ ಈ ಆಕ್ಷನ್ ಕಾಮಿಡಿ ಸಿನಿಮಾ ತೆರೆಗೆ ಬಂದಿತ್ತು.
ಇನ್ನುಳಿದಂತೆ ತಿಲಕ್ ಶೇಖರ್ ಹಾಗೂ ಪ್ರಿಯಾ ನಟನೆಯ 'ಉಸಿರು', ಮಮತಾ ರಾಹುತ್ ನಟನೆಯ 'ಮುರುಗ ಸನ್ ಆಫ್ ಕಾನೂನು' ಜೊತೆಗೆ 'ಬಾಲ್ಯ', 'ಗಂಗೆ ಗೌರಿ', 'ಸಿಂಹರೂಪಿಣಿ' ಎಂಬ ಹೊಸಬರ ಚಿತ್ರಗಳು ಈ ವಾರ ಬಿಡುಗಡೆಯಾಗಿದೆ.


Click it and Unblock the Notifications











