'ತಿಥಿ' ಗಡ್ಡಪ್ಪ ನಿಧನವಾಗಿ 2 ತಿಂಗಳಿಗೆ ಸೆಂಚುರಿ ಗೌಡ ಕೂಡ ವಿಧಿವಶ
ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸಿನಿಮಾ 'ತಿಥಿ'. ರಾಮ್ ರೆಡ್ಡಿ ನಿರ್ದೇಶನದಲ್ಲಿ ಈ ಚಿತ್ರದಲ್ಲಿ ಸೆಂಚುರಿ ಗೌಡ ಹಾಗೂ ಗಡ್ಡಪ್ಪ ಪಾತ್ರಗಳು ಪ್ರೇಕ್ಷಕರ ಮನಗೆದ್ದಿದ್ದರು. ಸೆಂಚುರಿ ಗೌಡ ಆಗಿ ನಟಿಸಿದ್ದ ಸಿಂಗ್ರಿಗೌಡ ಇದೀಗ ಕೊನೆಯುಸಿರೆಳೆದಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೆ ಗಡ್ಡಪ್ಪ ಪಾತ್ರಧಾರಿ ಚೆನ್ನೇಗೌಡ ವಿಧಿವಶರಾಗಿದ್ದರು.
'ತಿಥಿ' ಚಿತ್ರದಲ್ಲಿ ತಂದೆ ಮಗನಾಗಿ ಇವರಿಬ್ಬರು ನಟಿಸಿದ್ದರು. ತಮ್ಮ ಸಹಜ ನಟನೆಯಿಂದ ಮೋಡಿ ಮಾಡಿದ್ದರು. ಸಿಂಗ್ರಿಗೌಡ ಅವರಿಗೆ ನೂರು ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು. ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಿಂಗ್ರಿಗೌಡ ನಿನ್ನೆ(ಜನವರಿ 4ಪಾಂಡವಪುರ ತಾಲೂಕಿನ ಸಿಂಗ್ರೀಗೌಡನಕೊಪ್ಪಲಿನವರು)ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅವರ ಅಗಲಿಕೆಗೆ ಅಭಿಮಾನಿಗಳು, ಆಪ್ತರು ಸಂತಾಪ ಸೂಚಿಸುತ್ತಿದ್ದಾರೆ.

ಪಾಂಡವಪುರ ತಾಲೂಕಿನ ಸಿಂಗ್ರೀಗೌಡನಕೊಪ್ಪಲಿನವರು ಸಿಂಗ್ರಿಗೌಡ. 'ತಿಥಿ' ಬಳಿಕ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದರು. ಆ ಸಿನಿಮಾದಿಂದ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತ್ತು. ಅಭಿಮಾನಿಗಳು ಅವರೊಟ್ಟಿಗೆ ಫೋಟೊ ತೆಗಿಸಿಕೊಳ್ಳಲು ಮುಗಿಬೀಳುತ್ತಿದ್ದರು. ಆ ಚಿತ್ರಕ್ಕಾಗಿ 20 ಸಾವಿರ ಸಂಭಾವನೆ ಸಿಕ್ಕಿತ್ತು. ಯಾವುದೇ ನಟನೆಯ ಹಿನ್ನೆಲೆ ಇಲ್ಲದಿದ್ದರೂ ತಮ್ಮ ಸಹಜವಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹಳ್ಳಿ ಸೊಗಡಿನ ಡೈಲಾಗ್ಸ್ ಮೂಲಕ ರಂಜಿಸಿದ್ದರು.
ದೇಶ ವಿದೇಶದ ಚಿತ್ರೋತ್ಸವಗಳಲ್ಲಿ 'ತಿಥಿ' ಸಿನಿಮಾ ಪ್ರದರ್ಶನ ಕಂಡಿತ್ತು. ಆಮೀರ್ ಖಾನ್, ಅನುರಾಗ್ ಕಶ್ಯಪ್ ಸೇರಿದಂತೆ ಖ್ಯಾತ ನಾಮರು ಈ ಚಿತ್ರವನ್ನು ಕಲಾವಿದರ ನಟನೆಯನ್ನು ಮೆಚ್ಚಿಕೊಂಡಿದ್ದರು. ಚೀನಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು 'ತಿಥಿ' ಸಿನಿಮಾ ಪ್ರಶಸ್ತಿ ಪಡೆದಿತ್ತು. ಚೆನ್ನೇಗೌಡ ಅಗಲಿಕೆ ಬೆನ್ನಲ್ಲೇ ಸುದ್ದಿಮನೆ ಯೂಟ್ಯೂಬ್ ವಾಹಿನಿ ತಂಡದವರು ಸಿಂಗ್ರಿಗೌಡ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ಹಾಸಿಗೆ ಹಿಡಿದಿದ್ದ ಸಿಂಗ್ರಿಗೌಡ ಸಹಾಯಕ್ಕೆ ಮನವಿ ಮಾಡಿದ್ದರು. 'ತಿಥಿ' ಚಿತ್ರಕ್ಕೆ 20 ಸಾವಿರ ಸಂಭಾವನೆ ಕೊಟ್ಟಿದ್ದಾಗಿ ಇದೇ ಸಂದರ್ಶನದಲ್ಲಿ ಸೆಂಚುರಿ ಗೌಡ ಹೇಳಿದ್ದರು. 'ತಿಥಿ' ಚಿತ್ರದಲ್ಲಿ ನಟಿಸಿ ಸಿಂಗ್ರಿ ಗೌಡ ಬಹಳ ಜನಪ್ರಿಯತೆ ಗಳಿಸಿದ್ದರು. 2018ರಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರ ಪರವಾಗಿ ಸೆಂಚುರಿ ಗೌಡ ಚುನಾವಣಾ ಪ್ರಚಾರ ಕೂಡ ಮಾಡಿದ್ದರು. ಬೆಳ್ಳಾಳೆ ಗ್ರಾಮದಲ್ಲಿ ಸಿಂಗ್ರೀಗೌಡರ ಅಂತ್ಯ ಸಂಸ್ಕಾರ ನಡೆಯಲಿದೆ.
'ತಿಥಿ' ಸಿನಿಮಾ ಬಳಿಕ 'ತರ್ಲೆ ವಿಲೇಜ್', 'ಹಾಲುತುಪ್ಪ', 'ಚಿನ್ನದಗೊಂಬೆ', 'ಹಳ್ಳಿ ಪಂಚಾಯಿತಿ' ಹೀಗೆ ಕೆಲ ಸಿನಿಮಾಗಳಲ್ಲಿ ಸಿಂಗ್ರಿ ಗೌಡ ನಟಿಸಿದ್ದರು. ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ಕೂಡ ಸಾಥ್ ಕೊಟ್ಟಿದ್ದರು. ಹೀಗೆ 'ತಿಥಿ' ಸಿನಿಮಾದಿಂದ ಬಹಳ ಜನಪ್ರಿಯತೆ ಸಿಕ್ಕರೂ ಗಡ್ಡಪ್ಪ, ಸೆಂಚುರಿ ಗೌಡ ಹಾಗೂ ಅಭಿ ಜೀವನದಲ್ಲಿ ಅಷ್ಟೇನು ಬದಲಾವಣೆ ಆಗಲಿಲ್ಲ. 'ತಿಥಿ' ಚಿತ್ರದ ಕ್ರೇಜ್ನಲ್ಲೇ ನಾಲ್ಕೈದು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತ್ತು. ಬಳಿಕ ಸೈಲೆಂಟ್ ಆಗಿಬಿಟ್ಟರು.
ಅಭಿ ಪಾತ್ರಧಾರಿ ಅಭಿಷೇಕ್ ಇಂದಿಗೂ ತಮ್ಮ ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಟ್ರ್ಯಾಕ್ಟರ್ಗೆ ಮರಗಳನ್ನು ತುಂಬಿಸುತ್ತಿದ್ದ ಅಭಿ ವೀಡಿಯೋ ಇತ್ತೀಚೆಗೆ ಸಖತ್ ವೈರಲ್ ಆಗಿತ್ತು. ಅಚಾನಕ್ ಆಗಿ ತಿಥಿ ಚಿತ್ರಕ್ಕೆ ಸಿಂಗ್ರಿ ಗೌಡ ಆಯ್ಕೆ ಆಗಿದ್ದರು. ಸಿಂಗ್ರಿಗೌಡ ಅವರ ಅಣ್ಣನ ಅಗಲಿ ತಿಥಿಗೆ ನಿರ್ದೇಶಕ ರಾಮ್ ರೆಡ್ಡಿ ಹೋಗಿದ್ದರು. ಅದೇ ವೇಳೆ ಸಿಂಗ್ರಿಗೌಡ ಅವರ ನಡೆ ನುಡಿ ನೋಡಿ ಚಿತ್ರದಲ್ಲಿ ನಟಿಸೋ ಅವಕಾಶ ಕೊಟ್ಟಿದ್ದರು.
ಕಳೆದ ವರ್ಷ ನವೆಂಬರ್ 12ರಂದು 'ತಿಥಿ' ಚಿತ್ರದ ಗಡ್ಡಪ್ಪ ಚನ್ನೇಗೌಡ್ರು ಕೂಡ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದರು. ಚನ್ನೇಗೌಡ್ರು ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದವರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಡ್ಡಪ್ಪ ಮನೆಯಲ್ಲೇ ಎಡವಿ ಬಿದ್ದು ಸೊಂಟಕ್ಕೆ ಬಲವಾಗಿ ಪೆಟ್ಟು ಮಾಡಿಕೊಂಡು ಹಾಸಿಗೆ ಹಿಡಿದಿದ್ದರು.


Click it and Unblock the Notifications











