ಸ್ವತಂತ್ರ ನಿರ್ದೇಶಕರಾಗಲು ಹೊರಟಿದ್ದಾರೆ 'ತಿಥಿ' ಕಥೆಗಾರ
ಅಂತಾರಾಷ್ಟ್ರಿಯ ಪ್ರಶಸ್ತಿಯಿಂದ ಹಿಡಿದು ರಾಜ್ಯ ಪ್ರಶಸ್ತಿವರೆಗೂ ಎಲ್ಲಾ ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಂಡು ಎಲ್ಲೆಡೆ ಸುದ್ದಿ ಮಾಡುತ್ತಿರುವ ಕನ್ನಡದ ಅತ್ಯುತ್ತಮ ಚಿತ್ರ 'ತಿಥಿ' ಸಿನಿಮಾದ ಸಂಭಾಷಣೆಕಾರ ಈರೆ ಗೌಡ ಅವರು ಸ್ವತಂತ್ರ ನಿರ್ದೇಶಕನಾಗುವತ್ತ ತಮ್ಮ ಚಿತ್ತ ಹರಿಸಿದ್ದಾರೆ.
ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಪ್ರಶಸ್ತಿ ಪಡೆದುಕೊಂಡ 'ತಿಥಿ' [ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ] ಸಿನಿಮಾಗೆ ಚಿತ್ರಕಥೆ ಸೇರಿದಂತೆ ಸಂಭಾಷಣೆ ಬರೆದ ಈರೆ ಗೌಡ ಅವರು ಸ್ವತಃ ತಾವೇ ನಿರ್ದೇಶನ ಮಾಡಿ ಸಿನಿಮಾ ಒಂದನ್ನು ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

ಮುಂದಿನ ಚಿತ್ರಕ್ಕೆ ಈಗಾಗಲೇ ಸ್ಕ್ರಿಪ್ಟ್ ರೆಡಿ ಮಾಡಿರುವ ಈರೆ ಗೌಡ ಅವರು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸಲಿದ್ದಾರಂತೆ. 'ತಿಥಿ' ಚಿತ್ರದ ನಿರ್ದೇಶಕ ರಾಮ್ ರೆಡ್ಡಿ ಅವರ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವ ಇರುವ ಈರೆ ಗೌಡ ಮೊದಲ ಬಾರಿಗೆ ಸ್ವತಂತ್ರವಾಗಿ ಚಿತ್ರವೊಂದಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ.

ಇನ್ನೂ ಹೆಸರಿಡದ ಚಿತ್ರವಾದರೂ ಇದು ಕೂಡ ಸಂಬಂಧಗಳ ಬಗೆಗಿನ ಡ್ರಾಮಾವಾಗಿದ್ದು, ಮಧ್ಯವಯಸ್ಕ ದಂಪತಿಗಳ ಸುತ್ತ ಸುತ್ತುವ ಕಥೆ ಎಂದಿದ್ದಾರೆ ಈರೆ ಗೌಡ.['ತಿಥಿ'ಯಲ್ಲಿ ಪಾಲ್ಗೊಂಡ ವಿಮರ್ಶಕರು ಹೇಳಿದ್ದೇನು?]

ಜೊತೆಗೆ ಈ ಬಾರಿ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ವೃತ್ತಿಪರ ನಟರ ಹುಡುಕಾಟದಲ್ಲಿ ತೊಡಗಿರುವ ಈರೆ ಗೌಡ ಮುಖ್ಯ ಪಾತ್ರಧಾರಿಗೆ ನುರಿತ ನಟನನ್ನೇ ಆಯ್ಕೆ ಮಾಡಿಕೊಳ್ಳುತ್ತಾರಂತೆ. ಉಳಿದ ಪಾತ್ರಗಳಿಗೆ ಹೊಸಬರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಹೊಸ ತಂತ್ರಜ್ಞರು ಈ ಚಿತ್ರದ ಮೂಲಕ ಪರಿಚಯವಾಗಲಿದ್ದಾರೆ ಎನ್ನುತ್ತಾರೆ ಈರೆ ಗೌಡ.


Click it and Unblock the Notifications











