ಅಂಬರೀಶ್ ಅಂತಿಮ ದರ್ಶನ ಪಡೆಯಲು ನೂಕುನುಗ್ಗಲು: ಹೊಡೆದಾಡಿಕೊಂಡ ಅಭಿಮಾನಿಗಳು.!
ರೆಬೆಲ್ ಸ್ಟಾರ್ ಅಂಬರೀಶ್ ಅಂತಿಮ ದರ್ಶನದ ಹಿನ್ನೆಲೆ ಮಂಡ್ಯದ ಸರ್.ಎಂ.ವಿ ಮೈದಾನ ಅಕ್ಷರಶಃ ಅಭಿಮಾನಿಗಳ ಭಾವೋದ್ವೇಗದ ಪ್ರದರ್ಶನದ ವೇದಿಕೆಯಾದಂತಿದೆ.
ಸಾಗರೋಪಾದಿಯಲ್ಲಿ ಅಭಿಮಾನಿಗಳು ಹರಿದು ಬಂದ ಹಿನ್ನೆಲೆ ನಾಳೆ ಬೆಳಿಗ್ಗೆ 6 ಕ್ಕೆ ತೆರಳಬೇಕಿದ್ದ ಪಾರ್ಥೀವ ಶರೀರ ತಡವಾಗಿ ತೆರಳಲಿದೆ. ಇದೇ ವೇಳೆ ತವರೂರಿನ ಮಗನ ಅಂತಿಮ ದರ್ಶನದ ವೇಳೆ ಆಯಾಸ ನಿವಾರಣೆಗಾಗಿ ಸ್ಥಳದಲ್ಲಿ ಯರಹಳ್ಳಿ ಪುಟ್ಟಸ್ವಾಮಿ ತಂಡದಿಂದ ಇಡೀ ರಾತ್ರಿ ಭಜನೆ ಸಹ ಏರ್ಪಡಿಸಲಾಗಿತ್ತು.
ನಿರೀಕ್ಷೆಗೂ ಮೀರಿದ ಜನಸಂಖ್ಯೆ ಹರಿದುಬರುತ್ತಿದ್ದ ಹಿನ್ನೆಲೆ ಕೆಲಕಾಲ ಬ್ಯಾರಿಕೇಡ್ ಕಿತ್ತು ಬೀಳದಂತೆ ಪೋಲೀಸರು ಹಿಡಿದು ನಿಂತಿದ್ದರು. ಆದರೆ ಏಕಾಏಕಿ ನುಗ್ಗಿದ ಪರಿಣಾಮ ಬ್ಯಾರಿಕೇಡ್ ಮುರಿದುಬಿತ್ತು.
ಅಲ್ಲದೇ ತಳ್ಳಾಟದ ನಡುವೆ ಹೊಡೆದಾಡಿಕೊಂಡ ಇಬ್ಬರು ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಮುಂದೆ ಓದಿರಿ...

ನಗುತ್ತಿದ್ದ ಜನ
ಜನರ ನಿಯಂತ್ರಣಕ್ಕಾಗಿ ಕ್ರೀಡಾಂಗಣಕ್ಕೆ 100ಕ್ಕೂ ಹೆಚ್ಚು ಸೇನಾ ಪಡೆ ಸಿಬ್ಬಂದಿ ನಿಯೋಜನೆಗೊಂಡಿತ್ತಾದರೂ, ಏಕಾಏಕಿ ಜನರು ನುಗ್ಗುತ್ತಲೇ ಇದ್ದರು. ಕೇವಲ ಮಂಡ್ಯದಿಂದ ಮಾತ್ರವಲ್ಲ ಗಡಿ ಜಿಲ್ಲೆ ಚಾಮರಾಜನಗರ ಮತ್ತು ಮೈಸೂರಿನಿಂದ ಅಭಿಮಾನಿಗಳು ವಿಶ್ವೇಶ್ವರಯ್ಯ ಮೈದಾನದ ಕಡೆ ತಂಡೋಪತಂಡವಾಗಿ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜಿ.ಮಾದೇಗೌಡ ಏನಂದರು.?
ಮುಖಂಡರಾದ ಜಿ.ಮಾದೇಗೌಡ, ''ಅಂಬರೀಶ್ ನಮ್ಮೂರಿನ ಹುಡುಗ, ಅಂಬರೀಶ್ ತಂದೆ ಮತ್ತು ನಾನು ಮೈಸೂರು ದಸರೆಗೆ ಹೋಗುತ್ತಿದ್ದಾಗ ಈತ ಚಿಕ್ಕ ಹುಡುಗ, ಅಂಬರೀಶ್ ರ ತಂದೆ ನನಗೆ ಗುರುಗಳಾಗಿದ್ದರು, ನಾನು ಚುನಾವಣೆಗೆ ನಿಂತಾಗ ಅಂಬರೀಶ್ ಕಾಲೇಜಿಗೆ ಹೋಗುತ್ತಿದ್ದರು, ಶನಿವಾರ ಭಾನುವಾರ ರಜಾ ದಿನಗಳಲ್ಲಿ ಅಂಬರೀಶ್ ನನಗೆ ಮತ ಪ್ರಚಾರ ಮಾಡುತ್ತಿದ್ದರು'' ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿದರು.

ಜಿ.ಟಿ.ದೇವೇಗೌಡ ಏನಂದರು.?
ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ''ಅಂಬರೀಶ್ ಕುದುರೆಗಳನ್ನು ಸಾಕಿದ್ದರು, ಅಲ್ಲದೇ ಅವರು ಪ್ರಾಣಿ ಪ್ರಿಯರು ಕೂಡ. ಅವರು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದರು. ಕಾವೇರಿ ವಿಚಾರ ಬಂದಾಗ ಕೇಂದ್ರದಲ್ಲಿ ರಾಜೀನಾಮೆ ನೀಡಿದ್ದರು. ಖಡಕ್ ಮಾತು, ಏಕವಚನ ಮೂಲಕ ಗಮನ ಸೆಳೆದಿದ್ದರು. ಅವರು ಕೇವಲ ಮಂಡ್ಯದ ಗಂಡಲ್ಲ, ನಾಡಿನ ಗಂಡು'' ಎಂದು ಅವರನ್ನು ಸ್ಮರಿಸಿದರು.

ಕಂಬನಿ ಮಿಡಿದ ಗಣೇಶ್
ಇನ್ನು ನಟ ರೆಬೆಲ್ ಸ್ಟಾರ್ ಅಂಬರೀಶ್ ನಿಧನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕಂಬನಿ ಮಿಡಿದಿದ್ದಾರೆ. ''ಒಳ್ಳೆಯ ವಿಷಯ ಏನೇ ಇದ್ದರೂ ಮೊದಲಿಗೆ ಅಣ್ಣನಿಗೆ ಹೇಳುತ್ತಿದ್ದೆವು. ಯಾವುದೇ ಕಾರ್ಯಕ್ರಮ ಇದ್ದರೂ ಅವರು ಬಂದರೆ ಅದಕ್ಕೆ ಒಂದು ಕಳೆ ಇರುತ್ತಿತ್ತು, ನಮ್ಮ ಕುಟುಂಬ ಹಿರಿಯಣ್ಣನನ್ನು ಕಳೆದುಕೊಂಡಿದ್ದೇವೆ. ಮನಸ್ಸಿಗೆ ದುಃಖ ಆಗುತ್ತಿದೆ'' ಎಂದು ನಟ ಗಣೇಶ್ ಮರುಗಿದ್ದಾರೆ. ಇದೇ ವೇಳೆ ಮಾಜಿ ಸಚಿವ ನರೇಂದ್ರ ಸ್ವಾಮಿ ಹಾಗೂ ಸುತ್ತೂರು ಶ್ರೀಗಳು ಸಹ ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು.


Click it and Unblock the Notifications











