ಪುನೀತ್ ಸಾವಿನ ಸುದ್ದಿ ಕೇಳಿ ಮೂವರು ಅಭಿಮಾನಿಗಳು ಸಾವು, ಮೂವರಿಂದ ಆತ್ಮಹತ್ಯೆ ಯತ್ನ
ನಟ ಪುನೀತ್ ರಾಜ್ಕುಮಾರ್ ಅಗಲಿಕೆ ಕನ್ನಡ ಚಿತ್ರಪ್ರೇಮಿಗಳನ್ನು, ಅಭಿಮಾನಿಗಳನ್ನು ಬಹುವಾಗಿ ಕಾಡುತ್ತಿದೆ. ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳು ನಟನ ಅಂತಿಮ ದರ್ಶನ ಪಡೆಯಲು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ.
ಆದರೆ ಇದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬ ತೀರಾ ಅತಿರೇಕದ ಕಾರ್ಯ ಮಾಡಿದ್ದಾನೆ. ಪುನೀತ್ ರಾಜ್ಕುಮಾರ್ ಇಲ್ಲದ ಜಗತ್ತಿನಲ್ಲಿ ಇರಲಾರೆನೆಂದು ಆತ್ಮಹತ್ಯೆ ಮಾಡಿಕೊಂಡು ಮರಣ ಹೊಂದಿದ್ದಾನೆ. ಆತ್ಮಹತ್ಯೆಗೆ ಮುನ್ನ ಪುನೀತ್ ರಾಜ್ಕುಮಾರ್ ಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾನೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ರಾಹುಲ್ ಗಡಿವಡ್ಡರ ಎಂಬಾತ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ. ಪುನೀತ್ ಅಸುನೀಗಿದ ವಿಷಯ ತಿಳಿಯುತ್ತಿದ್ದಂತೆ ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ ಕೋರುವ ಫ್ಲೆಕ್ಸ್ ಹಾಕಿಸಿ ಅದರ ಮುಂದೆ ಕರ್ನಾಟಕದ ಚಿತ್ರ ಬರೆದು ಅದಕ್ಕೆ ಪೂಜೆ ಸಲ್ಲಿಸಿ, ಆ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮತ್ತೊಂದು ಪ್ರಕರಣದಲ್ಲಿ, ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಕಮಲಾಪುರದ ಬಂಡಿಕೇರಿ ನಿವಾಸಿ ಸಾದಪ್ಪ (40) ಎಂಬಾತ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.
ಇನ್ನು ಸಿಂಧನೂರಿನಲ್ಲಿ ಇಬ್ಬರು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿಯಲ್ಲಿ ಆಟೋ ಡ್ರೈವರ್ ಆಗಿರುವ ಸತೀಶ್ ಎಂಬಾತ ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿದ್ದು, ಅಪ್ಪು ಸಾವಿನ ನೋವು ತಾಳಲಾರದೆ ತನ್ನ ಕೈಯನ್ನೇ ಜಜ್ಜಿಕೊಂಡು ಗಾಯ ಮಾಡಿಕೊಂಡಿದ್ದಾನೆ.
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮುನಿಯಪ್ಪ (29) ಎಂಬಾತ ಪುನೀತ್ ರಾಜ್ಕುಮಾರ ನಿಧನವಾದ ಸುದ್ದಿ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮುನಿಯಪ್ಪ ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿದ್ದ. ಹೊಲಕ್ಕೆ ಹೋಗಿದ್ದ ಮುನಿಯಪ್ಪ, ವಾಪಸ್ ಬಂದ ಕೂಡಲೇ ಮನೆಯವರಿಂದ ವಿಷಯ ತಿಳಿದು ಬಂದಿದ್ದು ಕೂಡಲೇ ಹೃದಯಾಘಾತದಿಂದ ಅಸುನೀಗಿದ್ದಾನೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777


Click it and Unblock the Notifications











