ಪರಭಾಷಾ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಲು ಅಸಡ್ಡೆ ಯಾಕೆ?
ಕನ್ನಡದಲ್ಲಿ ಡಬ್ಬಿಂಗ್ ಬೇಕು, ಬೇಡ ಎನ್ನುವ ಚರ್ಚೆ ಬಹಳ ದಿನಗಳ ಕಾಲ ನಡೀತು. ಅಂತಿಮವಾಗಿ ಕರ್ನಾಟಕದಲ್ಲಿ ಸಿನಿಮಾಗಳನ್ನು ಡಬ್ ಮಾಡಿ ರಿಲೀಸ್ ಮಾಡಲು ಅವಕಾಶ ಸಿಕ್ಕಿತ್ತು. ಕಳೆದ ಏಳೆಂಟು ವರ್ಷಗಳಿಂದ ಕೆಲ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಿದೆ. ಆದರೆ ಇವತ್ತಿಗೂ ಕೆಲವರು ಸಿನಿಮಾ ಡಬ್ ಮಾಡಿ ಬಿಡಲು ಮೀನಾಮೇಷ ಎಣಿಸುತ್ತಿದ್ದಾರೆ.
ಮುಖ್ಯವಾಗಿ ಬಾಲಿವುಡ್ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬರುತ್ತಿಲ್ಲ. ಶಾರುಖ್ ಖಾನ್, ಸಲ್ಮಾನ್ ಖಾನ್ರಂತಹ ಸೂಪರ್ ಸ್ಟಾರ್ಗಳ ಸಿನಿಮಾಗಳನ್ನು ಡಬ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ 'ದಂಬಾಂಗ್- 3' ಸೇರಿ ಕೆಲ ಚಿತ್ರಗಳು ಡಬ್ ಆಗಿದ್ದವು. ಆದರೆ ಮತ್ತೆ ಅದನ್ನು ಮರೆತಿರುವಂತೆ ಕಾಣುತ್ತಿದೆ. ಆಯಾ ಭಾಷೆಗಳಲ್ಲೇ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ವಿತರಕರನ್ನು ಕೇಳಿದಂತೆ ಬೇಡಿಕೆಗೆ ತಕ್ಕಂತೆ ಸಿನಿಮಾ ಪ್ರದರ್ಶನ ಎಂದು ಉದ್ದಟತನದ ಉತ್ತರ ಕೊಡುತ್ತಾರೆ. ಈ ಬಗ್ಗೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.

ರಜನಿಕಾಂತ್ ನಟನೆಯ 'ಜೈಲರ್' ಹಾಗೂ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸರಣಿ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಯಶಸ್ಸು ಕಂಡಿದ್ದವು. ಪರಭಾಷಾ ಸಿನಿಮಾಗಳನ್ನು ತಮ್ಮದೇ ಭಾಷೆಯಲ್ಲಿ ನೋಡಲು ಪ್ರೇಕ್ಷಕರು ಸಿದ್ಧರಿದ್ದಾರೆ. ಆದರೆ ಬೇಕಂತಲೇ ಪರಭಾಷಾ ಸಿನಿಮಾ ನಿರ್ಮಾಪಕರು ಇದಕ್ಕೆ ಒಪ್ಪುತ್ತಿಲ್ಲ. ಕೆಲ ಸಿನಿಮಾಗಳನ್ನು ಡಬ್ ಮಾಡಿ ಓಟಿಟಿಯಲ್ಲಿ ರಿಲೀಸ್ ಮಾಡುತ್ತಾರೆ. ಆದರೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡುತ್ತಿಲ್ಲ.
ಸದ್ಯ ಕನ್ನಡ ಭಾಷೆಯ ಹಿನ್ನಲೆ ಬಗ್ಗೆ ಮಾತನಾಡಿ ತಮಿಳು ನಟ ಕಮಲ್ ಹಾಸನ್ ವಿವಾದಕ್ಕೆ ಸಿಲುಕಿದ್ದಾರೆ. ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೇಳದಿದ್ದರೆ 'ಥಗ್ ಲೈಫ್' ಚಿತ್ರವನ್ನು ಕರ್ನಾಟಕದಲ್ಲಿ ಬಹಿಷ್ಕರಿಸುವುದಾಗಿ ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಇದರ ನಡುವೆ 'ಥಗ್ ಲೈಫ್' ಚಿತ್ರವನ್ನು ಕೂಡ ಕನ್ನಡಕ್ಕೆ ಡಬ್ ಮಾಡಿಲ್ಲ. ಇದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಸಣ್ಣ ಟೀಸರ್ ಬಿಟ್ಟು 'ಥಗ್ ಲೈಫ್' ಚಿತ್ರವನ್ನು ಹಿಂದೆ ಘೋಷಣೆ ಮಾಡಲಾಗಿತ್ತು. ಆಗ ಕನ್ನಡದಲ್ಲಿ ಕೂಡ ಸಿನಿಮಾ ಮೂಡಿ ಬರುತ್ತದೆ ಎಂದು ಹೇಳಲಾಗಿತ್ತು. ಕನ್ನಡ ವರ್ಷನ್ ಟೀಸರ್ ಕೂಡ ಬಂದಿತ್ತು. ಆದರೆ ಚಿತ್ರದ ಕನ್ನಡ ಹಾಡುಗಳು ಹಾಗೂ ಟ್ರೈಲರ್ ಮಾತ್ರ ಬಿಡುಗಡೆ ಆಗಲಿಲ್ಲ. ಅಲ್ಲಿಗೆ ಸಿನಿಮಾ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬರುವುದಿಲ್ಲ ಎನ್ನುವು ಖಾತ್ರಿ ಆಗುತ್ತಿದೆ. ತೆಲುಗು ಹಾಗೂ ಹಿಂದಿ ಭಾಷೆಗೆ ಮಾತ್ರ ಡಬ್ ಮಾಡಲಾಗಿದೆ.
ಹೃತಿಕ್ ರೋಷನ್ ಹಾಗೂ ಜ್ಯೂ. ಎನ್ಟಿಆರ್ ನಟನೆಯ 'ವಾರ್- 2' ಸಿನಿಮಾ ಕೂಡ ಬಿಡುಗಡೆಗೆ ಅಣಿಯಾಗುತ್ತಿದೆ. ಆಗಸ್ಟ್ 14ರಂದು ಸಿನಿಮಾ ತೆರೆಗಪ್ಪಳಿಸಲಿದೆ. ಈ ಚಿತ್ರವನ್ನು ಕೂಡ ತೆಲುಗು ಹಾಗೂ ತಮಿಳು ಭಾಷೆಗಳಿಗೆ ಮಾತ್ರ ಡಬ್ ಮಾಡಿದ್ದಾರೆ. ಕನ್ನಡದಲ್ಲಿ ಯಾಕೆ ಡಬ್ ಮಾಡುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ. ಈ ಬಗ್ಗೆ ಯಶ್ ರಾಜ್ ಫಿಲ್ಮ್ಸ್ ಬೆಂಗಳೂರು ಕಚೇರಿ ಮ್ಯಾನೇಜರ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದರು. ಇದು ನಮ್ಮ ಚಿತ್ರ ನಿರ್ಮಾಪಕರ ನಿರ್ಧಾರ, ನಮಗೆ ಈ ಬಗ್ಗೆ ಗೊತ್ತಿಲ್ಲ ಎಂದಿದ್ದರು.
ಕರ್ನಾಟಕದಲ್ಲಿ ಭಾರೀ ಕ್ರೇಜ್ ಇರುವ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಿದರೆ ಜನ ಕಂಡಿತ ನೋಡುತ್ತಾರೆ. ಕೆಲ ಸಿನಿಮಾಗಳನ್ನು ನಾಮಕಾವಸ್ತೆಗೆ ಡಬ್ ಮಾಡಿದರೂ ಸರಿಯಾಗಿ ಶೋಗಳನ್ನು ಕೊಡುವುದಿಲ್ಲ. ಕನ್ನಡಕ್ಕಿಂತ ಹೆಚ್ಚು ಪರಭಾಷೆಯ ವರ್ಷನ್ ಶೋಗಳನ್ನೆ ಹೆಚ್ಚು ಹಾಕಲಾಗುತ್ತದೆ. ಈ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಕನ್ನಡಕ್ಕೆ ಡಬ್ ಮಾಡದಿದ್ದರೆ ನಾವು ನೋಡುವುದಿಲ್ಲ ಎಂದು ಹೇಳುತ್ತಿದ್ದಾರೆ.
ತೆಲುಗು, ತಮಿಳಿನ ಸಿನಿಮಾಗಳನ್ನು ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆ 6 ಗಂಟೆಗೆ ಪ್ರದರ್ಶನ ಮಾಡಲು ಆರಂಭಿಸುತ್ತಾರೆ. ಟಿಕೆಟ್ ದರ ಹೆಚ್ಚಿಸಿ ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕುತ್ತಾರೆ. ಆದರೆ ಡಬ್ಬಿಂಗ್ ಮಾಡಲು ಸಿದ್ಧರಿಲ್ಲ. ಪರಭಾಷಾ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಲು ಕೆಲವರು ಹಿಂದೇಟು ಹಾಕುತ್ತಿರುವ ಬಗ್ಗೆ ಕನ್ನಡ ಪರ ಕಾರ್ಯಕರ್ತ ಅರುಣ್ ಜಾವಗಲ್ ಫಿಲ್ಮಿಬೀಟ್ಗೆ ಪ್ರತಿಕ್ರಿಯಿಸಿದ್ದಾರೆ. ಮೊದಲಿನಿಂದಲೂ ಇವರು ಕನ್ನಡಕ್ಕೆ ಡಬ್ಬಿಂಗ್ ಬೇಕು ಎಂದು ಹೋರಾಟ ನಡೆಸುತ್ತಾ ಬಂದಿದ್ದಾರೆ.
"ಎಲ್ಲರಿಗೂ ತಮ್ಮ ಭಾಷೆಯಲ್ಲಿ ಮನರಂಜನೆ ಪಡೆಯುವ ಅವಕಾಶ ಇದೆ. ಡಬ್ಬಿಂಗ್ ಭಾಷೆ ಉಳಿಸಲು ಇರುವಂತಹ ಒಂದು ಸಾಧನ. ಅದನ್ನು ನಾವು ಬಿಟ್ಟುಕೊಡಬಾರದು. ನಮ್ಮ ಇಂಡಸ್ಟ್ರಿಯಲ್ಲಿರುವ ಕೆಲವರು ಇದಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಕನ್ನಡ ಪರ ಎಂದು ಹೇಳಿಕೊಳ್ಳುತ್ತಾರೆ. ಆದರೆ ಬೇಕು ಎಂದಾಗ ಮಾತ್ರ ಬಳಸಿಕೊಳ್ಳುತ್ತಾರೆ. ನಿಜವಾಗಿಯೂ ಕನ್ನಡದ ಪ್ರೀತಿ ಇದ್ದರೆ ಎಲ್ಲಾ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡುವಂತೆ ಆಗ್ರಹಿಸುತ್ತಿದ್ದರು" ಎಂದು ಅರುಣ್ ಜಾವಗಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಕೆಲವು ಭಾಗಗಳಲ್ಲಿ ಪರಭಾಷಿಕರು ನೆಲೆಸಿದ್ದಾರೆ. ಅಂತಹ ಜಾಗಗಳಲ್ಲಿ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿ. ಆದರೆ ಮಂಡ್ಯ, ಮೈಸೂರು, ಹುಬ್ಬಳ್ಳಿ ರೀತಿಯ ಕನ್ನಡ ಭಾಷಿಕರು ಹೆಚ್ಚಿರುವ ಜಾಗಗಳಲ್ಲಿ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಬೇಕು. ಯಶ್ ಫಿಲ್ಮ್ಸ್ ಬ್ಯಾನರ್ ಅವರಿಗೆ ತಮ್ಮ ಭಾಷೆ ಹರಡಬೇಕು ಎನ್ನುವ ಉದ್ದೇಶ. ಹಾಗಾಗಿ ನೇರವಾಗಿ ನಮ್ಮ ಭಾಷೆಯಲ್ಲೇ ಬಿಡುಗಡೆ ಮಾಡ್ತೀವಿ ಎನ್ನುತ್ತಾರೆ. ಆದರೆ ನಮ್ಮಲ್ಲೇ ಕೆಲವರು ಯಾಕೆ ಇದಕ್ಕೆ ಒಪ್ಪುತ್ತಾರೆ? ಯಾಕೆ ಈ ಬಗ್ಗೆ ಮಾತನಾಡಲ್ಲ? ಎಂದು ಅರುಣ್ ಜಾವಗಲ್ ಪ್ರಶ್ನಿಸಿದ್ದಾರೆ.
"ನಮ್ಮಲ್ಲಿ ಕೆಲವರು ಹೇಗೆ ಅಂದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡ ಸಿನಿಮಾವನ್ನು ಬೇರೆ ಭಾಷೆಯಲ್ಲಿ ತೋರಿಸುತ್ತಾರೆ. ಆದರೆ ಕನ್ನಡಿಗರಿಗೆ ಕನ್ನಡದಲ್ಲೇ ಸಿನಿಮಾ ತೋರಿಸಬೇಕು ಎನ್ನುವ ಬಗ್ಗೆ ಕಾಳಜಿ ಇಲ್ಲ. ಅಕ್ಕ ಪಕ್ಕದ ಇಂಡಸ್ಟ್ರಿಗಳ ಜೊತೆ ಚೆನ್ನಾಗಿ ಇರಬೇಕು, ಹಿಡಿತ ಇಟ್ಟುಕೊಳ್ಳಬೇಕು, ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆಲವರು ಈ ರೀತಿ ಮಾಡುತ್ತಾರೆ. ಅಣ್ಣಾವ್ರ ಕಾಲದ ಸನ್ನಿವೇಶ ಬೇರೆ. ಈಗ ಬೇರೆ. ಈ ಡಬ್ಬಿಂಗ್ ಬೇಡ ಎನ್ನಲು ಯಾವುದೇ ಕಾರಣ ಇಲ್ಲ" ಎಂದು ಅರುಣ್ ಜಾವಗಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪರಭಾಷಾ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಲು ಯಾಕೆ ಅಸಡ್ಡೆ ಎನ್ನುವ ಬಗ್ಗೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾತನಾಡಿದ್ದಾರೆ. "ಎಲ್ಲಾ ಸೇವೆಗಳು ಕರ್ನಾಟಕದಲ್ಲಿ ಕನ್ನಡದಲ್ಲೇ ಸಿಗಬೇಕು ಎನ್ನುವುದು ಎಲ್ಲರ ಮೂಲ ಒತ್ತಾಯ. ಕಾರ್ಟೂನ್, ಆನಿಮೇಷನ್ ಚಿತ್ರಗಳನ್ನು ಹಿಂದಿ, ತಮಿಳು, ತೆಲುಗಿನಲ್ಲಿ ಕರ್ನಾಟಕದಲ್ಲಿ ಮಕ್ಕಳು ಯಾಕೆ ನೋಡಬೇಕು. ಆದರೆ ನಮ್ಮ ಮಕ್ಕಳು ಕನ್ನಡದಲ್ಲಿ ಅದನ್ನೆಲ್ಲ ನೋಡುವ ಅವಕಾಶ ಇಲ್ಲ. ಮಗುವಿನ ನಮ್ಮ ಭಾಷೆಯಲ್ಲಿ ಎಲ್ಲವನ್ನು ಪರಿಚಯ ಮಾಡಿಕೊಡಲಿಲ್ಲ ಅಂದರೆ ಮುಂದೆ ಹೇಗೆ?" ಎಂದು ರೂಪೇಶ್ ರಾಜಣ್ಣ ಕೇಳಿದ್ದಾರೆ.
ಈ ಅಸಡ್ಡೆ ಯಾಕೆ ಎಂದಿರುವ ರೂಪೇಶ್ ರಾಜಣ್ಣ "ಕರ್ನಾಟಕದಲ್ಲಿ ಒಂದು 100 ಶೋಗಳಲ್ಲಿ ಸಿನಿಮಾ ಬಿಡುಯಾದರೆ ಐದತ್ತು ಶೋ ಆಯಾ ಆ ಭಾಷೆಯಲ್ಲೇ ಕೊಡಲಿ ಏನು ಮಾಡಲು ಸಾಧ್ಯವಿಲ್ಲ. ಆದರೆ ಉಳಿದ 90ರಷ್ಟು ಶೋಗಳನ್ನು ಕನ್ನಡದಲ್ಲೇ ಕೊಡಬೇಕು. ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ಪರಭಾಷಿಕರಿಗೆ ಕೊಂಚ ಅಸಡ್ಡೆ ಇದೆ. ಯಾವ ಭಾಷೆಯಲ್ಲಿ ಹಾಕಿದರೂ ನೋಡುತ್ತಾರೆ ಎನ್ನುವ ಮನೋಭಾವನೆ ಇದೆ. ಅದನ್ನು ಬಿಡಬೇಕು" ಎಂದು ಆಗ್ರಹಿಸಿದ್ದಾರೆ.


Click it and Unblock the Notifications











