ಹುಲಿ ಉಗುರು ಪ್ರಕರಣ: ಜಾಮೀನು ಪಡೆದ 'ಹಳ್ಳಿಕಾರ್' ಒಡೆಯ ವರ್ತೂರು ಸಂತೋಷ್, ಮತ್ತೆ ಬಿಗ್ ಬಾಸ್ಗೆ ಬರ್ತಾರಾ?
ಹುಲಿ ಉಗುರಿನ ಪೆಂಡೆಂಟ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಜಾಮೀನು ನೀಡಿ ಬೆಂಗಳೂರಿನ ಎರಡನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ACJM) ನ್ಯಾಯಾಲಯ ಆದೇಶ ಹೊರಡಿಸಿದೆ.
ಕಳೆದ ಭಾನುವಾರ (ಅಕ್ಟೋಬರ್ 22) ರಂದು ಬಿಗ್ ಬಾಸ್ ಮನೆಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ಬಳಿಕ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ವೇಳೆ ವರ್ತೂರ್ ಸಂತೋಷ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಗುರುವಾರ (ಅಕ್ಟೋಬರ್ 26) ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ್ದರು. ಶುಕ್ರವಾರ (ಅಕ್ಟೋಬರ್ 27) ಆದೇಶ ಪ್ರಕಟಿಸಿದೆ. ಸದ್ಯ ಅವರಿಗರ ಜಾಮೀನು ನೀಡಲಾಗಿದ್ದು, ಶುಕ್ರವಾರ ಸಂಜೆ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ.

ವರ್ತೂರು ಸಂತೋಷ್ ಪರ ವಕೀಲ ನಟರಾಜ್ ವಾದ ಮಂಡಿಸಿದ್ದರು. ಶುಕ್ರವಾರ ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯ ಜಾಮೀನು ನೀಡಿದ್ದು, ಷರತ್ತುಗಳನ್ನು ವಿಧಿಸಿದೆ. 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತು ಹಾಕಿ ಜಾಮೀನು ಮಂಜೂರು ಮಾಡಲಾಗಿದೆ.
ಮತ್ತೆ ಬಿಗ್ ಬಾಸ್ಗೆ ಬರ್ತಾರಾ ಸಂತೋಷ್?
ಇನ್ನು, ನ್ಯಾಯಾಲಯದ ಜಾಮೀನು ಆದೇಶ ಜೈಲಿಗೆ ತಲುಪಿದ ಬಳಿಕ ವರ್ತೂರ್ ಸಂತೋಷ್ ಬಿಡುಗಡೆಯಾಗಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಬಳಿಕ ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್ ಮನೆಗೆ ಕಾಲಿಡುತ್ತಾರಾ ಎಂಬುದೇ ಈಗ ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ.
ಏಕೆಂದರೆ, ಒಮ್ಮೆ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಅದನ್ನು ಎಲಿಮಿನೇಷನ್ ಎಂದೇ ಪರಿಗಣಿಸಲಾಗುತ್ತದೆ. ಈಗ ಅವರು ಮನೆಯಿಂದ ಹೊರಬಂದಿದ್ದು, ಮತ್ತೆ ಮನೆಯೊಳಗೆ ಹೋಗಲು ಬಿಗ್ ಬಾಸ್ ಅವಕಾಶ ನೀಡಲಿದೆಯೇ ಎಂಬುದು ಪ್ರೇಕ್ಷಕರ ಪ್ರಶ್ನೆ. ಇದರ ಜೊತೆಗೆ ಹಲವು ಮಂದಿ ಅಭಿಮಾನಿಗಳು ಹಳ್ಳಿಕಾರ್ ಒಡೆಯನಿಗೆ ಮತ್ತೆ ಬಿಗ್ ಬಾಸ್ನಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ರಾಜ್ಯದಲ್ಲಿ ಹಳ್ಳಿಕಾರ್ ತಳಿಯ ಹಸುಗಳ ರಕ್ಷಣೆಗಾಗಿ ಕೆಲಸ ಮಾಡುವ ಸಂತೋಷ್ ಕುಮಾರ್ ಎಸ್. ವರ್ತೂರ್ ಸಂತೋಷ್ ಎಂದೇ ಖ್ಯಾತಿ ಪಡೆದಿದ್ದಾರೆ. ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ಅವರು ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ತೀವ್ರ ಚರ್ಚೆಗೆ ಕಾರಣವಾಗಿತ್ತು. ಅವರ ವಿರುದ್ಧ ದೂರು ದಾಖಲಾಗಿ, ಅಕ್ಟೋಬರ್ 22ರಂದು ಬಿಗ್ ಬಾಸ್ ಮನೆಯಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.
ಈ ಮಧ್ಯೆ, ಸಂತೋಷ್ ಬಂಧನದ ನಂತರ, ಸ್ಯಾಂಡಲ್ವುಡ್ ನಟರಾದ ದರ್ಶನ್, ಜಗ್ಗೇಶ್ ಮತ್ತು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ರಾಕ್ಲೈನ್ ವೆಂಕಟೇಶ್, ವಿನಯ್ ಗುರೂಜಿ, ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಸೇರಿದಂತೆ ಹಲವಾರು ಜನಪ್ರಿಯ ವ್ಯಕ್ತಿಗಳ ಮೇಲೂ ಅರಣ್ಯ ಇಲಾಖೆಯ ಕಣ್ಣು ಇಟ್ಟಿತ್ತು. ಅದೂ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಫೋಟೋ, ವಿಡಿಯೋಗಳು ವೈರಲ್ ಆಗಿ ಜನ ಒತ್ತಡ ಹಾಕಿದ ನಂತರ.


Click it and Unblock the Notifications











