ಹುಲಿ ಉಗುರು ಪ್ರಕರಣದಲ್ಲಿ ಜಾಮೀನು ಪಡೆದು, ಜೈಲಿನಿಂದ ಸೀದಾ ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್!?
ಹುಲಿ ಉಗುರಿನ ಪೆಂಡೆಂಟ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಮತ್ತೆ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ. ಹೌದು ಬಿಗ್ ಬಾಸ್ ಇತಿಹಾಸದಲ್ಲಿ ಹೊಸ ಯುಗ ಅರಂಭವಾದಂತಿದೆ.
ಹುಲಿ ಉಗುರಿನ ಪೆಂಡೆಂಟ್ ಇರುವ ಚೈನ್ ಧರಿಸಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಜಾಮೀನು ನೀಡಿ ಬೆಂಗಳೂರಿನ ಎರಡನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ACJM) ನ್ಯಾಯಾಲಯ ಆದೇಶ ಶುಕ್ರವಾರ (ಅಕ್ಟೋಬರ್ 27) ಹೊರಡಿಸಿದೆ. ಶುಕ್ರವಾರ ರಾತ್ರಿ ಜೈಲಿನಿಂದ ಹೊರ ಬಂದಿದ್ದು, ಸೀದಾ ಬಿಗ್ ಬಾಸ್ ಮನೆಗೆ ತಲುಪಿದ್ದಾರೆ.

ವರ್ತೂರ್ ಸಂತೋಷ್ ಪ್ರಕರಣವೇನು...?
ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ವರ್ತೂರ್ ಸಂತೋಷ್ ಈ ವೇಳೆ ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ತೀವ್ರ ಚರ್ಚೆಗೆ ಕಾರಣವಾಗಿತ್ತು. ಅವರ ವಿರುದ್ಧ ದೂರು ದಾಖಲಾಗಿ, ಅಕ್ಟೋಬರ್ 22ರಂ ಭಾನುವಾರ ಕಿಚ್ಚನ ಪಂಚಾಯಿತಿ ಮುಗಿದ ಕೆಲವೇ ಹೊತ್ತಿನಲ್ಲಿ ಬಿಗ್ ಬಾಸ್ ಮನೆಯಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಮ್ಯಾಜಿಸ್ಟ್ರೇಟ್ ಮುಂದೆ ಅವರನ್ನು ನಿಲ್ಲಿಸಿದ್ದರು. ಬಳಿಕ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ವೇಳೆ ವರ್ತೂರ್ ಸಂತೋಷ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಗುರುವಾರ (ಅಕ್ಟೋಬರ್ 26) ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ್ದರು. ಶುಕ್ರವಾರ (ಅಕ್ಟೋಬರ್ 27) ಜಾಮೀನು ನೀಡಿ ಆದೇಶ ಪ್ರಕಟಿಸಿದೆ.

ಶುಕ್ರವಾರ ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯ ಜಾಮೀನು ನೀಡಿದ್ದು, ಷರತ್ತುಗಳನ್ನು ವಿಧಿಸಿದೆ. 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತು ಹಾಕಿ ಜಾಮೀನು ಮಂಜೂರು ಮಾಡಲಾಗಿದೆ. ಹೆಚ್ಚಿನ ಷರತ್ತು ಇಲ್ಲದ ಕಾರಣ ಅವರು ಬಿಗ್ ಬಾಸ್ ಮನೆಗೆ ಹೋಗಲು ಅಡ್ಡಿಯುಲ್ಲ ಎನ್ನಲಾಗಿದೆ.
ಜೈಲಿನಿಂದ ಸೀದಾ ಬಿಗ್ ಬಾಸ್ ಮನೆಗೆ ವರ್ತೂರ್ ಸಂತೋಷ್
ನ್ಯಾಯಾಲಯದ ಜಾಮೀನು ಆದೇಶ ಜೈಲಿಗೆ ತಲುಪಿದ ಬಳಿಕ ವರ್ತೂರ್ ಸಂತೋಷ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದು, ಅವರನ್ನು ಬರಮಾಡಿಕೊಳ್ಳಲು ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಚಾನೆಲ್ನ ವ್ಯಾನ್ ಅವರಿಗಾಘಿ ಕಾಯುತ್ತಿತ್ತು. ಜೈಲಿನಿಂದ ಸೀದಾ ಬಿಗ್ ಬಾಸ್ ಮನೆಗೆ ತಲುಪಿದ್ದಾರೆ. ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಸಾಮಾಜಿಕ ಮಾಧ್ಯಮಗಳು ಮತ್ತು ಹುಲಿ ಉಗುರು ಪ್ರಕರಣದಿಂದಾಗಿ ವರ್ತೂರು ಸಂತೋಷ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಮತ್ತೆ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದು, ಬಿಗ್ ಬಾಸ್ ವೀಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಹಲವು ಸೆಲಬ್ರಿಟಿಗಳ ಮನೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಲು ವರ್ತೂರು ಸಂತೋಷ್ ಪ್ರಕರಣ ಸಾಕ್ಷಿಯಾಗಿದ್ದು, ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಬಿಗ್ ಬಾಸ್ ನೋಡುವವರು ಹೆಚ್ಚಾಗಲಿದ್ದಾರೆ. ರಾಜ್ಯದಲ್ಲಿ ಹಳ್ಳಿಕಾರ್ ತಳಿಯ ಹಸುಗಳ ರಕ್ಷಣೆಗಾಗಿ ಕೆಲಸ ಮಾಡುವ ಸಂತೋಷ್ ಕುಮಾರ್ ಎಸ್. ವರ್ತೂರ್ ಸಂತೋಷ್ ಎಂದೇ ಖ್ಯಾತಿ ಪಡೆದಿದ್ದಾರೆ.


Click it and Unblock the Notifications











