ತಿರುಪತಿ ಲಡ್ಡು ಪ್ರಸಾದ ವಿವಾದ; ಇದನ್ನು ಭಕ್ತರು ಊಹಿಸುವುದಕ್ಕೂ ಸಾಧ್ಯವಿಲ್ಲ ಎಂದ ಪ್ರಣೀತಾ
ತಿರುಮಲ ತಿರುಪತಿ ದೇವಸ್ಥಾನದ ಶ್ರೇಷ್ಠ ಲಡ್ಡು ಪ್ರಸಾದ ಈಗ ವಿವಾದಕ್ಕೆ ಕಾರಣವಾಗಿದೆ. ಲಡ್ಡು ತಯಾರಿಕೆಗೆ ಗುಣಮಟ್ಟವಿಲ್ಲದ ಪದಾರ್ಥಗಳು ಹಾಗೂ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಿರುಪತಿ ಲಡ್ಡು ಪ್ರಸಾದ ಸಿದ್ಧಪಡಿಸುವಾಗ ಪ್ರಾಣಿಗಳ ಕೊಬ್ಬು ಸೇರಿಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶದ ಹಾಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದರು. ವೈ.ಎಸ್.ಜಗನ್ ಮೋಹನ್ ರೆಡ್ಡಿ ಆಡಳಿತ ಅವಧಿಯಲ್ಲಿ ಲಡ್ಡು ತಯಾರಿಸಲು ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿದ್ದರು ಎಂದು ಹೇಳಿದ್ದರು. ಇದು ಭಾರೀ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಚಂದ್ರಬಾಬು ನಾಯ್ಡು ಆರೋಪಗಳನ್ನು ವೈಎಸ್ಆರ್ ಕಾಂಗ್ರೆಸ್ ಪಕ್ಷಕರು ನಾಯಕರು ಅಲ್ಲಗಳೆದಿದ್ದಾರೆ. ಇನ್ನು ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಸೇರಿಸಿರುವುದು ಲ್ಯಾಬ್ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಆಡಳಿತಾರೂಢ ತೆಲುಗು ದೇಶಂ ಪಕ್ಷ ಹೇಳುತ್ತಿದೆ. ಆದರೆ ತಮ್ಮ ಮೇಲಿನ ಆರೋಪ ಸುಳ್ಳು ಎಂದು ಕೋರ್ಟ್ ಮೆಟ್ಟಿಲೇರಲು ಜಗನ್ ಮುಂದಾಗಿದ್ದಾರೆ.
ಮೊದಲಿನಿಂದಲೂ ಹಸುವಿನ ತುಪ್ಪದಿಂದ ತಿರುಪತಿ ಲಡ್ಡು ತಯಾರಿಕೆ ಮಾಡಲಾಗುತ್ತಿದೆ. ಆದರೆ ಜಗನ್ ಸರ್ಕಾರದ ಅವಧಿಯಲ್ಲಿ ದನದ ಕೊಬ್ಬು, ಹಂದಿಯ ಕೊಬ್ಬು, ಪಾಮಾಯಿಲ್, ಸೋಯಾಬಿನ್, ಮೆಕ್ಕೆ ಜೋಳದ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮಿಶ್ರಿತ ಕಡಿಮೆ ಗುಣಮಟ್ಟದ ತುಪ್ಪವನ್ನು ಬಳಕೆ ಮಾಡಿದ್ದಾರೆ. ಇದನ್ನು ಲ್ಯಾಬ್ ವರದಿ ಕೂಡ ಖಚಿತಪಡಿಸಿದೆ ಎಂದು ಟಿಡಿಪಿ ಪಕ್ಷ ಆರೋಪಿಸಿದೆ.
ಗುಜರಾತ್ ಮೂಲದ ಜಾನುವಾರು ಹಾಗೂ ಆಕಾರ ಕುರಿತ ಪ್ರಯೋಗಾಲಯ ನೀಡಿರುವ ವರದಿಯನ್ನು ಟಿಡಿಪಿ ಪಕ್ಷ ಮುಂದಿಟ್ಟಿದೆ. ಆದರೆ ಈ ಬಗ್ಗೆ ಆಂಧ್ರ ಸರ್ಕಾರವಾಗಲಿ ಹಾಗೂ ತಿರುಮಲ ತಿರುಪತಿ ದೇವಸ್ಥಾನಮ್(TTD) ಖಚಿತಪಡಿಸಿಲ್ಲ. ಸದ್ಯ ಡಾ. ವಿಜಯ್ ಭಾಸ್ಕರ್ ರೆಡ್ಡಿ, ಡಾ.ಮಹದೇವನ್ ಹಾಗೂ ಡಾ. ಸುರೇಂದ್ರನಾಥ್ ಹಾಗೂ ಡಾ. ಸ್ವರ್ಣಲತಾ ಅವರನ್ನೊಳಗೊಂಡಂತೆ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ತುಪ್ಪದ ಗುಣಮಟ್ಟವನ್ನು ಪರಿಶೀಲನೆ ನಡೆಸಿ ಮಾಹಿತಿ ನೀಡಲಿದೆ.

ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಸೇರಿಸಲಾಗಿತ್ತು ಎನ್ನುವ ಆರೋಪದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಕಷ್ಟು ಜನ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
"ಶ್ರೀವಾರಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಾರೆ ಎನ್ನುವುದು ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡಿದಂತೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಾನು ಭಾವಿಸುತ್ತೇನೆ.. ಇದು ಶ್ರೀ ವೆಂಕಟೇಶ್ವರ ಭಕ್ತರ ಊಹೆಗೂ ನಿಲುಕದ್ದು" ಎಂದು ಪ್ರಣೀತಾ ಟ್ವೀಟ್ ಮಾಡಿದ್ದಾರೆ. ಸಾಕಷ್ಟು ಜನ ಈ ಟ್ವೀಟ್ ಅನ್ನು ಲೈಕ್, ರೀ-ಟ್ವೀಟ್ ಮಾಡಿದ್ದಾರೆ.
ದೇಶದ ಆಗುಹೋಗುಗಳ ಬಗ್ಗೆ ನಟಿ ಪ್ರಣೀತಾ ಸುಭಾಷ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಮುಖ್ಯವಾಗಿ ಸನಾತನ ಧರ್ಮದ ಮಹತ್ವದ ಬಗ್ಗೆ ಪದೇ ಪದೆ ಮಾತನಾಡುತ್ತಿರುತ್ತಾರೆ. ಹಿಂದು ಆಚಾರ ವಿಚಾರ ಅನುಸರಿಸುತ್ತಾರೆ. ಹಬ್ಬ ಹರಿದಿನಳನ್ನು ಪ್ರಣೀತಾ ತಪ್ಪದೇ ಆಚರಿಸುತ್ತಾರೆ. ಇದೀಗ ತಿರುಪತಿ ಲಡ್ಡು ಪ್ರಸಾದ ವಿವಾದದ ಬಗ್ಗೆ ಆಕೆ ಪ್ರತಿಕ್ರಿಯಿಸಿರುವ ಬಗ್ಗೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೊನೆಗೂ ನಟಿಯೊಬ್ಬರು ಈ ಬಗ್ಗೆ ಮಾತನಾಡಿದರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ನಟಿ ಪ್ರಣೀತಾ ಇತ್ತೀಚೆಗೆ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಈ ಹಿಂದೆ ಹೆಣ್ಣು ಮಗುವಿನ ತಾಯಿಯಾಗಿದ್ದ ಪ್ರಣೀತಾ ಇದೀಗ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. 2021ರಲ್ಲಿ ಉದ್ಯಮಿ ನಿತಿನ್ ರಾಜು ಅವರನ್ನು ಪ್ರಣೀತಾ ಮದುವೆ ಆಗಿದ್ದರು.


Click it and Unblock the Notifications











