ಮಣ್ಣಿನ ಗೊಂಬೆ ಹರಕೆ ಕ್ಷೇತ್ರಕ್ಕೆ ಯಶ್ ಭೇಟಿ; ರೀಲ್, ಕುಟುಂಬದ ಗೊಂಬೆ ನೀಡಿ ಪೂಜೆ
ರಾಕಿಂಗ್ ಸ್ಟಾರ್ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇಂತ ಸಮಯದಲ್ಲಿ ನಟ ಯಶ್ 'ಟಾಕ್ಸಿಕ್' ಚಿತ್ರತಂಡದ ಜೊತೆ ಧರ್ಮಸ್ಥಳ ಹಾಗೂ ಬೆಳ್ತಂಡಗಿ ಸೂರ್ಯ ಸದಾಶಿವ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಜೊತೆ ಸೇರಿ ಮಣ್ಣಿನ ಗೊಂಬೆ ಹರಕೆ ಕ್ಷೇತ್ರದಲ್ಲಿ ಹರಕೆ ತೀರಿಸಿದ್ದಾರೆ.
ಬಿಳಿ ಶರ್ಟ್ ಹಾಗೂ ಪಂಚೆ ಉಟ್ಟು ಯಶ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರು ವೀಡಿಯೋ ವೈರಲ್ ಆಗುತ್ತಿದೆ. ಇನ್ನು ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನದ ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಆಗಿದ್ದಾರೆ. ಪತ್ನಿ ಹಾಗೂ ಮಕ್ಕಳ ಜೊತೆ ಯಶ್ ಕಾಣಿಸಿಕೊಂಡಿದ್ದಾರೆ. ಇನ್ನು 'ಟಾಕ್ಸಿಕ್' ಸಿನಿಮಾ ನಿರ್ಮಾಪಕ ವೆಂಕಟ್ ಕೋನಂಕಿ ಕೂಡ ಫ್ಯಾಮಿಲಿ ಸಮೇತ ಸಾಥ್ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನ ಮಣ್ಣಿನ ಹರಕೆಗೆ ಬಹಳ ಪ್ರಸಿದ್ಧಿ. ಜನರು ತಮ್ಮ ಕಷ್ಟ ಪರಿಹಾರಕ್ಕಾಗಿ ಮಣ್ಣಿನ ಹರಕೆ ಒಪ್ಪಿಸುವುದೇ ಈ ದೇವಸ್ಥಾನದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಅದರಂತೆ ನಟ ಯಶ್ ಸಿನಿಮಾ ರೀಲ್ ಹಾಗೂ ತಮ್ಮ ಕುಟುಂಬದ ಮಣ್ಣಿನ ಗೊಂಬೆಗಳನ್ನು ನೀಡಿ ಹರಕೆ ಮಾಡಿಕೊಂಡಿದ್ದಾರೆ. ಆವೆ ಮಣ್ಣಿನಿಂದ ಗೊಂಬೆಗಳನ್ನು ಮಾಡಿ ಅದನ್ನು ಕುಲುಮೆಯಲ್ಲಿ ಬೇಯಿಸಲಾಗುತ್ತದೆ.
'ಟಾಕ್ಸಿಕ್' ಸಿನಿಮಾ ಯಶಸ್ಸಿಗಾಗಿ ರೀಲ್ ಹಾಗೂ ತಮ್ಮ ಕುಟುಂಬದ ಆರೋಗ್ಯವೃದ್ಧಿಗಾಗಿ ಗೊಂಬೆಗಳನ್ನು ಅರ್ಪಿಸಿ ಯಶ್ ಶ್ರೀ ಸದಾಶಿವ ದೇವಸ್ಥಾನ ಹರಕೆ ಕಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಯಶ್ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಈ ದೇವಸ್ಥಾನಕ್ಕೆ 700 ವರ್ಷಗಳ ಇತಿಹಾಸವಿದೆ. ಬಂಗಾ ಅರಸರು ದೇವಸ್ಥಾನ ಜೀರ್ಣೋದ್ದಾರ ಮಾಡಿದ್ದರು ಎಂದು ಹೇಳಲಾಗುತ್ತದೆ. ಸದಾಶಿವ ರುದ್ರ ದೇವಸ್ಥಾನ ಬೆಳ್ತಂಗಡಿಯ ಸುರ್ಯ ಎಂಬ ಹಳ್ಳಿಯಲ್ಲಿದೆ. ಹಾಗಾಗಿ ಇದನ್ನು ಸುರ್ಯ ದೇವಸ್ಥಾನ ಎಂದು ಕರೆಯಲಾಗುತ್ತದೆ. ದೇವಸ್ಥಾನದ ಎಡಭಾಗದಲ್ಲೇ ಹರಕೆಯ ಬನವೂ ಇದೆ. ಹರಕೆಯಾಗಿ ಕೊಡುವ ಮಣ್ಣಿನ ಬೊಂಬೆಗಳನ್ನು ಆ ಬನದಲ್ಲಿ ಹಾಕಲಾಗುತ್ತದೆ.
ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ಹೊರಬೇಕು ಎಂದು ಇಲ್ಲ. ತಾವು ಇದ್ದಲ್ಲಯೇ ಸಂಕಲ್ಪ ಮಾಡಿಕೊಳ್ಳಬಹುದು. ತಮ್ಮ ಕೋರಿಕೆ ಈಡೇರಿದ ಬಳಿಕ ಬಂದು ಗೊಂಬೆ ನೀಡಿ ಪೂಜೆ ಸಲ್ಲಿಸಬಹುದು. ದೇವಸ್ಥಾನದ ಬಳಿಯೇ ವಿವಿಧ ರೀತಿ ಗೊಂಬೆಗಳು ಸಿಗುತ್ತದೆ. ತಾಯಿ-ಮಗು, ಮನುಷ್ಯ, ಹೃದಯ, ಕಿಡ್ನಿ, ಬೈಕ್, ಕಾರ್, ಕಟ್ಟಡ, ಮನೆ, ಮೊಬೈಲ್ ಹೀಗೆ ತರಹೇವಾರಿ ಗೊಂಬೆಗಳು ಲಭ್ಯವಿದೆ.

ಮಕ್ಕಳಾಗದವರು ತಾಯಿ-ಮಗುವಿನ ಗೊಂಬೆ ನೀಡುತ್ತಾರೆ. ಮನೆ ಕಟ್ಟಿಸಬೇಕು ಎಂದು ಬೇಡಿಕೊಳ್ಳುವವರು ಕಟ್ಟದ ಗೊಂಬೆ ನೀಡಬಹುದು. ಹೀಗೆ ದೇವರಲ್ಲಿ ಬೈಕ್, ಕಾರ್ ಕೊಳ್ಳುವ ಸಂಕಲ್ಪ ಮಾಡಿಕೊಳ್ಳುವವರು ಅಂತಹ ಗೊಂಬೆ ಕೊಟ್ಟು ಪೂಜೆ ಸಲ್ಲಿಸಬಹುದು. ಇನ್ನು ಹೀಗೆ ಕೊಟ್ಟ ಗೊಂಬೆಗಳನ್ನು ಬನದಲ್ಲಿ ಜೋಡಿಸಿಡಲಾಗುತ್ತದೆ. ಅವು ಮಳೆಗೆ ಕರಗಿ ಮತ್ತೆ ಮಣ್ಣು ಸೇರುತ್ತವೆ.
'KGF-2' ಬಳಿಕ ಯಶ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ಇನ್ನು ಚಿತ್ರೀಕರಣ ಆರಂಭವಾಗಿಲ್ಲ. ಇನ್ನೆರಡು ದಿನಗಳಲ್ಲಿ ಸಿನಿಮಾ ಶೂಟಿಂಗ್ ಆರಂಭಿಸಲು ಚಿತ್ರತಂಡ ತೀರ್ಮಾನಿಸಿದೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ದೇವರಲ್ಲಿ ಆಶೀರ್ವಾದ ಪಡೆದಿದೆ. ಧರ್ಮಸ್ಥಳದಲ್ಲಿ ದರ್ಶನ ಬಳಿಕ ಪ್ರಸಾದ ಸ್ವೀಕರಿಸಿದ್ದಾರೆ.


Click it and Unblock the Notifications











