ಹಸಿಬಿಸಿ ದೃಶ್ಯ; ಯಶ್ಗಿಂತ ನಮಗೆ ನಮ್ಮ ಸಮಾಜದ ಮಕ್ಕಳು ಮುಖ್ಯ - ಟಾಕ್ಸಿಕ್ ವಿರುದ್ಧ ವಕೀಲರಿಂದ ದೂರು ದಾಖಲು
ಚಿತ್ರರಂಗಕ್ಕೆ ಬಂದ ದಿನದಿಂದ ಸೋಲು-ಗೆಲುವು ಹೊರತಾಗಿ ಶಿಸ್ತನ್ನೂ ಮೈಗೂಡಿಸಿಕೊಂಡು ಬಂದವರು ಯಶ್. ಸಿನಿಮಾ ಬದುಕಿನಂತೆಯೇ ವ್ಯೆಯಕ್ತಿಕ ಬದುಕನ್ನೂ ಕೂಡ ಕರಾರುವಕ್ಕಾದ ಪ್ಲಾನುಗಳ ಮೂಲಕ ರೂಪಿಸಿಕೊಂಡ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ''ಕೆಜಿಎಫ್'' ಚಿತ್ರದ ಮೂಲಕ ಕನ್ನಡ ಚಿತ್ರರಂಗದತ್ತ ಎಲ್ಲರು ತಿರುಗಿ ನೋಡುವಂತೆ ಮಾಡಿದ ಯಶ್ ಸದ್ಯ ಹಾಲಿವುಡ್ಗೆ ಗಾಳ ಹಾಕಿದ್ದಾರೆ. ವಿಶ್ವದೆಲ್ಲೆಡೆ ಸದ್ದು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಆದರೆ ಈ ಪ್ರಯತ್ನಕ್ಕೆ ಕರುನಾಡಿನಲ್ಲಿಯೇ ಅಪಸ್ವರದ ಕೂಗು ಕೇಳಿ ಬರುತ್ತಿದೆ. ಸಭ್ಯತೆ.. ಸಂಸ್ಕ್ರತಿ.. ಸಂಪ್ರದಾಯ.. ಮಕ್ಕಳ ಜೊತೆ ಕುಳಿತು ಈ ಚಿತ್ರವನ್ನು ನಾವು ಹೇಗೆ ನೋಡುವುದು..? ಎಂಬ ಪ್ರಶ್ನೆ ಮತ್ತು ಅಭಿಪ್ರಾಯಗಳು ಕೇಳಿ ಬರುತ್ತಿವೆ. ಯಶ್ ಅವರಿಂದ ಇಂತಹ ಅಶ್ಲೀಲ ಸನ್ನಿವೇಶಗಳನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದರ ನಡುವೆ ಇದೀಗ ಟಾಕ್ಸಿಕ್ ವಿರುದ್ಧ ವಕೀಲರೊಬ್ಬರು ದೂರು ಸಲ್ಲಿಸಿದ್ದಾರೆ. ಯಶ್ ಅವರಿಗಿಂತ ನಮಗೆ ನಮ್ಮ ಸಮಾಜದ ಮಕ್ಕಳು ಮುಖ್ಯ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಕೀಲರಾದ ಲೋಹಿತ್ ಕುಮಾರ್ ಸಾಮಾನ್ಯವಾಗಿ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ U, A, U/A ಎಂಬ ಇತ್ಯಾದಿ ಸರ್ಟಿಫಿಕೆಟ್ ಕೊಡ್ತಾರೆ. ಚಿತ್ರಮಂದಿರಕ್ಕೆ ಹೋದಾಗ ಆಧಾರ್ ಕಾರ್ಡ್ನ ಚೆಕ್ ಮಾಡಿ ಒಳಗಡೆ ಬೀಡುವಂತಹ ಸನ್ನಿವೇಶಗಳು ಕೂಡ ಇದಾವೆ, ಯಾಕೆಂದರೆ ಮಕ್ಕಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಬಾರದು ಎನ್ನುವ ಉದ್ದೇಶ ಅದರ ಹಿಂದೆ ಇರುತ್ತೆ ಎಂದು ಹೇಳಿದ್ದಾರೆ.
ಯಶ್ ವಿರುದ್ಧ ನಮ್ಮದೇನು ಅಲ್ಲ. ಕನ್ನಡ ಚಿತ್ರರಂಗದ ವಿರುದ್ಧವೂ ಕೂಡ ನಾವು ಇಲ್ಲ ಎಂದು ಹೇಳಿರುವ ಲೋಹಿತ್ ಕುಮಾರ್ ಇಲ್ಲೇನಾಯ್ತು ಅಂದರೆ ಯಶ್ ಅವರ ಸಿನಿಮಾ ಅಂದಾಗ ನನ್ನನ್ನೂ ಸೇರಿ ಕುಟುಂಬ ಸಮೇತ ನೋಡಲು ಹಲವಾರು ಜನ ಕಾಯುತ್ತಿರುತ್ತಾರೆ, ಆದರೆ ಯಾವುದೇ ಮುನ್ನೆಚ್ಚರಿಕೆ ನೀಡದೇ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ, ಕೊನೆ ಪಕ್ಷ ಮಕ್ಕಳು ನೋಡುವಂತಹ ಟೀಸರ್ ಅಲ್ಲ ಎಂಬ ಮುನ್ನೆಚ್ಚರಿಕೆಯನ್ನಾದರೂ ಅವರು ನೀಡಬೇಕಿತ್ತು ಎಂದು ಹೇಳಿದ್ದಾರೆ. ಕೊಟ್ಟಿದ್ದರೆ ನಾವು ಕುಟುಂಬದ ಎದುರು ಆ ಟೀಸರ್ನ ನೋಡುತ್ತಿರಲಿಲ್ಲ ಎಂದಿದ್ದಾರೆ.
ಯಶ್ ಅವರನ್ನು ಇಟ್ಕೊಂಡು ನಾನು ಈಗ ಸೆನ್ಸಾರ್ ಮಂಡಳಿ ವಿರುದ್ಧ ಹೋರಾಡುತ್ತಿದ್ದೇನೆ ಎಂದಿರುವ ಲೋಹಿತ್, ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೆಟ್ ಕೊಡುವುದು ಸರಿ, ಆದರೆ ಚಿತ್ರದ ಟೀಸರ್, ಟ್ರೇಲರ್ಗಳಿಗೆ ಗೈಡ್ಲೈನ್ಸ್ಗಳನ್ನು ಯಾಕೆ ಮಾಡಿಲ್ಲ, ಸಿನಿಮಾರಂಗದವರು ಮಾರ್ಗಸೂಚಿ ಸಮೇತ ಯಾಕೆ ಟೀಸರ್, ಟ್ರೇಲರ್ಗಳನ್ನು ಯೂಟ್ಯೂಬ್ ಅಥವಾ ಬೇರೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಕುಟುಂಬ ಸಮೇತ ನೋಡುವ ಸಿನಿಮಾವಲ್ಲ, ಚಿಕ್ಕ ಮಕ್ಕಳಿಗೆ ಸಿನಿಮಾ ತೋರಿಸಲೇಬಾರದು ಎಂದು ಮುನ್ನಚ್ಚೆರಿಕೆ ನೀಡಿದ್ದರೆ ಮನೆ ಮಂದಿ ಜೊತೆ ಕುಳಿತು ಯಾರು ನೋಡುತ್ತಿರಲಿಲ್ಲ ಎಂದಿರುವ ಲೋಹಿತ್ ಮಕ್ಕಳ ಜೊತೆಗೆ ಕುಟುಂಬದ ಜೊತೆಗೆ ಟೀಸರ್ ನೋಡಿದೆ ಎಂದು ಎಷ್ಟೋ ಜನರು ಬೇಸರ ಹೊರಹಾಕಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು ನನಗೆ ಯಶ್ ಅವರಿಗಿಂತ ನಮ್ಮ ಸಮಾಜದ ಮಕ್ಕಳು ಮುಖ್ಯ, ನಮಗೂ ಅಷ್ಟೇ.. ನಿಮಗೂ ಅಷ್ಟೇ.. ಯಶ್ಗೂ ಅಷ್ಟೇ ಎಂದು ಹೇಳಿರುವ ಲೋಹಿತ್ ಕುಮಾರ್ ನಾವು ನಮ್ಮ ದೇಶದ ಕಾನೂನು ಕಾಪಾಡಿಕೊಳ್ಳಲು, ನಮ್ಮ ಮಕ್ಕಳನ್ನು ಕಾಪಾಡಲು ಈ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸೆನ್ಸಾರ್ ಮಂಡಳಿಯವರು ಈಗ ಬಿಡುಗಡೆಯಾದ ಟೀಸರ್ನ ಹಿಂಪಡೆಯುವಂತೆ ಹೇಳಬೇಕು, ವಯಸ್ಕರಿಗೆ ಮಾತ್ರ ಎಂಬ ಮುನ್ನೆಚ್ಚರಿಕೆಯನ್ನು ನೀಡಿ ಆ ನಂತರ ಟೀಸರ್ ಬಿಡುಗಡೆ ಮಾಡುವಂತೆ ಹೇಳಬೇಕು ಎಂದು ಆಗ್ರಹಿಸಿದ್ದಾರೆ.


Click it and Unblock the Notifications











