'ಕಾಂತಾರ- 1' ಚಿತ್ರದ ಸಹ ನಟ ಸಾವು; ಚಿತ್ರತಂಡಕ್ಕೆ ಮತ್ತೊಂದು ಆಘಾತ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ- ಚಾಪ್ಟರ್- 1' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ನಡುವೆ ಚಿತ್ರತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಚಿತ್ರದಲ್ಲಿ ಕೆಲಸ ಮಾಡುತ್ತಿದ್ದ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್ ಎಂಬಾತ ಸಾವನ್ನಪ್ಪಿದ್ದಾನೆ. ಚಿತ್ರೀಕರಣ ಮುಗಿಸಿ ತಂಡದ ಜೊತೆ ನದಿಯಲ್ಲಿ ಈಜಲು ಹೋದಾಗ ಈ ಘಟನೆ ನಡೆದಿದೆ.
ಚಿತ್ರತಂಡ ಸ್ಪಷ್ಟನೆ
ಈ ಪ್ರಕರಣದಲ್ಲಿ ಈಗ ಬೆಳವಣಿಯಾಗಿದ್ದು, ಸಹ ಕಲಾವಿದ ಕಪಿಲ್ ಸಾವಿನ ಬಗ್ಗೆ ಹರಿಡಿದ್ದ ಸುದ್ದಿಯ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ ನೀಡಿದೆ. ಸಹ ಕಲಾವಿದ ಚಿತ್ರೀಕರಣ ಸ್ಥಳದಲ್ಲಿ ಅಥವಾ ನಡೆಯುವ ವೇಳೆ ಸಾವನ್ನಪ್ಪಿದ್ದಲ್ಲ. ಈ ಘಟನೆಗೆ 'ಕಾಂತಾರ' ಚಿತ್ರ ಅಥವಾ ಸಿಬ್ಬಂದಿಯೊಂದಿಗೆ ಯಾವುದೇ ಸಂಬಂಧ ಕಲ್ಪಿಸಬಾರದು ಎಂದು ಮನವಿ ಮಾಡಿದೆ.
ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಕೇರಳ ಮೂಲದ ಕಪಿಲ್ ಸ್ನಾನ ಮಾಡಲು ತೆರಳಿದ್ದ. ಆದರೆ ನದಿಯಲ್ಲಿ ನೀರಿನ ಆಳ ತಿಳಿಯದೇ ಮುಳುಗಿ ಸಾವನ್ನಪಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಘಟನೆ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಕಾಂತಾರ-1' ಚಿತ್ರಕ್ಕೆ ಸಂಕಷ್ಟ ತಪ್ಪಿದ್ದಲ್ಲ ಎಂದು ದೈವ ನುಡಿದಿದ್ದು ಗೊತ್ತೇಯಿದೆ. ಕಪಿಲ್ ನೀರಿನಲ್ಲಿ ಮುಳುಗಿದ ವೇಳೆ ಸ್ಥಳೀಯರು ಆತನನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಆತ ಅಪಾಯಕ್ಕೆ ಸಿಲುಕಿದ್ದು ಗೊತ್ತಾಗಿತ್ತು. 6 ತಿಂಗಳ ಹಿಂದೆ ಚಿತ್ರದ ಸಹ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿಯಾಗಿ 6 ಜನ ಗಂಭೀರವಾಗಿ ಗಾಯಗೊಂಡಿದ್ದರು.
2022ರಲ್ಲಿ ತೆರೆಗೆ ಬಂದಿದ್ದ 'ಕಾಂತಾರ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಳಿಕ ಚಿತ್ರದ ಪ್ರೀಕ್ವೆಲ್ ಮಾಡುವ ಪ್ರಯತ್ನ ನಡೆದಿತ್ತು. ಕೊಂಚ ತಡವಾಗಿಯೇ ಸಿನಿಮಾ ಸೆಟ್ಟೇರಿತ್ತು. ಇದೇ ವರ್ಷ ಅಕ್ಟೋಬರ್ 2ಕ್ಕೆ ಸಿನಿಮಾ ತೆರೆಗೆ ಬರಲಿದೆ.
ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಕಾಂತಾರ'-1 ಚಾಪ್ಟರ್ ಸಿನಿಮಾ ನಿರ್ಮಾಣವಾಗುತ್ತಿದೆ. ಕುಂದಾಪುರದಲ್ಲಿ ಭಾರೀ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಸಾಕಷ್ಟು ಸಹ ಕಲಾವಿದರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇರಳದಿಂದಲೂ ಸಹಕಲಾವಿದರನ್ನು ಕರೆಸಿ ಚಿತ್ರೀಕರಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
ಪಾತ್ರಕ್ಕಾಗಿ ರಿಷಬ್ ಶೆಟ್ಟಿ ಉದ್ದನೆಯ ಗಡ್ಡ, ಕೂದಲು ಬಿಟ್ಟು ರಗಡ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳರಿ ಪಯಟ್ಟು ಕಲೆಯನ್ನು ಕಲಿತು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ. ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳ ಲಿಸ್ಟ್ನಲ್ಲಿ 'ಕಾಂತಾರ'-1 ಕೂಡ ಇದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಬಾರಿ ಚಿತ್ರವನ್ನು ಆಸ್ಕರ್ ರೇಸ್ಗೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೀತಿದೆ. ಅದಕ್ಕಾಗಿ ಚಿತ್ರತಂಡ ಆದಷ್ಟು ಬೇಗ ಪ್ರಮೋಷನ್ ಶುರು ಮಾಡುವ ಲೆಕ್ಕಾಚಾರದಲ್ಲಿದೆ. ಈ ಹಿಂದೆ ಗಾಳಿ ಮಳೆಗೆ 'ಕಾಂತಾರ'- 1 ಚಿತ್ರದ ಚಿತ್ರೀಕರಣಕ್ಕಾಗಿ ಹಾಕಿದ್ದ ಸೆಟ್ ಹಾಳಾಗಿತ್ತು. ಬಳಿಕ ಅದನ್ನು ಪುನರ್ನಿರ್ಮಾಣ ಮಾಡಿ ಚಿತ್ರೀಕರಣ ನಡೆಸಲಾಗುತ್ತಿತ್ತು.
'ಕಾಂತಾರ'- 1 ಸಿನಿಮಾ ವಿಚಾರದಲ್ಲಿ ರಿಷಬ್ ಶೆಟ್ಟಿ ಮೇಲೆ ನಿರೀಕ್ಷೆ ಜೊತೆಗೆ ಒತ್ತಡ ಹೆಚ್ಚಾಗಿದೆ. ಹಾಗಾಗಿ ಬಹಳ ಮುತುವರ್ಜಿ ವಹಿಸಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. 'ಭೈರತಿ ರಣಗಲ್' ಬಳಿಕ ಕನ್ನಡದಲ್ಲಿ ಬರುತ್ತಿರುವ ಮತ್ತೊಂದು ಪ್ರೀಕ್ವೆಲ್ ಸಿನಿಮಾ ಇದು. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.
'ಕಾಂತಾರ' ಚಿತ್ರದಲ್ಲಿ ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಸೇರಿ ದೊಡ್ಡ ತಾರಾಗಣವಿತ್ತು. ಆದರೆ ಪ್ರೀಕ್ವೆಲ್ ಚಿತ್ರದ ಕಲಾವಿದರ ಬಗ್ಗೆ ಯಾವುದೇ ಮಾಹಿತಿ ಅಧಿಕೃತವಾಗಿ ಸಿಕ್ಕಿಲ್ಲ. ಹೊಸ ಪ್ರತಿಭೆಗಳನ್ನು ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ಹಾಲಿವುಡ್ ರೇಂಜ್ ಆಕ್ಷನ್ ಸನ್ನಿವೇಶಗಳು ಚಿತ್ರದಲ್ಲಿ ಇರಲಿದೆ. ಇನ್ನು ಜ್ಯೂನಿಯರ್ ಆರ್ಟಿಸ್ಟ್ ಕಪಿಲ್ ಸಾವಿನ ಬಗ್ಗೆ 'ಕಾಂತಾರ- 1' ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











