150 ಪ್ರಶಸ್ತಿ ವಿಜೇತ 'ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರದ ಟ್ರೈಲರ್ ಬಿಡುಗಡೆ
ಕನ್ನಡ ಸಿನಿಮಾರಂಗದಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಒಂದೆಡೆ 'ಕೆಜಿಎಫ್-2', 'ವಿಕ್ರಾಂತ್ ರೋಣ' ಅಂತಹ ದೊಡ್ಡ ಬಜೆಟ್ಟಿನ, ದೊಡ್ಡ ಸಿನಿಮಾಗಳು ದೊಡ್ಡಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಇನ್ನೊಂದಡೆ 'ದಿಯಾ', 'ಲವ್ ಮಾಕ್ಟೈಲ್' ನಂತಹ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿ ಸದಭಿರುಚಿಯ ಚಿತ್ರಗಳಾಗಿ OTT ಫ್ಲಾಟ್ಫಾರ್ಮ್ ಗಳಲ್ಲಿ ಕೂಡ ಭರ್ಜರಿ ಹಣ ಗಳಿಕೆ ಮಾಡಿವೆ. ಸದಭಿರುಚಿ ಚಿತ್ರಗಳ ಸಕಾರಾತ್ಮಕ ಬೆಳವಣಿಗೆ ಕನ್ನಡ ಸಿನಿಮಾರಂಗದ ದೃಷ್ಟಿಯಿಂದ ಅತ್ಯಂತ ಅಗತ್ಯ. ಕೇವಲ ಕಮರ್ಷಿಯಲ್ ವಿಚಾರದಲ್ಲಿ ಅಲ್ಲದೆ ಸಾಮಾಜಿಕ ಚಿಂತನೆಯ ವಿಚಾರದಲ್ಲಿ ಕೂಡ ಕನ್ನಡ ಸಿನಿಮಾರಂಗದಲ್ಲಿ ಆಗುತ್ತಿರುವ ಬದಲಾವಣೆಗಳು ಸ್ವಾಗತಾರ್ಹ.
ಕೆಲವು ವರ್ಷಗಳ ಹಿಂದೆ 'ತಿಥಿ' ಎಂಬ ಪ್ರಯೋಗಾತ್ಮಕ ಚಿತ್ರ ವಿಶ್ವದ ಗಮನ ಸೆಳೆದಿತ್ತು. ಈಗ ಅದೇ ತರದಲ್ಲಿ ಮತ್ತೊಂದು ಚಿತ್ರ ಕೂಡ ವಿಶ್ವದ ಗಮನ ದೊಡ್ಡ ಮಟ್ಟದಲ್ಲಿ ಸೆಳೆದಿದೆ. ಅದು ಕೂಡ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಇದುವರೆಗೆ 150 ರಾಷ್ಟ್ರೀಯ -ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆಗೆ ಕನ್ನಡ ಚಿತ್ರವೊಂದು ಪಾತ್ರವಾಗಿದೆ. ಅದೇ ಸಿದ್ದು ಪೂರ್ಣಚಂದ್ರ ನಿರ್ದೇಶನದ 'ದಾರಿ ಯಾವುದಯ್ಯಾ ವೈಕುಂಠಕೆ'.

ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ
ಈಗಾಗಲೇ ರಾಷ್ಟ್ರೀಯ- ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿರುವ ಈ ಚಿತ್ರ ಸುಮಾರು 150 ಪ್ರಶಸ್ತಿಗಳಿಗೆ ಭಾಜನವಾಗಿದೆ. ಅತಿ ಹೆಚ್ಚಿನ ಪ್ರಶಸ್ತಿಗಳನ್ನು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ವಿಭಾಗದಲ್ಲಿ ಪಡೆದುಕೊಂಡಿದೆ. ಅಲ್ಲದೆ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಮತ್ತು ನಿರ್ದೇಶಕರ ಪ್ರಶಸ್ತಿಗಳು ಕೂಡ ದಕ್ಕಿದೆ. ಹೀಗೆ ದೊಡ್ಡಮಟ್ಟದಲ್ಲಿ ಸುದ್ದಿಯಾಗಿರುವ ಈ ಚಿತ್ರ ಈಗ ಪ್ರೇಕ್ಷಕರ ಮುಂದೆ ಬಿಡುಗಡೆಗೆ ಅಣಿಯಾಗಿದೆ. ಮೇ 6ರಂದು ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಸನ್ನದ್ಧವಾಗಿದೆ. ಇದೇ ಹಿನ್ನಲೆಯಲ್ಲಿ ಮಂಗಳವಾರ ಮಧ್ಯಾಹ್ನ ಅಶೋಕ ಹೋಟೆಲ್ ನಲ್ಲಿ ಚಿತ್ರತಂಡ ಚಿತ್ರದ ಟ್ರೈಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಿನಿಮಾ ಮತ್ತು ರಾಜಕೀಯ ಗಣ್ಯರ ಸಮಕ್ಷಮದಲ್ಲಿ ಚಿತ್ರದ ಟ್ರೈಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮ್ಯೂಸಿಕ್ ಬಾಕ್ಸ್ ಕನ್ನಡ ಆಡಿಯೋ ಕಂಪನಿಯ ಮೂಲಕ ಹೊರಬಂದಿರುವ ಟ್ರೈಲರ್ ಮತ್ತು ಹಾಡುಗಳನ್ನು ಮ್ಯೂಸಿಕ್ ಬಾಕ್ಸ್ ಕನ್ನಡದಲ್ಲಿ ವೀಕ್ಷಿಸಬಹುದಾಗಿದೆ.

''ಹಾಡು ಬರೆಯಲೆಂದು ಬಂದವನು, ನಿರ್ದೇಶಕನಾದೆ''
ಇನ್ನು ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕರಾದ ಡಾ. ಶರಣಪ್ಪ ಎಂ. ಕೋಟಗಿ ಸದಭಿರುಚಿಯ ಚಿತ್ರವೊಂದರ ನಿರ್ಮಾಣ ಮಾಡಿದ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರು ತಾವು ಸಿನಿಮಾರಂಗಕ್ಕೆ ಸಾಹಿತ್ಯ ರಚನೆಯ ಆಸಕ್ತಿಯೊಂದಿಗೆ ಬಂದದ್ದು ಆದರೆ ಕೊನೆಗೆ ನಿರ್ದೇಶಕನ ದಾರಿ ಹಿಡಿದೆ ಅಂತ ಹೇಳಿಕೊಂಡಿದ್ದಾರೆ. 'ನಾನು ಸಾಹಿತ್ಯದ ಜೊತೆಗೆ ಸಂಭಾಷಣೆ ಕೂಡ ಬರೆದು ಚಿತ್ರ ನಿರ್ದೇಶನ ಮಾಡಿದ ಸಂತೃಪ್ತಿ ಸಿಕ್ಕಿದೆ. ಚಿತ್ರದ ಬಹುಮುಖ್ಯ ಚಿತ್ರೀಕರಣವನ್ನು ರಾಮನಗರದ ಸ್ಮಶಾನದಲ್ಲಿ ಚಿತ್ರೀಕರಿಸಿದ್ದು ಅದು ಚಿತ್ರದ ಜೀವಾಳ ಅಂತ ಹೇಳಬಹುದು' ಅಂತ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ತನಗೆ 'ಬಾರ್ಸಿಲೋನಾ ಸಿನಿಮೋತ್ಸವ'ದಲ್ಲಿ ಇಂಗ್ಲಿಷ್ ಚಿತ್ರಗಳ ನಿರ್ದೇಶಕರನ್ನು ಹಿಮ್ಮೆಟ್ಟಿಸಿ ಪ್ರಶಸ್ತಿ ಪಡೆದದ್ದು ಅತ್ಯಂತ ಸಂತೃಪ್ತಿ ಮತ್ತು ಖುಷಿಯನ್ನು ಕೊಟ್ಟ ಸಂಗತಿ ಅಂತ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಇನ್ನು ಇದೇ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರುಗಳು ತಮ್ಮ ಅನುಭವವನ್ನು ಹಂಚಿಕೊಂಡರು.

ಮ್ಯೂಸಿಕ್ ಬಾಕ್ಸ್ 11 ಭಾಷೆಗಳಲ್ಲಿ ಬಿಡುಗಡೆ
ಇದೇ ಸಮಾರಂಭದಲ್ಲಿ ಮ್ಯೂಸಿಕ್ ಬಾಕ್ಸ್ ತನ್ನ 11 ವಿವಿಧ ಭಾಷೆಯ ಮ್ಯೂಸಿಕ್ ಚಾನೆಲ್ ಗಳನ್ನು ಕೂಡ ಬಿಡುಗಡೆ ಮಾಡಿತು. ಕನ್ನಡದ ಜೊತೆಗೆ ತೆಲುಗು- ತಮಿಳು -ಮಲಯಾಳಂ -ಹಿಂದಿ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ ಮ್ಯೂಸಿಕ್ ಬಾಕ್ಸ್ ಲೋಕಾರ್ಪಣೆಗೊಂಡಿದೆ. ಇದೇ ಸಂದರ್ಭದಲ್ಲಿ ಮ್ಯೂಸಿಕ್ ಬಾಕ್ಸ್ ನ ಮಾಲೀಕರಾದ ದಿಲೀಪ್ ಅವರು ಮಾತನಾಡುತ್ತಾ 'ಮ್ಯೂಸಿಕ್ ಬಾಕ್ಸ್ ಮೂಲಕ ಕನ್ನಡದ ಪ್ರತಿಭಾವಂತ ಯುವಕರಿಗೆ ನಮ್ಮ ಚಾನೆಲ್ ಸಿನಿಮಾ ಗೀತೆಗಳ ಜೊತೆಗೆ ಭಕ್ತಿಗೀತೆ, ಆಲ್ಬಮ್ ಸಾಹಿತ್ಯ, ರಂಗಗೀತೆಗಳು ಸೇರಿದಂತೆ ಎಲ್ಲ ಥರಹದ ಸಾಹಿತ್ಯಕ್ಕೂ ಪ್ರೋತ್ಸಾಹ ನೀಡುತ್ತದೆ' ಅಂತ ಹೇಳಿದ್ದಾರೆ.

'ಅಪ್ಪು ನಮನ' ಗೀತೆ ಬಿಡುಗಡೆ
ಇನ್ನು ಇದೇ ಸಂದರ್ಭದಲ್ಲಿ ಮ್ಯೂಸಿಕ್ ಬಾಕ್ಸ್ ಬಿಡುಗಡೆ ಮಾಡಿರುವ ದಿವಂಗತ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವ ಅನಾವರಣಗೊಳಿಸುವ ಹಿರಿಯ ಸಾಹಿತಿ ದೊಡ್ಡರಂಗೇಗೌಡರ ವಿರಚಿತ 'ಅಪ್ಪು ನಮನ' ಹಾಡಿನ ಬಿಡುಗಡೆ ಕೂಡ ನಡೆಯಿತು. ವಿ.ಮನೋಹರ್ ಅವರ ಸಂಗೀತದಲ್ಲಿ ಅಜಯ್ ವಾರಿಯರ್ ಸುಶ್ರಾವ್ಯವಾಗಿ ಹಾಡನ್ನು ಪ್ರಸ್ತುತಪಡಿಸಿದ್ದಾರೆ.ಇನ್ನು ಈ ಸಮಾರಂಭದಲ್ಲಿ ಹಿರಿಯ ರಾಜಕಾರಣಿಗಳಾದ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ, ಚಲನಚಿತ್ರನಿರ್ದೇಶಕರಾದ ಓಂ ಸಾಯಿಪ್ರಕಾಶ್, ಜೆಜೆ ಕೃಷ್ಣ,ಭಾ.ಮಾ ಹರೀಶ್, ಶಶಿಧರ್ ಕೋಟೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


Click it and Unblock the Notifications











